ಇಂದು ವಿಶ್ವ ಪರಿಸರ ದಿನ

2 Comments

ಇರುವುದೊಂದೇ ಭೂಮಿ….

ಇಂದು ವಿಶ್ವ ಪರಿಸರ ದಿನ. ನಮ್ಮ ಮಕ್ಕಳಿಗೆ ನಮ್ಮ ಅಜ್ಜಂದಿರು ನಮಗೆ ಕೊಟ್ಟುಹೋದ ಭೂಮಿಗಿಂತ ಉತ್ತಮವಾದ ಭೂಮಿ ಕೊಟ್ಟುಹೋಗೋಣ. ಇಂದು ಭೂಮಿಯನ್ನು ನಗಿಸೋಣ. ನಾಳೆ ಭೂಮಿ ನಮ್ಮ ಮಕ್ಕಳನ್ನು ನಗಿಸೀತು. 

ಕೊಪ್ಪದ ನಮ್ಮ ಮನೆಯ ಸಮೀಪ ತೆಗೆದ ಫೋಟೊ.

ಅಬ್ಬಾ…ಬಾಳೆಹಣ್ಣಿನ ಗೊನೆಯೆ?!!!

1 Comment

ಶಶಿ ಜೋಯಿಸ್ ಕಳಿಸಿಕೊಟ್ಟಿದ್ದು….

2008 ರಲ್ಲಿ ಕೇರಳದಲ್ಲಿ ಕಂಡುಬಂದು 10 ಅಡಿ ಎತ್ತರದ ಬಾಳೆಹಣ್ಣಿನ ಗೊನೆಯಿದು. ಮಂಗಗಳ ಉಪವಾಸಕ್ಕೆ ಹೇಳಿ ಮಾಡಿಸಿದಂತಿದೆ ಅಲ್ಲವೆ?

-----------------------------------------------------------------

ಶುಂಠಿಯನ್ನ ಗೊಬ್ಬರ ಗುಂಡಿಗೆ ಒಗದೀದಿವಿ….

2 Comments

ಪುಟ್ಟನನ್ನು ನೋಡಿಕೊಳ್ಳಲು ಅಮ್ಮ ಕೊಪ್ಪದಿಂದ ಬಂದಿದ್ದಾರೆ. ನಿರಂತರ ಮನೆಯ ಕೆಲಸದಲ್ಲಿಯೂ ಮಹಿಳಾ ಸ್ವಸಹಾಯ ಗುಂಪಿನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತ, ಮನೆಯ ಸುತ್ತಮುತ್ತ ತರಕಾರಿ ಬೆಳೆಯುತ್ತ, ಇಬ್ಬರು ಮೊಮ್ಮಕ್ಕಳನ್ನು ಸಂಭಾಳಿಸುತ್ತ ಅಮ್ಮ ಇಂದಿಗೂ ಕ್ರಿಯಾಶೀಲವಾಗಿದ್ದಾರೆ. ಇಂತಿಪ್ಪ ಅಮ್ಮ ಬೆಂಗಳೂರಿನ ನನ್ನ ಮನೆಗೆ ಬಂದು ಬೆಂಗಳೂರಿನ ಕಾಸ್ಟ್ ಆಫ್ ಲಿವಿಂಗ್, ಪಿಜ್ಝಾದ ರೇಟ್, ಕೆಲಸದವಳ ಅರೆಬರೆ ಕೆಲಸ, ಇತ್ಯಾದಿ ನೋಡಿ ಹೌಹಾರಿದ್ದಾಳೆ.

ಮೊನ್ನೆ ತರಕಾರಿ ತರಲೆಂದು ಅಮ್ಮನೊಡನೆ ಹತ್ತಿರದ ಅಂಗಡಿಗೆ ಹೋಗಿದ್ದೆ. ಹೈಬ್ರಿಡ್ ತರಕಾರಿಗಳನ್ನಿಟ್ಟುಕೊಂಡಿದ್ದ ಆ ತರಕಾರಿ ಅಂಗಡಿಯನ್ನು ನೋಡಿ ಮೊದಲ ನೋಟದಲ್ಲೇ ಅಮ್ಮ ಮುಖ ಸಿಂಡರಿಸಿದಳು. ಆದರೆ ಬೇರೆ ಉಪಾಯ ಇರಲಿಲ್ಲವಾಗಿ ಅಲ್ಲಿಯೇ ತರಕಾರಿ ತೆಗೆದುಕೊಳ್ಳಬೇಕಾಯಿತು. ಕುಂಬಳಕಾಯಿ 20 ರೂಪಾಯಿ, ಹೀರೇಕಾಯಿ 25 ರೂಪಾಯಿ, ಬೀನ್ಸ್ 60 ರೂಪಾಯಿ, ನುಗ್ಗೆಕಾಯಿ ಮೂರಕ್ಕೆ ಎಂಟುರೂಪಾಯಿ ಎಂದು ರೇಟು ಕೇಳಿ ಇನ್ನಷ್ಟು ಗಲಿಬಿಲಿಗೊಂಡಳು, ತರಕಾರಿ ಕೊಳ್ಳಲು ಹಿಂದೇಟು ಹಾಕಿದಳು. ಹೀಗೆ ಮಾಡಿದರೆ ತರಕಾರಿ ಕೊಂಡಹಾಗೇ ಎಂದುಕೊಂಡು ನಾನು ಅಮ್ಮನಿಗೆ ಒತ್ತಾಯ ಮಾಡಿ ಎಲ್ಲ ತರಕಾರಿಗಳನ್ನು ಚೀಲದಲ್ಲಿ ತುಂಬಿಕೊಳ್ಳತೊಡಗಿದೆ. ಲಿಸ್ಟ್ ನಲ್ಲಿ ಶುಂಠಿ ಕೂಡ ಇತ್ತು. “ಶುಂಠಿ ಹೆಂಗೆ?” ಅಮ್ಮ ಅಂಗಡಿಯವನನ್ನು ಕೇಳಿದಳು.

“60 ರೂಪಾಯಿ ಕೆಜಿ” ಅಂದ ಅವ.

“ಏನು 60 ರೂಪಾಯಿನಾ? ಸುಘೋಷಾ ನೋಡ 60 ರೂಪಾಯಿ ಅಂತೆ”

“ಆಯ್ತಮಾ, 100 ಗ್ರಾಂ ತಗಳ್ಳಾ?” ಅಂದೆ.

“ಹುಂ..ತಗಾ..ಇನ್ನೇನು ಮಾಡದು. ನೋಡು, ಹೈಬ್ರೀಡ್ ಶುಂಠಿ ತಗಳ್ಳಿಕೆ ಮನಸ್ಸು ಬರಲ್ಲ ಮಾರಾಯಾ…..”ಅಂದಳು.

ಅಂಗಡಿಯವ “ಇಲ್ಲ… ಶುಂಠಿ ಚೆನ್ನಾಗಿದೆ” ಅಂದ.

“ಎಂಥ ಚೆನ್ನಾಗಿದೆ….ನಾವು ಸಾವಯವ ಕೃಷಿಯಲ್ಲಿ ಶುಂಠಿ ಬೆಳೀತಿವಿ. ನಿಮ್ಮ ಶುಂಠಿಗಿಂತ ಅರ್ಧದಷ್ಟಿದ್ರೂ ಎಷ್ಟು ಚೆನ್ನಾಗಿರತ್ತೆ ಗೊತ್ತಾ? ಆದ್ರೆನ್ ಮಾಡದು. ಮೊನ್ನೆ ಕೊಪ್ಪದಲ್ಲಿ ಶುಂಠಿ ಬೆಳದ್ವಿ. ಕಿಲೋಗೆ 3 ರೂಪಾಯಿ ಕೂಡ ಸಿಗಲಿಲ್ಲ. ಎಲ್ಲ ಶುಂಠಿ ಒಯ್ದು ಗೊಬ್ಬರ ಗುಂಡಿಗೆ ಒಗದ್ವಿ” ಎಂದಳು.

ಇದು ತನಗೆ ಸಂಬಂಧಿಸಿದ್ದಲ್ಲ ಎಂದು ಅಂಗಡಿಯವ ಸುಮ್ಮನಿದ್ದ. ನಾನು ತರಕಾರಿ ಅಂಗಡಿಯವನಿಗೆ ದುಡ್ಡು ಕೊಡಲು ಪರ್ಸ್ ತೆಗೆದೆ.

ಇಲ್ಲಿದೆ plough-home….

Leave a comment

(ಇನ್ವಿಟೇಷನ್ ಕೃಪೆ- ಅವಧಿ)

ಇಂಟರ್ನೆಟ್ ನಲ್ಲಿ ಬೇಸಾಯ ಪದ್ಧತಿ

Leave a comment

1234

“ವಜ್ರದಂತಿ…. ವಜ್ರದಂತಿ…… ವಿಕೋ ವಜ್ರದಂತಿ

ವಿಕೋ ಪೌಡರ್ ವಿಕೋ ಪೇಸ್ಟ್……

ಆಯುರ್ವೇದಿಕ್ ಜಡಿ ಬೂಟಿಯೊಂಸೆ ಬನಾ ಸಂಪೂರ್ಣ ಸ್ವದೇಶಿ

ವಿಕೋ…… ವಜ್ರದಂತಿ”

ವಿವಿಧ ಭಾರತಿಯಲ್ಲಿ ರಾತ್ರಿ 10.30 ಕ್ಕೆ ಆರಂಭವಾಗುವ ‘ಆಪ್ ಕೀ ಫರಮಾಯಿಶ್’ ಕಾರ್ಯಕ್ರಮದಲ್ಲಿನ ಈ ಜಾಹಿರಾತನ್ನು ಕೇಳಿಯೇ ನಾನು ನಿದ್ದೆಹೋಗುವುದು. ಇನ್ನೇನು ಕಣ್ಣು ಹತ್ತಬೇಕು, ಅಷ್ಟರಲ್ಲಿ ನನ್ನ ಗೆಳತಿ ಫೋನಾಯಿಸಿದಳು. ನಾನು ಹಲೋ ಎನ್ನುವ ಮೊದಲೇ “ಹಾವೆರ್ಸ್ಟ್ ಯಾರ್” ಎಂದಳು. ನನಗೆ ಅರ್ಥವಾಗಲಿಲ್ಲ. “ವಾಟ್?” ಎಂದೆ. “ಇಫ್ ಯೂ ಡೋಂಟ್ ಹಾರ್ವೆಸ್ಟ್ ನೌ ಇಟ್ ವಿಲ್ ಪೆರಿಶ್” ಎಂದಳು. ಆಗ ಅರ್ಥವಾಯಿತು. ಮಹಾರಾಯತಿ ಫಾರ್ಮ್ ವಿಲ್ಲೆ ಬಗ್ಗೆ ಮಾತನಾಡುತ್ತಿದ್ದಾಳೆ ಎಂದು. “ಕಾನ್ ಐ ಹಾರ್ವೆಸ್ಟ್ ಟುಮಾರೋ ಮಾರ್ನಿಂಗ್” ಕೇಳಿದೆ. “ನೋ. ಐ ಡೋಂಟ್ ಥಿಂಕ್ ಸೋ,,,ಎ ವೇಟ್…. ಐ ವಿಲ್ ಕಾಲ್ ಯೂ ಲೇಟರ್…ಐ ಆಮ್ ಸಪ್ಪೋಸ್ಡ್ ಟು ಗೋ ಟು ದಿ ಮಾರ್ಕೆಟ್ ನೌ ….ಓಕೆ…..ಬೈ…ಟೇಕ್ ಕೇರ್…..”ಎಂದು ಹೇಳಿ ಫೋನಿಟ್ಟಳು.

ಫೇಸ್ ಬುಕ್ ನಲ್ಲಿ ಫಾರ್ಮ್ ವಿಲ್ಲೆ ಎಂಬ ಆಟವೊಂದಿದೆ. ಸಿಂಪಲ್ ಆಟ. ನಿಮಗೆ ಒಂದಿಷ್ಟು ಜಮೀನಿರುತ್ತದೆ. ಅಲ್ಲಿ ಮೆಕ್ಕೆಜೋಳ, ಬದನೆಕಾಯಿ, ಟೋಮೆಟೋ, ಗೋಡಂಬಿ, ಅವರೆಕಾಯಿ ಸೇರಿದಂತೆ ಹಲವು ದವಸಧಾನ್ಯಗಳನ್ನು ಬೆಳೆಯಬಹುದು. ಅಷ್ಟೇ ಅಲ್ಲ ಕುರಿ, ಆಕಳು ಸಾಕಾಣಿಕೆ ಸೇರಿದಂತೆ ಹಲವು ಕೃಷಿಪೂರಕ ಕೆಲಸಗಳನ್ನು ಮಾಡಬಹುದು. ಧಾನ್ಯ ಮಾರಿ ಬಂದ ಹಣದಿಂದ ಮಾರ್ಕೆಟ್ ಗೆ ಹೋಗಿ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಬಹುದು. ನಿಮ್ಮ ಪಕ್ಕದ ಜಮೀನಿಗೆ ಬರುವಂತೆ ನಿಮ್ಮ ಗೆಳೆಯರನ್ನು ಆಹ್ವಾನಿಸಬಹುದು. ಅವರಿಗೆ ಆಕಳು, ಕುರಿ, ಮರ ಹೀಗೆ ಹಲವು ಕೃಷಿಗೆ ನೆರವಾಗಬಲ್ಲಂತಹುಗಳನ್ನು ಗಿಫ್ಟ್ ನೀಡಬಹುದು. ಹೀಗೆ ಮಾಡುತ್ತ ಮಾಡುತ್ತ ನಿಮ್ಮ ಪಾಯಿಂಟ್ಸ್ ಹೆಚ್ಚಿಸುತ್ತ ಹೋಗಬೇಕು.

ಆಮೆಗೂ ಅವಮಾನವಾಗುವ ಹಾಗಿರುವ ನನ್ನ ಇಂಟರ್ನೆಟ್ ಕನೆಕ್ಷನ್ ನಿಂದ ಈ ಆಟ ಆಡುವುದು ಸಾಧ್ಯವೇ ಇರಲಿಲ್ಲ. ನನ್ನ ಜಮೀನಿನಲ್ಲಿ ತಿರುಗಾಡುವ ಸಂದರ್ಭದಲ್ಲಿ ಆಕಸ್ಮಾತ್ತಾಗಿ ಬೀಜ ಬಿತ್ತನೆಯಾಗಿಬಿಟ್ಟಿತ್ತು. ಕೇವಲ ನಾಲ್ಕು ಗಂಟೆಯಲ್ಲಿ ಬೆಳೆ ಬಂದುಬಿಟ್ಟಿತ್ತು. ಅದನ್ನು ಬೇಗ ಹಾರ್ವೆಸ್ಟ್ ಯಾರ್ ಇಲ್ಲದಿದ್ದರೆ ಅದು ಪೆರಿಶ್ ಎಂದು ಹೇಳಲು ನನ್ನ ಗೆಳತಿ ಫೋನ್ ಮಾಡಿದ್ದಳು.

ನಂತರ ನನಗೆ ನಿದ್ದೆ ಹತ್ತಲಿಲ್ಲ.

ಯಾವ ಹಂತಕ್ಕೆ ಬೆಳೆದು ಬಿಟ್ಟಿದ್ದೇವಲ್ಲ ಎಂಬ ಯೋಚನೆ ಬಂತು. ನಮಗೆ ಕೃಷಿ ಬೇಡ. ಕೃಷಿಕ ಬೆಂಬಲ ಬೆಲೆ ಇಲ್ಲದೆ, ಗೊಬ್ಬರವಿಲ್ಲದೆ, ಸಾಲ ತೀರಿಸಲಾಗದೆ ಸಾಯುತ್ತಿದ್ದಾನೆ. ಆತನ ಬಗ್ಗೆ ಕನ್ಸರ್ನ್ ಇಲ್ಲ. ರೈತ ಹೋರಾಟಗಳಿಗೆ ಬೆಲೆಯಿಲ್ಲ. ರೈತನ ಆತ್ಮಹತ್ಯೆಗೆ ಕ್ಯಾರೆ ಇಲ್ಲ.  ಸಗಣಿ ಕಂಡರೆ ಮುಖ ಸಿಂಡರಿಸುವ, ಬೆಂಗಳೂರಿನಲ್ಲಿ ಮಳೆ ಬಂದರೆ ಶಪಿಸುವ ನಮಗೆ ಫಾರ್ಮ್ ವಿಲ್ಲೆ ಮಾತ್ರ ಬೇಕು. ಇಂಟರ್ನೆಟ್ ನಲ್ಲಿ ಕೃಷಿ ಮಾತ್ರ ಬೇಕು. ಹೇಗಿದೆ ನೋಡಿ ತಮಾಷೆ?

ಊರಿಗೆ ಹೋದಾಗಲೆಲ್ಲ ಅಣ್ಣನಿಗೆ ಕುತ್ರಿ ಹಾಕಲು ಸಹಾಯ ಮಾಡುವ, ಬಟ್ಟು ಕೊಯ್ದುಕೊಂಡು ಅಡಕೆ ಸುಲಿಯುವ, ಕೊಟ್ಟಿಗೆಯಲ್ಲಿ ಸಗಣಿ ಬಳಿಯುವ, ಎರೆಗೊಬ್ಬರದಲ್ಲಿ ಎರೆಹುಳು ಆರಿಸುವ ನನಗೆ ಈ ಫಾರ್ಮ್ ವಿಲ್ಲೆ ನಿಜಕ್ಕೂ ತಮಾಷೆಯಾಗಿ ಕಂಡಿತು.  

ನನಗೆ ಫಾರ್ಮ್ ವಿಲ್ಲೆ ಬಗ್ಗೆಯಾಗಲಿ ಅಥವಾ ಈ ರೀತಿಯ ಆಟದ ಬಗ್ಗೆಯಾಗಲಿ ಯಾವುದೇ ಗ್ರಜ್ ಇಲ್ಲ. ಈ ಆಟವಾಡುವವರು ನನ್ನ ಗೆಳೆಯ ಗೆಳತಿಯರೇ ಆಗಿರುವುದರಿಂದ ಅವರ ಬಗ್ಗೆ ಕೋಪವೂ ಇಲ್ಲ. ಆದರೆ ಒಟ್ಟಾರೆ ನಾವು ಸಾಗುತ್ತಿರುವ ದಿಕ್ಕಿನ ಬಗ್ಗೆ ಯೋಚನೆಯಾಯಿತು. ವಾಸ್ತವತೆಯನ್ನು ಧಿಕ್ಕರಿಸುವ, ಅದೇ ವಾಸ್ತವತೆ ಬೇರೊಂದು ರೂಪದಲ್ಲಿ ಬಂದರೆ ಅಪ್ಪಿಕೊಳ್ಳುವ ಮನೋಧರ್ಮ ವಿಚಿತ್ರವಾಗಿದೆಯಲ್ಲ ಅನಿಸಿತು. ಫಾರ್ಮ್ ವಿಲ್ಲೆಯಂತಹ ಆಟವನ್ನು ಶೋಧಿಸಿರುವ ವ್ಯಕ್ತಿ, ಆಟದ ಜೊತೆಜೊತೆಗೇ ಕೃಷಿಕರಿಗೆ ನೆರವಾಗಬಲ್ಲವಂತಹುದನ್ನೇನಾದರೂ ಮಾಡಿದರೆ ಉತ್ತಮ ಅಲ್ಲವೆ? ಹಾಗೆಯೇ ಕೇವಲ ಫಾರ್ಮ್ ವಿಲ್ಲೆ ಆಡುವ ಗೆಳೆಯ-ಗೆಳತಿಯರು ಕೃಷಿ, ಕೃಷಿಕನ ಏಳಿಗೆಗಾಗಿ ವಾಸ್ತವ ನೆಲೆಗಟ್ಟಿನಲ್ಲಿ ಏನಾದರೂ ಯೋಚನೆ ಮಾಡಬಹುದಲ್ಲವೆ?

ಕಣ್ಮರೆಯಾಗಿದೆ ಸಾವಯವ ಕೃಷಿ.

Leave a comment

mane2 005ರಾಜ್ಯದಲ್ಲಿ ಕೃಷಿಯ ಕುರಿತು ಸರ್ಕಾರದ ಗೊಂದಲ ನೀತಿ ಮತ್ತೊಮ್ಮೆ ಬಯಲಾಗಿದೆ. ಕಳೆದ ಬಾರಿ ಗೊಬ್ಬರ ಗಲಾಟೆಯಾದಾಗ ಗೋಲಿಬಾರ್ ಮೂಲಕ ಪ್ರತಿಭಟನೆ ಹತ್ತಿಕ್ಕಿದ್ದ ಸರ್ಕಾರ, ಬಳಿಕ ಸಹಜ ಹಾಗೂ ಸಾವಯವ ಕೃಷಿಯ ಜಪ ಮಾಡಿತ್ತು. ಸಾವಯವ ಕೃಷಿಯನ್ನು ಪ್ರೋತ್ಸಾಹಿಸಬೇಕು ಎಂದು ಬೊಬ್ಬಿಡುತ್ತ, ಸಹಜ ಕೃಷಿ ಪರಿಣಿತ ಸುಭಾಷ್ ಪಾಳೆಕರ್ ಅವರನ್ನು ಶಾಸಕರ ಭವನಕ್ಕೆ ಕರೆಸಿ ನಾಲ್ಕಾರು ಶಾಸಕರೆದುರು ಉಪನ್ಯಾಸ ನೀಡಿಸಿತ್ತು. ಆ ಮೂಲಕ ತನಗೆ ಸಹಜ ಹಾಗೂ ಸಾವಯವ ಕೃಷಿಯ ನಡುವಿನ ವ್ಯತ್ಯಾಸದ ಅರಿವಿಲ್ಲ ಎಂದು ಪರೋಕ್ಷವಾಗಿ ಸಾರಿತ್ತು. ಇದು ಸಾಲದೆಂಬಂತೆ, ರಾಜ್ಯದ ಎಲ್ಲ ರೈತರನ್ನೂ ವಿಧಾನ ಸೌಧಕ್ಕೆ ಕರೆಸಿಕೊಂಡು ಸಾವಯವ ಕೃಷಿ ಮಾಡುವುದಾಗಿ ಆಣೆ-ಪ್ರಮಾಣ ಮಾಡಿಸಿಕೊಂಡಿತ್ತು.

ಆದರೆ ಇಂದು ರೈತರ ಬೆರಳಿಗೆ ಚುನಾವಣಾ ಶಾಯಿ ಹಚ್ಚಿ ಗೊಬ್ಬರ ವಿತರಿಸುತ್ತಿದೆ. ಇದನ್ನು ಗಮನಿಸಿದರೆ ಸರ್ಕಾರದ ಮೂರ್ಖತನಕ್ಕೆ ಕೊನೆಯೇ ಇಲ್ಲವೆನೋ ಅನಿಸುತ್ತದೆ.

vikas marriage 046

ಹಲವಾರು ವರ್ಷಗಳಿಂದ ರಸಗೊಬ್ಬರವನ್ನು ಬಳಸಿ ಉಳುಮೆ ಮಾಡುತ್ತಿರುವ ರೈತ ಒಮ್ಮಿಂದೊಮ್ಮೆಗೆ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದು ಕಷ್ಟಸಾಧ್ಯ. ಆದರೆ, ಕಳೆದ ಬಾರಿ ಸಾವಯವ ಕೃಷಿಯನ್ನು ಅಮೂಲ್ಯ ನಿಧಿಯೆಂಬಂತೆ ಕಂಡಿದ್ದ ಸರ್ಕಾರ, ಈ ಬಾರಿ ಆ ಕುರಿತು ಚಕಾರವನ್ನೇ ಎತ್ತಿಲ್ಲ. ಕನಿಷ್ಟ, ಈ ಬಾರಿ ಸಾವಯವ ಕೃಷಿಯನ್ನು ನೂತನವಾಗಿ ಅಳವಡಿಸಿಕೊಂಡಿರುವ ರೈತರ ಸಂಖ್ಯೆ ಎಷ್ಟು, ಅವರ ಅನುಭವ ಹೇಗಿದೆ, ಎದುರಿಸಿದ ಸವಾಲು-ಸಮಸ್ಯೆಗಳು, ಅವಕ್ಕೆ ಪರಿಹಾರ ಕಂಡುಕೊಂಡ ಬಗೆ, ಈ ಪ್ರಕ್ರಿಯೆಯಲ್ಲಿ ಸರ್ಕಾರ, ಕೃಷಿ ಇಲಾಖೆ, ಸ್ವಸಹಾಯ ಗುಂಪುಗಳ ಪಾತ್ರ ಇತ್ಯಾದಿ ಮಾಹಿತಿಯನ್ನು ಕೃಷಿ ಇಲಾಖೆ ಪ್ರಚಾರ ಪಡಿಸಿದರೆ, ಈಗಲೂ ರಾಸಾಯನಿಕ ಗೊಬ್ಬರ ಬಳಸುತ್ತಿರುವ ರೈತರಿಗೆ ದಾರಿದೀಪವಾಗುತ್ತದೆ. ಆದರೆ, ಸರ್ಕಾರ ಮಾತ್ರ ಮುಗುಮ್ಮಾಗಿ ಕುಳಿತಿದ್ದು, ಕಳೆದ ಬಾರಿ ಸಹಜ-ಸಾವಯವ ಕೃಷಿಯ ಹೆಸರಿನಲ್ಲಿ ಮಾಡಿದ ಖರ್ಚು, ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಬರದ ಸಮಯದಲ್ಲಿ ವಿದೇಶ ಪ್ರವಾಸಕ್ಕೆ ತೆರಳುವ ಕೇಂದ್ರ ಕೃಷಿ ಸಚಿವ ಹಾಗೂ ಕೃಷಿಯ ಒಳಹೊರಗನ್ನು ಇಡೀ ಭೂಮಂಡಲದಲ್ಲಿ ತಾವೊಬ್ಬರೆ ತಿಳಿದುಕೊಂಡಿರುವ ಹಾಗೆ ವರ್ತಿಸುವ ರಾಜ್ಯ ಕೃಷಿ ಸಚಿವರ ಮಧ್ಯೆ, ರೈತರನ್ನು ದೇವರೇ ಕಾಪಡಬೇಕು. ಕೆಎಚ್ ಬಿ ಹಗರಣವನ್ನು ನೋಡಿದರೆ, ಭೂಮಿಯ ಬಗ್ಗೆ ಇರುವ ಪ್ರೀತಿ, ಭೂ ಒಡೆಯನ ಬಗ್ಗೆ ಇಲ್ಲವಲ್ಲ ಎಂದು ಖೇದವೆನಿಸುತ್ತದೆ.

Follow

Get every new post delivered to your Inbox.

Join 87 other followers