ಒಂಭತ್ತನೆ ಕ್ಲಾಸಿನ ವಿದ್ಯಾರ್ಥಿ ತನ್ನ ಪಕ್ಕದ ಮನೆಯ ಎಲ್ ಕೆಜಿ ಹುಡುಗಿಯನ್ನು ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಆಕೆಯನ್ನ ಪೊದೆಯಲ್ಲಿ ಒಯ್ದು ಅತ್ಯಾಚಾರವೆಸಗುತ್ತಾನೆ. ಆಕೆಯನ್ನು ಬೆದರಿಸಲು ಜಾಮಿಟ್ರಿ ಬಾಕ್ಸ್ ನಿಂದ ತ್ರಿಜ್ಯ ತೆಗೆದು ಆ ಪುಟ್ಟ ಕಂದಮ್ಮಳ ಮುಖ ಮೈಮೇಲೆ ತಿವಿಯುತ್ತಾನೆ. ಮಗುವಿನ ಬದುಕು ಮುಂದೆ ಹೇಗೆ? ಆ ತಾಯಿ-ತಂದೆಯ ನೋವು ಯಾರಿಗೆ ತಾನೆ ಭರಿಸಲು ಸಾಧ್ಯ?

ವರದಕ್ಷಿಣೆಗಾಗಿ ಕಿರಾತಕ ಗಂಡ ಹೆಂಡತಿಯ ಮೈಯನ್ನು ಸಿಗರೇಟಿನಿಂದ ಸುಡುತ್ತಾನೆ. ಒಂದು ವರ್ಷದ ಬಳಿಕ ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುತ್ತಾನೆ. ಆಕೆ ಶೇ. 80 ರಷ್ಟು ಸುಟ್ಟಗಾಯಗಳಿಂದ ಜೀವನ್ಮರಣದ ನಡುವೆ ಆಕೆ ಹೋರಾಡುತ್ತಾಳೆ. ಆಕೆಯ ನೋವು ಯಾರಿಗೆ ತಾನೆ ಅರ್ಥವಾದೀತು?

ಲಕ್ಷ್ಣಣ್ ಸವದಿ ಕಥೆ ಕಟ್ಟಿದ ಸ್ಟೋರಿ ಇರಾನ್ ನಿಂದ ವರದಿಯಾಗಿದೆ. ಐವರು ಯುವಕರು ಮೊದಲು ಯುವತಿಯೊಬ್ಬಳೊಂದಿಗೆ ನರ್ತಿಸುತ್ತಾರೆ. ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲು ಮುಂದಾಗುತ್ತಾರೆ. ಆಕೆ ವಿರೋಧಿಸಿದಾಗ ಆಕೆಯ ರುಂಡ ಬೇರ್ಪಡಿಸುತ್ತಾರೆ. ಓಡಿಹೋಗುವ ಪ್ರಯತ್ನದಲ್ಲಿ ಪೋಲಿಸರ ಕೈಗೆ ಸಿಕ್ಕಿಬೀಳುತ್ತಾರೆ. ಆ ಐವರನ್ನೂ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗುತ್ತದೆ. ಈ ವಿಡಿಯೋ ನೋಡಲು ನಿಜಕ್ಕೂ ಭಯಾನಕವಾಗಿದೆ. ಸಾಮೂಹಿಕ ಅತ್ಯಾಚಾರ ನಡೆಸುವ ಸಂದರ್ಭದಲ್ಲಿ ಯುವತಿಯ ಆಕ್ರಂದನ ಕೇಳಿದ ಯಾರೇ ಆದರೂ ತುಂಬಾ ಡಿಸ್ಟರ್ಬ್ ಆಗುತ್ತಾರೆ. ಆ ಯುವತಿಯ ವೇದನೆ ಯಾರಿಗೆ ತಾನೆ ಅರ್ಥವಾದೀತು?

ನಾಲ್ಕೇ ದಿನದ ಹಸುಳೆಯನ್ನ ಪ್ಲಾಸ್ಟಿಕ್ ನಲ್ಲಿ ಸುತ್ತಿ ಯಾರೋ ತಳ್ಳುಗಾಡಿಯ ಮೇಲೆ ಮಲಗಿಸಿ ಹೋಗಿಬಿಡುತ್ತಾರೆ. ಬೆಳಿಗ್ಗೆ ಬರುವ ತಳ್ಳುಗಾಡಿಯವ ತನ್ನ ಗಾಡಿಯ ಮೇಲಿರುವ ಹಸುಳೆಯನ್ನ ಕಂಡು ಮಮ್ಮಲ ಮರುಗಿ ಅದಕ್ಕೆ ಬೆಚ್ಚಗಿನ ಬಟ್ಟೆ ತೊಡಿಸಿ ಪೋಲಿಸರಿಗೆ ಕರೆ ಮಾಡುತ್ತಾನೆ. ಪೋಲಿಸರು ಬಂದು ಮಗುವನ್ನು ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸುತ್ತಾರೆ. ಇನ್ನು ಜೀವನ ಪೂರ್ತಿ ಆ ಹಸುಳೆ ತಂದೆ-ತಾಯಿಯಿಲ್ಲದೆ ಅನಾಥವಾಗಿ ಬೆಳೆಯಬೇಕು. ಒಂದು ಕ್ಷಣದ ಆನಂದಕ್ಕಾಗಿ ಸುಖಿಸಿ ಮಗು ಹುಟ್ಟಿಸಿದ ಆ ದರಿದ್ರ ಹುಡುಗ-ಹುಡುಗಿಗೆ ಶಿಕ್ಷೆ ಏನು?

ಹೆಂಡತಿ ಹಾದಿತಪ್ಪುತ್ತಾಳೆ. ಗಂಡನಿಗೆ ಗೊತ್ತಾಗುತ್ತದೆ. ಆತ ಮನೆಗೆ ಬಂದವನೇ ಸೀದಾ ಪಿಕಾಸಿಯಿಂದ ಆಕೆಯ ತಲೆ ಒಡೆಯುತ್ತಾನೆ. ನಂತರ ತನ್ನ ಒಂದೂವರೆ ವರ್ಷದ ಕೂಸನ್ನು ಕರೆದುಕೊಂಡು ರೈಲ್ವೆ ಟ್ರಾಕ್ ಗೆ ಹೋಗುತ್ತಾನೆ. ಮಗುವನ್ನು ಅವಚಿಕೊಂಡು ಟ್ರಾಕ್ ಮೇಲೆ ಮಲಗುತ್ತಾನೆ. ರೈಲು ಇಬ್ಬರನ್ನೂ ಅಪ್ಪಚ್ಚಿ ಮಾಡುತ್ತದೆ. ಮಗು ಮಾಡಿದ ತಪ್ಪಾದರೂ ಏನು?

ನಾನು ಈ ಎಲ್ಲ ಘಟನೆಗಳಿಗೆ ವಾಯ್ಸ್ ಓವರ್ ನೀಡಿದ್ದೇನೆ ಮತ್ತು ಆಂಕರಿಂಗ್ ಮಾಡಿದ್ದೇನೆ. ಪ್ರತಿನಿತ್ಯ ನಡೆಯುವ ಇಂತಹ ಘಟನೆಗಳನ್ನ ನನ್ನ ಕೈಯಲ್ಲಿ ಅರಗಿಸಿಕೊಳ್ಳಲಾಗುವುದಿಲ್ಲ. ಆಕ್ರೋಶ ಮೂಡುತ್ತದೆ. ಮನಸ್ಸು ಒಂದು ಕ್ಷಣ ವ್ಯಗ್ರಗೊಳ್ಳುತ್ತದೆ. ತೀವ್ರ ವೇದನೆ ಅನುಭವಿಸುತ್ತದೆ. ವ್ಯವಸ್ಥೆಯ ಮೇಲೆ, ಅಪರಾಧಿಗಳ ಮೇಲೆ ಕಡುಕೋಪ ಉಕ್ಕುತ್ತದೆ. ಓ…ದೇವರೆ….ದಯಾಮಯನೆ….ಕರುಣಾಮಯಿಯೆ…..ಎನಗೂ ಆಣೆ ರಂಗ….ನಿನಗೂ ಆಣೆ….