ಬೆಂಗಳೂರಿನಲ್ಲಿ ಶೇವಿಂಗ್ ಮಾಡಿಕೊಳ್ಳಲು ಲೈಟ್ ಹಾಕಿಕೊಳ್ಳದಿದ್ದರೆ

3 Comments

©ಚಿತ್ರ-ನಾನು

ನಾನು ಇಲ್ಲಿ ಬೆಂಗಳೂರಿನಲ್ಲಿ ಶೇವಿಂಗ್ ಮಾಡಿಕೊಳ್ಳಲು ಲೈಟ್ ಹಾಕಿಕೊಳ್ಳದಿದ್ದರೆ

ಅಲ್ಲಿ ನನ್ನಣ್ಣನಿಗೆ ಥ್ರೀ ಫೇಸ್ ವಿದ್ಯುತ್ ಸ್ಪಲ್ಪ ಹೆಚ್ಚು ಸಿಕ್ಕುತ್ತದೆ

ನಾನು ಇಲ್ಲಿ ರೂಮಿನಿಂದ ಹೊರಬರುವಾಗ ಲೈಟ್ ಆಫ್ ಮಾಡಿದರೆ

ಅಲ್ಲಿ ನನ್ನಣ್ಣನ ಇರಿಗೇಷನ್ ಪಂಪ್ ಸೆಟ್ ಧಡ ಧಡ ಸದ್ದು ಮಾಡುತ್ತದೆ

ನಾನು ಇಲ್ಲಿ ಕೊಂಚ ಹೊತ್ತು ಟಿವಿ ಆಫ್ ಮಾಡಿದರೆ

ಅಲ್ಲಿ ನನ್ನಣ್ಣನ ಹೊಲದಲ್ಲಿ ಸ್ಪ್ರಿಂಕ್ಲರ್ ನೀರು ಚಿಮ್ಮಿಸುತ್ತದೆ

ನಾನು ಇಲ್ಲಿ ಒಂದು ರಾತ್ರಿ ಫ್ಯಾನ್ ಇಲ್ಲದೆ ಮಲಗಿದರೆ

ಅಲ್ಲಿ ನನ್ನಣ್ಣ ಸುಖವಾಗಿ ಮಲಗಬಹುದು…….

ನಮಗಿರುವ ರೋಗಗಳ ಬಗ್ಗೆ ಕಂಡಕಂಡವರೆದುರು….

Leave a comment

ನಾವು ದೇಹವನ್ನು ಅಸ್ವಚ್ಘವಾಗಿಡುವುದು,

ವ್ಯಾಯಾಮ ಮಾಡದಿರುವುದು,

ನಮಗಿರುವ ರೋಗಗಳ ಬಗ್ಗೆ ಕಂಡಕಂಡವರೆದುರು ಮತ್ತೆ ಮತ್ತೆ ವಿನಾಕಾರಣ ಪ್ರಸ್ತಾಪಿಸುವುದು,

ದೇಹಕ್ಕೆ ಹಾನಿಕಾರಕವಾಗಿರುವ ಪದಾರ್ಥಗಳನ್ನು ಸೇವಿಸುವುದು,

ಆರೋಗ್ಯವನ್ನು ಕಾಪಾಡಿಕೊಳ್ಳದಿರುವುದು,

ದೇವರು ಸಾಕಷ್ಟು ಹಣ, ಸಮಯ, ಸೌಲಭ್ಯ ನೀಡಿದ್ದರೂ ಆಹಾರದ ಕುರಿತು ನಿರಾಸಕ್ತಿ ವಹಿಸುವುದು,

ಮತ್ತೆ ಮತ್ತೆ ಜಡ್ಡು ಬೀಳುವುದು,

ಈ ಎಲ್ಲವೂ, ನಾವು ದೇವರಿಗೆ ಮಾಡುವ ಅಪಮಾನ…..

‘ಸುಧಾ’ದಲ್ಲಿ ಕ್ಲಿಕ್ ಕ್ಲಿಕ್ ಗೋವರ್ಧನ್

1 Comment

 

ನಾನಿರುವುದೇ ಹೀಗೆ. ನನ್ನದು ಕೋಣದ ಚರ್ಮ.

1 Comment

©ಚಿತ್ರ-ನಾನು

ನಿನ್ನೆಯಷ್ಟೇ ನಡೆದ ಘಟನೆ. ಗಾಂಧಿನಗರದಲ್ಲಿದ್ದೆ. ಪಾರ್ಕಿಂಕ್ ಗಾಗಿ ಜಾಗ ಹುಡುಕುತ್ತಿದ್ದೆ. ಪಾರ್ಕಿಂಕ್ ಸ್ಥಳದಲ್ಲಿ ಒಬ್ಬರು ತಮ್ಮ ಬೈಕ್ ಹೊರತೆಗೆಯುತ್ತಿರುವುದು ನೋಡಿ ಅಲ್ಲಿಗೆ ಹೋದೆ. ಅವರಿಗೆ ಬೈಕ್ ತೆಗೆಯಲು ಅನುವಾಗಲೆಂದು ನನ್ನ ಬೈಕನ್ನು ಪಕ್ಕದಲ್ಲಿ ನಿಲ್ಲಿಸಿ, ಅವರು ಬೈಕ್ ಪೂರ್ಣವಾಗಿ ಹೊರತೆಗೆಯಲು ಕಾಯುತ್ತಿದ್ದೆ. ಇನ್ನೇನು ನಾನು ನನ್ನ ಬೈಕನ್ನು ಅಲ್ಲಿ ಸೇರಿಸಬೇಕು, ಅಷ್ಟರಲ್ಲಿ ಟೈ ಹಾಕಿಕೊಂಡು ಸಕತ್ ಸ್ಮಾರ್ಟ್ ಆಗಿ ಡ್ರೆಸ್ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಸುಯ್ಯನೇ ಬೈಕ್ ನಲ್ಲಿ ಬಂದು ಅದೇ ಜಾಗದಲ್ಲಿ ನಿಲ್ಲಿಸಿಬಿಟ್ಟ. ನಾನು ಶಾಂತವಾಗಿಯೇ ಹೇಳಿದೆ.

“Boss, I’m waiting here”

ಆತ ತೀರ ಮೊಂಡತನದಿಂದ

“So What?” ಎಂದ.

ಒಂದು ಕ್ಷಣ ನಾನು ಅವಾಕ್ಕಾದೆ. ನನಗೂ ಸಿಟ್ಟು ಬಂತು. “Are you educated?” ಕೇಳಿದೆ.

“No “ಎಂದು ಅಷ್ಟೇ ಮೊಂಡುತನದಿಂದ ಉತ್ತರಿಸಿದ. ಅದಕ್ಕೆ ಪ್ರತಿಹೇಳಲು ನನ್ನ ಬಳಿ ಏನೂ ಇರಲಿಲ್ಲ. ಸಡನ್ನಾಗಿ

“That’s why you are behaving like this…. “ಎಂದೆ.

ಅದಕ್ಕೆ ಆತ

“Yes” ಎಂದು ನನ್ನನ್ನು ಗುರಾಯಿಸಿ ನೋಡುತ್ತ ಹೊರಟು ಹೋದ.

ನಾನಿರುವುದೇ ಹೀಗೆ. ನನ್ನದು ಕೋಣದ ಚರ್ಮ. (ಕೋಣದ ಕ್ಷಮೆಯಿರಲಿ). ನನ್ನ ಅಪ್ಪ-ಅಮ್ಮ ನನಗೆ ಸಂಸ್ಕಾರ ಕಲಿಸಿಲ್ಲ, ನನ್ನ ಗುರುಗಳು ನನಗೆ ಹೇಗೆ ಮಾತನಾಡಬೇಕೆಂದು ಕಲಿಸಿಲ್ಲ. ಕರ್ಟಸಿ, ಕಾಮನ್ ಸೆನ್ಸ್, ಮೃದು ಮಾತು ನಮ್ಮ ವಂಶದಲ್ಲೇ ಇಲ್ಲ ಎಂಬಂತಿತ್ತು ಆತನ ಒಟ್ಟಾರೆ ವರ್ತನೆ ಹಾಗೂ ಮಾತು.

ಅಷ್ಟರಲ್ಲಿ ಅಲ್ಲೇ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು “ಸಾರ್ ನಾನು ಸ್ಕೂಟರ್ ತೆಗೆಯುತ್ತಿದ್ದೇನೆ. ನೀವು ಇಲ್ಲಿ ನಿಲ್ಲಿಸಿ” ಎಂದು ತಮ್ಮ ಸ್ಕೂಟರ್ ತೆಗೆದು ನನಗೆ ಬೈಕ್ ನಿಲ್ಲಿಸಲು ಜಾಗ ಮಾಡಿಕೊಟ್ಟರು. ನಾನು ಟೈ ಹಾಕಿಕೊಂಡಿದ್ದ ವ್ಯಕ್ತಿಯನ್ನು ಶಪಿಸುತ್ತ, ಬೈಕ್ ನಿಲ್ಲಿಸಿ ಟೀ ಕುಡಿಯಲೆಂದು ಹತ್ತಿರದ ಹೋಟೆಲ್ ಗೆ ಹೋದೆ. ಅಲ್ಲಿ ಟೀ ಕುಡಿಯುತ್ತಿರಬೇಕಾದರೆ, ಆಗಷ್ಟೇ ನನ್ನೊಂದಿಗೆ ಜಗಳವಾಡಿದ್ದ ವ್ಯಕ್ತಿ ಮೂರ್ನಾಲ್ಕು ಟೈ-ಬೂಟು ನವರೊಂದಿಗೆ ಮಾತನಾಡುತ್ತಿರುವುದು ಕಂಡುಬಂತು. ಆತನನ್ನು ನೋಡುತ್ತಲೇ ನನ್ನ ಪಿತ್ತ ನೆತ್ತಿಯಿಂದ ಜ್ವಾಲಾಮುಖಿಯಂತೆ ಚಿಮ್ಮಿತು. ಈತನಿಗೆ ಈಗಲೇ ಸರಿಯಾಗಿ ಪಾಠ ಕಲಿಸಬೇಕು ಬಾಸ್ಟರ್ಡ್….ಎಂದುಕೊಂಡವನೇ ನೇರವಾಗಿ ಆತನ ಹತ್ತಿರ ಹೋದೆ. ಗುಂಪಿನಲ್ಲಿ ನಿಂತಿದ್ದ ಆತನ ಬೆನ್ನುತಟ್ಟಿ ನನ್ನೆಡೆಗೆ ಗಮನ ಸೆಳೆದವನೆ..

“Hi…I’m sorry. I was harsh on you” ಎಂದೆ.

ಆತನ ಮುಖ ನೋಡುವಂತಿತ್ತು.

‘ಮುಕ್ತ ಮುಕ್ತ’ದ ಸೋಮ, ಭೋಜ ಮತ್ತು ನಾನು

Leave a comment

© ತುಮಕೂರು ಸಂವಾದ ಸಂದರ್ಭದಲ್ಲಿ ತೆಗೆದ ಚಿತ್ರ.

ಮೆರೆ ಪಾಸ್ ಕಹಾಂ ಹೈ ಪೆನ್ ಡ್ರೈವ್?

Leave a comment

ಬಹಳ ದಿನಗಳ ನಂತರ ನ್ಯಾಷನಲ್ ಚಾನೆಲ್ ನ ಗೆಳತಿಯೊಬ್ಬಳು ಸಿಕ್ಕಿದ್ದಳು.

ನನಗೆ ಯಾವುದೋ ಒಂದು ವಿಶುವಲ್ ಬೇಕಾಗಿದ್ದರಿಂದ ಅವಳಿದ್ದ ಆಫೀಸ್ ಗೆ ಹೋಗಿದ್ದೆ.

ಆದರೆ ನನ್ನ ಪೆನ್ ಡ್ರೈವ್ ಇಟ್ಟುಕೊಳ್ಳಲು ಮರೆತುಬಿಟ್ಟಿದ್ದೆ. ಅಲ್ಲಿಗೆ ಹೋದ ನಂತರ ಜ್ಞಾಪಕಕ್ಕೆ ಬಂತು ಪೆನ್ ಡ್ರೈವ್ ತಂದಿಲ್ಲವೆಂದು.

ಕ್ಯಾಮರಾಮನ್ ತನ್ನ ಬಳಿಯೂ ಪೆನ್ ಡ್ರೈವ್ ಇಲ್ಲವೆಂದ.

ಅಲ್ಲಿಯೇ ಇದ್ದ ಮತ್ತೊಬ್ಬ ರಿಪೋರ್ಟರ್ ನನ್ನ ಗೆಳತಿಗೆ “ತುಮ್ಹಾರೆ ಪಾಸ್ ಕೊಯಿ ಪೆನ್ ಡ್ರೈವ್ ಪಡಾ ಹೋಗಾ ದೇಖ್ ಲೋ” ಎಂದ.

ಅದಕ್ಕೆ ಆಕೆ “ಮೆರೆ ಪಾಸ್ ಕಹಾಂ ಹೈ…ಅಭಿ ತೋ ಐಟಿ ವಾಲೋಂನೆ ಪೆನ್ ಡ್ರೈವ್ ಗಿಫ್ಟ್ ದೇನಾ ಭಿ ಬಂದ್ ಕರದಿಯಾ ಹೈ ನಾ…ರಿಸೆಶನ್ ಕಿ ವಜಹ ಸೆ…”ಎಂದಳು.

ಒಂದು ಎಕ್ಸ್ ಟ್ರಾ ಮರಿಟಲ್ ಅಫೇರ್ ಕವಿತೆ…

1 Comment

ಒಂದೇ ಒಂದ್ಸಲ

ಹೇಳಿ-ಬಿಡಬಹುದಿತ್ತು ಕಣೇ

ಹೇಳಲು ನಾಚಿಕೆಯಾಗುತ್ತಿದ್ದರೆ

ಪಟಪಟನೆ ಕಣ್ಣು ಮಿಟಕಿಸಬಹುದಿತ್ತು

ಕಾಲ ಹೆಬ್ಬೆರಳ ಕೆರೆಯಬಹುದಿತ್ತು

ದುಪಟ್ಟಾದ ಅಂಚನ್ನು ಬೆರಳಲ್ಲಿ ಸುತ್ತಬಹುದಿತ್ತು

ಕಣ್ಣಲ್ಲಿ ಕಣ್ಣಿಟ್ಟು ನಾಚಬಹುದಿತ್ತು.

ನೀವು ಹುಡುಗಿಯರು

ಹೇಳಿಕೊಡಬೇಕೆ?

ಒಂದಿನ ಮನೆಗೆ ಕರ್ದಿದ್ದೆ

ಊಟ ಹಾಕಿದ್ದೆ

ಹಿಡಿಕಡ್ಡಿ ಹಾಗಾಗಿದ್ದ ನನಗೆ

ಮೊಸರನ್ನ ಮಿಡಿ ಉಪ್ಪಿನಕಾಯಿ ಬಡಿಸಿದ್ದೆ.

ನೆನಪಾಯ್ತಾ?

ಅವತ್ತೇ ಹೇಳ್ತಿಯೇನೋ ಅಂದ್ಕೋಂಡಿದ್ದೆ

ಹೇಳ್ಳಿಲ್ಲ.

ಅವಳಿದ್ದಾಳಲ್ಲ ನಿನ್ನ ಗೆಳತಿ

ಹೌದಮ್ಮ ಅವಳೇ……ಇಂದಿಗೂ ಮದುವೆಯಾಗಿಲ್ಲ ನೋಡು.

ಎಷ್ಟು ಚೆನ್ನಾಗಿ ಕಮ್ಯುನಿಕೇಟ್ ಮಾಡ್ತಾಳೆ….

ಗೊತ್ತಾ? (ನನ್ನ ಕಂಡ್ರೆ)

ಪ್ರೀತಿ, ಕಾಮ, ಆಸೆ, ಇಚ್ಛೆ

ಎಲ್ಲವನ್ನೂ ಕಣ್ಣು, ಭಾಷೆ, ತುಟಿಯಿಂದ್ಲೇ

ಹೇಳಿಬಿಡ್ತಾಳೆ.

ನೀನೋಬ್ಳಿದೀಯಾ ಗೂಬೆ.

ಒಂದೇ ಒಂದ್ಸಲ ಹೇಳ್ತಿಯಾ ಅಂದ್ರೆ….

ಈಗ ಮಾತ್ರ ಒಂಥರಾ ಆಡ್ತೀಯಾ

ಆಗ ಮಾಡಬೇಕಾಗಿದ್ದೆಲ್ಲ ಈಗ ಮಾಡ್ತಿದೀಯಾ

ಏನ್ ಬಂತು ಹೇಳು?

ತುಂಬಾ ಲೇಟಾಯ್ತು ಅಷ್ಟೇ.

ಅಂದ ಹಾಗೆ ನಿನ್ ಗಂಡ ಸಾಫ್ಟ್ ವೇರಿ ಅಂತೆ

ಆರಂಕಿ ಸಂಬ್ಳ, ಆರ್ ತಿಂಗ್ಳು ಫಾರೆನ್ ಅಂತೆ

ನಾನ್ ಮಾತಾಡ್ದಾಗ ಮಾತ್ರ

ಪ್ಯೂರ್ ಗೂಬೆ ಅನ್ನಿಸ್ದ ಕಣೇ.

“ನಮ್ ಮಿಸೆಸ್ ಹ್ಯಾಂಡ್ ರೈಟಿಂಗ್ ತುಂಬಾ ಚೆನ್ನಾಗಿದೆ.

ಅದ್ಕೆ ಕವನ ಬರೀ ಅಂತ ಹೇಳಿದಿನಿ”

ಅಂದ.

ಹೂಂ…..ಅದ್ಹೇಗ್ ಬಾಳತೀಯೋ

ಇರ್ಲಿಬಿಡೆ.

ನಿಂಗೆ ‘ಜೆ’ ಆಗೋ ವಿಷಯ ಅಂದ್ರೆ

ನನ್ ಹೆಂಗಸ್ರು ನಿನ್ ಗಂಡಸ್ರ ಥರ ಇಲ್ಲ

ಸಾಹಿತ್ಯ-ಪಾಯಿತ್ಯ ಇಲ್ದೆ ಇದ್ರೂ

ಪೇಂಟಿಂಗ್ ಇದೆ. ಸೆನ್ಸ್ ಆಫ್ ಹ್ಯೂಮರ್ ಇದೆ.

ಆದ್ರೂ ಒಂದೇ ಒಂದ್ಸಲ

ನೀನು ಹೇಳಿ-ಬಿಡಬಹುದಿತ್ತು ಕಣೇ.

ಮನುಷ್ಯರ ಜೊತೆ ನಾಯಿ ಇದ್ರೆ ಅಷ್ಟೇ ಗೇಟಿನ ಮುಂದೆ ಇಸ್ಸಿ ಮಾಡೋದು….

Leave a comment

©sughosh s. nigale

ನಮ್ಮ ಮನೆಯ ಓನರ್ ಆಂಟಿ ಸದಾ ಬೇಸರ ಮಾಡಿಕೊಳ್ಳುತ್ತಲೇ ಇದ್ದರು “ನೋಡಿ ಸುಘೋಷ್. ಈ ಜನಕ್ಕೆ ಎಷ್ಟು ಹೇಳಿದರೂ ಬುದ್ಧಿನೇ ಬರಲ್ಲ. ಕಾಮನ್ ಸೆನ್ಸೇ ಇಲ್ಲ ಅಂತೀನಿ. ಅಲ್ಲ ಎಷ್ಟು ಜನರಿಗೇಂತ ಹೇಳುತ್ತ ಕೂತ್ಕೋಳಗಾತ್ತೆ ಹೇಳಿ? ನನಗಂತೂ ಹೇಳಿ ಹೇಳಿ ಸಾಕಾಗಿ ಹೋಗಿದೆ. ಬೆಳಿಗ್ಗೆ ಎದ್ದು ಗೇಟಿನ ಮುಂದೆ ನೋಡಿದರೆ ನಾಯಿ ಇಸ್ಸಿ ಮಾಡಿರುತ್ತೆ. ಕ್ಲೀನ್ ಮಾಡಿ ಮಾಡಿ ಸಾಕಾಗಿ ಹೋಗುತ್ತೆ”

ಅಷ್ಟರಲ್ಲಿ ಯಾವುದೋ ಬೀದಿ ನಾಯಿ ನಮ್ಮ ಗೇಟಿನ ಮುಂದೆ ಬಂದು ನಿಂತುಕೊಳ್ಳಲು ಸರಿಹೋಯಿತು. ಅಲ್ಲೇ ನಿಂತಿದ್ದ ಅಂಕಲ್ ಹಚಾ ಹಚಾ ಎಂದು ನಾಯಿಯನ್ನು ಓಡಿಸಲು ಮುಂದಾದರು. ಅದನ್ನು ನೋಡಿದ ಆಂಟಿ, ಅಯ್ಯೋ ಬರೇ ನಾಯಿಯನ್ನು ಓಡಿಸಬೇಡ್ರಿ. ನನಗೂ ನಾಯಿ ಅಂದ್ರೇ ಇಷ್ಟಾನೇ…ಬರೇ ನಾಯಿ ಬಂದ್ರೆ ಅದು ಗೇಟಿನ ಮುಂದೆ ಇಸ್ಸಿ ಮಾಡೋದೇ ಇಲ್ಲ. ಆದ್ರೆ ಬೆಳಿಗ್ಗೆ ಬೆಳಿಗ್ಗೆ ವಾಕಿಂಗ್ ಗೆ ಅಂತ ಈ ನಾಯಿಗಳನ್ನು ಕರೆದುಕೊಂಡು ಬರುತ್ತಾರಲ್ಲ ಜನ. ಆಗಷ್ಟೇ ನಾಯಿಗಳು ಗೇಟಿನ ಮುಂದೆ ಇಸ್ಸಿ ಮಾಡುತ್ವೆ

ನನಗೂ ಹೌದು ಎನಿಸಿತು. ನಾನು ಹಲವು ಬಾರಿ ನೋಡಿದ್ದೇನೆ. ಸಾವಿರಾರು ರೂಪಾಯಿಗಳ ನಾಯಿಯನ್ನು ಕೊಂಡು, ಅದಕ್ಕೆ ಸಾವಿರಾರು ರೂಪಾಯಿ ಪಿಡಿಗ್ರಿ ಫುಡ್ ಹಾಕಿ, ಬೆಲೆಬಾಳುವ ಚೈನ್ ಕಟ್ಟುವ ಜನ, ನಾಯಿಗಳ ಇಸ್ಸಿ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇತರರ ಮನೆಯೆ ಗೇಟೇ ತಮ್ಮ ನಾಯಿಯ ಪಾಯಿಖಾನೆ ಎಂದುಕೊಂಡು ಬಿಟ್ಟಿರುತ್ತಾರೆ. ಬೇಕಂತಲೆ ಮಾಡುತ್ತಾರೋ, ಕಾಮನ್ ಸೆನ್ಸ್ ಇರುವುದಿಲ್ಲವೋ ಒಂದೂ ಗೊತ್ತಾಗುವುದಿಲ್ಲ. ಹೇಳಲು ಹೋದರೆ ತಲೆ ತಗ್ಗಿಸಿಕೊಂಡು ಹೋಗುವ ಈ ಜನ ಮಾರನೇ ದಿನ ಅಲ್ಲೇ ಬಂದು ಮತ್ತೆ ನಾಯಿ ಇಸ್ಸಿ ಮಾಡಿಸುತ್ತಾರೆ. ಹಾಗಂತ ಈ ಜನರಿಗೆ ಬೇರೆಯವರ ಮೇಲೆ ದ್ವೇಷವಾಗಲಿ, ಶತ್ರುತ್ವವಾಗಲಿ ಇರುವುದಿಲ್ಲ. ಮತ್ತೆ ಏಕೆ ಹೀಗೆ ಮಾಡುತ್ತಾರೆ ಗೊತ್ತಿಲ್ಲ. ಅಂತೂ ನಾಯಿಗಳ ಮಾಲೀಕರನ್ನು ಓಡಿಸುವ ಕೆಲಸವಂತೂ ಮುಂದುವರೆದೇ ಇದೇ.

ಕೋಳಿಗಳ ಹಾರರ್ ಮೂವಿ…

1 Comment

ಕೃಪೆ – ಇಂಟರ್ನೆಟ್.

ಅಯ್ಯೋ ಟ್ರಾಕ್ಟರ್, ನಿನಗೀಗತಿಯೆ?

Leave a comment

ಅದೊಂದು ಟ್ರಾಕ್ಟರ್. ತುಂಬ ಬಲಿಷ್ಠ. ಕಾಡೆಮ್ಮೆಯಷ್ಟು. ಬಣ್ಣ ಕಡು ಕೆಂಪು. ಮೂತಿಯ ಮೇಲೆ ಹಿತ್ತಾಳೆಯ ಫಳ ಫಳಹೊಳೆಯುವ ಪುಟ್ಟ ಪುಟ್ಟ ಎರಡು ಚಿಕ್ಕ ಚಿಕ್ಕ ಎತ್ತುಗಳ ಮೂರ್ತಿ. ಅವುಗಳ ಹಣೆಯ ಮೇಲೆ ಢಾಳಾಗಿ ಹಚ್ಚಲಾಗಿರುವ ಕುಂಕುಮ. ಕೊರಳಲ್ಲಿ ಮಲ್ಲಿಗೆ ಹೂವು. ಗಾಡಿ ಮೇಲೆಲ್ಲ ದಪ್ಪ ದಪ್ಪ ವಿಭೂತಿಯ ಮುದ್ರೆಗಳು. ಬಸವನ ಹುಳುವಿಗಿರುವ ಹಾಗೆ ಮೂತಿಯಿಂದ ಮೇಲೆದ್ದಿರುವ ಎರಡು ಸ್ಪ್ರಿಂಗ್ ಗಳು. ಅದರ ತುದಿಯಲ್ಲಿ ಕಪ್ಪು ಬಿರಡೆ. ಅವಕ್ಕೆ ಗುಲಾಬಿ ಬಣ್ಣಗಳ ರಿಬ್ಬನ್ ಅಲಂಕಾರ. ಸ್ಪ್ರಿಂಗ್ ಮಧ್ಯೆ ಹಚ್ಚಲಾಗಿರುವ ಅರಿಶಿಣ ಕುಂಕುಮ. ಟ್ರಾಕ್ಟರ್ ನ ಕಪ್ಪು ಟಾಪ್ ಒಳಗೆ  ಗೆ ಜೋಡಿಸಲಾಗಿರುವ ಟೇಪ್ ರೆಕಾರ್ಡರ್ ನಿಂದ “ಉಳುವ ಯೋಗಿಯ ನೋಡಲ್ಲಿ” ಹಾಡು. ಹಿಂಭಾಗದಲ್ಲಿ “ಉತ್ರಿ ಬಿಳಿ ಜೋಳ ಬಿತ್ರಿ ನಾ ಬರದಿದ್ದ ನೀವ್ ಸತ್ರಿ” ಹಾಗೂ “ಶ್ರೀ ಬಸವೇಶ್ವರ ಪ್ರಸನ್ನ”, ಮತ್ತು “ನಾವಿಬ್ಬರು ನಮಗಿಬ್ಬರು” ಎಂದು ತೀರ ಇಕ್ಕಟ್ಟಿನಲ್ಲಿ ಬರೆದಿರುವ ಬರಹಗಳು. ಹಾರೆ, ಪಿಕಾಸಿ, ಕುಡುಗೋಲು ಇಡಲು ಇಂಜಿನ್ ಪಕ್ಕದಲ್ಲಿ ವಿಶೇಷವಾಗಿ ವೆಲ್ಡ್ ಮಾಡಲಾದ ಡಿಟ್ಯಾಚೇಬಲ್ ಸ್ಟಾಂಡ್. ಗದ್ದೆಯಲ್ಲಿ ಗಾಡಿ ಮುನಿದು ನಿಂತರೆ ಅದನ್ನು ಮುದ್ದುಮಾಡಲು ಪುಟ್ಟದಾದ ಟೂಲ್ ಕಿಟ್. ಎಂತಹ ಭೂಮಿಯಲ್ಲೂ ಉಳುಮೆ ಸಾಧ್ಯವಾಗಿಸಲು ಅತೀ ಹೆಚ್ಚಿನ ಅಶ್ವಶಕ್ತಿಯ ಎಂಜಿನ್. ಟಿವಿಯ ಅನ್ನದಾತ, ಕೃಷಿ ದರ್ಶನ, ರೇಡಿಯೋದ ಕೃಷಿ ವಾರ್ತೆಗಳ ಮಧ್ಯದಲ್ಲಿ ಈ ಟ್ರಾಕ್ಟರ್ ನದೇ ಜಾಹೀರಾತು ವಿಜೃಂಭಣೆ. ಡ್ರೈವರ್ ಉಳುಮೆ ಮಾಡುತ್ತಿರಬೇಕಾದರೆ ಆತನ ಅಕ್ಕ-ಪಕ್ಕ ಕುಳಿತು ಬೀಜ ಬಿತ್ತಲು ಅನುಕೂಲವಾಗುವ ಹಾಗೆ ಮಾಡಲಾಗಿರುವ ಸೀಟುಗಳು. ಕೆಎ-22 ಡಿ- 6…… ಎಂಬ ನಂಬರ್ ಪ್ಲೇಟ್ ನಿಂದ, ಇದು ಪಕ್ಕಾ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಯಾವುದೋ ಮೊಕ್ಕಾಂ ನ ಯಾವುದೋ ಸಾಕಿನ್ ಹಳ್ಳಿಯ ಯಾವುದೋ ಗೌಡನ ಟ್ರಾಕ್ಟರ್ ಎಂಬ ಋಜುವಾತು.

ಇಂತಹ ಟ್ರಾಕ್ಟರ್ ಒಂದು ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್ ಒಂದರ ಕಾಮಗಾರಿಗಾಗಿ ಇಟ್ಟಿಗೆ, ಸಿಮೆಂಟ್ ಹೊರುತ್ತಿತ್ತು.

ಮನುಷ್ಯರಾಗಿದ್ರೆ ನನ್ನ ಬುದ್ಧಿ ಮಾತು ಕೇಳ್ತಿದ್ರಾ…..

Leave a comment

ಶೂಟಿಂಗ್ ಮುಗಿಸಿಕೊಂಡು ಕ್ಯಾಂಡಿಮೆಂಟ್ಸ್ ಅಂಗಡಿಯೊಂದರ ಮುಂದೆ ಸಿಗರೇಟು ಸೇದುತ್ತ ನಿಂತಿದ್ದೆ. ಅದೇ ಸಮಯಕ್ಕೆ ನಾಲ್ಕಾರು ಜನರು ಅದೇ ಅಂಗಡಿಗೆ ಬಂದರು. ಅದರಲ್ಲಿ ಓರ್ವ ವೃದ್ಧರಿದ್ದು, ಅವರೊಡನೆ ಒಂದು ನಾಯಿ ಕೂಡ ನಡೆದುಕೊಂಡು ಬಂತು. ಈ ಜನ ಕಾಫಿಗೆ ಹೇಳಬೇಕು ಎನ್ನುವಷ್ಟರಲ್ಲಿ ವೃದ್ಧರೊಡನೆ ಬಂದಿದ್ದ ನಾಯಿಗೂ, ಅಲ್ಲೇ ಅಂಗಡಿ ಮುಂದೆ ಮಲಗಿದ್ದ ನಾಯಿಗೂ ಜಗಳ ಶುರುವಾಗಿಬಿಟ್ಟಿತು. ಮೊದಮೊದಲು ಹಲ್ಲು ತೋರಿಸಿದ ನಾಯಿಗಳು ಬಳಿಕ, ದೊಡ್ಡ ಸ್ವರದಲ್ಲಿ ಬೊಗಳುತ್ತ ಒಂದರಮೇಲೊಂದು ಎರಗಲು ಸನ್ನದ್ಧವಾಗಿ ಬಿಟ್ಟವು. ಕ್ಷಣಾರ್ಧದಲ್ಲಿ ಯುದ್ಧ ಘೋಷಣೆಯಾಗಿಯೇ ಬಿಟ್ಟಿತು. ಹಲ್ಲು ತೋರಿಸುವುದೇನು, ಗುರ್ ಎನ್ನುವುದೇನು, ಬಾಲ ನಿಮಿರಿಸುತ್ತ ಶಕ್ತಿ ಪ್ರದರ್ಶನವೇನು ಎಲ್ಲ ಶುರುವಾಗಿಬಿಟ್ಟಿತು. ಇನ್ನೇನು ಆ ನಾಯಿಗಳು ಕಚ್ಚಾಡಿ ಕೊಂಡು ಸುತ್ತಮುತ್ತಲಿದ್ದ ಜನರ ಮಧ್ಯೆ ಓಡಾಡಿ ಗೊಂದಲವೆಬ್ಬಿಸುವುದೊಂದು ಬಾಕಿ ಇತ್ತು. ಅಷ್ಟರಲ್ಲಿ ಆ ವೃದ್ಧರು ತಮ್ಮ ಹೆಗಲ ಮೇಲಿನ ಟರ್ಕಿಸ್ ಟಾವೆಲ್  ತೆಗೆದವರೆ ನಾಯಿಗಳತ್ತ ಹುಶ್ ಹುಶ್ ಎಂದು ಬೀಸುತ್ತ, “ಏ ನಿಲ್ಲಸ್ರೋ…ನಿಲ್ಲಸ್ರೋ….ನಿಮ್ಮ ಜಗಳಾನಾ…ಅಯಾಯಾ…ಹಿಂಗ್ ಹಾದಿ ಬೀದಿಲೆಲ್ಲ ಜಗಳಾಡ್ತಾ ಕುಂತ್ಕಂಡ್ರೆ ಮರ್ವಾದೆ ಇರ್ತದಾ? ನೋಡು ನೀನ್ ಮೊದಲೇ ಜಗಳಾಡಿ ಎಷ್ಟೊಂದು ಕಚ್ಚಸ್ಕಂಡಿದಿಯಾ…ಮತ್ತೆ ಎಗರಕ್ ಹೋಯ್ತೀಯಾ….ಹುಶ್ ಹುಶ್…”ಎನ್ನುತ್ತಾ ನಾಯಿಗಳನ್ನು ದೂರಸರಿಸಿದರು.

ಅವರ ಮಾತಿಗೋ, ಅವರ ಟಾವೆಲ್ ಗೋ ಏನೋ ಗೊತ್ತಿಲ್ಲ, ಆದರೆ ಅವರು ಮಾತು ಮುಗಿಸುತ್ತಿದ್ದಂತೆ ಅಂಗಡಿಯ ನಾಯಿ ಏನೂ ನಡೆದೇ ಇಲ್ಲವೆನೋ ಎಂಬಂತೆ ಮತ್ತೆ ತನ್ನ ಸ್ಥಾನಕ್ಕೆ ತೆರಳಿ ಸುರುಳಿ ಸುತ್ತಿಕೊಂಡು ಮಲಗಿಬಿಟ್ಟಿತು. ವೃದ್ಧರೊಡನೆ ಬಂದಿದ್ದ ನಾಯಿ ಬಾಲವಲ್ಲಾಡಿಸುತ್ತ ಅವರ ಹಿಂದೆ ಬಂತು ನಿಂತಿತು. ಅಲ್ಲಿ ನಿಂತಿದ್ದವರು ಒಂದು ಕ್ಷಣ ಆಶ್ಚರ್ಯಗೊಂಡರು. ನಂತರ  ಆ ವೃದ್ಧರೆಂದರು. “ನೋಡಿ ಸ್ವಾಮಿ…ಮಾತು ಬರ್ದ ಪಶುಗೋಳು ಮಾತು ಕೇಳುತ್ವೆ….ಅದೇ ಈಗ ಮನುಷ್ಯರು ಜಗಳಾಡ್ತಾ ಇದ್ರೆ ನನ್ನ ಬುದ್ಧಿ ಮಾತು ಕೇಳ್ತಿದ್ರಾ….?

ಒಬ್ಬ ಮಾಂಸಾಹಾರಿ = ಮೂರು ಸಸ್ಯಾಹಾರಿಗಳು

Leave a comment

‘ಸುಧಾ’ ವಾರಪತ್ರಿಕೆ (ಅಕ್ಟೋಬರ್ 29ರ) ಸಂಚಿಕೆಯಲ್ಲಿ “ಅನ್ನದ ಬಟ್ಟಲಲ್ಲಿ ಬಿರುಗಾಳಿ” ಎಂಬ ಲೇಖನವನ್ನು ಡಾ. ಜಯಕರ ಭಂಡಾರಿ ಎಂ. ಬರೆದಿದ್ದಾರೆ. ಆ ಲೇಖನದಲ್ಲಿನ ಒಂದು ಪ್ಯಾರಾಗ್ರಾಫ್ ಹೀಗಿದೆ.

ಒಂದು ಕಿಲೋ ಕೋಳಿ ಮಾಂಸ ಬೆಳೆಯಲು ಸರಾಸರಿ 2 ಕಿಲೋ ಆಹಾರ ಧಾನ್ಯದಿಂದ ತಯಾರಿಸಿದ ಫೀಡ್ ಬೇಕು. ಒಂದು ಕಿಲೋ ಹಂದಿ ಮಾಂಸ ಬೆಳೆಯಲು 3 ಕಿಲೋ ಆಹಾರ ಧಾನ್ಯ ತಿನ್ನಿಸಬೇಕು. ಅದೇ ಒಂದು ಕಿಲೋ ಗೋಮಾಂಸ ಬೆಳೆಯಲು 7 ಕಿಲೋ ಆಹಾರ ಧಾನ್ಯ ಬೇಕು. ಹಾಗಾಗಿ ಯಾರಾದರೂ ಒಂದು ಕಿಲೋ ಗೋಮಾಂಸ ತಿಂದಾಗ ಅವರು ಪರೋಕ್ಷವಾಗಿ 7 ಕಿಲೋ ಆಹಾರ ಧಾನ್ಯ ತಿಂದಂತೆ. ನೀವು ಅರ್ಧ ಪೌಂಡಿನ ಒಂದು ಬೀಫ್ ಬರ್ಗರ್ ತಿಂದರೆ, ಕನಿಷ್ಠ ಮೂರು ಜನ ಸಸ್ಯಾಹಾರಿಗಳ ಒಪ್ಪೊತ್ತಿನ ಕೂಳು ಕಬಳಿಸಿದಂತೆ….

ಶಿವಮೊಗ್ಗದಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಬನಶಂಕರಿಗೆ

2 Comments

ಮೊನ್ನೆ ನನ್ನಪ್ಪ-ಅಮ್ಮ ಶಿವಮೊಗ್ಗದಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದರು.

ಒಬ್ಬರಿಗೆ 40 ರೂಪಾಯಿಯಂತೆ ಇಬ್ಬರಿಗೆ ತಗಲಿದ್ದು 80 ರೂಪಾಯಿ.

ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್ ನಲ್ಲಿ ನಾನು ಇಬ್ಬರನ್ನೂ ಬರಮಾಡಿಕೊಂಡೆ.

ಮೇರು ಟ್ಯಾಕ್ಸಿಯಿಂದ ಬನಶಂಕರಿಯಲ್ಲಿನ ನನ್ನ ಮನೆಗೆ ಕರೆತಂದೆ.

ಅದಕ್ಕೆ ತಗಲಿದ್ದು 117 ರೂಪಾಯಿ.

ನನಗೆ ಇತ್ತೀಚೆಗೆ ದೊರೆತ ಸರ್ಟಿಫಿಕೆಟ್…

Leave a comment

certificate

ಆಕೆಯನ್ನು ನಾನು ನೋಡಿದ್ದು ಕೆಂಪು ಸೀರೆ, ಬೋಳು ತಲೆಯಲ್ಲಿ ಮಾತ್ರ

2 Comments

123

ಜಲಜಕ್ಕ ಎಂಬುವವರಿದ್ದರು. ಆಕೆಯದು ಬಾಲ್ಯ ವಿವಾಹ ಹಾಗೂ ಆಕೆ ಬಾಲ ವಿಧವೆ. ನಾವು ಚಿಕ್ಕವರಿದ್ದಾಗ ಜಲಜಕ್ಕ ಹಣ್ಣು ಹಣ್ಣು ಮುದುಕಿ. ಆಕೆಯನ್ನು ನಾನು ನೋಡಿದ್ದು ಕೆಂಪು ಸೀರೆ, ಬೋಳು ತಲೆಯಲ್ಲಿ ಮಾತ್ರ. ಬೆಳಿಗ್ಗೆ ಎದ್ದ ತಕ್ಷಣ ವಟಗುಟ್ಟಲು ಆರಂಭಿಸುತ್ತಿದ್ದ ಆಕೆ ರಾತ್ರಿಯವರೆಗೂ ತನ್ನಷ್ಟಕ್ಕೇ ತಾನೇ ಮಾತನಾಡಿಕೊಳ್ಳುತ್ತಲೇ ಇರುತ್ತಿದ್ದಳು. ಆಕೆಯ ಮದುವೆಯಾಗಿದ್ದು 6 ವರ್ಷದ ಹುಡುಗಿಯಾಗಿದ್ದಾಗ. ಮದುವೆ ಮಾಡಿಕೊಟ್ಟದ್ದು 70 ಮೀರಿದ ವೃದ್ಧನಿಗೆ. ಅವಳ ತಂದೆ ಈ ರೀತಿಯ ನಿರ್ಧಾರ ಕೈಗೊಂಡಿದ್ದು ಬಹುಶಃ 1920 ರ ಆಸುಪಾಸಿನಲ್ಲಿ. ತುಂಬಾ ಪ್ರಗತಿಶೀಲನಾಗಿದ್ದ ಆತ ಈ ರೀತಿಯ ನಿರ್ಧಾರ ಏಕೆ ಕೈಗೊಂಡ ಎಂಬುದು ಇಂದಿಗೂ ನಿಗೂಢ. ತುಂಬಾ ಹಿರಿಯರೊಡನೆ ಈ ಕುರಿತು ವಿಚಾರಿಸಿದರೂ ಸಮರ್ಪಕ ಉತ್ತರ ಮಾತ್ರ ದೊರೆತಿಲ್ಲ.

ಜಲಜಕ್ಕನಿಗೆ 8 ವರ್ಷವಾದಾಗ ಗಂಡನ ಮನೆಗೆ ಕಳಿಸಲೆಂದು ಜೋಡೆತ್ತಿನ ಗಾಡಿ ಕಟ್ಟಿದರಂತೆ. ಚಿಕ್ಕ ಹುಡುಗಿಯಾಗಿದ್ದ ಜಲಜಕ್ಕನಿಗೆ ಎಲ್ಲಿ ಹೋಗುತ್ತಿದ್ದೇನೆ, ಯಾಕೆ ಹೋಗುತ್ತಿದ್ದೇನೆ ಎಂಬುದೂ ಏನೂ ಗೊತ್ತಿಲ್ಲ. ಗಾಡಿ ತನಗಾಗಿ ವಿಶೇಷವಾಗಿ ಕಟ್ಟಲಾಗಿದೆ ಎಂದು ಗೊತ್ತಿದ್ದ ಆಕೆ, ಪ್ರಯಾಣಕ್ಕೆ ಸಂಭ್ರಮದಿಂದಲೇ ತಯಾರಾದಳು. ಗಾಡಿ ಹೊರಟಿತು. ಬೃಹತ್ ಕಾಡಿನ ದಾರಿಯಲ್ಲಿ ಗಾಡಿ ಸಾಗುತ್ತಿರುವಾಗ ಎದುರಿನಿಂದ ಮತ್ತೊಂದು ಎತ್ತಿನ ಗಾಡಿ ಎದುರಾಯಿತು. ಅದರಿಂದ ಇಳಿದ ಜನ “ಜಲಜಳ ಗಂಡ ಹೋಗ್ಬಿಟ್ನಂತೆ” ಎಂಬ ಸುದ್ದಿ ಮುಟ್ಟಿಸಿದರು. ಜಲಜಳಿದ್ದ ಗಾಡಿ ವಾಪಸ್ ತಿರುಗಿಬಿಟ್ಟಿತು. ಆಕೆ ತನ್ನ ಮನೆಗೆ ಬಂದಾಗ ಮನೆಯಲ್ಲಿದ್ದ ಹೆಂಗಸರೆಲ್ಲ ಅಳುತ್ತಿದ್ದರು. ಯಾಕೆ ಹಾಗೆ ಅಳುತ್ತಿದ್ದಾರೆ ಎಂಬುದೇ ಈಕೆಗೆ ಗೊತ್ತಿಲ್ಲ. ಕೆಲ ದಿನಗಳ ನಂತರ ಜಲಜಳ ತಲೆ ಬೋಳಿಸಿ, ಕೆಂಪು ಸೀರೆ ಉಡಿಸಿ, ಅವಳಿದೆಂದು ತಾಮ್ರದ ಮಡಿ ಪಾತ್ರೆ ತೆಗೆದಿಟ್ಟು ಮನೆಯಲ್ಲಿಯೇ ಪ್ರತ್ಯೇಕವಾಗಿ ಕೂರಿಸಲಾಯಿತು. ಆ ಪರಿಸ್ಥಿತಿಯಿಲ್ಲಿಯೇ ಆಕೆ 70 ಕ್ಕೂ ಹೆಚ್ಚು ವರ್ಷ ಬದುಕಿಬಿಟ್ಟಳು. ಆ ಅವಧಿಯಲ್ಲಿ ಜೀವನದ ಯಾವುದೇ ಸಂತೋಷ ಆಕೆಗೆ ಸಿಗಲಿಲ್ಲ. ಸಂತೋಷ ಹೋಗಲಿ ಸದಾ ಅವಗಣನೆಗೇ ಗುರಿಯಾದಳು ಜಲಜಕ್ಕ. ಹಿಂದಿನ ಕಾಲದ ಪದ್ಧತಿಗಳು ಎಷ್ಟು ಭಯಾನಕ ಮತ್ತು ಕ್ರೂರವಲ್ಲವೆ?

5 ರೂಪಾಯಿಗೆ ರಾಜೀವ್ ಗಾಂಧಿ, 25 ಪೈಸೆಗೆ ಚಾಚಾ ನೆಹರು

Leave a comment

rajiv

 

 

 

 

 

 

 

 

 

 

 

 

 

 

nehru

ಈಗ ಪ್ರಯಾರಿಟಿಗಳು ಬದಲಾಗಿವೆ

Leave a comment

kemmu

ತುಮಕೂರಿನಲ್ಲಿ ಮುಕ್ತ ಮುಕ್ತ ಸಂವಾದ ಮುಗಿಸಿದ ನಂತರ ಖಾಸಗಿ ಕೆಲಸದ ನಿಮಿತ್ತ ಒಂದು ದಿನ ಅಲ್ಲೇ ತಂಗಿದ್ದು, ಮಾರನೆ ದಿನ ಬೆಂಗಳೂರಿಗೆ ಮರಳಿದೆ. ಅಷ್ಟರಲ್ಲಿ ತುಮಕೂರಿನ ಹತ್ತು ಹಲವು ಕಡೆಗಳಲ್ಲಿ ನೀರು ಕುಡಿದೆ. ನೀರು ಬದಲಾಗಿದ್ದೇ ಬದಲಾಗಿದ್ದು ಬೆಂಗಳೂರಿಗೆ ಬಂದ ತಕ್ಷಣ ಜ್ವರ, ನೆಗಡಿ, ಕೆಮ್ಮು. ಆರತಿ ತಗೊಂಡರೆ ಜ್ವರ, ತೀರ್ಥ ಸೇವಿಸಿದರೆ ಶೀತ ಎಂಬಂತಹ ಪ್ರಕೃತಿ ನನ್ನದಲ್ಲ. ಆದರೂ ತುಮಕೂರಿನಲ್ಲಿ ಮಳೆಯಲ್ಲಿ ನೆನೆದದ್ದು, ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯ ಎಲ್ಲ ಸೇರಿಕೊಂಡು ಇಂದೂ ಕೂಡ ಕೆಮ್ಮುತ್ತಿದ್ದೇನೆ.

ಮೊನ್ನೆ ರಾತ್ರಿಯಿಂದ ನನ್ನ ಅರ್ಧಾಂಗಿಯದು ನಿರಂತರ ಹಟ. ಜೇನುತುಪ್ಪ ನೆಕ್ಕುತ್ತಿರಿ, ಕಷಾಯ ಕುಡಿಯಿರಿ, ಬಿಸಿ ನೀರೆ ಕುಡಿಯಿರಿ ಕೆಮ್ಮು ಕಡಿಮೆಯಾಗುತ್ತದೆ ಎಂದು ಒಂದೇ ಸಮನೆ ಸಲಹೆ. ಆಕೆಯ ಕಾಟಕ್ಕೆ ನಾನು ಆಗಾಗ ಆಕೆ ಹೇಳುತ್ತಿದ್ದುದನ್ನು ಪಾಲಿಸುತ್ತಿದ್ದೆನಾದರೂ ಸೀರಿಯಸ್ಸಾಗಿ ಏನೂ ಮಾಡುತ್ತಿರಲಿಲ್ಲ. ಎರಡು ದಿನ ಕಳೆದರೂ ನನ್ನ ಕೆಮ್ಮು ಮುಂದುವರೆದಿತ್ತು. ನಿನ್ನೆ ರಾತ್ರಿಯಿಂದ ಮಾತ್ರ ಸೀರಿಯಸ್ಸಾಗಿ ಜೇನುತುಪ್ಪ ನೆಕ್ಕಲು ಆರಂಭಿಸಿದ್ದೇನೆ. ಕಾರಣ ನನ್ನಾಕೆಯ ಒಂದೇ ಒಂದು ಹೇಳಿಕೆ.

ಸುಗು….ನೀನು ತುಮಕೂರಿನಿಂದ ಬಂದಾಗಿನಿಂದ ನಿನ್ನ ಕೆಮ್ಮು ಹಾಗೇ ಇದೆ. ನೀನು ಪ್ರತಿಬಾರಿ ಕೆಮ್ಮಿದಾಗಲೂ ಪುಟ್ಟ ನಿದ್ದೆಯಿಂದ ಬೆಚ್ಚಿ ಬೀಳುತ್ತಾನೆ. ಆತನ ನಿದ್ದೆ ಮುರಿಯುತ್ತಿದೆ. ಬೇಗ ಕೆಮ್ಮು ವಾಸಿ ಮಾಡಿಕೊ

ಹೌದು ಈಗ ಪ್ರಯಾರಿಟಿಗಳು ಬದಲಾಗುತ್ತಿವೆ.

ಐಬಿಎನ್ ವೆಂಕಟೇಶ್ ನಂತರ ದೆಹಲಿ ಪತ್ರಕರ್ತರ ಸರದಿ

Leave a comment

b

ಇತ್ತ ಬೆಂಗಳೂರಿಲ್ಲಿ ಸಿಎನ್ಎನ್ ಐಬಿಎನ್ ಕ್ಯಾಮರಾಮನ್ ವೆಂಕಟೇಶ್ ಮೇಲೆ ವಕೀಲರ ಗೂಂಡಾ ವರ್ತನೆ ಘಟನೆ ಹಸಿರಿರುವಾಗಲೆ ಅತ್ತ ದೆಹಲಿಯಲ್ಲಿ ಟಿವಿ ಚಾನಲ್ ಗಳ ಪತ್ರಕರ್ತರು ಹಾಗೂ ಕ್ಯಾಮರಾಮನ್ ಗಳು ದೆಹಲಿ ಮೆಟ್ರೋ ರೇಲ್ ಕಾರ್ಪೋರೇಷನ್ (ಡಿ ಎಮ್ ಆರ್ ಸಿ) ಕಡೆಯಿಂದ ಬಹಿಷ್ಕಾರದ ಬಿಸಿ ಎದುರಿಸಿದ್ದಾರೆ.

ನಿನ್ನೆ ಡಿ ಎಮ್ ಆರ್ ಸಿ ತನ್ನ ಪ್ರಯಾಣ ದರದಲ್ಲಿನ ಹೆಚ್ಚಳವನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಪತ್ರಿಕಾಗೋಷ್ಠಿ ಕರೆದಿತ್ತು. ಆದರೆ ಅಲ್ಲಿಗೆ ತಮ್ಮ ಕ್ಯಾಮರಾಗಳೊಡನೆ ತಲುಪಿದ ಟಿವಿ ಚಾನಲ್ ಪತ್ರಕರ್ತರಿಗೆ ಸ್ವಾಗತಿಸಿದ್ದು ಡಿ ಎಮ್ ಆರ್ ಸಿ ಯ ಸೆಕ್ಯುರಿಟಿ ಗಾರ್ಡ್ ಗಳು. ಪ್ರಿಂಟ್ ಮೀಡಿಯಾದವರು ಪ್ರವೇಶಿಸಲು ಅನುಮತಿ ನೀಡಿದ ದೆಹಲಿ ಮೆಟ್ರೋ, ಟಿವಿ ಪತ್ರಕರ್ತರನ್ನು ಮಾತ್ರ ಹತ್ತಿರವೂ ಬಿಟ್ಟುಕೊಳ್ಳಲಿಲ್ಲ. ಹೋಗಲಿ, ಈ ಪ್ರವೇಶ ನಿರ್ಭಂಧ ಏಕೆ ಎಂದೂ ಸಹ ವಿವರಣೆ ನೀಡುವ ಸೌಜನ್ಯ ತೋರಲಿಲ್ಲ. ಹೋಗಲಿ ಕ್ಯಾಮರಾ ಬೇಡ, ನಮ್ಮನ್ನಾದರೂ ಒಳಗೆ ಬಿಡಿ ಎಂದು ಟಿವಿ ಪತ್ರಕರ್ತರು ಮನವಿ ಮಾಡಿಕೊಂಡರೆ ಅದಕ್ಕೆ ಕೂಡ ಕವಡೆ ಕಾಸಿಗೆ ಸಿಗುವ ಕಿಮ್ಮತ್ತೂ ಕೂಡ ಸಿಗಲಿಲ್ಲ.

ದೆಹಲಿ ಮೆಟ್ರೋದ ಅವಘಡಗಳು ಹಾಗೂ ಇತ್ತೀಚೆಗೆ ನಡೆದ ವಿದ್ಯುತ್ ವೈಫಲ್ಯದ ಪ್ರಕರಣವನ್ನು ಅನವಶ್ಯಕವಾಗಿ ಟಿವಿ ಚಾನಲ್ ಗಳು ವೈಭವೀಕರಿಸಿವೆ ಎಂಬ ಕಾರಣಕ್ಕೆ ಈ ಪ್ರವೇಶ ನಿರ್ಭಂದ ಎಂಬುದು ಒಳಸುದ್ದಿ.

ಟಿವಿ ಪತ್ರಕರ್ತರು ಹಾಗೂ ಕ್ಯಾಮರಾಮನ್ ಗಳು ಯಾವುದಾದರೂ ಶಾಂತಿ, ಹೋಮ ಮಾಡಿಸುವುದು ಒಳಿತು.

ನಾವು ಕೇಳ್ತಿರೋದು ಅದೇ – ನ್ಯಾಯ

Leave a comment

venki2

 

06bvpeg12

ನಾನು ವೆಂಕಟೇಶ್ ಜೊತೆ ಕೆಲಸ ಮಾಡಿದ್ದೇನೆ. ಈ ಟಿ ವಿ ಕಂಡ ಪ್ರತಿಭಾವಂತ ಛಾಯಾಗ್ರಾಹಕರಲ್ಲಿ ನನಗೆ ತುಂಬಾ ಇಷ್ಟವಾದವರು ವೆಂಕಟೇಶ್, ನಟರಾಜ್ ಹಾಗೂ ಮೋಹನ್. ಈತ ಕ್ಯಾಮೆರಾ ಹೆಗಲಿಗೇರಿಸಿ ಫೀಲ್ಡ್ ಗೆ ಇಳಿದನೆಂದರೆ ಪಾದರಸ. ಸೌಮ್ಯ ಮಾತಿನ ಆ ಕಾರಣಕ್ಕಾಗಿಯೇ ಅಪಾರ ಗೆಳೆಯರನ್ನು ಹೊಂದಿರುವ ಹುಡುಗ.

ವೆಂಕಟೇಶ್ ನಲ್ಲಿರುವ ಪ್ರತಿಭೆ ಈ ಟಿ ವಿ ಗೊತ್ತಾಗಲಿಲ್ಲ, ಸಿ ಎನ್ ಎನ್ ಗೆ ಗೊತ್ತಾಯಿತು. ಆದ್ದರಿಂದ ಸಿ ಎನ್ ಎನ್ ಭಾಗವಾಗಿ ಹೋದ. ವೆಂಕಟೇಶ್ ಆ ಚಾನಲ್ ಗೂ ಹೆಸರು ತಂದಾತ. ಮೊನ್ನೆ ಅದೇ ರೀತಿ ಪಾದರಸದಂತೆ ಹೈ ಕೋರ್ಟ್ ನಲ್ಲಿ ವರದಿ ಮಾಡುತ್ತಿದ್ದಾಗಲೇ ವಕೀಲ ಸಮುದಾಯ ಅವನ ಮೇಲೆ ಹಲ್ಲೆ ಮಾಡಿದೆ. ನ್ಯಾಯಮೂರ್ತಿಗಳಿಗೇ ಹಲ್ಲೆ ಮಾಡಿರುವಾಗ ಇದಾವ ಲೆಕ್ಕ ಎನ್ನಬಹುದೇನೋ? ವೆಂಕಟೇಶ್ ನೊಂದಿಲ್ಲದೇ ಇರಬಹುದು. ಆದರೆ ಆತನಿಗೆ ಆಘಾತವಾಗಿದೆ. ಈ ಸಮಯದಲ್ಲಿ ಮಾಧ್ಯಮ ಸಮುದಾಯ ಅವನೊಟ್ಟಿಗೆ ಇರಬೇಕು ಎಂಬುದು ನಮ್ಮೆಲ್ಲರ ಆಸೆ. ಹಾಗಾಗಿ ಅವನಿಗೆ ಬೆಂಬಲ ಕೋರಿ ಒಂದು ಕಾಮೆಂಟ್ ಹಾಕಿ. ಈ ಎಲ್ಲವನ್ನೂ ರಾಜ್ಯಪಾಲರಿಗೆ ಒಟ್ಟಾಗಿಯೇ ತಲುಪಿಸೋಣ. ಕಾಮೆಂಟ್ ಕಾಲಂ ನಲ್ಲಿ ನಿಮ್ಮ ಅಭಿಪ್ರಾಯ ಮೂಡಿಸಿ.

(ಮೀಡಿಯಾ ಮೈಂಡ್ ನಿಂದ….)

ಬಡವರಿಗೆ ಸಾವ ಕೊಡಬೇಡೊ

Leave a comment

ಒಡಲ ಬೆಂಕಿ

ಚಿಂತನ ಪುಸ್ತಕ ಪ್ರಕಟಿಸಿರುವ ವಿಠ್ಠಲ ಭಂಡಾರಿ ಸಂಪಾದಿಸಿರುವ “ಒಡಲ ಬೆಂಕಿ – ಕನ್ನಡ ಕವಿಗಳು ಕಂಡಂತೆ ಹಸಿವು” ಪುಸ್ತಕ ಮೊನ್ನೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಪುಸ್ತಕದಲ್ಲಿ ಜಾನಪದ ಕವಿಯೋರ್ವ ಹಸಿವನ್ನು ಕಂಡ ಬಗೆ ಹೀಗಿದೆ.

ಬಡವರು ಸತ್ತರೆ…

ಬಡವರು ಸತ್ತರೆ ಸುಡಲೀಕೆ ಸೌದಿಲ್ಲೋ

ಒಡಲ ಬೆಂಕೀಲಿ ಹೆಣ ಬೆಂದೊ ದೇವರೆ

ಬಡವರಿಗೆ ಸಾವ ಕೊಡಬೇಡೊ

ದೊಡ್ಡೋರ ಮಕ್ಳೋಗೆ ಬೆಲ್ಲ ಬಾಳಿಯ ಹಣ್ಣು

ಏನು ಇಲ್ಲದ ಬಡವೇಯ ಮಕ್ಳೋಗೆ

ಹೆತ್ತಬ್ಬೆ ಬತ್ತ ಮೊಲೆ ಹಾಲು

ಕಣಜ ಬೆಳೆದ ಮನೆಗೆ ಉಣಲಾಕ ಕೂಳಿಲ್ಲ

ಬೀಸಾಕ ಕವಣೆ ಬಲವಿಲ್ಲ ಕೂಲ್ಯವರ

ಸುಡಬೇಕ ಜನುಮ ಸುಖವಿಲ್ಲ

ಅನ್ನೇಕಾರ ಅರಸು ನಿನ್ನ ಸಂಬಳ ಸಾಕು

ಹನ್ನೆರಡು ವರುಷಲ ಹಳೆ ಅಕ್ಕಿ ಅನ್ನ ಉಂಡು

ಚನ್ನಿಗ ನನ್ನ ತಮ್ಮ ಬಡವಾದ.

Older Entries

Follow

Get every new post delivered to your Inbox.

Join 2,047 other followers

%d bloggers like this: