ಉಪಸಂಹಾರ -2- ನನ್ನ ಅವಸ್ಥೆಗೆ ಮರುಗಿದವರ ಮಾತುಗಳು

Leave a comment

*ಬೇಗ ಚೇತರಿಸಿಕೊಳ್ಳಿ ಸುಘೋಷ್

- ಸಂದೀಪ್ ಕಾಮತ್.

…………………………………………

*Very good narration. keep it up

– ಅವಧಿ

…………………………………………

*ಛೆ ಛೆ ಪಾಪ ಮುಖ್ಯ ಮಂತ್ರಿ ಮಗನಿಗೆ ಹೀಗಾಗಬಾರದಿತ್ತು !!

– ಶಶಿ ಜೋಯಿಸ್

……………………………………………..

*ಸಕತ್ತಾಗಿ End ಮಾಡಿದಿರಾ

– ಗುರುಮೂರ್ತಿ

……………………………………………….

*ಅಬ್ಬಾ..

- ದಿವ್ಯಾ

…………………………………………………

*ತುಂಬಾ ಚೆನ್ನಾಗಿದೆ ಬರಹ. ನಿಮ್ಮ ಅನುಭವ ಮಾಲಿಕೆಯೂ ತುಂಬಾ ಕುತೂಹಲಕಾರಿಯಾಗಿ ಬರ್ತಿದೆ. ಅದೂ ಸಿಸ್ಟರ್ಸ್ ಗಳ ಬಗ್ಗೆ ನಿಮ್ಮ ಮಾತು ಅಕ್ಷರಶಃ ನಿಜ.

ಒಂದು (ಬಿಟ್ಟಿ) ಸಲಹೆ : ನಿಮ್ಮ ಬರಹಗಳಲ್ಲಿ ಇತ್ತೀಚೆಗಂತೂ ತುಂಬಾ ಇಂಗ್ಲೀಷ್ ಪದಗಳು ನುಸುಳಿಕೊಳ್ತಾ ಇದಾವೆ. ಹೆಚ್ಚು ಇಂಗ್ಲೀಷ್ ಪುಸ್ತಕವೇನಾದ್ರೂ ಓದ್ತಿದೀರಾ?:)

– ರಂಜಿತ್

…………………………………………………..

*ಸುಘೋಷ್, ನಿನ್ನೆ ನಿಮ್ಮಿಂದ ಹುಶಾರಿದ್ದಿಲ್ಲ ಎನ್ನುವುದರ ಬಗ್ಗೆ ತಿಳಿದಾಗಿನಿಂದಲೂ ಒಂಥರಾ ಗಿಲ್ಟ್ ಫೀಲ್ ಕಾಡ್ತಾ ಇದೆ. ಒಬ್ಬ ಸಹ ಕಲಾವಿದೆಯಾಗಿ ಜೊತೆಯವರ ಆಗು ಹೋಗುಗಳ ವಿಚಾರವಾಗಿ ಏನೂ ತಿಳಿಯದವಳಾಗಿ ಹೇಗಿದ್ದೇನಲ್ಲಾ ಅಂತ.. ಇತ್ತೀಚಿಗೆ ಬ್ಲಾಗುಗಳಿಗೂ ತುಂಬಾ ಕಡಿಮೆ ಭೇಟಿ ಕೊಡುತ್ತೇನಾದ್ದರಿಂದ ನಿಮ್ ಬ್ಲಾಗಿಗೆ ಬಂದೇ ಇಲ್ಲ, ಹೀಗಾಗಿ ಈ ಮುಖಾಂತರವೂ ವಿಷಯ ಗೊತ್ತಾಗುವ ಚಾನ್ಸ್ ತಪ್ಪಿತು.
ತುಂಬಾ ವಿಷದವಾಗಿ ವಿಷಯ ನಿರೂಪಣೆ ಮಾಡಿದ್ದೀರಿ. ನೀವು ಹೇಳುವ ಪರಿ ಚೆಂದ. ಆದರೆ ಅನುಭವಿಸಿದ ನೋವು… ಉಫ್! ಅಂತೂ ಚೇತರಿಸಿಕೊಳ್ಳುತ್ತಿದ್ದೀರಲ್ಲ ಗುಡ್. ಬೇಗ ಮೊದಲಿನ ಹಾಗೆ ದುಂಡಗಾಗಿ ಬೇಗ.:-)

– ಜಯಲಕ್ಷ್ಮಿ ಪಾಟೀಲ್, (ಜಿಪಿ)

……………………………………………………….

*ಬಹುಶ “ಕಲ್ಲು ಕರಗುವ ಸಮಯ” ಶೀರ್ಷಿಕೆ ಸರಿಯಾಗಬಹುದೇನೋ … ಸುಮ್ನೆ ಹೇಳಿದೆ ಬೇಗ ಚೆತರಿಸಿಕೊಳ್ಳಿ ಎಂಬುದು ನಮ್ಮ ಹಾರೈಕೆ

– ಅವಿನಾಶ್ ತೀರ್ಥಹಳ್ಳಿ

…………………………………………………..

*Very Good

– ಶೆಟ್ಟರು

……………………………………………………

*ನಿಜಕ್ಕೆ ತುಂಬಾ ಹತ್ತಿರವಾದ ಬರಹ . ನಿಮ್ಮ ಬರಹ ನೋಡಿ ಅರ್ಥವಾಗುತ್ತೆ ಒಬ್ಬರನೊಬ್ಬರು ಎಷ್ಟು ಪ್ರೀತಿಸ್ತಿರಾ ಅಂತ . ಮಗುಗೆ ಮಾಡೋದು ತಾಯಿಗೆ ಸಹಜವಾದ ಬಂದ ಗುಣ , ಆದರೆ ನಿಜವಾದ ಅರ್ಥದಲ್ಲಿ ಹೆಂಡತಿ, ಗೆಳತಿ ಆಗೋದು , ಸಿಗೋದು ಎಲ್ಲರಿಗೂ ಸಾಧ್ಯ ಇಲ್ಲ ಬಿಡಿ .
ನಿಜ ಹೇಳಬೇಕಂದರೆ ನಮ್ಮಿಬ್ಬರಲ್ಲಿಯೂ ಯಾರು ಮೊದಲು ಪ್ರಪೋಸ್ ಮಾಡಿದರು ಎಂಬ ಭಿನ್ನಾಭಿಪ್ರಾಯ ಇಂದಿಗೂ ಇದೆ .
ನಿಮಗೆ ಬೇಗ ಗುಣಮುಖ ಅಗಲಿ ಎಂದು ಹಾರೈಸುವ

-ಮನಸಾರೆ

………………………………………………..

*ಜನ್ಮಜನ್ಮಾಂತರಕ್ಕೂ ನೀವಿಬ್ಬರೂ ಜೀವನ ಸಂಗಾತಿಗಳಾಗಿರಿ, ಆದರೆ ಹೀಗೆ ಆಸ್ಪತ್ರೆ ಸೇರುವ ಅನಿವಾರ್ಯತೆ ಬರದಿರಲಿ, ಆಗಾಗ ಪ್ರೀತಿ ವ್ಯಕ್ತಪಡಿಸುವ ಮತ್ತು ಅನುಭವಿಸುವ ಅವಕಾಶಗಳು ಹೇರಳವಾಗಲಿ(ಈ ಜನ್ಮಕ್ಕೂ)..:-)

– ಜಯಲಕ್ಷ್ಮಿ ಪಾಟೀಲ (ಜೆಪಿ)

……………………………………………..

ಉಪಸಂಹಾರ -1, ಸರ್ವಂ ಶ್ರೀ ವಾಸುದೇವಾರ್ಪಣಮಸ್ತು

Leave a comment

ಜೀವನದಲ್ಲಿ ಆಗುವ ದುರ್ಘಟನೆಗಳಿಗೆ ನೀವು ಯಾವ ಕಾರಣ ಕೊಡುತ್ತೀರಿ? ಜೀವನದಲ್ಲಿ ಘಟಿಸುವ ಸಾವು, ನೋವು, ಆಪರೇಷನ್, ಆಕ್ಸಿಡೆಂಟ್, ಎಲ್ಲದಕ್ಕೂ ಯಾರನ್ನು ಹೊಣೆಮಾಡಬಹುದು? “ನಾನು ನನ್ನ ಬದುಕಿನಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ ಆದರೂ ದೇವರು ನನಗೆ ಈ ಶಿಕ್ಷೆ ಕೊಟ್ಟ” ಎಂದು ಅನ್ನುವವರನ್ನು ನಾವು ನೋಡಿರುತ್ತೇವೆ, ಕೇಳಿರುತ್ತೇವೆ. ಅತ್ಯಂತ ಸಜ್ಜನ, ಸಂಭಾವಿತ ವ್ಯಕ್ತಿಯ ಹೆಂಡತಿ ಒಂದು ದಿನ ಹೇಳದೆ ಕೇಳದೆ ಪಕ್ಕದ ಮನೆಯ ಹುಡುಗನೊಬ್ಬನೊಂದಿಗೆ ಓಡಿ ಹೋಗಿರುತ್ತಾಳೆ. ಮನೆಯಲ್ಲಿ ಹಕ್ಕಳೆಹುಳವನ್ನೂ ಹೊಡೆಯದ ವ್ಯಕ್ತಿಗೆ ಭಯಂಕರ ಆಕ್ಸಿಡೆಂಟ್ ಆಗಿ ಕಾಲು ಮುರಿದುಕೊಂಡು ಶಾಶ್ವತವಾಗಿ ಅಂಗವಿಕಲಾಗಿರುತ್ತಾನೆ, ಮತ್ತೊಬ್ಬರ ಕಷ್ಟಕ್ಕೆ ಮರಗುವ ವ್ಯಕ್ತಿ ಚಿಕ್ಕವಯಸ್ಸಿನಲ್ಲೇ ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ಆಗಿ ಇಹಲೋಕ ತ್ಯಜಿಸಿರುತ್ತಾನೆ. ಸುನಾಮಿ ಅಲೆಯಲ್ಲಿ ಸತ್ತ ಎರಡೂವರೆ ಲಕ್ಷ ಜನ, ಚಿತ್ರದುರ್ಗದ ಸಂತೆಹೊಂಡದಲ್ಲಿ ಮುಳುಗಿದ 83 ಜನ, ಕುಂಭಕೋಣಂ ಶಾಲೆಯಲ್ಲಿ ಬೆಂದುಹೋದ 90 ಮಕ್ಕಳು……ಈ ಎಲ್ಲ ಮರಣಗಳಿಗೆ ಕಾರಣರಾರು?

ಮನುಷ್ಯನ ಬುದ್ಧಿ, ಶಕ್ತಿ, ಸಾಮರ್ಥ್ಯವನ್ನು ವಿಷಯವೊಂದು ಮೀರಿ ಹೋದಾಗ ಅದಕ್ಕೆ ನಾವು ಕರ್ಮಫಲ, ಹಿಂದಿನ ಜನ್ಮದ ಪಾಪ, ಇತ್ಯಾದಿ ವಿವರಣೆ ಕೊಟ್ಟು ಸಮಾಧಾನಪಡುತ್ತೇವೆ. ವಾಸ್ತವಾಗಿ ಈ ವಿವರಣೆಯಷ್ಟು ಬೇರಾವುದೇ ವಿವರಣೆ ಸಾಂತ್ವನ ಕೂಡ ನೀಡಲಾರದು!!

“ಕರ್ಮಣ್ಯೇವಾಧಿಕಾರಸ್ತೆ ಮಾಫಲೇಷು ಕದಾಚನ” ಎಂಬ ಗೋಪಾಲನ ಮಾತಿನಲ್ಲಿ ದೊಡ್ಡತತ್ವವೇ ಇದೆ. ಅರ್ಥಮಾಡಿಕೊಳ್ಳಬೇಕಷ್ಟೇ. “ದೇವರು ಇಲ್ಲವೇ ಇಲ್ಲ, ಅದು ಮೂಢರಿಗೆ ಅಗತ್ಯವಾಗಿರುವಂತಹದ್ದು, ಬುದ್ಧಿವಂತರಿಗಲ್ಲ. ದೇವರೆಂಬುದು ಮಿಥ್ಯೆ” ಎಂದು ಭಯಂಕರ ವಾದಮಾಡುತ್ತಿದ್ದ ನನ್ನ ಮಿತ್ರನೊಬ್ಬನಿಗೆ ಒಂದು ದಿನ ಹೊಟ್ಟೆನೋವು ಬಂದಾಗ ಹಠಾತ್ ದೈವಭಕ್ತಿ ಜಾಗೃತವಾಗಿದ್ದನ್ನು ನಾನು ನೋಡಿದ್ದೇನೆ. ನಾಸ್ತಿಕನಾಗುವುದು ಸುಲಭ. ಆದರೆ ಆಸ್ತಿಕನಾಗಲು ತುಂಬ ಗಟ್ಸ್ ಬೇಕಾಗುತ್ತದೆ. ದೇವರು ಕಷ್ಟ ಕೊಟ್ಟರೂ, ಅದನ್ನೂ ಆತನ ಮಹಿಮೆ, ಆಶೀರ್ವಾದ ಎಂದು ಅಂದುಕೊಳ್ಳಲು ಎಂತಹ ಮೀಟರ್ ಬೇಕಲ್ಲವೆ?

ಬದುಕಿನಲ್ಲಿ ನಡೆಯುವ ಸಂತಸದ ಘಟನೆಗಳಿಗೆ ಮಾತ್ರ ನಾವು ಯಾವುದೇ ಕಾರಣಗಳನ್ನು ಹುಡುಕಲು ಹೋಗುವುದಿಲ್ಲ. ಆರಂಕಿ ಸಂಬಂಳದ ಜಾಬ್ ಸಿಕ್ಕಿದ್ದಕ್ಕೆ, ಪಿಂಗಾಣಿ ಗಾಜಿನ ಬಣ್ಣದ ಹುಡುಗಿ ಮದುವೆಯಾಗಲು ಒಪ್ಪಿದ್ದಕ್ಕೆ, ಅವಾರ್ಡ್ ಬಂದಿದ್ದಕ್ಕೆ, ನಾವು ಯಾವತ್ತೂ ಕಾರಣಗಳನ್ನು ಹುಡುಕುವುದಿಲ್ಲ. “ಓ ದೇವರೆ ನನಗ್ಯಾಕೆ ಅವಾರ್ಡ್ ಕೊಡಿಸಿದೆ?” ಎಂದು ಹಳಹಳಿಸುವ ವ್ಯಕ್ತಿಯನ್ನು ನೀವೂ ಕಂಡಿಲ್ಲ, ನಾನೂ ಕಂಡಿಲ್ಲ. ಸಂತಸಕ್ಕೆ ಕಾರಣ ಹುಡುಕದ ಯಾರನ್ನೂ ದೂಷಿಸದ ನಾವು, ದುಃಖಕ್ಕೆ ಮಾತ್ರ ದೇವರನ್ನು, ದೈವವನ್ನು, ಅಥವಾ ಮತ್ತ್ಯಾವುದೋ ಜೀವಿಯನ್ನು ಶಪಿಸುವುದು ಅಪರಾಧವಲ್ಲವೆ?

ನನ್ನ ಉದಾಹರಣೆಯನ್ನೇ ತೆಗೆದುಕೊಂಡರೆ ನನಗೆ ಸಿಸ್ಟೋಸ್ಕೋಪಿಯಾಗಿಬೇಕಾಗಿದ್ದ ಅಗತ್ಯವೇ ಇರಲಿಲ್ಲ. ಆದರೆ ಅದು ಆಗಬೇಕು ಎಂದು, ನಾವು ದೇವರೆಂದು ಕರೆಯುವ ಆ ಅಗೋಚರ ಚೈತನ್ಯದ ಮನಸ್ಸಿನಲ್ಲಿದ್ದರೆ, ಅದು ಆಗಲೇಬೇಕಲ್ಲವೆ? ಅದಕ್ಕೆ ಹಳಹಳಿಸಿ ಏನುಪಯೋಗ? ದೇವರು ನಿಶ್ಚಯಿಸಿದ್ದನ್ನು ನಾನು ಬದಲಿಸಲೂ ಸಾಧ್ಯವಿಲ್ಲ. ‘ಮುಕ್ತ ಮುಕ್ತ’ ದಲ್ಲಿ ನನಗೆ ಪಾತ್ರ ಮಾಡುವ ಅವಕಾಶ ನೀಡಿ, ಕೆಲವೇ ತಿಂಗಳುಗಳಲ್ಲಿ ಜನಪ್ರೀಯತೆಯನ್ನು ಮೊಗೆಮೊಗೆದು ತಂದುಕೊಟ್ಟಾಗ ನಾನು ಹಲುಬಲಿಲ್ಲ. ಸಂತಸ ಪಟ್ಟೆ. ಈಗ ಸಿಸ್ಟೋಸ್ಕೋಪಿಯಾದಾಗ ಕೂಡ ನಾನು ಹಲುಬಬಾರದು. ಯಾರನ್ನೂ ದೂಷಿಸಬಾರದು. ಆ ಯೋಗ್ಯತೆ ನನಗಿಲ್ಲ.

ಈ ರೀತಿಯ ಮನಸ್ಥಿತಿ ನಿರ್ಮಾಣವಾದಾಗ ಕಷ್ಟಗಳನ್ನು ಎದುರಿಸುವ ಶಕ್ತಿ ಮತ್ತಷ್ಟು ಹೆಚ್ಚುತ್ತದೆ ಎಂಬುದು ನನ್ನ ನಂಬಿಕೆ ಮತ್ತು ಅನುಭವ. ಆದರೆ ಈ ಎಲ್ಲವನ್ನೂ ಹೇಳಿದರೂ ಪುರುಷ ಪ್ರಯತ್ನವಂತೂ ಇರಲೇಬೇಕು. ಹಾಲಿನ ಉತ್ಪನ್ನಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ, ಕಪ್ಪು ದ್ರಾಕ್ಷಿ, ಕ್ಯಾಬೀಜ್, ಪನೀರ್, ತಿನ್ನಬೇಡಿ. ಹೆಚ್ಚು ಹೆಚ್ಚು ನೀರು ಕುಡಿಯಿರು ಎಂದು ಡಾಕ್ಟರ್ ಹೇಳಿದ್ದಾರೆ. ಇದನ್ನು ಮರೆತು ಮುಂದೆ ಮತ್ತೊಮ್ಮೆ ಕಿಡ್ನಿ ಸ್ಟೋನ್ ಆದರೆ ಅದಕ್ಕೆ ನಾನು ಹೊಣೆಯಾಗುತ್ತೇನೆಯೇ ಹೊರತು ಆ ದೇವರಲ್ಲವಲ್ಲ.

ಅದಕ್ಕೆ ಮುಕ್ತವಾಗಿ ನಕ್ಕು ಅಂದುಬಿಡುತ್ತೇನೆ, ಸರ್ವಂ ಶ್ರೀ ವಾಸುದೇವಾರ್ಪಣಮಸ್ತು….

(ನಾಳೆ – ಉಪಸಂಹಾರ -2- ನನ್ನ ಅವಸ್ಥೆಗೆ ಮರುಗಿದವರ ಮಾತುಗಳು)

ನಾಳೆ ಉಪಸಂಹಾರ ಭಾಗ-1

Leave a comment

ಇಂದು ‘ಉಪಸಂಹಾರ – ಸರ್ವಂ ಶ್ರೀ ವಾಸುದೇವಾರ್ಪಣಮಸ್ತುಟ ಪ್ರಕಟವಾಗಬೇಕಾಗಿತ್ತು. ಲೇಖನವನ್ನು ನಾಳೆ ಪ್ರಕಟಿಸಲಾಗುವುದು.

ಪ್ರೀತಿಯಿರಲಿ

ಸುಘೋಷ್ ಎಸ್. ನಿಗಳೆ.

ಅಲ್ಲೆರಡು ಜೀವಗಳಿದ್ದವು. ದೂರದಿಂದಲೇ ಕೊರಗುತ್ತಿದ್ದವು

2 Comments

ಸಿಕ್ಸ್ ಪ್ಯಾಕ್ ಉಳ್ಳ ವ್ಯಕ್ತಿ ಆರಾಮಿಲ್ಲದಿದ್ದಾಗ ಹೇಗೆ ಮಗುವಿನಂತಾಗಿಬಿಡುತ್ತಾನೋ, ಹಾಗೆಯೇ ಆ ಮಗು ಮೊದಲು ನೆನೆಸಿಕೊಳ್ಳುವುದು ಅಮ್ಮನನ್ನು. ಮನುಷ್ಯನಿಗೆ ಆಘಾತ, ತೊಂದರೆ, ಭಯ, ನೋವು, ಆಕ್ಸಿಡೆಂಟ್ ಏನೇ ಆದರೂ ಆತ ಮೊದಲು ನೆನೆಸಿಕೊಳ್ಳುವುದು ಅಮ್ಮನನ್ನೇ. ಕೈಕಾಲು ಮುರಿದುಕೊಂಡೋ, ಬೆಂಕಿಯಲ್ಲಿ ಸುಟ್ಟುಕೊಂಡೋ ಹಾಸಿಗೆಯ ಮೇಲೆ ಮಲಗಿರುವ ವ್ಯಕ್ತಿ ಅಮ್ಮನನ್ನು ಹೊರತುಪಡಿಸಿ ಬೇರಾರ ಹೆಸರನ್ನು ತೆಗೆದುಕೊಳ್ಳಲು ಸಾಧ್ಯವೇ ಇಲ್ಲ.

ಮೊದಲ ದಿನ ಬೆಳಿಗ್ಗೆ ನನಗೆ ಹೊಟ್ಟೆ ನೋವು ಬಂದಾಗ ಬೊಬ್ಬಿಡುತ್ತಿದ್ದೆನಲ್ಲ…ಆಗ ನಾನು ಮಾಡಿದ್ದು ಕೂಡ ಅದನ್ನೇ. ಅಂದು ಎಷ್ಟು ಬಾರಿ ಅಮ್ಮನ ಹೆಸರನ್ನು ಕೂಗಿಕೊಂಡೆನೋ ಲೆಕ್ಕವಿಟ್ಟಿಲ್ಲ. ನಾನು ಹಾಗೆ ಕೂಗಿದ್ದು ಖಂಡಿತವಾಗಿ ದೂರದ ಕೊಪ್ಪದಲ್ಲಿದ್ದ ನನ್ನಮ್ಮನಿಗೆ ಗೊತ್ತಾಗಿರಲೇಬೇಕು. ಕಾರಣ…ಪ್ರತಿಬಾರಿ ಅಮ್ಮ ಎಂದು ನಾನು ಕೂಗಿದಾಗ ನನ್ನ ಹೊಟ್ಟೆನೋವು ಏನೋ ಒಂದಿಷ್ಟು ಕಡಿಮೆಯಾದಂತೆನಿಸುತ್ತಿತ್ತು. ಹೀಗಾಗಿ ಅಮ್ಮನ ಜಪ ಮುಂದುವರೆದಿತ್ತು. ದೇವರನಾಮ ಹೇಳಿದ್ದರೂ ಬಹುಶಃ ಕಡಿಮೆಯಾಗುತ್ತಿತ್ತು. ಆದರೆ ಎಲ್ಲವೂ ನಮ್ಮ ನಂಬಿಕೆಯ ಮೇಲೆಯೇ ಅವಲಂಬಿತವಾಗಿದೆಯಲ್ಲವೆ? ಅಮ್ಮ ಕೂಡ ನಡೆದಾಡುವ ದೇವರೇ ತಾನೆ. ಅಮ್ಮ ಎಂದರೆ ಏನೋ ಹರುಷವೋ….ನನ್ನ ಪಾಲಿಗೆ ಅವಳೇ ದೈವವೂ….ಅಮ್ಮ ಎನ್ನಲು ಎಲ್ಲಾ ಮರೆತೆನು…..

ನನ್ನಮ್ಮನ ಬಗ್ಗೆ ನನಗೆ ತುಂಬಾ ಗೌರವ ಹುಟ್ಟಿದ್ದು ಹಲವು ವರ್ಷಗಳ ಮೊದಲು. ತುಂಬಾ ಚಿಕ್ಕವನಿದ್ದೆ. ಬಹುಶಃ ನಾಲ್ಕೈದು ವರ್ಷದವನಿರಬೇಕು. ಜ್ವರ ಬಂದು ಮಲಗಿದ್ದೆ. ಮತ್ತೆ ಮತ್ತೆ ವಾಂತಿಯಾಗುತ್ತಿತ್ತು. ಹೀಗೆ ವಾಂತಿಯಾದಗಲೆಲ್ಲ ಅಮ್ಮ ತಕ್ಷಣ ಬೊಗಸೆ ಮುಂದುಮಾಡಿ ವಾಂತಿಯನ್ನು ಕೈಯಲ್ಲಿ ಹಿಡಿದು ಬಚ್ಚಲು ಮನೆಗೆ ಹೋಗಿ ಚೆಲ್ಲುತ್ತಿದ್ದಳು. ಆಗ ಅದೆಂತಹ ಪ್ರೀತಿ ಅಮ್ಮನ ಮೇಲೆ ಬೆಳೆಯಿತೆಂದರೆ ಅದನ್ನು ಅಳೆಯಲೇ ಸಾಧ್ಯವಿಲ್ಲ.

ಇನ್ನು ನನ್ನಪ್ಪನೆಂದರೆ, ಮೈ ಡ್ಯಾಡಿ ಸ್ಟ್ರಾಂಗೆಸ್ಟ್. ಬಲಿಷ್ಠ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನನ್ನಪ್ಪ ಉತ್ತಮ ಉದಾಹರಣೆಯಾಗಬಲ್ಲ. ಪಿಯುಸಿಯಲ್ಲಿರುವಾಗ ಮನೆಯಿಂದ ನಾನೊಮ್ಮೆ ಓಡಿ ಹೋಗಿದ್ದೆ. ಆ ಸಂಪೂರ್ಣ ಪ್ರಕರಣವನ್ನು ಅಪ್ಪ ಹ್ಯಾಂಡಲ್ ಮಾಡಿದ್ದ ರೀತಿ ನನ್ನನ್ನು ಆತನಿಗೆ ಪೂರ್ಣ ಶರಣಾಗವಂತೆ ಮಾಡಿತ್ತು. ನಾನು ಈಗ ದೇವರಲ್ಲಿ ಮತ್ತೆ ಮತ್ತೆ ಕೇಳುತ್ತಿರುತ್ತೇನೆ….ಓ ದೇವರೆ ನನ್ನನ್ನು ನನ್ನಪ್ಪನ ಹಾಗೆಯೇ ಮಾಡಪ್ಪ ಅಂತ……

ಇಂತಹ ಎರಡು ಜೀವಗಳು ಕೊಪ್ಪದಲ್ಲಿ ನಾಲ್ಕು ದಿನಗಳ ಒಳಗೊಳಗೇ ಕೊರಗಿದ್ದವು. ನನ್ನ ಸ್ಥಿತಿಗೆ ಮರುಗಿದ್ದವು. ಅಪ್ಪ ಮತ್ತೆ ಮತ್ತೆ ಫೋನ್ ಮಾಡುತ್ತಿದ್ದ. ಅಪ್ಪ ಫೋನ್ ಮಾಡಿದಾಗಲೆಲ್ಲ ಅಮ್ಮ ಕೂಡ ಮಾತನಾಡುತ್ತಿದ್ದಳು. ಪ್ರಾಣಾಯಾಮ ಮಾಡು, ಹೆಚ್ಚು ಹೆಚ್ಚು ನೀರು ಕುಡಿ, ಬಾಳೆದಿಂಡಿನ ಪದಾರ್ಥ ಮಾಡಿ ತಿನ್ನು ಅಂತ ಅಪ್ಪ-ಅಮ್ಮನ ಸಲಹೆ ಇಂದಿಗೂ ಮುಂದುವರೆಯುತ್ತಲೇ ಇವೆ. ನಾನು ದೇವರಲ್ಲಿ ಬೇಡಿಕೊಳ್ಳುತ್ತಲೇ ಇದ್ದೆನೆ…ಓ ದೇವರೆ ನನ್ನನ್ನು ನನ್ನಪ್ಪಮ್ಮನಂತೆ ಮಾಡು…..

(ನಾಳೆ – ಉಪಸಂಹಾರ – ಸರ್ವಂ ಶ್ರೀ ವಾಸುದೇವಾರ್ಪಣಮಸ್ತು….)

ಇದ್ರ ಇರಬೇಕು ನನ್ನ ಮಾವನ್ಹಂಗ….

2 Comments

ಪ್ರಾಥಮಿಕ ಶಾಲೆಯಲ್ಲಿದ್ದಾಗ ವಿರುದ್ಧಾರ್ಥಕ ಪದಗಳನ್ನು ಬರೆಯುವಂತೆ ಮಾಸ್ತರರು ಹೇಳುತ್ತಿದ್ದಾಗ ಕೆಲವು ಶಬ್ದಗಳು ವಿರುದ್ಧಾರ್ಥಕ ಪದಗಳ ಪಟ್ಟಿಯಲ್ಲಿ ಖಾಯಂ ಆಗಿ ಇರುತ್ತಿದ್ದವು. ಹುಡುಗ-ಹುಡುಗಿ, ಅಪ್ಪ-ಅಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿ, ಅತ್ತೆ-ಸೊಸೆ, ಮಾವ-ಅಳಿಯ ಈ ಶಬ್ದಗಳನ್ನು ಕ್ಲಾಸಿನಲ್ಲಿದ್ದ ಅಷ್ಟೂ ವಿದ್ಯಾರ್ಥಿಗಳು ಮೊದಲಿಗೆ ಬರೆದು ನಂತರ ಉಳಿದ ವಿರುದ್ಧಾರ್ಥಕ ಪದಗಳನ್ನು ಬರೆಯುತ್ತಿದ್ದರು. ಈಗ ಅದನ್ನು ಯೋಚಿಸಿದರೆ ತುಂಬ ಮೋಜೆನಿಸುತ್ತದೆ.

ಅತ್ತೆ-ಸೊಸೆ, ಮಾವ-ಅಳಿಯ ಸಂಬಂಧಗಳನ್ನು ನಮ್ಮ ಮಾಧ್ಯಮ, ಸಾಹಿತ್ಯ ಹಾಗೂ ಸಮಾಜ ಬಹುಶಃ ವಿರುದ್ಧಾರ್ಥಕ ಪದಗಳಂತೆಯೇ ನೋಡಿದೆ. ನಿಜಜೀವನದಲ್ಲಿ ಯಾರಿಗೂ ಆದರ್ಶ ಅತ್ತೆ-ಸೊಸೆ, ಮಾವ-ಅಳಿಯ ಸಂಬಂಧಗಳು ಸಿಗದ ಕಾರಣ ಈ ಕೊರತೆಯಿರಬೇಕು. ನನ್ನ ಲಿಸ್ಟ್ ನಲ್ಲಿ ಸಹ ಇಂದಿನವೆರೆಗೆ ಆದರ್ಶ ಅತ್ತೆ-ಸೊಸೆಯಂದಿರ ಸಂಖ್ಯೆ ಐದು ದಾಟಿಲ್ಲ. ವರದಕ್ಷಿಣೆ ಕಿರುಕುಳ, ತವರು ಮನೆಯ ಹೀಗಳೆಯುವಿಕೆ, ಮಾವನ ಮನೆಯ ಮರ್ಯಾದೆ ಹರಾಜು, ಗಂಡನಿಗೆ ಮಂಗಳಾರತಿ, ಅತ್ತೆಯ ಹಿಂಸೆ, ಸೊಸೆಯ ಬಯ್ಗಳ ಮುಂತಾದ ಪ್ರಕರಣಗಳಿಂದ ಒಟ್ಟಿನಲ್ಲಿ ಈ ಸಂಬಂಧಗಳು ಭಾರತೀಯ ಸಮಾಜದ ಗಲ್ಲಿಗಲ್ಲಿಗಳ ಸಂದುಗೊಂದಿಗಳಲ್ಲಿ ಸದಾ ಚರ್ಚೆಯ ವಿಷಯ.

ನಾನು ಆಸ್ಪತ್ರೆ ಸೇರಿದಾಗ ನನ್ನೊಡನೆ ವಿದ್ಯಾಳೇ ಉಳಿದುಕೊಳ್ಳುವುದು ಎಂದು ನಿರ್ಧಾರವಾಗಿತ್ತು. ಹಾಗೆ ನಾವೇ ಮಾತಾಡಿಕೊಂಡಿದ್ದೆವು. ನಾನು, ವಿದ್ಯಾ, ಉದಾತ್ತ ಮೂರು ಜನ ಇರುವುದೆಂದು ಅಂದುಕೊಂಡಿದ್ದೆವು. ಅದೇ ಆಸ್ಪತ್ರೆಯಲ್ಲಿ ಹುಟ್ಟಿದ್ದ ಉದಾತ್ತ ಆಗಲೇ ಹತ್ತಾರು ಸಿಸ್ಟರ್ ಗಳ ಕಣ್ಮಣಿಯಾಗಿದ್ದ. ನಮ್ಮ ನಿರ್ಧಾರವನ್ನು ಕೇಳಿದ ಸಿಸ್ಟರ್ ಗಳು, ಬೇಡ ಬೇಡ ಅವ ಇಲ್ಲಿ ಬೇಡ. ಹಾಸ್ಟಿಟಲ್ ಇನ್ಫೆಕ್ಷನ್ ಆಗಬಹುದು ಎಂದು ಹೇಳಿದ್ದರಿಂದ ವಿದ್ಯಾ ನನ್ನೊಡನೆ ಇರುವುದು ರದ್ದಾಯಿತು.

ಉಳಿದಿದ್ದ ಒಂದೇ ಒಂದು ಆಯ್ಕೆಯೆಂದರೆ ನನ್ನ ಮಾವನದ್ದು. ಈಗಾಗಲೇ ಬರೆದಿರುವಂತೆ ನನ್ನ ಮಾವನಿಗೆ 71 ವಯಸ್ಸು. 35 ವರ್ಷಗಳ ಕಾಲ ಏರ್ ಫೋರ್ಸ್ ನ ಮೆಡಿಕಲ್ ಟ್ರೇಡ್ ನಲ್ಲಿದ್ದವರು. ಇಂದಿಗೂ ನಿತ್ಯ ಐದು ಗಂಟೆಗೆ ಎದ್ದು ಆಸ್ಥಾ ಚಾನಲ್ ಆನ್ ಮಾಡಿ ಬಾಬಾ ರಾಮದೇವ್ ರ ಕೋಚಿಂಗ್ ಕ್ಲಾಸ್ ನಲ್ಲಿ ತಪ್ಪದೆ ಪಾಲ್ಗೊಳ್ಳುತ್ತಾರೆ. ಅವರ ಡ್ರೆಸ್ಸಿಂಗ್ ಸೆನ್ಸ್, ವೈಯುಕ್ತಿಕ ಶಿಸ್ತು, ಎಲ್ಲವೂ ಥೇಟ್ ಏರ್ ಫೋರ್ಸ್ ನದ್ದೆ. ಬಾಂಗ್ಲಾ, ಚೀನಾ, ಪಾಕಿಸ್ತಾನ್ ಮೂರು ಯುದ್ಧಗಳಲ್ಲಿ ಪಾಲ್ಗೊಂಡಿರುವ ನನ್ನ ಮಾವ ರಾಮಚಂದ್ರ ಅನಗೋಳಕರ ಇಂದಿಗೂ ಶಿಸ್ತಿನ ಸಿಪಾಯಿ.

ಆದರೆ ವಯೋ ಸಹಜವಾಗಿ ಇದ್ದಕ್ಕಿದ್ದಂತೆ ಕುಳಿತಲ್ಲೇ ನಿದ್ದೆ ಬಂದುಬಿಡುವುದು, ಈಗ ಹೇಳಿರುವ ವಿಷಯವನ್ನು ಮತ್ತೊಂದು ಕ್ಷಣವೇ ಮರೆತುಬಿಡುವುದು, ದೈಹಿಕ ದುರ್ಬಲತೆ ಮುಂತಾದವುಗಳೂ ಹೆಚ್ಚಾಗುತ್ತಿವೆ. ಅಂತಹವರಿಗೆ ತೊಂದರೆ ಕೊಡುವುದು ನನಗೆ ಮನಸ್ಸಿಲ್ಲದಿದ್ದರೂ ನನ್ನ ಬಳಿ ಯಾವುದೇ ಆಯ್ಕೆ ಇರಲಿಲ್ಲ. ಹೀಗಾಗಿ ರಾತ್ರಿ-ಹಗಲೆನ್ನದೆ ಮಾವ ನನ್ನ ಜೊತೆಗಿದ್ದರು. ಮೆಡಿಕಲ್ ಟ್ರೇಡ್ ನಲ್ಲಿದ್ದುದರಿಂದ ಸಲೈನ್ ಹಚ್ಚುವುದು, ಸಮಯಕ್ಕೆ ಸರಿಯಾಗಿ ಮಾತ್ರೆ ಕೊಡುವುದು, ನನಗೆ ಧೈರ್ಯ ತುಂಬುವುದು ಎಲ್ಲವನ್ನೂ ತುಂಬ ಶ್ರದ್ಧೆಯಿಂದ ಮಾಡಿದರು. ತೀರ ಕಫ ಕಟ್ಟಿ ಖೋರ್…ಖೋರ್ ಎಂದು ಗಟ್ಟಿಯಾಗಿ ಕಫ ಹೊರತೆಗೆದಾಗ ಸಡನ್ ಆಗಿ ನನ್ನ ಮುಂದೆ ಪ್ಯಾನ್ ಹಿಡಿದು ಉಗುಳಲು ಸಹಾಯ ಮಾಡಿದರು. ಅವರ ಕಾಳಜಿ ನನ್ನ ಹೃದಯವನ್ನು ಮುಟ್ಟಿತ್ತು.

ಇಲ್ಲೀತನಕ ಕೇವಲ ಅಳಿಯ-ಮಾವ ಸಂಬಂಧವಿದ್ದ ನಾವು, ನನ್ನ ಸಿಸ್ಟೋಸ್ಕೋಪಿ ಕಾರಣದಿಂದಾಗಿ ಈ ಶಬ್ದಗಳ ಸಂಬಂಧಕ್ಕಿಂತ ಹೆಚ್ಚಿನ ಸಂಬಂಧವನ್ನೇನೋ ಪಡೆದಿದ್ದೇವೆ ಎನಿಸುತ್ತಿದೆ.

(ನಾಳೆ – ಅಲ್ಲೆರಡು ಜೀವಗಳಿದ್ದವು. ದೂರದಿಂದಲೇ ಕೊರಗ್ಗುತ್ತಿದ್ದವು)

ಮನ ತುಂಬಿದ ಮಡದಿ

5 Comments

ನಾನು ಜೀವನಪೂರ್ತಿ ಮದುವೆಯಾಗದೇ ಉಳಿಯುತ್ತೇನೆ. ನಾನು ಯಾರು? ಎಲ್ಲಿಂದ ಬಂದೆ? ಬದುಕಿನ ಮೂಲ ಉದ್ದೇಶ ಏನು? ಜಗತ್ತು ಏಕಿದೆ? ಶೂನ್ಯವೇಕಿಲ್ಲ? ಗಂಡಸಾದರೆ ಮದುವೆಯಾಗಲೇ ಬೇಕೆ? ಪುನರ್ಜನ್ಮ ಇರುವುದು ಸತ್ಯವೆ? ಎಂಬತಹ ಆಧ್ಯಾತ್ಮಿಕ ಪ್ರಶ್ನೆಗಳು ನನಗೆ 10 ನೇ ಕ್ಲಾಸಿನಲ್ಲಿ ಎದುರಾಗಿ, ಅಂತಿಮವಾಗಿ ನಾನು ಮದುವೆಯಾಗದೆ ಮಾನವ ಜೀವನದ ರಹಸ್ಯವನ್ನು ಭೇದಿಸಬೇಕು ಎಂದು 16 ನೇ ವಯಸ್ಸಿನಲ್ಲಿ ನಿರ್ಧರಿಸಿದ್ದೆ.

ಹುಚ್ಚುಖೋಡಿ ಮನಸು,,,,ಅದು ಹದಿನಾರರ ವಯಸು…

ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನನ್ನ ಸಂಸ್ಕೃತ ಶಿಕ್ಷಕರಾಗಿದ್ದ ಶ್ರೀ. ಜಿ. ಆರ್. ಜೋಷಿ ಅವರನ್ನು ದಿನನಿತ್ಯ ಪೀಡಿಸುತ್ತಿದ್ದೆ.

ಮುಂದೆ ಪಿಯುಸಿಗೆ ಬಂದೆ ನೋಡಿ. ಕೆಲವೇ ತಿಂಗಳುಗಳಲ್ಲಿ ನಾನು ಮದುವೆಯಾಗುವುದಿಲ್ಲ ಎಂಬ ನಿರ್ಧಾರ ಎಸ್ ಎಂ ಕೃಷ್ಣರ ಬೆಂಗಳೂರನ್ನು ಸಿಂಗಾಪೂರ್ ಮಾಡುವ ನಿರ್ಧಾರದಂತೆ ಕರಗಿ ಹೋಯಿತು. ಇದಕ್ಕೆ ಕಾರಣವಾಗಿದ್ದು ಅಫ್ ಕೋರ್ಸ್, ನನ್ ಅದರ್ ದ್ಯಾನ್ ನನ್ನ ಕ್ಲಾಸಿನ ಹುಡುಗಿಯರು. ಐದನೇ ಕ್ಲಾಸಿನಿಂದ್ ಕೋಎಡ್ ನಲ್ಲಿ ಕಲಿಯದಿದ್ದವನಿಗೆ ಆಧ್ಯಾತ್ಮ ಅಂಟಿಕೊಳ್ಳುವುದು ಸಹಜ ತಾನೆ? ಆದರೆ ಪಿಯುಸಿಯಲ್ಲಿ ಕೋಎಡ್ ಇದ್ದರಿಂದ ನಿರಂತರ ಐದುವರ್ಷಗಳ ಬಳಿಕ ಹುಡುಗಿಯರ ಪಕ್ಕ ಕುಳಿತು ಪಾಠ ಕೇಳುವ (ನೋಡುವ?) ಅವಕಾಶ ವಿತ್ತು. ಮದುವೆ ಆಗವುದೇ ಆಗಿದ್ದರೆ ಈಗಾಗಲೇ ಯಾಕೆ ಪ್ರೀತಿಸಿ ಮದುವೆಯ ಪ್ರಿಪರೇಷನ್ ಮಾಡಿಕೊಳ್ಳಬಾರದು, ತಂದೆ-ತಾಯಿಗಳಿಗೆ ಎಷ್ಟೂಂತ ತಾನೆ ಜವಾಬ್ದಾರಿ ಕೊಡುವುದು, ನನ್ನ ಕಾಲ ಮೇಲೆ ನಾನು ನಿಲ್ಲುವುದು ಯಾವಾಗ, ನಾನು ಮದುವೆಯಾಗುವ ಹುಡುಗಿಯನ್ನು ನಾನೇ ಆರಿಸಿಕೊಂಡು ಅಪ್ಪ-ಅಮ್ಮನ ಜವಾಬ್ದಾರಿ ಕಡಿಮೆ ಮಾಡಿಕೊಳ್ಳೋಣ ಎಂದು ನಿರ್ಧರಿಸಿಬಿಟ್ಟೆ.

ಮಂಗಗಳ ಉಪವಾಸದಂತೆ…..

‘ದಿಲ್ ಚಾಹತಾ ಹೈ’ನ ಸೈಫ್ ಅಲಿ ಖಾನ್ ಪಾತ್ರ ನೆನಪಿದೆ ತಾನೆ? ಹೆಜ್ಜೆಹೆಜ್ಜೆಗೂ ಹುಡುಗಿ ಹುಡುಗಿಗೂ ಆತನಿಗೆ ಪ್ರೀತಿ ಉಂಟಾಗಿಬಿಡುತ್ತದೆ. ನಾನು ಬಿಎ ಓದುವಷ್ಟರಲ್ಲಿ ನನ್ನ ಪರಿಸ್ಥಿತಿಯೂ ಹಾಗೆಯೇ ಆಗಿಬಿಟ್ಟಿತ್ತು. ಸ್ನೇಹಿತರು ನನ್ನ ವರ್ತನೆ ನೋಡಿ “ಸುಘೋಷ್ ಖೂಪ್ ಪ್ರೇಮಳ ಆಹೆ!!” (ಸುಘೋಷ್ ತುಂಬಾ ಪ್ರೇಮಮಯಿ!!) ಎಂದು ಅಣಗಿಸುತ್ತಿದ್ದರು. ಈ ಎಲ್ಲ ಕನ್ಫ್ಯೂಷನ್ ಗಳ ಮಧ್ಯೆ ನಾನು ಸೀರಿಯಸ್ಸಾಗಿ ಪ್ರೀತಿಸಲು ಆರಂಭಿಸಿದ್ದು, ಇಂದು ನನ್ನ ಬಾಳಸಂಗಾತಿಯಾಗಿರುವ ವಿದ್ಯಾಳನ್ನು.

ವಿವಿಧ ಹುಡುಗಿಯರ ಪ್ರೇಮದಲ್ಲಿ ಮುಳುಗಿಹೋಗಿದ್ದ ನನ್ನನ್ನು ವಿದ್ಯಾ ಸೆಳೆದಿದ್ದಳು. ನಮ್ಮಿಬ್ಬರಲ್ಲಿ ಯಾರು ಮೊದಲು ಪ್ರಪೋಸ್ ಮಾಡಿದರು ಎಂಬ ಬಗ್ಗೆ ಇಂದಿಗೂ ಭಿನ್ನಾಭಿಪ್ರಾಯವಿದೆಯಾದರೂ, ನನ್ನ ಚಿತ್ರಾನ್ನ, ಚಿತ್ರಾನ್ನ, ಚಿತ್ರ ಚಿತ್ರ ಚಿತ್ರಾನ್ನ ಮನಸ್ಸನ್ನು ಅರ್ಥಮಾಡಿಕೊಂಡು, ತನ್ನನ್ನು ತಾನು ಅದಕ್ಕೆ ಹೊಂದಿಸಿಕೊಂಡು ನಮ್ಮ ಸಂಸಾರದಲ್ಲಿ ನನ್ನ ಏಳ್ಗೇಗೆ ತಾನು ಸ್ಯಾಕ್ರಿಫೈಸ್ ಮಾಡುತ್ತ ಇಂದಿಗೂ ವಿದ್ಯಾ ನನಗೆ ವಿದ್ಯೆ ಕಲಿಸುವ ಗುರುವಾಗಿದ್ದಾಳೆ.

ಇಷ್ಟೆಲ್ಲ ಪ್ರವರಕ್ಕೆ ಕಾರಣವಿಷ್ಟೆ….ನಾನು ಸಿಸ್ಟೋಸ್ಕೋಪಿ ಮಾಡಿಸಕೊಂಡಿದ್ದಾಗ ನನ್ನ ಮಗ ಉದಾತ್ತನಿಗೆ ನಾಲ್ಕು ತಿಂಗಳು. ಪ್ರತಿ ಎರಡು ಗಂಟೆಗೊಮ್ಮೆ ಆತನಿಗೆ ಫೀಡ್ ಮಾಡಬೇಕು. ಮನೆಯಲ್ಲಿ ಅಡಿಗೆ ಮಾಡಿಕೊಂಡು, ಡಬ್ಬಿ ಕಟ್ಟಿಕೊಂಡು ನನಗೆ, ಊಟ ತರಬೇಕು. ಒಂದು ಕಡೆ ಗಂಡ ಮತ್ತೊಂದು ಕಡೆ ಮಗನನ್ನು ಸಂಭಾಸುತ್ತಿದ್ದ ವಿದ್ಯಾ ನಿಜವಾಗಿಯೂ ತನ್ನ ಪ್ರೇಮವನ್ನು, ಕಾಳಜಿಯನ್ನು ಮತ್ತೊಮ್ಮೆ ಎತ್ತಿಹಿಡಿದಿದ್ದಳು. ಉದಾತ್ತ ಜೋರಾಗಿ ಉಸಿರುಬಿಟ್ಟರೂ ನಿದ್ದೆಯಿಂದ ಎಚ್ಚರಗೊಳ್ಳುವ ವಿದ್ಯಾ ಆತ ಹುಟ್ಟಿದಾಗಿನಿಂದ ಸುಖವಾಗಿ ನಿದ್ದೆ ಮಾಡಿಲ್ಲ. ನಾನು ಆಸ್ಪತ್ರೆಯಲ್ಲಿ ಮಲಗಿದ್ದಾಗಲಂತೂ ಆಕೆ ರಾತ್ರಿ ಮಲುಗುತ್ತಿದ್ದುದೇ ಅಪರೂಪ. ನಾನು ಆಸ್ಪತ್ರೆಯಲ್ಲಿದ್ದಾಗ ಆಕೆ ಮಾಡಿದ ಕೆಲಸಗಳು ಇವು.

1. ಮನೆಯಲ್ಲಿ ಅಡಿಗೆ ಮಾಡಿ, ಉದಾತ್ತನಿಗೆ ಫೀಡ್ ಮಾಡಿ, ನಂತರ ಆಟೋ ಹಿಡಿದು ಆಸ್ಪತ್ರೆಗೆ ಬಂದು ನನಗೆ ಊಟ ತಂದುಕೊಡುವುದು.(ದಿನಕ್ಕೆ ಮೂರು ಬಾರಿ – ನಾಲ್ಕು ದಿನ)

2. ತನ್ನ ಆಫೀಸ್ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ನನ್ನ ಇನ್ಶೂರೆನ್ಸ್ ಪೇಪರ್ಸ್ ಮೂವ್ ಮಾಡಿಸುವುದು.

3. ಸಿಸ್ಟರ್ ಗಳು ಹೇಳುತ್ತಿದ್ದ ಔಷಧಿಗಳನ್ನು ತಂದು ಕೊಡುವುದು.

4. ನನ್ನ ಆರೋಗ್ಯದ ಬಗ್ಗೆ ನನ್ನಪ್ಪ ಅಮ್ಮನಿಗೆ ನಿರಂತರ ಅಪ್ ಡೇಟ್ ಮಾಡುವುದು.

5. ನನ್ನ ಈ-ಮೇಲ್ ಗಳನ್ನು ಚೆಕ್ ಮಾಡಿ, ಅತ್ಯಗತ್ಯ ಈ-ಮೇಲ್ ಗಳಿಗೆ ಉತ್ತರ ಕಳಿಸುವುದು.

6. ಆಸ್ಪತ್ರೆಗೆ ಬಂದ ಬಳಿಕ ನನಗಾಗಿ ಹಣ್ಣು, ಜೂಸ್, ಎಳನೀರು ಇತ್ಯಾದಿ ತರಲು ಮತ್ತೆ ಹೊರಹೋಗುವುದು.

7. ಕೊನೆಯದಾಗಿ, ನನ್ನ ಬಗ್ಗೆ ಹೃದಯದಿಂದ ಕಾಳಜಿ ವಹಿಸುವುದು.

ವಿದ್ಯಾ ಒಬ್ಬಳೇ ಈ ಕೆಲಸ ಮಾಡುತ್ತಿದ್ದುದರಿಂದ ಅವಳಿಗೆ ನನ್ನಿಂದಾಗುತ್ತಿದ್ದ ತೊಂದರೆಯಿಂದ ನನಗೆ ತುಂಬಾ ಬೇಜಾರಾಗಿತ್ತು. ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಮನೆಗೆ ಬಂದಾಗ, ವಿದ್ಯಾಗೆ ಕಣ್ತುಂಬಿಕೊಂಡು “ಥ್ಯಾಂಕ್ಯು ವಿದು” ಅಂದಿದ್ದೆ. ಅದಕ್ಕೆ ವಿದ್ಯಾ ಹೇಳಿದ್ದೇನು ಗೊತ್ತೆ? “ಸಾರಿ ಸುಗು. ನಿನ್ನನ್ನು ನಾನು ತುಂಬಾ ಲೇಟಾಗಿ ಆಸ್ಪತ್ರೆಗೆ ಎಡ್ಮಿಟ್ ಮಾಡಿಸಿದೆ. ಬೆಳಿಗ್ಗೆ ನೋವು ಬಂದರೆ ನಾನು ಎಡ್ಮಿಟ್ ಮಾಡಿಸಿದ್ದು ರಾತ್ರಿ 12 ಗಂಟೆಗೆ. ಆಯ್ ಆಮ್ ಸಾರಿ. ನನಗೆ ನಿನ್ನ ಸಿರಿಯಸ್ ಸ್ಥಿತಿ ಅರ್ಥವೇ ಆಗಲಿಲ್ಲ. ಸಾರಿ”

ವಿದು, ಮುಂದಿನ ಜನ್ಮಗಳಿದ್ದರೆ ನೀನೇ ನನ್ನ ಬಾಳಸಂಗಾತಿಯಾಗು ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.

(ನಾಳೆ – ಇದ್ರ ಇರಬೇಕು ನನ್ನ ಮಾವನ್ಹಂಗ….)

ವಾಕ್ ಮಾಡುತ್ತಿದ್ದೆ…ಯೂರಿನ್ ಬ್ಯಾಗ್ ನೊಂದಿಗೆ….

Leave a comment

ಸಿಸ್ಟೋಸ್ಕೋಪಿ ಆದ ನಂತರ ಬಂದು ವಿಚಾರಿಸಿಕೊಂಡು ಹೋಗಿದ್ದ ಡಾ. ಮಧುಸೂದನ್ ಕೋಣೆಯಲ್ಲಿ ಹಾಗೂ ಕಾರಿಡಾರ್ ನಲ್ಲಿ ನಡೆದಾಡುವಂತೆ ಹೇಳಿಹೋಗಿದ್ದರು. ಆದರೆ ನಡೆದಾಡುವುದಿರಲಿ ಮಗ್ಗುಲಾಗಿ ಮಲಗಲೂ ಆಗುತ್ತಿರಲಿಲ್ಲ. ಕಾರಣ…ಯೂರಿನ್ ಬ್ಯಾಗ್. ಪೈಪನನ್ನು ತೊಡೆಗೆ ಬೇರೆ ಅಂಟಿಸಿಬಿಟ್ಟಿದ್ದರು. ಹೀಗಾಗಿ ಸ್ವಲ್ಪ ಜೋರಾಗಿ ಅಲುಗಿದರೂ ನಾ ತಾಳಲಾರೆ….ನಾ ತಾಳಲಾರೆ…..

ಆದರೆ ವಾಕ್ ಮಾಡಲೇಬೇಕಾದ ಅನಿವಾರ್ಯತೆ ಬಂದುಬಿಟ್ಟಿತ್ತು. ಯಾಕೆಂದರೆ ಸಿಸ್ಟೋಸ್ಕೋಪಿ ಆದಮೇಲೆ ಎಕ್ಸ್ ರೇ ತೆಗೆಯುವಂತೆ ಡಾ. ಮಧುಸೂದನ್ ಸೂಚಿಸಿದ್ದರು. ಈಗ ನಾನು ಭೂಗತನಾಗಲೇಬೇಕಿತ್ತು. ಹಾಗಂತ ನಿರ್ಧರಿಸಿಬಿಟ್ಟೆ. ಬೇರೆ ದಾರಿಯೇ ಇರಲಿಲ್ಲ. ಎಕ್ಸ್ ರೇ ಮಾಡುವ ರೂಂ ಅಂಡರ್ ಗ್ರೌಂಡ್ ನಲ್ಲಿದ್ದುದರಿಂದ ಸ್ವಲ್ಪಸಮಯ ನಾನು ಭೂಗತನಾಗಲೇಬೇಕಿತ್ತು !!!

ವ್ಹೀಲ್ ಚೇರ್ ಬಂತು. ಮತ್ತೆ ವ್ಹೀಲ್ ಚೇರ್ ಮೇಲೆ ಕುಳಿತುಕೊಳ್ಳುವ ಸುಯೋಗ. ಮಂಚದ ಮೇಲಿಂದ ನಿಧಾನವಾಗಿ ಮೇಲೆದ್ದು ಪೈಪನ್ನು ನಾನೇ ಎತ್ತಿಕೊಂಡೆ. ವಾರ್ಡ್ ಬಾಯ್ ಯೂರಿನ್ ಬ್ಯಾಗನ್ನು ಎತ್ತಿಕೊಂಡ. ತುಂಬಾ ಅಂದರೆ ತುಂಬಾ ನಿಧಾನವಾಗಿ ವ್ಹೀಲ್ ಚೇರ್ ಅಲಂಕರಿಸಿದೆ. ನನ್ನ ಪ್ರಷ್ಠ ವ್ಹೀಲ್ ಚೇರ್ ಸ್ಪರ್ಶಿಸುತ್ತಲೇ ವ್ಹೀಲ್ ಚೇರ್ ಧನ್ಯವಾಯಿತು. ಪ್ರಷ್ಠಕ್ಕೆ ಮತ್ತೆ ತಂಪು ತಂಪು ಕೂಲ್ ಕೂಲ್.

ವಾರ್ಡ್ ಬಾಯ್ ಯೂರಿನ್ ಬ್ಯಾಗನ್ನು ನನ್ನ ಕೈಯಲ್ಲಿಟ್ಟ. ಏಕೆಂದು ತಿಳಿಯಲಿಲ್ಲ. ಕೈಯಲ್ಲಿ ಹಿಡಿದುಕೊಂಡು ಕುಳಿತೆ. ಆಹಾ…ಫೋಟೋ ತೆಗೆಯುವಂತಿತ್ತು ನನ್ನ ಪೋಸ್. ವ್ಹೀಲ್ ಚೇರ್ ಮೇಲೆ ನಾನು ರಾಜನಂತೆ ಕಂಗೊಳಿಸುತ್ತಿದ್ದೆ. ಕೈಯಲ್ಲಿ ಮಾತ್ರ ಯುರಿನ್ ಬ್ಯಾಗ್ ಇತ್ತು. ಎಂತಹ ಫೋಟೋ ಅಪಾರ್ಚುನಿಟಿ ಅಲ್ಲವೆ? ಆದರೆ ಅದನ್ನು ಭಂಗಗೊಳಿಸುವಂತೆ ವಾರ್ಡ್ ಬಾಯ್ ನನ್ನ ಮೇಲೆ ಬೆಟ್ ಶೀಟ್ ವೊಂದನ್ನು ಹೊದಿಸಿ ಎಲ್ಲವನ್ನೂ ಮುಚ್ಚಿಬಿಟ್ಟ. ಬದುಕಿದೆಯಾ ಸಿಸ್ಟೋಸ್ಕೋಪಿ ಮಾಡಿಸಿಕೊಂಡ ಜೀವವೆ ಎಂದುಕೊಂಡೆ.

ವ್ಹೀಲ್ ಚೇರ್ ಲಿಫ್ಟ್ ನತ್ತ ಪ್ರಯಾಣ ಬೆಳೆಸಿತು. ಲಿಫ್ಟ್ ನಲ್ಲಿ ಮತ್ತದೇ ಗಾಂಧಿ, ಅದೇ ಗಣಪತಿ, ಅದೇ ಲಕ್ಷ್ಮಿ…..ಲಿಫ್ಟ್ ಭೂಗತವಾಗುತ್ತಿದ್ದಂತೆ ಖುಲ್ ಜಾ ಸಿಮ್ ಸಿಮ್. ತೀರ ಕಷ್ಟಪಟ್ಟು ಎಕ್ಸ್ ರೇ ಟೇಬಲ್ ಮೇಲೆ ಮಲಗಿ ಎಕ್ಸ್ ರೇ ಮಾಡಿಸಿಕೊಂಡೆ. ನಾನಾಗ ಎಕ್ಸ್ ರೇ ಹೋಗಲಿ, A ಯಿಂದ Z ವರೆಗಿನ ಯಾವುದೇ ರೇ ಯನ್ನು ಮಾಡಿಸಿದರೂ ಮಾಡಿಸಿಕೊಳ್ಳುವಷ್ಟು ವಿಶಾಲ ಹೃದಯದವನಾಗುವ ಅನಿವಾರ್ಯ ಪರಿಸ್ಥಿತಿ ಇತ್ತು.

(ನಾಳೆ ಮನ ಮೆಚ್ಚಿದ ಮಡದಿ….)

ಸಿಸ್ಟರ್ ಗಳನ್ನು ಸಿಸ್ಟರ್ ಅಂತ ಯಾಕೆ ಕರೆಯಬೇಕು ಎಂಬುದು ಗೊತ್ತಾಯಿತು

4 Comments

ಇದನ್ನು ನೀವೂ ನೋಡಿರುತ್ತೀರಿ. ಕೇಳಿರುತ್ತೀರಿ. ಆಸ್ಪತ್ರೆಯ ಸಿಸ್ಟರ್ ಗಳನ್ನು ನಮ್ಮ ಹಿಂದಿ ಸೀರಿಯಲ್, ಫಿಲ್ಮ್ ಹಾಗೂ ಕನ್ನಡ ಚಲನಚಿತ್ರಗಳಲ್ಲಿ ಒಂದು ವಿಚಿತ್ರ ರೀತಿಯಲ್ಲಿ ಚಿತ್ರಿಸಿದ್ದಾರೆ. ಸಿಸ್ಟರ್ ಳನ್ನು ಗಾಯಗೊಂಡಿರುವ ಹಾಸ್ಯ ನಟ ತಬ್ಬಿಕೊಳ್ಳಲು ನೋಡುವುದು, ಪಟಾಯಿಸಲು ನೋಡವುದು, ಚುಂಬಿಸುವುದು, ಆಸ್ಪತ್ರೆಯ ಡಾಕ್ಟರ್ ಗಳು ಸಿಸ್ಟರ್ ಗಳನ್ನು ಯಾವಾಗಲೂ ತಮ್ಮ ಪ್ರಾಪರ್ಟಿ ಯಂತೆ ಟ್ರೀಟ್ ಮಾಡುವುದು ಹೀಗೆ ಸಿಸ್ಟರ್ ಗಳನ್ನು ಕೆಟ್ಟದಾಗಿಯೇ ತೋರಿಸಲಾಗಿದೆ. ಒಂದೆರಡು ಅಪವಾದಗಳಿರಬಹುದು ಅದಕ್ಕೆ. ಕೆಲ ವರ್ಷಗಳ ಹಿಂದೆ ಬಂದಿದ್ದ ಹಿಂದಿ ಸೀರಿಯಲ್ ಡಾಕ್ಟರ್ ಡಾಕ್ಟರ್ ಅಂತೂ ಸಿಸ್ಟರ್ ಗಳನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂಬ ಕಾರಣಕ್ಕೆ ಬ್ಯಾನ್ ಆಯಿತು. ಟೈಟ್ ಸ್ಕರ್ಟ್ ತೊಡಿಸಿ, ವಕ್ಷಸ್ಥಳವನ್ನು ಆದಷ್ಟು ಅಪೀಲಿಂಗ್ ಆಗಿ ಮಾಡಿ, ಕ್ಲೀವೇಜ್ ಗೆ ಸಾಕಷ್ಟು ಅವಕಾಶವನ್ನಿಟ್ಟು ಸಿಸ್ಟರ್ ಗಳನ್ನು ತೋರಿಸಿರುವುದೇ ಹೆಚ್ಚು.

ಆದರೆ ಆಸ್ಪತ್ರೆಯಲ್ಲಿ ನನಗೆ ಮಾತ್ರ ಸಿಸ್ಟರ್ ಗಳೆಂಬ 20-30 ರ ನಡುವಿನ ಆ ಅಕ್ಕತಂಗಿಯರು ಇಲ್ಲದೇ ಹೋಗಿದ್ದರೆ ಬಹುಶಃ ಸಿಸ್ಟೋಸ್ಕೋಪಿಯಿಂದ ಹೊರಬರಲು ಮತ್ತಷ್ಟು ತ್ರಾಸಾಗುತ್ತಿತ್ತು ಎನಿಸುತ್ತದೆ. ದಿನದಲ್ಲಿ ಮೂರು ಬಾರಿ ಸರಿಯಾದ ಟೈಮಿಗೆ ಬಂದು ಸರಿಯಾಗಿ ನಾಲ್ಕು ಇಂಜೆಕ್ಷನ್ ಚುಚ್ಚುತ್ತಿದ್ದ, ಆಗಾಗ ಬಂದು ನೋಡಿಕೊಂಡು ಹೇಗಿದ್ದೀರಿ?” ಅಂತ ಕೇಳುತ್ತಿದ್ದ, ನಾನು ಏನು ತಿನ್ನಬೇಕು ಏನು ತಿನ್ನಬಾರದು ಎಂಬುದರ ಬಗ್ಗೆ ಕಟ್ಟುನಿಟ್ಟಾಗಿ ಹೇಳುತ್ತಿದ್ದ, ಟ್ಯಾಬ್ಲೆಟ್ಟನ್ನು ಬೆಡ್ ಮೇಲಿಟ್ಟರೆ, ಬೇಡ್ ಮೇಲಿಡಬೇಡಿ. ಮತ್ತೆ ಇನ್ ಫೆಕ್ಷನ್ ಆಗುತ್ತದೆ ಎಂಬಷ್ಟರ ಮಟ್ಟಿಗೆ ಕೇರ್ ತೆಗೆದುಕೊಳ್ಳುತ್ತಿದ್ದ ಆ ಹುಡುಗಿಯರು ನಿಜವಾಗಿಯೂ ಕೇರಿಂಗ್ ಎನಿಸಿದರು.

ಆಸ್ಪತ್ರೆಯಲ್ಲಿದ್ದಾಗ ಎಂತಹ ಸಿಕ್ಸ್ ಪ್ಯಾಕ್ ವ್ಯಕ್ತಿಯೂ ಮಗುವಿನಂತಾಗಿಬಿಡುತ್ತಾನೆ. ಆತನಿಗೆ ದೈಹಿಕ ಕೇರ್ ನ ಜೊತೆಗೆ ಮಾನಸಿಕ ಸಾಂತ್ವನದ ಅಗತ್ಯ ಕೂಡ ಇರುತ್ತದೆ. ಪುರುಷನಿಗೆ ಮಾನಸಿಕ ಸಾಂತ್ವನ, ಧೈರ್ಯ ತಾಯಿಯಲ್ಲದೆ ಮತ್ತಾರು ಕೊಡಬಲ್ಲಳು? ಒಬ್ಬ ಹೆಣ್ಣು, ದೈಹಿಕವಾಗಿ ದುರ್ಬಲಗೊಂಡ ಪುರುಷಸಿಂಹನಿಗೆ ಧೈರ್ಯ, ಶಕ್ತಿಯನ್ನು ಕೊಡಬಲ್ಲಳು. ಆಸ್ಪತ್ರೆಯಲ್ಲಿ ಈ ಸಿಸ್ಟರ್ ಗಳೂ ನನಗೆ ಮಾಡಿದ್ದು ಇದನ್ನೇ. ನನ್ನ ರೂಂ ಗೆ ಸಿಸ್ಟರ್ ಗಳು ಎಂಟರ್ ಆಗುತ್ತಿದ್ದಂತೆ ಏನೋ ಒಂದು ರೀತಿಯ ಚೈತನ್ಯ ಬಂದಂತಾಗುತ್ತಿತ್ತು. ಹೇಳಿಕೊಳ್ಳಲಾಗದ ಖುಷಿ. ಐ ಯೂಸ್ಟ್ ಟು ಫೀಲ್ ಹ್ಯಾಪಿ.

ಮೊಟ್ಟಮೊದಲ ಬಾರಿಗೆ ನನಗೆ ಆಸ್ಪತ್ರೆಯ ಸಿಸ್ಟರ್ ಗಳು ಗ್ರೇಟ್ ಎನಿಸಿದರು. ಅದಕ್ಕೆ ಮತ್ತೊಂದು ಕಾರಣ…..ನನ್ನ ಜನನಾಂಗದ ಮೂಲಕ ಬ್ಲಾಡರ್ ಗೆ ಜೋಡಿಸಿದ್ದ ಪೈಪನ್ನು ತೆಗೆದಿದ್ದು ಕೂಡ ಒಬ್ಬ ಸಿಸ್ಟರ್ರೇ……

ಐ ಆಮ್ ಗ್ರೇಟ್ ಫುಲ್ ಟು ಯೂ ಸಿಸ್ಟರ್ಸ್……ಥ್ಯಾಂಕ್ಸ್ ವಿಲ್ ಬಿ ಎ ಲಿಮಿಟೆಡ್ ವರ್ಡ್ ಟು ಥ್ಯಾಂಕ್ ಯೂ….

(ಲಾಸ್ಟ್ ಶಾಕ್ – ಈ ಲೇಖನಕ್ಕಾಗಿ ಸೂಟ್ ಆಗುವ ಚಿತ್ರವೊಂದನ್ನು ಇಂಟರ್ನೆಟ್ಟಲ್ಲಿ ಹುಡುಕುತ್ತಿದ್ದೆ. ‘ಇಂಡಿಯನ್ ನರ್ಸ್’ ಎಂದು ಸರ್ಚ್ ವರ್ಡ್ ಟೈಪ್ ಮಾಡಿದ ತಕ್ಷಣ, ಮೊದಲ ಪೇಜ್ ನಲ್ಲಿ ನರ್ಸ್ ಜಯಲಕ್ಷ್ಮಿ ರೇಣುಕನ ಚಿತ್ರಗಳನ್ನು ತೋರಿಸುತ್ತಿದ್ದ ಫೋಟೋ ಥಟ್ ಅಂತ ಬಂತು)

(ನಾಳೆ : ವಾಕ್ ಮಾಡುತ್ತಿದ್ದೆ…ಯೂರಿನ್ ಬ್ಯಾಗ್ ನೊಂದಿಗೆ….)

ಮೂತ್ರವಾಗುವ ಅನುಭವವಾಗುತ್ತಿಲ್ಲ, ಮೂತ್ರ ಮಾತ್ರ ಆಗುತ್ತಿದೆ.

Leave a comment

ಆಕ್ಸಿಡೆಂಟ್ ಆದಾಗ ಕೈ ತರಚಿರುತ್ತದೆ ಅಷ್ಟೇ. ಆದರೆ ಆಗ ಉಂಟಾದ ಶಾಕ್ ನಿಂದ ಹೊರಬರಲು ತಿಂಗಳುಗಳೇ ಬೇಕಾಗುತ್ತವೆ. ಆಕ್ಸಿಡೆಂಟ್ ನಲ್ಲಿ ದೇಹಕ್ಕೆ ಏನೇನೂ ಆಗದಿದ್ದರೂ ಕೇವಲ ಶಾಕ್ ನಿಂದಾಗಿ ಟೂ ವ್ಹೀಲರ್, ಫೋರ್ ವ್ಹೀಲರ್ ಓಡಿಸುವುದನ್ನೇ ಬಿಟ್ಟವರಿದ್ದಾರೆ. ಆನೆ ಹೋಗಿಬಿಡುತ್ತದೆ. ಬಾಲ ಮಾತ್ರ ಸಿಕ್ಕಿ ಬೀಳುತ್ತದೆ. ಅಂತಹ ಅನುಭವ ಇದು.

ಸಿಸ್ಟೋಸ್ಕೋಪಿ ಆದ ಬಳಿಕ ನನಗೆ ಸರಿಯಾಗಿ ಎಚ್ಚರವಾದಾಗ ಮಧ್ಯಾಹ್ನ ಒಂದು ಗಂಟೆಯಾಗಿತ್ತು. ನಿಧಾನವಾಗಿ ಮಾತನಾಡಲು ಆರಂಭಸಿದ್ದೆ. ಕಾಲುಗಳಿಗೆ ಸೆನ್ಸೇಷನ್ ಮರಳಿತ್ತು. ಆದರೆ ನಿಶ್ಯಕ್ತಿ ಆವರಿಸಿತ್ತು. ಏನೇ ಆದರೂ ಸಿಸ್ಟೋಸ್ಕೋಪಿ ಮುಗಿಸಿದ್ದ ಸಮಾಧಾನ ಮನಸ್ಸಿನಲ್ಲಿತ್ತು. ನಿಧಾನವಾಗಿ ಮಗ್ಗುಲಾಗೋಣ ಎಂದಕೊಂಡೆ. ಆದರೆ ತೊಡೆಯ ಸಂದಿಯಲ್ಲಿ ಏನು ಹತ್ತಿದ ಹಾಗೆ ಆಯಿತು. ಕತ್ತೆತ್ತಿ ನೋಡಿದರೆ, ಚಾದರದ ಒಳಗಿನಿಂದ ಪೈಪ್ ಒಂದನ್ನು ಬೆಡ್ ನ ಪಕ್ಕ ಇಳಿಬಿಡಲಾಗಿತ್ತು. ಪೈಪನ್ನೇ ಫಾಲೋ ಮಾಡಿದರೆ ಬೆಡ್ ಕೆಳಗಿದ್ದ ಯುರಿನ್ ಬ್ಯಾಗ್ ಗೆ ಪೈಪ್ ಸೇರಿತ್ತು. ಅದರಲ್ಲಿ ಆಗಲೇ ಕಡು ಕಂದು ಬಣ್ಣದ ಮೂತ್ರ ಶೇಖರವಾಗಿತ್ತು. ಓಹ್….ಆಗ ನನಗೆ ಗೊತ್ತಾಯಿತು. ಮೂತ್ರ ವಿಸರ್ಜಿಸಲು ಜನನಾಂಗದಿಂದ ಪೈಪ್ ಅಳವಡಿಸಿದ್ದರೆಂದು.

ನಿಧಾನವಾಗಿ ನೀರು ಕುಡಿಯುತ್ತಿದ್ದೆ. ಆದರೆ ಮೂತ್ರಮಾತ್ರ ಆಗುತ್ತಲೇ ಇರಲಿಲ್ಲ. ಯುರಿನ್ ಬ್ಯಾಗನ್ನು ಮಾತ್ರ ವಾರ್ಡ್ ಬಾಯ್ ಬಂದು ಪ್ರತಿ ಎರಡುಗಂಟೆಗಳಿಗೊಮ್ಮೆ ಖಾಲಿ ಮಾಡಿ ಮತ್ತೆ ಇಟ್ಟು ಹೋಗುತ್ತಿದ್ದ. ನನಗೋ ಸಮಸ್ಯೆ ಬಗೆಹರಿಯಲಿಲ್ಲ. ಮೂತ್ರ ಮಾಡದಿದ್ದರೂ ಹೇಗೆ ಯುರಿನ್ ಬ್ಯಾಗ್ ತುಂಬುತ್ತಿದೆ ಎಂದು. ಕೊನೆಗೆ ಸಂಶಯ ತಾಳಲಾರದೆ ಮಾವನವರನ್ನು ಕೇಳಿದೆ. ಅವರೆಂದರು “ಪೈಪ್ ಹಾಕಿರುವಾಗ ಮೂತ್ರ ಮಾಡುವ ಅನುಭವವಾಗುವುದಿಲ್ಲ. ಆದರೆ ಮೂತ್ರ ವಿಸರ್ಜನೆಯಾಗುತ್ತಿರುತ್ತದೆ” ಎಂದು.

ಸರಿ. ಎಂದೆ. ಆದರೆ ನಿಜವಾದ ಶಾಕ್ ಆಗಿದ್ದು ರಾತ್ರಿಯ ವೇಳೆಗೆ. ಅದನ್ನು ನೆನೆಸಿಕೊಂಡರೆ ಇಂದಿಗೂ ಒಂದು ಕ್ಷಣ ನಡುಗುತ್ತೇನೆ. ಸಿಸ್ಟೋಸ್ಕೋಪಿಯನ್ನು ಇನ್ನೂ ಹತ್ತುಬಾರಿಯಾದರೂ ಮಾಡಿಸಿಕೊಂಡೇನು. ಆದರೆ ಈ ರೀತಿಯ ಪೈಪ್ ನಿಂದ ಮೂತ್ರ ಮಾತ್ರ ವಿಸರ್ಜಿಸಲಾರೆ ಎನಿಸಿಬಿಟ್ಟಿತು.

ನನ್ನ ಕಲ್ಪನೆಯ ಪ್ರಕಾರ ನೇರವಾಗಿ ಜನನಾಂಗಕ್ಕೆ ಒಂದು ಪೈಪ್ ಅಳವಡಿಸಿರುತ್ತಾರೆ. ಅದರಿಂದ ಮೂತ್ರ ವಿಸರ್ಜನೆ ಮಾಡುತ್ತಿದ್ದೇನೆ ಎಂಬುದಾಗಿತ್ತು. ಆದರೆ ಯಾವುದೋ ಕಾರಣಕ್ಕೆ ಗೌನ್ ಸರಿಸಿದಾಗ ಶಾಕ್ ಹೊಡೆಯಿತು. ಪೈಪ್ ಜನನಾಂಗದ ಒಳಗೆ ಹೊರಟುಹೋಗಿತ್ತು. ಧಡ್ ಅಂತ ಮಾವನವರಿಗೆ ಕೇಳಿದೆ.

“ಇದೇನಿದು?”

“ಹೌದು. ಪೈಪನ್ನು ನೇರವಾಗಿ ಬ್ಲಾಡರ್ ಗೆ ಕನೆಕ್ಟ್ ಮಾಡಿರುತ್ತಾರೆ. ಅಲ್ಲಿಂದಲೇ ನೇರವಾಗಿ ಮೂತ್ರ ವಿಸರ್ಜನೆಯಾಗುತ್ತದೆ” ಎಂದರು.

ಸುಸ್ತು ಹೊಡೆದು ಬಿಟ್ಟೆ. ದೈಹಿಕವಾಗಿ ಗಟ್ಟಿಯಿದ್ದರೂ ಮಾನಸಿಕವಾಗಿ ತೀರ ಕಿರಿಕಿರಿ ಆಗಲಾರಂಭಿಸಿತು. ಹೋಗಿ ಬರೋ ಸಿಸ್ಟರ್ ಗಳಿಗೆ, ಡಾಕ್ಟರ್ ಗಳಿಗೆ ಪ್ರತಿ ವಿಸಿಟ್ ನಲ್ಲೂ ಕೇಳತೊಡಗಿದೆ. “ಯಾವಾಗ ಪೈಪ್ ತೆಗೆಯುತ್ತೀರಿ? ತೆಗೆಯುವಾಗ ನೋವಾಗುತ್ತದಾ?” ಅಂತ. “ಇಲ್ಲ. ಇಲ್ಲ” ಎಂದು ಎಲ್ಲರೂ ಹೇಳುತ್ತಲೇ ಇದ್ದರು. ಆದರೆ ಪೈಪ್ ನಿಂದ ಮೂತ್ರ ವಿಸರ್ಜನೆ ಮಾಡಿದ ಅನುಭವ ಮಾತ್ರ…….

(ಸೋಮವಾರ – ಸಿಸ್ಟರ್ ಗಳನ್ನು ಸಿಸ್ಟರ್ ಅಂತ ಯಾಕೆ ಕರೆಯಬೇಕು ಎಂಬುದು ಗೊತ್ತಾಯಿತು).

ವೊಮಿಟಿಂಗ್ ಸೆನ್ಸೇಷನ್ ಆಗಿ ಬೊಂಬಡಾ ಬಜಾಯಿಸಿದ್ದು,…ಸಿಸ್ಟರ್ ಗಳು ಓಡಿ ಬಂದಿದ್ದು

1 Comment

ನಿಧಾನವಾಗಿ ಪುಟ್ಟುರಾಜು ಸಿಸ್ಟರ್ ಗಳು ಹಾಗೂ ಇತರ ವಾರ್ಡ್ ಬಾಯ್ ಗಳ ಸಹಾಯದಿಂದ ಸ್ಟ್ರೇಚರ್ ಮೇಲೆ ಮಲಗಿಸಿದ. ಹೋಗಬೇಕಾದರೆ ವ್ಹೀಲ್ ಚೇರ್, ಬರಬೇಕಾದರೆ ಸ್ಟ್ರೆಚರ್. ಎಂತಹ ಪ್ರಮೋಷನ್! ವ್ಹೀಲ್ ಚೇರ್ ನಿಂದ ವ್ಹೀಲ್ ಬೆಡ್ ವರೆಗೆ. ನನಗೆ ಸುತ್ತಮುತ್ತಲೂ ನಡೆಯುತ್ತಿದ್ದು ಅಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಮತ್ತೆ ಲಿಫ್ಟ್ ನೊಳಕ್ಕೆ ತಂದರು. ಗಾಂಧಿ ತಾತಾ, ಲಕ್ಷ್ಮಿ, ಗಣಪತಿ ಮಸುಕುಮಸುಕಾಗಿ ಕಂಡರು. ಮೋಹನ್ ದಾಸ್ ಕರಮಚಂದ್ ಗಾಂಧಿ ಏನೇ ಹೇಳಿದರೂ, ನಾನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅಂತೂ ಇಂತೂ ನನ್ನ 202 ಬಂತು. ರೂಮಪ್ರವೇಶವಾಯಿತು.

ಈಗ ನನ್ನನ್ನು ಸ್ಟ್ರೆಚರ್ ನಿಂದ ಹಾಸಿಗೆಯ ಮಲಗಿಸಬೇಕಾಗಿತ್ತು. ಏಳುವ ಸ್ಥಿತಿಯಲ್ಲಿ ನನ್ನಾಣೆಗೂ ನಾನಿರಲಿಲ್ಲ. ಠಕ್ ಅಂತ ಪುಟ್ಟರಾಜು ನನ್ನ ಬೆಡ್ ಮೇಲೆ ಹತ್ತಿ ನಿಂತುಕೊಂಡು ಬಿಟ್ಟ. ಯಾಕಪ್ಪಾ ಹೀಗೆ ಎಂದು ನೋಡುವಷ್ಟರಲ್ಲಿ ನನ್ನನ್ನು ಬೆಡ್ ಶೀಟ್ ಸಮೇತ ಒಮ್ಮೆಲೇ ಎಲ್ಲರೂ ಎತ್ತಿ ಹಾಸಿಗೆ ಮೇಲೆ ಇಟ್ಟುಬಿಟ್ಟರು. ಎಷ್ಟು ನಾಜೂಕಾಗಿ ಈ ಕೆಲಸ ನಡೆಯಿತೆಂದರೆ ನನಗೆ ಪುಟ್ಟರಾಜುವಿನ 12 ವರ್ಷಗಳ ಎಕ್ಸಪಿರಿಯೆನ್ಸ್ ಬಗ್ಗೆ ತುಂಬಾ ಅಭಿಮಾನವೆನಿಸಿತು.

ಸಲೈನ್ ಬಾಟಲಿಯನ್ನು ಮತ್ತೆ ನನ್ನ ಪಕ್ಕದಲ್ಲಿ ಜೋಡಿಸಲಾಯಿತು. “ಇನ್ನು ಸ್ವಲ್ಪ ಹೊತ್ತಲ್ಲಿ ಕಾಲಿಗೆ ಸೆನ್ಸೇಷನ್ ಬರುವುದು. ರೆಸ್ಟ್ ತೆಕ್ಕೊಳ್ಳಿ ಆಯ್ತಾ” ಅಂತ ಮಂಗಳೂರಿನ ಸೂಜಿಮೆಣಸಿನಕಾಯಿ ಸಿಸ್ಟರ್ ಹೇಳಿ ಹೋದಳು. ಆಕೆ ಹೊರಗೆ ಹೋಗಿ ಎರಡು ನಿಮಿಷಗಳಾಗಿರಬೇಕು. ಇನ್ನೇನು ನಾನು ಕಣ್ಣು ಮುಚ್ಚಿ ಮಲಗಬೇಕು ಎನ್ನುವಷ್ಟರಲ್ಲಿ. ವಿಪರೀತ ವೋಮಿಟಿಂಗ್ ಸೆನ್ಸೆಷನ್ ಬಂದುಬಿಟ್ಟಿತ್ತು. ಆದರೆ ವಾಂತಿ ಮಾಡಲು ಹೊಟ್ಟೆಯಲ್ಲಿ ಏನೆಂದರೆ ಏನೂ ಇಲ್ಲ. ವಾಂತಿ ಮಾಡುವ ಹಾಗೆ ಅನಿಸುತ್ತಿದೆ-ವಾಂತಿ ಮಾಡಲಾಗುತ್ತಿಲ್ಲ-ಕನಿಷ್ಠ ಎದ್ದುಕೂರಲು ಶಕ್ತಿಯೂ ಇಲ್ಲ. ವ್ಯಾಬ್ ವ್ಯಾಬ್….ಎಂದು ಜೋರಾಗಿ ಧ್ವನಿ ಹೊರಡಲಾರಂಭಿಸಿತು. ಮೊದಲೇ ಕಂಚಿನ ಕಂಠದ ನನ್ನ ಧ್ವನಿ 202 ರೂಮಿನಿಂದ ಹೊರಗೆ ಹೋದದ್ದೆ ಆಸ್ಪತ್ರೆಯ ಸಮಸ್ತ ಮೂಲೆಮೂಲೆಗಳಲ್ಲಿ ಪ್ರತಿಧ್ವನಿಸಿತು. ಹೀಗೆ ಎರಡು ಮೂರು ಬಾರಿ ಆಯಿತು. ಧಡ ಧಡ ಹವಾಯಿ ಚಪ್ಪಲಿಗಳ ಸದ್ದು ಕೇಳಿ ಬಂತು. ಕಣ್ಣು ಬಿಟ್ಟು ನೋಡುವಷ್ಟರಲ್ಲಿ ನನ್ನ ಸುತ್ತ ಸಿಸ್ಟರ್ ಗಳ ದಂಡೇ ನೆರೆದಿತ್ತು. ಅಬ್ಬಾ ಮಾತೃಹೃದಯವೆ!! (ಸಿಸ್ಟರ್ ಹೃದಯವೇ?) “ಏನಾಯ್ತು?” ಎಂದರು. “ವೋಮಿಟಿಂಗ್ ಸೆನ್ಸೇಷನ್” ಅಂದೆ. ಈಗ ಮಾತನಾಡುವಾಗ ಕನಿಷ್ಠ ಮೂರು ಬಾಟಲಿ ಬಿಯರ್ ಹಾಕಿದವನ ಹಾಗೆ ನಾಲಿಗೆ ತೊದಲಿತು. “ಏನೂ ಆಗಲ್ಲ. ಇಟ್ ಇಸ್ ನಾರ್ಮಲ್. ಆದರೆ ಸೌಂಡ್ ಮಾಡೇಬೇಡಿ. ಆಯ್ತಾ” ಅಂತ ಸಿಸ್ಟರ್ ಧಮಕಿ ಹಾಕಿದಳು. ಅವಳ ಧಮಕಿಗೋ ಏನೋ ಅಂತೂ ನನ್ನ ವಾಂತಿಯ ಸೆನ್ಸೇಷನ್ ಶಾಂತವಾಯಿತು.

ನಿಧಾನವಾಗಿ ಕಣ್ಣುಮುಚ್ಚಿ ಮಲಗಿಕೊಂಡೆ. ಅಷ್ಟರಲ್ಲಿ ಜಿ. ಎನ್. ಮೋಹನ್ ಹಾಗೂ ಟಿ. ಎನ್. ಸೀತಾರಾಮ್ ಸರ್ ಫೋನ್ ಕೆಲವೇ ನಿಮಿಷಗಳ ಅಂತರದಲ್ಲಿ ಬಂತು. ನನ್ನ ಮಾವನೇ ಮಾತನಾಡಿದರು. ಅವರು ಮಾತನಾಡುತ್ತಿದ್ದುದು ಅಸ್ಪಷ್ಟವಾಗಿ ಕೇಳಿಸಿತು. ದೇಹ ಹೈರಾಣಾಗಿದ್ದರೂ ಮನಸ್ಸಿಗೆ ಸಮಾಧಾನವಾಯಿತು.

(ನಾಳೆ : ಮೂತ್ರವಾಗುವ ಅನುಭವವಾಗುತ್ತಿಲ್ಲ. ಮೂತ್ರ ಮಾತ್ರ ಆಗುತ್ತಿದೆ)

ಆಯ್ತು….ಆಯ್ತು…ಆಗೇssssss…..ಹೋಯ್ತು…..ಸಿಸ್ಟೋಸ್ಕೋಪಿ….

Leave a comment

ಹಣೆಯಲ್ಲಿ ಬರೆದಿದ್ದರೆ ಬ್ರಹ್ಮ, ಯಾರು ತಪ್ಪಿಸುವರು ತಮ್ಮ

ಬಂದಿತ್ತು ಮುಂದೆ ಅಂದು, ಸಿಸ್ಟೋಸ್ಕೋಪಿ ಎಂಬ ಗುಮ್ಮ!!

MAJOR OT ಯಲ್ಲಿ ಎಂಟರ್ ಆಗುತ್ತಲೇ ಅಲ್ಲಿ ಎಲ್ಲರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರಿಂದ ಪ್ರತಿಯೊಬ್ಬರೂ ಲಷ್ಕರ್ ಎ ತೋಯ್ಬಾದ ಉಗ್ರಗಾಮಿಗಳಂತೆ ಕಂಡರು. ಅದರಲ್ಲಿ ಮಹಿಳಾ ಉಗ್ರಗಾಮಿಗಳಾದ ಸಿಸ್ಟರ್ ಗಳೂ ಇದ್ದರು. ಪ್ರತಿಯೊಬ್ಬ ಉಗ್ರಗಾಮಿಯೂ ಬರೆಯವುದರಲ್ಲಿ, ಉಪಕರಣ ಅಳವಡಿಸುವುದರಲ್ಲಿ, ಯಾವುದೋ ಮಷಿನ್ ಅನ್ನು ಮಾನಿಟರ್ ಮಾಡುವಲ್ಲಿ ನಿರತರಾಗಿದ್ದರು. ಅದಾಗಲೇ ನನ್ನ ಕನ್ನಡಕವನ್ನು ಮಾವನವರಿಗೆ ನೀಡಿದ್ದೆ. ಹೀಗಾಗಿ ಉಗ್ರಗಾಮಿಗಳು ಮಂಜುಮಂಜಾಗಿ ಕಾಶ್ಮೀರಿನ ಇಬ್ಬನಿಯಲ್ಲಿದ್ದಂತೆ ಕಂಡರು. ಅಲ್ಲಿ ಇದ್ದ ಬೆಡ್ ಮೇಲೆ ನನ್ನನ್ನು ಮಲಗಿಸಿದರು. ಅಷ್ಟರಲ್ಲಿ ಯೂರಾಲಾಜಿಸ್ಟ್ ಡಾ. ಮಧುಸೂದನ್ ಅವರನ್ನು ನಾನು ಗುರುತಿಸಿದ್ದೆ. ಮೊದಲು ನಾನೇ ಡಾ. ಮಧುಸೂದನ್ ಅವರಿಗೆ ಹಲೋ ಡಾಕ್ ಎಂದು ವಿಷ್ ಮಾಡಿದೆ. ಅವರು ಕೂಡ ತಮ್ಮ ಕಣ್ಣುಗಳಲ್ಲೇ ವಿಷ್ ಮಾಡಿದರು.

ಬೆಡ್ ಮೇಲೆ ಮಲಗಿಸಿದ ಬಳಿಕ. ಬೆಡ್ ನ ಅಕ್ಕಪಕ್ಕ ನನ್ನ ಕೈಗಳಿರುವ ಎರಡೂ ಕಡೆಯಲ್ಲಿ ಎಕ್ಸಟೆನ್ಷನ್ ಅಡ್ಜಸ್ಟ್ ಮಾಡಿ ಕೈಯನ್ನು ಅವುಗಳ ಮೇಲೆ ರೆಸ್ಟ್ ಮಾಡುವಂತೆ ಹೇಳಿದರು. ಜೀಸಸ್ ನನ್ನು ಮಲಗಿಸಿದರೆ ಹೇಗೆ ಕಾಣುತ್ತಾನೋ ಆಗ ಸರಿಯಾಗಿ ನಾನು ಹಾಗೇ ಕಾಣುತ್ತಿದ್ದೆ. ಎಡಗೈಗೆ ಸಲೈನ್ ಹಾಕಿದ್ದರು. ನಂತರ ನನ್ನ ತೋರುಬೆರಳಿಗೆ ಕ್ಲಿಪ್ ಅಳವಡಿಸಿದರು. ಅದು ಕುಂಯ್ ಕುಂಯ್ ಸದ್ದು ಮಾಡುತ್ತ ನನ್ನ ಹಾರ್ಟ್ ಬೀಟನ್ನು ದಾಖಲಿಸುತ್ತಿತ್ತು. ಎಡಗೈಗೆ ಬಿಪಿ ಯ ಬೆಲ್ಟ್ ಹಾಕಿದ್ದರು. ಅದು ಅಟೋಮ್ಯಾಟಿಕ್ ಆಗಿ ಸಿಸ್ಟೋಸ್ಕೋಪಿ ಮುಗಿಯುವವರೆಗೂ ನಿಗದಿತ ಅಂತರಕ್ಕೆ ಒಮ್ಮೆ ನನ್ನ ಬಿಪಿ ತೋರಿಸುತ್ತಿತ್ತು.

ಅಷ್ಟರಲ್ಲಿ ಅನಸ್ತೇಷಿಯಿಸ್ಟ್ ಡಾ. ವೇಣುಗೋಪಾಲ್ ಬಂದು ಪರಿಚಯ ಹೇಳಿಕೊಂಡಿದ್ದರು. ನಿಧಾನವಾಗಿ ನನ್ನನ್ನು ಕೂರಿಸಿದರು. ತಲೆ ಕೆಳಗೆ ಬಗ್ಗಿಸುವಂತೆ ಹೇಳಿದರು. “ಸುಘೋಷ್ ಈಗ ನಿಮಗೆ ಅನೇಸ್ತೇಷಿಯಾದ ಇಂಜೆಕ್ಷನ್ ಕೊಡುತ್ತೇನೆ. ಏನೂ ನೋವಾಗುವುದಿಲ್ಲ. ಇಟ್ ಇಸ್ ನಾರ್ಮಲ್ ಇಂಜೆಕ್ಷನ್. ಅದು ಕೊಟ್ಟ ನಂತರ ನಿಮ್ಮ ಸೊಂಟದ ಕೆಳಗಿನ ಭಾಗ ಸೆನ್ಸೇಷನ್ ಕಳೆದುಕೊಳ್ಳುತ್ತದೆ. ಯಾವುದಕ್ಕೂ ವಿಚಲಿತರಾಗಬೇಡಿ” ಎಂದು ಡಾ. ವೇಣುಗೋಪಾಲ್ ತಮ್ಮ ಪ್ರತಿಯೊಂದು ಕೆಲಸವವನ್ನೂ ವಿವರಿಸಿದರು. ನನ್ನ ಬೆನ್ನಿಗೆ ಮೊದಲು ಒಂದು ದ್ರಾವಣ ಸ್ಪ್ರೇ ಮಾಡಿದರು. ತುಂಬಾ ತಣ್ಣಗಿತ್ತು ಅದು. ನಂತರ ಬೆನ್ನಿನ ಮೇಲೆ (ಬಹುಶಃ) ಬಟ್ಟೆಯೊಂದನ್ನು ಇಟ್ಟು, ಅನಸ್ತೇಷಿಯಾದ ಇಂಜೆಕ್ಷನ್ ಚುಚ್ಚಲಾಯಿತು. ಏನೆಂದರೆ ಏನೂ ನೋವಾಗಲಿಲ್ಲ. ನಿಧಾನವಾಗಿ ಮತ್ತೆ ಮಲಗಿಸಿದರು.

ಅನಸ್ತೇಷಿಯಾ ಕೊಟ್ಟ ತಕ್ಷಣದಿಂದ ನಾನು ಕಾಲುಗಳನ್ನು ಸ್ವಲ್ಪಸ್ವಲ್ಪವಾಗಿ ಅಲುಗಾಡಿಸುತ್ತಿದ್ದೆ. ಯಾವಾಗ ನನಗೆ ಕಾಲುಗಳನ್ನು ಅಲುಗಾಡಿಸಲು ಆಗುವುದಿಲ್ಲವೋ ನೋಡೋಣ ಎಂದು. ಸುಮಾರು ಹತ್ತು ನಿಮಿಷದ ಬಳಿಕ ಕಾಲು ಹೋಗಲಿ ಬೆರಳು ಕೂಡ ಅಲ್ಲಾಡಿಸಲು ಆಗಲಿಲ್ಲ. ಐ ಹ್ಯಾಡ್ ನೋ ಸೆನ್ಸ್ ಆಫ್ ಮೈ ಬಾಡೀಸ್ ಲೋವರ್ ಪೋರ್ಷನ್. ಆದರೆ ನಿಧಾನವಾಗಿ ಕಾಲಿನ ಬಳಿ ಮತ್ತೆರಡು ಎತ್ತರದ ಎಕ್ಸಟೆನ್ಶನ್ ತಂದು ಅವುಗಳ ಮೇಲೆ ನನ್ನ ಎರಡೂ ಕಾಲುಗಳನ್ನು ಅಗಲಿಸಿ ಇಡಲಾಯಿತು. ಅದೆಲ್ಲ ನನಗೆ ಗೊತ್ತಾಗುತ್ತಿತ್ತು.

ಡಾ. ವೇಣುಗೋಪಾಲ್ ಕೇಳಿದರು. “ಈಗ ಗೊತ್ತಾಗುತ್ತಿದ್ದೆಯಾ ನಾವು ಏನು ಮಾಡುತ್ತಿದ್ದೇವೆ ಎಂದು?” ಅಂತ.

“ಇಲ್ಲ” ಅಂದೆ.

ಡಾ. ಮಧುಸೂದನ್ ಬಂದು ನನ್ನ ಕಾಲುಗಳ ಬಳಿ ಕುಳಿತುಕೊಂಡರು. ನನ್ನ ಜನನಾಂಗವನ್ನು ಮುಟ್ಟಿದ ಅನುಭವವಾಯಿತು. ಒಂದು ಕ್ಷಣ ಹೆದರಿದೆ.

“ಡಾಕ್, ನೀವು ಮುಟ್ಟುತ್ತಿರುವುದು ಗೊತ್ತಾಗುತ್ತಿದೆ” ಎಂದೆ.

“ಡೋಂಟ್ ವರಿ ಸುಘೋಷ್. ನಾನು ಮುಟ್ಟುವುದು ಗೊತ್ತಾಗುತ್ತೆ. ಆದರೆ ನಿಮಗೆ ಯಾವುದೇ ಪೇನ್ ಅನುಭವಕ್ಕೆ ಬರುವುದಿಲ್ಲ” ಅಂದರು.

ನಿಜವಾಗಿಯೂ ಪೇನ್ ಅನುಭವಕ್ಕೆ ಬರಲಿಲ್ಲ. ಅನಸ್ತೇಷಿಯಾ ಕಂಡುಹಿಡಿದವನಿಗೆ ಮನಸ್ಸಿನಲ್ಲಿಯೇ ವಂದಿಸಿದೆ. ಎಂತಹ ಅದ್ಭುತ ಸಂಶೋಧನೆ ಈ ಅನಸ್ತೇಷಿಯಾ ಎನ್ನಿಸಿತು.

ನಿಧಾನವಾಗಿ ಕಣ್ಣುಗಳನ್ನು ಮುಚ್ಚಿದೆ. ಮಧ್ಯೆ ಮಧ್ಯೆ ಕಣ್ಣು ಬಿಡುತ್ತಿದ್ದರೂ ಏನು ಮಾಡುತ್ತಿದ್ದಾರೆ ಎಂಬ ಅರಿವು ಇರಲಿಲ್ಲ. ಸುಮಾರು 45 ನಿಮಿಷಗಳ ಬಳಿಕ, ನನ್ನ ಹತ್ತಿರ ಬಂದ ಡಾ. ಮಧುಸೂದನ್, “ಗುಡ್ ಸುಘೋಷ್. ತುಂಬಾ ಚೆನ್ನಾಗಿ ರಿಸ್ಪಾಂಡ್ ಮಾಡಿದ್ದೀರಿ. ಎರಡು ಕಲ್ಲುಗಳನ್ನು ತೆಗೆದಿದ್ದೇವೆ. ನೋಡಿ” ಎಂದು ಎರಡು ಕಿಡ್ನಿ ಕಲ್ಲುಗಳನ್ನು ತೋರಿಸಿದರು. ನಾನು ಸುಸ್ತಾದ ಕಣ್ಣುಗಳನ್ನು ಅರೆತೆರೆದು ಆ ಅಮೂಲ್ಯ, ಕ್ಯಾಲ್ಸಿಯಂ ಖಚಿತ, ನನ್ನ ಜೀವವನ್ನೇ ಹಿಂಡಿದ್ದ ಪುಟಪುಟಪುಟಪುಟಾಣಿ ಕಲ್ಲುಗಳನ್ನು ನೋಡಿ, ಮತ್ತೆ ಕಣ್ಮುಚ್ಚಿದೆ.

ಪುಟ್ಟರಾಜು ನನ್ನನ್ನು ಮತ್ತೆ ಎತ್ತಿಕೊಳ್ಳಲು ಬಂದ.

(ನಾಳೆ: ವೊಮಿಟಿಂಗ್ ಸೆನ್ಸೇಷನ್ ಆಗಿ ಬೊಂಬಡಾ ಬಜಾಯಿಸಿದ್ದು,…ಸಿಸ್ಟರ್ ಗಳು ಓಡಿ ಬಂದಿದ್ದು)

ಬದುಕಿನಲ್ಲಿ ಮೊಟ್ಟ ಮೊದಲ ಬಾರಿಗೆ ವ್ಹೀಲ್ ಚೇರ್ ಮೇಲೆ ಕುಳಿತ ಅನುಭವ

Leave a comment

ನನಗೆ ಮೊದಲಿನಿಂದಲೂ ವ್ಹೀಲ್ ಚೇರ್ (ಯಾವ ಚೇರಿಗೆ ವ್ಹೀಲ್ ಇರುತ್ತದೋ ಅದು) ಗಳೆಂದರೆ ಅದೆಂತಹುದೋ ಪ್ರೀತಿ. ಮೋಹ. ಅಫ್ ಕೋರ್ಸ್ ನಾನು ಮೊದಲು ನೋಡಿದ್ದು ಆಸ್ಪತ್ರೆಯ ವ್ಹೀಲ್ ಚೇರ್ ಗಳನ್ನಲ್ಲ. ಬದಲಾಗಿ ನನ್ನಪ್ಪನ ಆಫೀಸಿನಲ್ಲಿದ್ದ ಚಿಕ್ಕಚಿಕ್ಕಗಾಲಿಗಳಿರುವ ಅಪ್ಪನ ಬಾಸ್ ನ ಚೇರ್. ಆಬ್ಬ ಎಷ್ಟು ಚೆನ್ನಾಗಿತ್ತು ಆ ಕುಷನ್ ಚೇರ್. ಅಪ್ಪನ ಆಫೀಸು ಬೆಳಗಾವಿಯಲ್ಲಿ ಮನೆಯ ಹತ್ತಿರದಲ್ಲೇ ಇದ್ದುದರಿಂದ ದಿನದಲ್ಲಿ ಹತ್ತಾರು ಬಾರಿ ಅಪ್ಪನ ಆಫೀಸಿಗೆ ಹೋಗುತ್ತಿದ್ದೆ. ಚಿಕ್ಕಹುಡುಗನಾದ್ದರಿಂದ ಅಪ್ಪನ ಬಾಸ್, ತಾವು ಪಕ್ಕದಲ್ಲಿ ಕುಳಿತು ನನ್ನನ್ನು ತಮ್ಮ ಚೇರ್ ಮೇಲೆ ಕೂರಿಸಿ ಕೆಲಸಮಾಡುತ್ತಿದ್ದರು. ಅಬ್ಬ!! ಎಂತಹ ಆನಂದ ಆ ಚೇರ್ ಮೇಲೆ ಕುಳಿತರೆ. ಚೇರ್ ಮೇಲೆ ಕುಳಿತ ತಕ್ಷಣ ನನ್ನ ಕೆಲಸ ಒಂದೇ. ಟೇಬಲ್ ಮೇಲೆ ಇರುತ್ತಿದ್ದ ಹಳೆದ ಕಾಲದ ತಿರುಪಿತಿರುಪಿ ಇಟ್ಟು ಬಾರಿಸಬಹುದಾಗಿದ್ದ ಕಾಲಿಂಗ್ ಬೆಲ್ ಒತ್ತುವುದು ಹಾಗೂ ಒಂದು ರೌಂಡ್ ಚೇರ್ ಮೇಲೆ ತಿರುಗುವುದು. ತಲೆ ಸುತ್ತು ಬರುವವರೆಗೂ ಆ ಕೆಲಸ ಮಾಡಿ ನಂತರ ಓಡಿಹೋಗುತ್ತಿದ್ದೆ.

ವ್ಹೀಲ್ ಚೇರ್ ನ ಮೋಹ ನನ್ನನ್ನು ದೊಡ್ಡವನಾದ ಮೇಲೂ ಬಿಟ್ಟಿರಲಿಲ್ಲ. ಆಫೀಸಿನಲ್ಲಿ ಇರುತ್ತಿದ್ದ ಕಂಪ್ಯೂಟರ್ ಚೇರ್ ಮೇಲೆ ಕುಳಿತು ಅನವಶ್ಯವಕಾಗಿ ತಿರುಗುತ್ತಿದ್ದೆ. ಬಹುಶಃ ನನ್ನ ಮನಸ್ಸಿನಲ್ಲಿದ್ದ ಬಾಲಕ (ಬಾಲ….?) ಇನ್ನೂ ಹೊರಹೋಗಿರಲಿಲ್ಲ ಎನಿಸುತ್ತದೆ. ಅಷ್ಟೇ ಏಕೆ, ಇಂದಿಗೂ ಸಹ ನನಗೆ ಕಂಪ್ಯೂಟರ್ ಚೇರ್ ಮೇಲೆ ಸುಮ್ಮನೆ ಕುಳಿತುಕೊಳ್ಳಲು ಬರುವುದೇ ಇಲ್ಲ. ಸ್ವಲ್ಪ ಟೈಪ್ ಮಾಡುತ್ತಿರುವಂತೆ ಡೂಂಯ್….ಡೂಂಯ್….ಎಂದು ಒಂದು ಸುತ್ತು ಸುತ್ತಿ ಮತ್ತೆ ಟೈಪ್ ಮಾಡಲು ಶುರುಮಾಡುತ್ತೇನೆ.

ಆದರೆ ಬದುಕಿನಲ್ಲಿ ಮೊಟ್ಟಮೊದಲ ಬಾರಿಗೆ ಆಸ್ಪತ್ರೆಯ ವ್ಹೀಲ್ ಚೇರ್ ಮೇಲೆ ಕುಳಿತುಕೊಳ್ಳುವ ಸುಯೋಗ ನನ್ನ ಪಾಲಿಗೆ ಒದಗಿ ಬಂದಿತ್ತು. ಅದರ ಮೇಲೆ ಕೂರುವುದು ಒಂದು ರೀತಿಯ ಹಿಂಸೆ ಎನಿಸಿತು. “ಬೇಡ. ನಡೆದುಕೊಂಡೇ ಬರುತ್ತೇನೆ” ಎಂದೆ ಪುಟ್ಟರಾಜುಗೆ. ಒಮ್ಮೆಲೇ ವಿರೋಧಿಸಿದ. “ಇಲ್ಲ ಇಲ್ಲ. ಆಪರೇಷನ್ ಗೆ ಹೋಗಬೇಕಾದರೆ ವ್ಹೀಲ್ ಚೇರ್ ಮೇಲೆಯೇ ಹೋಗಬೇಕು” ಎಂದು ಪುಟ್ಟರಾಜು.

ಸರಿ ಎಂದು ವ್ಹೀಲ್ ಚೇರ್ ಮೇಲೆ ಕುಳಿತೆ. ಗೌನ್ ನ ಹಿಂದಿನ ಕಷೆ ಕಟ್ಟಿಲ್ಲದ ಕಾರಣ ಹಿಂದಿನ ಭಾಗವೆಲ್ಲ ಓಪನ್ ಇತ್ತು. ಬೆಳಗಿನ ಆರೂಕಾಲ ಸುಮಾರಿನ ಚಳಿಯಲ್ಲಿ ಕಬ್ಬಿಣದ ವ್ಹೀಲ್ ಚೇರ್ ಮೇಲೆ ನನ್ನ ಪೃಷ್ಠ, ಬೆನ್ನು, ಕಾಲು ತಾಗುತ್ತಿರುವಂತೆ ಚಳಿ ಚಳಿ ಚಳಿ ತಾಳೆನು ಈ ಚಳಿಯ ಆಯಿತು. ಪುಟ್ಟರಾಜು ವ್ಹೀಲ್ ಚೇರ್ ನೂಕಲಾರಂಭಿಸಿದ. ಹೊರಟಿತು ಸುಘೋಷ್ ಎಸ್. ನಿಗಳೆ ಅವರ ಸವಾರಿ ಸಿಸ್ಟೋಸ್ಕೋಪಿಗೆ. ನಾನು, ನನ್ನ ಹಿಂದೆ ಪುಟ್ಟರಾಜು, ಅವನ ಅಕ್ಕಪಕ್ಕ ಇಬ್ಬರು ಸಿಸ್ಚರ್ ಗಳು. ಒಬ್ಬ ಸಿಸ್ಟರ್ ಕೈಯಲ್ಲಿ ನನ್ನ ಸಲೈನ್ ಬಾಟಲಿ. ಮತ್ತೊಬ್ಬ ಸಿಸ್ಟರ್ ಕೈಯಲ್ಲಿ ನನ್ನ ಕೇಸ್ ಸ್ಟಡಿ ಪೇಪರ್. ನಾನು ರಾಜ, ಪುಟ್ಟರಾಜು ಸೇವಕ, ಸಿಸ್ಟರ್ ಗಳು ದಾಸಿಯರು ಅನ್ನುವಂತಿತ್ತು ಆ ದೃಶ್ಯ. ಒಂದೇ ವ್ಯತ್ಯಾಸ ಅಂದರೆ ರಾಜನಾಗಿದ್ದವನು ವ್ಹೀಲ್ ಚೇರ್ ಮೇಲೆ ಕುಳಿತಿದ್ದ ಹಾಗೂ ಆತನ ಪರಿಸ್ಥಿತಿ ಚಿಂತಾಜನಕವಾಗಿತ್ತು.

ಅಷ್ಟರಲ್ಲಿ ಮುಂದಿನಿಂದ ಒಬ್ಬ ಸಿಸ್ಟರ್ ಕೈಯಲ್ಲಿ ಏನೋ ಹಿಡಿದುಕೊಂಡು ಬಂದಳು. ಏನೆಂದು ನೋಡುವಷ್ಟರಲ್ಲಿ, ನನ್ನ ತಲೆಗೆ ಅನಾಮತ್ತಾಗಿ ಹಸಿರು ಬಣ್ಣದ ಬಟ್ಟೆಯ ಕ್ಯಾಪೊಂದನ್ನು ತೊಡಿಸಿಬಿಟ್ಟಳು. ಹಸಿರು ಗೌನ್ ನಲ್ಲಿ, ಹಸಿರು ಟೊಪ್ಪಿಯಲ್ಲಿ ರೈತ ಹೋರಾಟಗಾರನಂತೆ ಕಾಣುತ್ತಿದ್ದೆ.

ನಾನಿದ್ದದ್ದು ಸೆಕೆಂಡ್ ಫ್ಲೋರ್ ನಲ್ಲಿ. ಮೇಜರ್ ಓಟಿ ಫಸ್ಟ್ ಫ್ಲೋರ್ ನಲ್ಲಿತ್ತು. ಲಿಫ್ಟ್ ನೊಳಗೆ ಮೆರವಣಿಗೆ ಎಂಟರ್ ಆಯಿತು. ಲಿಫ್ಟ್ ನೊಳಗೆ ಮೂರು ಫೋಟೋ ಹಾಕಿದ್ದರು. ಅಕ್ಕಪಕ್ಕ ಗಣಪತಿ, ಲಕ್ಷ್ಮಿಯರಿದ್ದರೆ ಮಧ್ಯದಲ್ಲಿ ಮೋಹನ್ ದಾಸ್ ಕರಮಚಂದ್ ಗಾಂಧಿ ಫೋಟೋ ಇತ್ತು. ಗಾಂಧಿ ತಾತ ಬೊಚ್ಚುಬಾಯಿಯಲ್ಲಿ ನಗುತ್ತಿರುವ ಫೋಟೋ ಅದು. ನನಗೆ ಮಾತ್ರ ಅವರು ನನ್ನನ್ನೇ ನೋಡಿ ನಗುತ್ತಿದ್ದಾರೆ ಎನಿಸಿತು. “ಸುಘೋಷ್, ನಾನು ಹೇಳಿರುವ ತತ್ವಗಳನ್ನು ಅನುಸರಿಸು. ನಿನ್ನ ಕಿಡ್ನಿ ಅಷ್ಟೇ ಅಲ್ಲ. ಇಡೀ ದೇಹವೇ ಸುಸ್ಥಿಯಲ್ಲಿರುತ್ತದೆ” ಎಂದು ಗಾಂಧಿ ತಾತ ಹೇಳಿದಂತೆನಿಸಿತು. ಲಿಫ್ಟ್ ನಿಂದ ಹೊರಬಂದಾಗ ಕೆಂಪುಬಣ್ಣದಲ್ಲಿ MAJOR OT ಎಂದು ಬರೆದಿದ್ದ ಗಾಜಿನ ಬಾಗಿಲು ನನ್ನನ್ನು ಸ್ವಾಗತಿಸಿತು.

(ನಾಳೆ: ಆಯ್ತು….ಆಯ್ತು….ಆಗೇssssss ಹೋಯ್ತು……ಸಿಸ್ಟೋಸ್ಕೋಪಿ)

5.15 ರಿಂದ 5.50 ರ ನಡುವಿನ ಅವಧಿ ನನ್ನ ಇಲ್ಲೀತನಕದ ಬದುಕಿನ ಅತೀ ದೀರ್ಘ ಅವಧಿ ಎನಿಸಿತು

1 Comment

ಅಫ್ ಕೋರ್ಸ್ ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಪ್ರಿಯತಮೆಯ ಬಳಿ ಕುಳಿತಾಗ ಒಂದು ಗಂಟೆ ಒಂದು ನಿಮಿಷದಂತೆ ಸರಿದು ಹೋದರೆ, ಒಂದು ಗಂಟೆಯ ಮ್ಯಾಥಮ್ಯಾಟಿಕ್ಸ್ ಕ್ಲಾಸ್ ಖತಮ್ ಹೋನೆ ಕಾ ನಾಮ್ ಹೀ ನಹೀ ಲೇತಾ. ಅವರವರ ಭಾವಕ್ಕೆ….ಸಮಯವೆಂಬದು ತನ್ನ ಇಲ್ಯಾಟಿಸಿಟಿಯನ್ನು ಹಿಗ್ಗಿಸಿಕೊಳ್ಳುತ್ತ, ಕುಗ್ಗಿಸಿಕೊಳ್ಳುತ್ತ ಇರುತ್ತದೆ.

ಆದರೆ ಸಿಸ್ಟೋಸ್ಕೋಪಿಯೆಂಬುದು ನನಗೆ ಬೇಡವೂ ಆಗಿರಲಿಲ್ಲ. ಬೇಕಾಗಿಯೂ ಬೇಕಾಗಿತ್ತು. ಆಗ ನಿಜವಾದ ಫಜೀತಿ ಉಂಟಾಗಿದ್ದು ನನಗಲ್ಲ, ಸಮಯಕ್ಕೆ. ಅದಕ್ಕೆ ವೇಗವಾಗಿ ಹೋಗಬೇಕೋ, ನಿಧಾನವಾಗಿ ಹೋಗಬೇಕು ಗೊತ್ತಾಗುತ್ತಲೇ ಇರಲಿಲ್ಲ. ನನಗೆ ಎಚ್ಚರವಾದಾಗ ಗಡಿಯಾರ 5.15 ತೋರಿಸುತಿತ್ತು. ಇನ್ನೂ ಸ್ವಲ್ಪ ಹೊತ್ತು ಮಲಗೋಣ ಎಂದು ಹೊದ್ದುಕೊಂಡು ಮಲಗಿದೆ. ನಿದ್ದೆಯ ಮಂಪರು. ತುಂಬಾ ಹೊತ್ತು ಹಾಗೆಯೇ ಮಲಗಿಕೊಂಡಿದ್ದೆ. ಸ್ವಲ್ಪ ಹೆವಿಯಾಗಿಯೇ ನಿದ್ದೆ ಹತ್ತಿತ್ತು. ಥಟ್ಟನೆ ಎಚ್ಚರವಾದಾಗ ಹೊರಗೆ ಸಿಸ್ಟರ್ ಗಳ ಮಾತುಗಳು ಕೇಳಿಬಂದವು. ಬೆಳಿಗ್ಗೆ ಬೇಗನೇ ಎದ್ದು ದೇವರಿಗೆ ನಮಸ್ಕರಿಸಿ, ಸಿಸ್ಟೋಸ್ಕಾಪಿಗೆ ಸಿದ್ಧನಾಗಬೇಕು ಎಂದುಕೊಂಡಿದ್ದೆ. ಆದರೆ ಇದೇನಿದು ಛೇ….ಲೇಟಾಗಿಹೋಗಿರಬೇಕು ಎಂದುಕೊಂಡು ದಡಬಡನೆ ಎದ್ದು ಮೊಬೈಲ್ ನೋಡಿದೆ. ಮೊಬೈಲ್ ಸರಿಯಾಗಿ 5.23 ನಿಮಿಷ ತೋರಿಸುತ್ತಿತ್ತು. ಬರೋಬ್ಬರಿ ಏಳು ನಿಮಿಷ ಮಲಗಿದ್ದೆ. ಅಷ್ಟು ಮಲಗಿದ್ದಕ್ಕೆ ಸಿಕ್ಕಾಪಟ್ಟೆ ಮಲಗಿಬಿಟ್ಟೆ ಎನಿಸಿತ್ತು. ಅಯ್ಯೋ ಎಂದುಕೊಂಡು ಮತ್ತೆ ಮಲಗಿಬಿಟ್ಟೆ.

ಈ ಬಾರಿ ಮಾತ್ರ ಕೇಸ್ ನಿಜವಾಗಿಯೂ ಉಲ್ಟಾ ಹೊಡೆಯಿತು. ಕಣ್ಣು ಮುಚ್ಚಬೇಕು ಎನ್ನುವಷ್ಟರಲ್ಲಿ ಮತ್ತೆ ಕಣ್ಣುತೆರೆದಿತ್ತು. ಇದೇನಿದು ಈಗಷ್ಟೇ ಮಲಗಿದ್ದೇನೆ ಮತ್ತೇ ಈಗೇನು ಏಳುವುದು ಎಂದು ಮಗ್ಗಲು ಬದಲಿಸಿದೆ. ಆದರೆ ನಿದ್ದೆ ಹತ್ತಿದರೆ ತಾನೆ. ಇರಲಿ ನೋಡಿಬಿಡೋಣ ಎಂದುಕೊಂಡು ಮತ್ತೆ ಮೊಬೈಲ್ ದರ್ಶನ ಮಾಡಿದೆ. ಅದು ಸರಿಯಾಗಿ 5.55 ತೋರಿಸುತ್ತಿತ್ತು. ಹೊಡೆಯಿತು ಶಾಕ್. ಧಡ್ ಅಂತ ಎದ್ದವನೇ. ಎಡಗೈಗೆ ಬಲಗೈಯಿಂದ ಉಜ್ಜಿಕೊಂಡೆ. ಸಾಮಾನ್ಯ ದಿನಗಳಾಗಿದ್ದರೆ ಎರಡೂ ಕೈಗಳನ್ನು ಒಂದಕ್ಕೊಂದು ಉಜ್ಜುತ್ತಿದ್ದೆ. ಆದರೆ ಎಡಗೈಗೆ ಸಲೈನ್ ಇದ್ದದ್ದರಿಂದ ಎಡಗೈಗೆ ಬಲಗೈ ಉಜ್ಜಬೇಕಾಯಿತು. ಕೈ ಉಜ್ಜಿಕೊಂಡು ನಿತ್ಯವೂ ಹೇಳವಂತೆ

ಕರಾಗ್ರೆ ವಸತೇ ಲಕ್ಷ್ಮಿ ಕರಮಧ್ಯೆ ಸರಸ್ವತಿ

ಕರಮೂಲೇ ಸ್ಥಿತಾ ಗೌರಿ ಪ್ರಭಾತೆ ಕರದರ್ಶನಂ

ಎಂದು ಕಣ್ಣಿಗೆ ಕೈಹಚ್ಚಿಕೊಂಡೆ.

ಲಕ್ಷ್ಮಿ, ಸರಸ್ವತಿ, ಗೌರಿಯರನ್ನು ನೆನೆಯುವುದಕ್ಕೂ ಸಿಸ್ಟರ್ ದೇವತೆಗಳು ಪ್ರತ್ಯಕ್ಷವಾಗುವುದಕ್ಕೂ ಸರಿಹೋಯಿತು. ನಿನ್ನೆ ರಾತ್ರಿಯೇ ಪುಟ್ಟುರಾಜು ನನಗೆ ಹಸಿರು ಬಣ್ಣದ ಮುಂದಿನಿಂದ ಹಾಕಿಕೊಳ್ಳುವ ಹಿಂದೆ ಪೂರಾ ಪೂರಾ ಪೂರಾ ಓಪನ್ ಇರುವ, ಹಿಂದಿನಿಂದ ಕಷೆ ಕಟ್ಟಬಹುದಾದ ವಿಚಿತ್ರ ಗೌನ್ ಒಂದನ್ನು ಹಾಕಿಹೋಗಿದ್ದ. ಎದ್ದು ನಿಂತರೆ ದೇಹದ ಹಿಂದಿನ ಭಾಗದ ದಿವ್ಯ ದರ್ಶನವಾಗುತ್ತಿತ್ತು ಆ ಗೌನ್ ನಿಂದ. ಸಿಸ್ಟರ್ ಗಳನ್ನೆಲ್ಲ ಓಡಿಸಿ, “ಒಂದೈದು ನಿಮಿಷ ರೆಡಿಯಾಗಿಬಿಡುತ್ತೇನೆ” ಎಂದೆ. ಬೆಳಿಗ್ಗೆ ಸಿಸ್ಟರ್ ಗಳ ಜೊತೆ ಪುಟ್ಟರಾಜು ಕೂಡ ಬಂದಿದ್ದ. ನಾನು ಬಾತ್ ರೂಂಗೆ ಹೋಗಿ ಮುಖ ತೊಳೆದು, ಬ್ರಷ್ ಮಾಡಿದೆ. ಬಾತ್ ರೂಂ ನಲ್ಲಿಯೇ ಅಂಡರ್ ವೇರ್ ಕಳಚಿಟ್ಟೆ. ಹಾಗೆಮಾಡಬೇಕೆಂದು ಪುಟ್ಟರಾಜು ನಿನ್ನೆ ರಾತ್ರಿಯೇ ಆದೇಶ ಹೊರಡಿಸಿದ್ದ. ಬಾತ್ ರೂಂ ನಿಂದ ಹೊರಗೆ ಬರುವಷ್ಟರಲ್ಲಿ ನನಗಾಗಿ ವ್ಹೀಲ್ ಚೇರ್ ಸಿದ್ಧವಾಗಿತ್ತು.

(ನಾಳೆ: ಬದುಕಿನಲ್ಲಿ ಮೊಟ್ಟ ಮೊದಲ ಬಾರಿಗೆ ವ್ಹೀಲ್ ಚೇರ್ ಮೇಲೆ ಕುಳಿತ ಅನುಭವ)

ಒಂದು ದಿನ ಮುಂದೂಡಲಾಗಿದೆ…

1 Comment

“ನಾನು ಮಾನಸಿಕವಾಗಿ ಸಿಸ್ಟೋಸ್ಕಾಪಿಗೆ ತಯಾರಾದೆ” ಲೇಖನವನ್ನು ನನ್ನ ಸೋಮಾರಿತನದ ಕಾರಣದಿಂದ ನಾಳೆಗೆ ಮುಂದೂಡಲಾಗಿದೆ…..

ಅರ್ಧ ಶರೀರದ ರೋಮ ಕಳೆದುಕೊಂಡ ನನ್ನ ದೇಹ ವಿಚಿತ್ರವಾಗಿ ಕಾಣುತಿತ್ತು

Leave a comment

ನನಗೆ ಮೊದಲಿನಿಂದಲೂ ಅಷ್ಟೇ. ನನ್ನ ಶರೀರದ ಮೇಲೆ ನನಗೇ ವಿಪರೀತ ಅನ್ನಿಸುವಷ್ಟು ಅಭಿಮಾನವಿದೆ. ನನ್ನ ದೈಹಿಕ ಸ್ಟ್ರೆನ್ತ್ ಮೇಲೆ ಅತೀ ಎನ್ನಿಸುವಷ್ಟು ಓವರ್ ಕಾನ್ಫಿಡೆನ್ಸ್. ಹೀಗಾಗಿಯೇ ಶಾಲೆಯಲ್ಲಿ ನನಗಿಂತ ಬಲಿಷ್ಠರಾದವರೊಡನೆ ಹೊಡೆದಾಟಕ್ಕಿಳಿಯುತ್ತಿದ್ದೆ. ಎತ್ತೆತ್ತರ ಮುಗಿಲೆತ್ತರ ಹೈಟ್ ಇರುವ ನನ್ನದೇ ವಾರಿಗೆಯ ಹುಡುಗರ ಮಧ್ಯೆ ಕುಳ್ಳನಾಗಿ ಕಾಣುತ್ತಿದ್ದ ನಾನು ಫುಟ್ಬಾಲ್ ಮೈದಾನದಲ್ಲಿ ಫುಟ್ಬಾಲ್ ಯಾರು ಕಾಲಿಗೂ ಸಿಗದಂತೆ ಮೂವ್ ಮಾಡಿ ಬಿಡುತ್ತಿದ್ದೆ.

ಇನ್ನು ಸೌಂದರ್ಯದ ವಿಷಯಕ್ಕೆ ಬಂದರೂ ನನ್ನ ದೇಹ ನನಗೆ ತುಂಬ ಪ್ರಿಯವಾಗಿತ್ತು. ಕಾಲೇಜ್ ಲೈಫಿನಲ್ಲಿ ಟೀನೇಜ್ ಹುಡುಗಿಯರು ನನ್ನತ್ತ ಮೀನಿಂಗ್ ಫುಲ್ ಆಗಿ ನೋಡುತ್ತಿದ್ದುದರಿಂದ ಒಳಗೊಳಗೇ ಹೆಮ್ಮೆಯಾಗುತ್ತಿತ್ತು. ನಾಟಕ, ಚರ್ಚಾಸ್ಪರ್ಧೆ, ಗ್ರೂಪ್ ಡ್ಯಾನ್ಸ್, ಇಂಡಿವಿಜುವಲ್ ಡ್ಯಾನ್ಸ್, ಹಾಡು, ಸ್ಕೇಟಿಂಗ್, ಟ್ರೆಕ್ಕಿಂಗ್,  ಯೋಗಾಸನ, ಸೈಕ್ಲಿಂಗ್, ಲಾಠಿ ಅಂತ ಛಪ್ಪನ್ನೈವತ್ತಾರು ಹವ್ಯಾಸಗಳಿಂದ ದೇಹವೆಂಬ ದೇಹವನ್ನು ಯೋಗ ಕಲಶವನ್ನಾಗಿಸಿಕೊಂಡಿದ್ದೆ.

ಮಾನವ ದೇಹವು ಮೂಳೆ ಮಾಂಸದ ತಡಿಕೆ ಎಂದು ಒಪ್ಪಿಕೊಳ್ಳಲು ನಾನು ಶತಾಯಗತಾಯ ಸಿದ್ಧನಿರಲಿಲ್ಲ. ಅಂತಹ ದೇಹ ರೂಮ್ ನಂ. 202 ರಲ್ಲಿ ವಿಚಿತ್ರವಾಗಿ ಮಲಗಿತ್ತು. ತಲೆಯಿಂದ ಎದೆಯವರೆಗೆ ರೋಮ, ಮತ್ತೆ ಎದೆಯ ಕೆಳಗಿನಿಂದ ಮೊಳಕಾಲಿನವರೆಗೆ ರೋಮಗಳಿಲ್ಲ. ಮೊಳಕಾಲುಗಳ ಕೆಳಗೆ ಮತ್ತೆ ರೋಮ. ನಿಜವಾಗಿ ಝಿಬ್ರಾ ಕಂಡಂತೆ ಕಾಣುತ್ತಿದ್ದೆ. ಪುಟ್ಟರಾಜು ನನ್ನನ್ನು ‘ಆಪರೇಷನ್’ ಗೆ ರೆಡಿ ಮಾಡಿಯಾಗಿತ್ತು. ಚಳಿಗೆ ದೇಹ ಗಡಗಡಗಡ ನಡುಗುತ್ತಿತ್ತು.

ಪುಟ್ಟರಾಜುವಿನ ಮಾತುಗಳನ್ನು ಕೇಳುತ್ತ ಮನಸ್ಸು ಭಾರವಾಗಿದ್ದರೆ, ರೋಮಗಳನ್ನು ಕಳೆದುಕೊಂಡ ಶರೀರ ಇನ್ನೂ ಭಾರವಾಗಿತ್ತು. “ಸಾರ್ ಗೀಜರ್ ಸ್ವಿಚ್ ಹಾಕಿದ್ದೆ. ನೀರು ಚೆನ್ನಾಗಿ ಬಿಸಿ ಆಗಿದೆ. ಸ್ನಾನ ಮಾಡಿಕೊಂಡು ಬಿಡಿ” ಅಂದ ಪುಟ್ಟರಾಜು. ಸರಿ ಎಂದು ಹಾಗೆಯೇ ಎದ್ದು ಬಾತ್ ರೂಮ್ ನತ್ತ ಹೆಜ್ಜೆ ಹಾಕಿದ್ದೆ. ಎಡಗೈಗೆ ಚುಚ್ಚಿದ್ದ ಸಲೈನ್ ಇಂಜೆಕ್ಷನ್ ಹಾಗೆಯೇ ಇತ್ತು. ಬಾತ್ ರೂಮ್ ಹೋಗಿ ಬಿಸಿ ನೀರು ಬಕೆಟ್ ಗೆ ಬಿಟ್ಟೆ. ಪುಟ್ಟರಾಜು ಸ್ನಾನ ಮಾಡಿಸಲು ಬಂದ. ಬೇಡ ನಾನೇ ಮಾಡಿಕೊಳ್ಳುತ್ತೇನೆ ಅಂದೆ.

ಬಿಸಿಬಿಸಿ ನೀರಿನ ಮೊದಲ ತಂಬಿಗೆಯನ್ನು ಮೈಮೇಲೆ ಸುರಿದುಕೊಂಡೆ. ಅಷ್ಟರಲ್ಲಿ ನೆನಪಾಯ್ತು. ಬಾತ್ ರೂಮ್ ಬಾಗಿಲು ಹಾಕಿಲ್ಲ ಅಂತ. ನಗು ಬಂತು.

ಬಾಗಿಲು ಹಾಕಿಕೊಂಡು ಏನು ಮುಚ್ಚಿಕೊಳ್ಳಬೇಕು ಎಂದು.

(ನಾಳೆ : ನಾನು ಮಾನಸಿಕವಾಗಿ ಸಿಸ್ಟೋಸ್ಕಾಪಿಗೆ ತಯಾರಾದೆ)

ಮಂಡ್ಯದಲ್ಲಿ ಇಪ್ಪತ್ತು ಎಕರೆ ಕಬ್ಬಿನ ಗದ್ದೆ ಇಟ್ಟುಕೊಂಡು, ಬೆಂಗಳೂರಿನ ದರ್ಶಿನಿಗಳಲ್ಲಿ ಕ್ಲೀನರ್ ಗಳಾಗಿದ್ದಾರೆ

Leave a comment

ಎಲ್ಲರಿಗೂ ಚಿತ್ರರಂಗ, ಟಿವಿ ಸಿರೀಯಲ್ ಲೋಕದ ಬಗ್ಗೆ ಅವರದೇ ಆದ ಕಲ್ಪನೆ ಇರುತ್ತದೆ. ಮತ್ತು ತೊಂಬತ್ತು ಪರ್ಸೆಂಟ್ ಈ ಕಲ್ಪನೆ ಅತ್ಯಂತ ರಮ್ಯ, ರಮಣೀಯ ಹಾಗೂ ಆಹ್ಲಾದಕರವಾಗಿರುತ್ತದೆ. ಆದರೆ ವಾಸ್ತವ ಸ್ಥಿತಿ ಅರಿವಾದಾಗ ಹಳೆಯ ಗಂಡನ ಪಾದವೇ ಗತಿ ಎಂದು ವಾಪಸ್ ತಮ್ಮ ಮಾತೃ ಕೆಲಸಗಳಿಗೇ ಹೋದವರ ಉದಾಹರಣೆಗಳಿಗೇನೂ ಕೊರತೆಯಿಲ್ಲ.

“ಯಾಕೆ ಕೆಲಸದ ಬಗ್ಗೆ ತೃಪ್ತಿಯಿಲ್ಲವಾ?” ರಮೇಶನನ್ನು ಕೇಳಿದೆ.

“ತೃಪ್ತಿ ಇದೆ ಸಾರ್. ಆದರೆ ಸಂಬಳ ಇಲ್ಲ. ಕೊನೆವರೆಗೂ ಬರೀ ದುಡಿಯೋದೇ ಆಗುತ್ತೆ” ರಮೇಶ್ ಅಂದ.

“ಅದು ಸಮಸ್ಯೆಯೇ. ಆದರೆ ಟಿವಿ ಇಂಡಸ್ಟ್ರಿಯಲ್ಲಿ ಭಾರೀ ದುಡ್ಡು ಗಳಿಸಬಹುದು ಎಂಬ ಭ್ರಮೆ ಮಾತ್ರ ಬೇಡ”

“ಹೌದು ಸಾರ್ ಗೊತ್ತು. ಅದೃಷ್ಟ ಬೇಕಲ್ವ?”

“ಬರೇ ಅದೃಷ್ಟ ಅಷ್ಟೇ ಇದ್ರೆ ಸಾಲ್ದು. ಇಲ್ಲಿ ಕ್ಲಿಕ್ ಆಗ್ಬೇಕು ಅಂದ್ರೆ ಮೂರು ವಿಷಯ ಬೇಕು. ಅದೃಷ್ಟ, ಅನುಗ್ರಹ ಮತ್ತು ಅವಕಾಶ. ಆಮೇಲೆ ಈ ಮೂರು ಒಂದೇ ಸಾರಿ ಕೂಡಿ ಬರಬೇಕು. ಬರೀ ಅವಕಾಶ ಇದ್ದು ಅದೃಷ್ಟ ಇಲ್ದೇ ಇದ್ರೆ ಕೆಲಸ ಆಗಲ್ಲ. ಅಥವಾ ಅದೃಷ್ಟ ಇದ್ದು ಅನುಗ್ರಹ ಸಾಥ್ ಕೊಡದೇ ಇದ್ರೆ ಮತ್ತೆ ಅವಕಾಶ ಕೈತಪ್ಪಿ ಹೋದ ಹಾಗೇ ಲೆಕ್ಕ. ಈ ಮೂರು ಒಟ್ಟಿಗೆ ಬರೋವರ್ಗೂ ಕಾಯ್ಬೇಕು ಅಷ್ಟೇ”

ಪುಟ್ಟರಾಜು ಅಂದ “ನೀವ್ ಹೇಳ್ತಿರೋದು 100 ಪರ್ಸೆಂಟ್ ನಿಜ ಸಾರ್”

“ನಿಮ್ಮ ಊರು ಯಾವ್ದು?” ಕೇಳಿದೆ.

“ಮಂಡ್ಯ” ಅಂದ ರಮೇಶ್.

“ಓಹ್…ಮಂಡ್ಯಾನಾ? ನಮ್ಮ ಇಂಡಸ್ಟ್ರಿಯಲ್ಲಿ ಮಂಡ್ಯದವ್ರು ಸಾಕಷ್ಟು ಜನ ಇದ್ದಾರೆ. ಒಳ್ಳೋಳ್ಳೆ ಜಮೀನು ಇಟ್ಕೊಂಡು ಇಲ್ಲಿ ಬಂದು ಸೆಟ್ ಬಾಯ್ ಗಳಾಗಿ ದುಡೀತಿದಾರೆ” ಅಂದೆ

“ಏನ್ ಸಾರ್. ಏನ್ ಜಮೀನು ಇದ್ರೂ ಕೆಲಸ ಮಾಡಕ್ಕಾಗಲ್ಲ ಸಾರ್” ಅಂದ ರಮೇಶ್.

ನನಗೆ ಕೊಂಚ ರೇಗಿತು. “ನೋಡಿ, ನನಗೊಬ್ಬ ಹುಡುಗ ಗೊತ್ತಿದ್ದಾನೆ. ಆತನಿಗೆ 20 ಎಕರೆ ಜಮೀನಿದೆಯಂತೆ. 20 ಎಕರೆನೂ ಕಬ್ಬು ಬೇಳಿತಾರಂತೆ. ಒಬ್ಬನೇ ಮಗನಂತೆ. ಈಗ ವಯಸ್ಸಾದ ತಂದೆತಾಯಿಯನ್ನು ಬಿಟ್ಟು, ಜಮೀನು ಮಾಡೋದು ಬಿಟ್ಟು ಬೆಂಗಳೂರಿಗೆ ಬಂದು ದರ್ಶಿನಿಯೊಂದರಲ್ಲಿ ಕ್ಲೀನರ್ ಆಗಿ ಕೆಲಸ ಮಾಡ್ತಾ ಇದಾನೆ. ಇದಕ್ಕೇನಂತೀರಿ?” ಎಂದೆ

ಪುಟ್ಟರಾಜು ತಕ್ಷಣ ಅಂದ. “ಎಷ್ಟು ಜಮೀನಿದ್ರೂ, ಏನೇ ಕಬ್ಬು ಬೆಳೆದ್ರೂ ರೇಟ್ ಇರ್ಬೇಕಲ್ವ ಸಾರ್? ಹೋದ ವರ್ಷ, ಅದರ ಹಿಂದಿನ ವರ್ಷ ಕಬ್ಬಿಗೆ ರೇಟ್ ಇಲ್ದೇ ನಮ್ಮ ಕಬ್ಬನ್ನ ನಾವೇ ಬೆಂಕಿ ಹಾಕಿ ಸುಟ್ವಲ್ಲ ಸಾರ್. ಹೇಗೆ ಜಮೀನು ಮಾಡ್ಬೇಕು ಹೇಳಿ?” ಅಂದ.

ಆ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ. ಹುಂ..ಎಂದು ಸುಮ್ಮನಾದೆ.

ಸ್ವಾತಂತ್ರ್ಯಾನಂತರ ನಮ್ಮನ್ನು ಆಳಿದ ಹಲಕಟ್ ರಾಜಕಾರಣಿಗಳ, ಅರಿಷ್ಟ ಐಎಎಸ್ ಗಳ ಹಾಗೂ ಮತದಾನದ ದಿನದಂದು ಶೇ. 45 ರಷ್ಟು ಮಾತ್ರ ಮತದಾನವಾಗುವ ಬೆಂಗಳೂರಿನ ಸುಶಿಕ್ಷಿತ ಸೋಕಾಲ್ಡ್ ಸೋಫಿಸ್ಟಿಕೇಟೆಡ್ ಬಡಾವಣೆಗಳ ಮತದಾರರ ಮೇಲೆ ಭಾರೀ ಕೋಪ ಬಂತು.

ಬಹುಶಃ ಪೇನ್ ಕಿಲ್ಲರ್ ಪ್ರಭಾವ ಕಡಿಮೆಯಾಗುತ್ತಿತ್ತು ಅನಿಸಿತು. ಹೊಟ್ಟೆಯಲ್ಲಿ ಮತ್ತೊಮ್ಮೆ ಚೂರಿ ಹಾಕಿದ ಅನುಭವವಾಯಿತು.

(ನಾಳೆ : ಅರ್ಧ ಶರೀರದ ರೋಮ ಕಳೆದುಕೊಂಡ ನನ್ನ ದೇಹ ವಿಚಿತ್ರವಾಗಿ ಕಾಣುತಿತ್ತು)

ಯಾವ ಜನ್ಮದ ಪಾಪವೋ, ಇಂತಹ ಕೆಲಸ ಮಾಡುತ್ತಿರುವೆ…

2 Comments

ಗಡಿಯಾರ ಅದಾಗಲೇ ಒಂದು ಗಂಟೆ ತೋರಿಸುತ್ತಿತ್ತು. ಮೈಮೇಲೆ ಬಟ್ಟೆಯಿರದಿದ್ದರಿಂದ ಗಡಗಡ ನಡುಗುತ್ತಿದ್ದೆ.

“ಚಳಿ ಆಗ್ತಾ ಇದ್ಯಾ?” ರಮೇಶ್ ಕೇಳಿದ.

“ಹೌದು” ಎಂದೆ.

“ಇನ್ನೇನು ಮುಗೀತು ಬಿಡಿ” ಅಂದ.

ಪುಟ್ಟರಾಜು ಕೈಯಲ್ಲಿದ್ದ ರೇಜರ್ ನನ್ನ ಬೆನ್ನ ಮೇಲಿನ ರೋಮಗಳ ಬುಡ ಕಡಿಯಲಾರಂಭಿಸಿತ್ತು.

“ಆದರೂ ಪುಟ್ಟರಾಜು, ಈ ಕೆಲಸ ಮಾಡಬೇಕಾದರೆ ಏನೆನ್ನಿಸುತ್ತದೆ ನಿಮಗೆ?” ಕೇಳಿದೆ.

“ಮೊದಲೆಲ್ಲ ತುಂಬಾ ಬೇಜಾರಾಗುತಿತ್ತು ಸಾರ್. ಒಂದೊಮ್ಮೆ ಸಂಬಂಧಿಕರು, ಗೆಳೆಯರು ಕೂಡ ಗೇಲಿ ಮಾಡುತ್ತಿದ್ದರು. ನೀನು ಹೋದ ಜನ್ಮದಲ್ಲಿ ಯಾವುದೋ ಪಾಪ ಮಾಡಿದ್ದೀಯ. ಹೀಗಾಗಿಯೇ ಇಂತಹ ಕೆಲಸ ಮಾಡುತ್ತಿರುವೆ ಎಂದು ಹಂಗಿಸುತ್ತಿದ್ದರು. ನನಗೂ ಹಾಗೆಯೇ ಅನ್ನಿಸುತ್ತಿತ್ತು. ನಿಧಾನವಾಗಿ ನನ್ನ ಕೆಲಸದ ಬಗ್ಗೆ ಒಂದು ರೀತಿಯ ನಿರ್ಲಿಪ್ತ ಭಾವನೆ ಬರುತ್ತಿತ್ತು. ಆದರೆ ನಂತರ ನನ್ನ ಕೆಲಸದ ಮಹತ್ವ ನನಗೇ ಗೊತ್ತಾಗುತ್ತ ಹೋಯಿತು. ನಾನು ಮಾಡುತ್ತಿರುವುದು ರೋಗಿಗಳಿಗೆ ಎಂತಹ ರಿಲೀಫ್ ಕೊಡುತ್ತಿದೆ ಎಂದು ತಿಳಿಯುತ್ತಿದ್ದಂತೆ ಹೆಚ್ಚು ಆಸಕ್ತಿಯಿಂದ ಇಂತಹ ಕೆಲಸ ಮಾಡತೊಡಗಿದೆ. ಮಧ್ಯೆ ಮಧ್ಯೆ ಗೆಳೆಯರು ಹಂಗಿಸುವುದು ನಡೆದೇ ಇತ್ತು. ಆದರೂ ನಾನು ಜಗ್ಗಲಿಲ್ಲ”

ನನಗೆ ತುಂಬಾ ಬೇಜಾರೆನಿಸಿತು. ಛೆ…ಎಷ್ಟು ಒಳ್ಳೆಯ ಕೆಲಸ ಮಾಡುತ್ತಿರುವ ವ್ಯಕ್ತಿಗೆ ಸಮಾಜ ಹೇಗೆ ನೋಡುತ್ತದೆಯಲ್ಲ ಎಂದು. ರಿಯಲ್ ಎಸ್ಟೇಟ್ ನಲ್ಲಿ ಇಲ್ಲೀಗಲ್ ಆಗಿ ದುಡ್ಡು ಮಾಡಿ, ಯಾರದೋ ತಲೆ ಹೊಡೆದು, ಮತ್ತೊಬ್ಬರ ಹೆಂಡತಿ-ಹುಡುಗಿಯ ಮೇಲೆ ಕಣ್ಣು ಹಾಕಿ, ಬಡವರ ರಕ್ತ ಹೀರಿ, ಸಿಕ್ಕಾಪಟ್ಟೆ ದುಡ್ಡುಮಾಡಿಕೊಂಡು ಸ್ಟಾರ್ಚ್ ಹಾಕಿದ ಗರಿಗರಿ ಬಿಳಿಬಿಳಿ ಬಟ್ಟೆ ಹಾಕಿಕೊಂಡು, ಕೊರಳಲ್ಲಿ ಬಂಗಾರದ ಚೈನು, ಬೆರಳುಗಳಲ್ಲಿ ಉಂಗುರ ಹಾಕಿಕೊಂಡು ಮೆರೆಯುವ ಕಳ್ಳರಿಗೆ ಸಮಾಜ ಸನ್ಮಾನಿಸುತ್ತದೆ. ಆದರೆ ಪುಟ್ಟರಾಜುರಂತಹ ವ್ಯಕ್ತಿಗಳಿಗೆ ‘ನೀನು ಯಾವುದೋ ಜನ್ಮದಲ್ಲಿ ಮಾಡಿದ ಪಾಪ’ ಎಂದು ಛೇಡಿಸುತ್ತದೆ. ವಿಪರ್ಯಾಸ ಮತ್ತು ಡಿಸ್ಗಸ್ಟಿಂಗ್.

ಆದರೆ ಇದೇ ಕಾರ್ಯಗೌರವ ರಮೇಶ್ ನಲ್ಲಿ ಇದ್ದಂತೆ ಕಾಣಲಿಲ್ಲ. ಕೇಳಿದ.

“ಸಾರ್, ನೀವೇನು ಕೆಲಸ ಮಾಡುತ್ತೀರಿ?”

“ನಾನು ಫ್ರೀಲ್ಯಾನ್ಸ್ ಜರ್ನಲಿಸ್ಟ್. ಮೊದಲು ಈಟಿವಿಯಲ್ಲಿದ್ದೆ. ಈಗ ವಿವಿಧ ಪತ್ರಿಕೆಗಳಿಗೆ ಬರೆಯುತ್ತೇನೆ. ಜೊತೆಗೆ ಟಿವಿ ಸೀರಿಯಲ್ ನಲ್ಲಿ ಆಕ್ಟ್ ಮಾಡುತ್ತೇನೆ”

“ಯಾವ ಸೀರಿಯಲ್ ಸಾರ್?” ಇಬ್ಬರೂ ಒಮ್ಮೆಲೇ ಕೇಳಿದರು.

“ಈಟಿವಿಯಲ್ಲಿ ಪ್ರತಿದಿನ ರಾತ್ರಿ ಮುಕ್ತ ಮುಕ್ತ ಬರುತ್ತದಲ್ಲ. ಅದರಲ್ಲಿ. ನೋಡಿಲ್ಲವೆ?”

“ಇಲ್ಲ ಸಾರ್. ಟೈಮೇ ಆಗುವುದಿಲ್ಲ. ಇನ್ನು ಮುಂದೆ ನೋಡುತ್ತೇವೆ ಸಾರ್” ಅಂದ ರಮೇಶ್.

ಮತ್ತೆ ಕೇಳಿದ. “ಸಾರ್, ಅಲ್ಲಿ ಸ್ಯಾಲರಿ ಎಲ್ಲ ಹೇಗೆ ಸಾರ್?”

“ತುಂಬಾ ಅಂತಲೂ ಇಲ್ಲ ಕಡಿಮೆ ಅಂತಲೂ ಇಲ್ಲ. ಎಲ್ಲವೂ ಎಕ್ಸಪಿರಿಯನ್ಸ್ ಮೇಲೆ ಹೋಗುತ್ತದೆ. ಇಷ್ಟೇ ಅಂತ ಹೇಳಲಾಗುವುದಿಲ್ಲ”

“ನಾವು ಮಾಡುತ್ತಿರುವ ಕೆಲಸ ಒಳ್ಳೆಯದಾದರೂ, ಸ್ಯಾಲರಿ ತುಂಬ ಕಡಿಮೆ ಸಾರ್” ರಮೇಶ್ ಅಲವತ್ತುಕೊಂಡ.

ನಾನು ಪುಟ್ಟರಾಜುಗೆ ಹೇಳಿದೆ. “ನೀವು ಯಾವತ್ತೂ ಇದು ನಿಮ್ಮ ಹಿಂದಿನ ಜನ್ಮದ ಪಾಪ ಎಂದು ತಿಳಿದುಕೊಳ್ಳಬೇಡಿ. ಬದಲಾಗಿ ನೀವು ಮಾಡುತ್ತಿರುವ ಹೆಚ್ಚಿನ ಪುಣ್ಯದ ಕೆಲಸ ಮತ್ತೊಂದಿಲ್ಲ. ಯಾರು ಇಂತಹ ಕೆಲಸ ಮಾಡುತ್ತಾರೆ ಹೇಳಿ. ಸ್ವಂತ ತಂದೆ, ಅಣ್ಣನೇ ಇದ್ದರೂ ಬಹುಶಃ ಈ ರೀತಿಯ ಕೆಲಸ ಮಾಡಲು ಯಾರೂ ಸಿದ್ದರಾಗಲಿಕ್ಕಿಲ್ಲ. ನೂರು ಜನರನ್ನು ನಿಲ್ಲಿಸಿ, ಈ ಕೆಲಸ ಮಾಡಿ ಎಂದು ಹೇಳಿದರೆ ಎಷ್ಟು ಜನ ಮುಂದೆ ಬರುತ್ತಾರೋ ನನಗಂತೂ ಗೊತ್ತಿಲ್ಲ. ನೀವು ಮಾಡುತ್ತಿರುವುದಂತೂ ಅಪ್ಪಟ ಪುಣ್ಯದ ಕೆಲಸ. ಅದರಲ್ಲಿ ಡೌಟೇ ಬೇಡ

“ಹೌದು ಸಾರ್” ಎಂದ ಪುಟ್ಟರಾಜು.

ರಮೇಶ್ ಹೇಳಿದ. “ಸಾರ್, ಟಿವಿ ಇಂಡಸ್ಟ್ರಿಯಲ್ಲಿ ಏನಾದರೂ ಕೆಲಸವಿದೆಯೇ ಸಾರ್?”

ನಾನು ಸಣ್ಣದಾಗಿ ನಕ್ಕೆ.

(ನಾಳೆ : ಮಂಡ್ಯದಲ್ಲಿ ಇಪ್ಪತ್ತು ಎಕರೆ ಕಬ್ಬಿನ ಗದ್ದೆ ಇಟ್ಟುಕೊಂಡು, ಬೆಂಗಳೂರಿನ ದರ್ಶಿನಿಗಳಲ್ಲಿ ಕ್ಲೀನರ್ ಗಳಾಗಿದ್ದಾರೆ…)

ರಾತ್ರಿಯಿಡೀ ಹೆಣದ ಮೇಲೆ ಮಲಗಿದ್ದೆ….ಮುಂದುವರಿದ ಭಾಗ

Leave a comment

ಪುಟ್ಟರಾಜು ತನ್ನ ನೆನಪಿನ ಬುತ್ತಿಯಿಂದ ಆತ ಹೆದರಿಕೆಯಿಂದ ಸರ್ವಕಾಲಕ್ಕೂ ಪಾರಾದ ಘಟನೆ ಹೇಳಲು ಮೊದಲು ಮಾಡಿದ್ದ.

“ವಾರ್ಡ್ ಬಾಯ್ ಆಗಿ ಸಾಕಷ್ಟು ಅನುಭವ ಬಂದಿತ್ತು. ಅದಾಗಲೇ ಕೈಕಾಲು ಕಳೆದುಕೊಂಡವರ, ಮೈ ಸುಟ್ಟುಕೊಂಡವರ, ಲಕ್ವಾ ಹೊಡೆದವರ, ಅಶಕ್ತರ ಶೌಚವನ್ನು ನಾನೇ ಮಾಡಿಸಿ, ಸ್ವಚ್ಛಗೊಳಿಸುತ್ತಿದ್ದೆ. ಮೊದಲೆಲ್ಲ ಕಿರಿಕಿರಿಯಾದರೂ ನಂತರ ಅಭ್ಯಾಸವಾಯಿತು. ನನಗಿಂತಲೂ ಹೆಚ್ಚು ಕಲಿತ ಡಾಕ್ಟರ್ ಗಳೇ ಅಲ್ಲೆಲ್ಲ ಕೈಹಾಕಿ ಆಪರೇಷನ್ ಮಾಡುವಾಗ, ನನ್ನಂತವ ಅಲ್ಲಿ ಕೈಹಾಕಲು ಯಾಕೆ ಹಿಂಜರಿಯಬೇಕು ಸಾರ್? ಮೇಲ್ ಪೇಷಂಟ್, ಫೀಮೇಲ್ ಪೇಷಂಟ್ ಎಂಬ ಭೇದವಿಲ್ಲದೆ ಶೌಚ ಮಾಡಿಸುತ್ತಿದ್ದೆ. ಎಲ್ಲವೂ ಅಭ್ಯಾಸವಾಗಿಬಿಟ್ಟಿತ್ತು”

ನಾನು ಉಗುಳು ನುಂಗಿದೆ. ಪುಟ್ಟರಾಜುವಿನ ರೇಜರ್ ಅದಾಗಲೇ ನನ್ನ ಲೋವರ್ ಅಬ್ಡಾಮಿನ್ ಸ್ಥಳದ ಎಲ್ಲ ರೋಮಗಳನ್ನು ಸ್ವಚ್ಚಗೊಳಿಸಿತ್ತು.

“ಒಂದು ದಿನ ಒಬ್ಬ ಅಜ್ಜ ಪೇಷಂಟ್ ದಾಖಲಾಗಿದ್ದರು. ಅಜ್ಜನನ್ನು ನೋಡಿಕೊಳ್ಳಲು ಅಜ್ಜಿಯೊಂದೇ ಇತ್ತು. ಮಕ್ಕಳಿದ್ದರೋ ಇಲ್ಲವೋ ಗೊತ್ತಿಲ್ಲ. ಅಜ್ಜನಿಗೆ ಯಾವುದೋ ರೋಗ. ಕೈಕಾಲು ಆಡಿಸಲು ಬಾರದ ಸ್ಥಿತಿ. ಅಜ್ಜಿಗೂ ಪಾಪ ಕೆಲಸ ಮಾಡಿ ಮಾಡಿ ಸಾಕಾಗುತ್ತಿತ್ತು. ಹೀಗಾಗಿ ಅಜ್ಜನ ಎಲ್ಲ ಕೆಲಸಗಳನ್ನೂ ನಾನೇ ಮಾಡುತ್ತಿದ್ದೆ. ರಾತ್ರಿ ಅಜ್ಜನನ್ನು ಹಿಡಿದುಕೊಂಡು ಮಲಗಬೇಕಾಗುತ್ತಿತ್ತು. ಬೆಡ್ ಪಕ್ಕದಲ್ಲಿ ಚೇರ್ ಹಾಕಿಕೊಂಡು ಅಜ್ಜಿ ಅಜ್ಜನನ್ನು ಹಿಡಿದು ಮಲಗುತ್ತಿತ್ತು. ಒಂದು ದಿನ ನಾನು ನೈಟ್ ಶಿಫ್ಟ್ ನಲ್ಲಿದ್ದೆ. ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ಅಜ್ಜಿ ನನ್ನನ್ನು ಕೂಗಿತು. ತನಗೆ ಸುಸ್ತಾಗುತ್ತಿದೆಯೆಂದೂ ಅಜ್ಜನನ್ನು ಹಿಡಿದುಕೊಂಡು ಕೂರು ಎಂದು ವಿನಂತಿಸಿತು. ಸರಿ ಎಂದೆ. ಅಜ್ಜಿ ಅಲ್ಲೇ ಇದ್ದ ಪಕ್ಕದ ಬೆಡ್ ಮೇಲೆ ಮಲಗಿತು. ನಾನು ಅಜ್ಜನ ಪಕ್ಕ ಚೇರ್ ನಲ್ಲಿ ಕುಳಿತು ಅಜ್ಜನನ್ನು ಹಿಡಿದುಕೊಂಡು ಕುಳಿತೆ.

ಯಾರದೋ ಮಾತು ನಿಧಾನವಾಗಿ ಕೇಳಿಸಿತು. ಕಣ್ಣು ತೆರೆದು ನೋಡಿದರೆ ಅದಾಗಲೇ ಬೆಳಗಾಗಿತ್ತು. ನಾನು ಎಲ್ಲಿದ್ದೇನೆ ಎಂದು ಅರಿವಿಗೆ ಬಂದದ್ದು ಆಗಲೇ. ರಾತ್ರಿ ಅಜ್ಜನನ್ನು ಹಿಡಿದು ಕೊಂಡು ಕುಳಿತವ ನಿದ್ದೆಗೆ ಜಾರಿ ಅಜ್ಜನ ಮೇಲೆಯೇ ಒರಗಿ ನಿದ್ದೆ ಹೋಗಿಬಿಟ್ಟಿದ್ದೆ. ಕಣ್ಣು ಬಿಟ್ಟಾಗ ಬೆಳಗಾಗಿತ್ತು. ತಕ್ಷಣ ಎದ್ದು ಅಜ್ಜನಿಂದ ಬಿಡಿಸಿಕೊಂಡೆ. ಯಾಕೋ ಡೌಟ್ ಬಂತು. ಹೌದು ನಿಜವಾಗಿತ್ತು. ಅಜ್ಜ ರಾತ್ರಿಯಾವಾಗಲೋ ಸತ್ತು ಹೋಗಿಬಿಟ್ಟಿದ್ದ. ರಾತ್ರಿಯಿಡೀ ಹೆಣದ ಮೇಲೆ ಮಲಗಿಬಿಟ್ಟಿದ್ದೆ”.

ನನ್ನ ಬಾಯಿಂದ  “ಅಯ್ಯಬ್ಬ” ಎಂಬ ಉದ್ಗಾರ.

ಆಮೇಲೆ ನೋಡಿ ಸಾರ್. ಅಂದು ಹೋದ ಹೆದರಿಕೆ ಇಂದಿಗೂ ನನ್ನ ಹತ್ತಿರ ಸುಳಿದಿಲ್ಲ. ಏನೇನು ನೋಡಿದ್ದೇನೆ, ಏನೇನು ಮಾಡಿದ್ದೇನೆ. ಉಹುಂ…ಹೆದರಿಕೆಯಾಗಿಲ್ಲ ಸಾರ್ ಎಂದು ಪುಟ್ಟರಾಜು.

ಅಷ್ಟರಲ್ಲಿ ರಮೇಶ್ ಅಂದ. “ಸಾರ್ ಉಲ್ಟಾ ಮಲಗಿಕೊಳ್ಳಿ”

ನಾನು ನನ್ನ ದೇಹವನ್ನು ನೋಡಿದೆ. ಹೊಟ್ಟೆ, ಲೋವರ್ ಅಬ್ಡಾಮಿನ್, ಮೊಣಕಾಲಿನವ ವರೆಗಿನ ಎಲ್ಲ ರೋಮಗಳನ್ನು ಪುಟ್ಟರಾಜು ಅದಾಗಲೇ ತೆಗೆದಾಗಿತ್ತು. ಹಕ್ಕಳೆಹುಳ ಪೊರೆ ಕಳಚಿದಾಗ ಕಾಣವಂತೆ ನನ್ನ ಅರ್ಧ ಶರೀರ ಕಾಣುತ್ತಿತ್ತು. ನಿಧಾನವಾಗಿ ಟರ್ನ್ ಆದೆ. ಉಲ್ಟಾ ಮಲಗಿಕೊಂಡೆ.

ರಮೇಶ್ ಹೋಗಿ ಫ್ರೆಶ್ ಬಿಸಿನೀರು ತಂದ. ಈಗ ಪುಟ್ಟರಾಜು ನನ್ನ ಬೆನ್ನಿಗೆ ಸೋಪು ಹಚ್ಚತೊಡಗಿದ್ದ.

(ನಾಳೆ : ಯಾವ ಜನ್ಮದ ಪಾಪವೋ ಇಂತಹ ಕೆಲಸ ಮಾಡುತ್ತಿರುವೆ…)

ಕ್ಷಮಿಸಿ….

2 Comments

“ಬೇರೆಯವರ ಮುಂದೆ ಬತ್ತಲಾಗಿ ಮಲಗುವುದಿದೆಯಲ್ಲ” ಲೇಖನ ಇಂದು ಹಾಕಬೇಕಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಪೋಸ್ಟ್ ಮಾಡಲಾಗುತ್ತಿಲ್ಲ. ಕ್ಷಮೆಯಿರಲಿ. ಈ ಲೇಖನ ನಾಳೆ ಪ್ರಕಟವಾಗಲಿದೆ.

ಪ್ರಿತಿಯಿರಲಿ

ಸುಘೋಷ್ ಎಸ್. ನಿಗಳೆ.

ಹಿತ್ತಲ ಗಿಡ ಮದ್ದಲ್ಲ….

1 Comment

ಅಷ್ಟರಲ್ಲಿ ಮತ್ತೊಮ್ಮೆ ನನ್ನ ಅಭಿಮಾನಿ ಡಾಕ್ಟರ್ ನಾಗರಾಜ್ ಬಂದು, “ನೋಡಿ, ಸಿಸ್ಟೋಸ್ಕಾಪಿ ಮಾಡಿಸಿಕೊಂಡರೆ ಒಳ್ಳೆಯದು. ನೀವು ಈಗ ಒಂದು ಅವರ್ ನಲ್ಲಿ ನಿಮ್ಮ ನಿರ್ಧಾರ ತಿಳಿಸಿದರೆ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಮಾಡಬಹುದು” ಎಂದು ಡೆಡ್ ಲೈನ್ ನೀಡಿ ಮಾಯವಾದರು.

ನಾಟಿ ಔಷಧಿ ಹಾಗೂ ಸಿಸ್ಟೋಸ್ಕಾಪಿ ಈ ಎರಡರ ಮಧ್ಯೆ ಒಂದನ್ನು ಆಯ್ಕೆ ಮಾಡಿಕೊಳ್ಳಲು ನನ್ನ ಬಳಿ ಟೈಮ್ ತುಂಬಾ ಕಡಿಮೆ ಇತ್ತು. ನಿರ್ಧಾರವಂತೂ ಮಾಡಲೇಬೇಕಿತ್ತು. ಈ ಎರಡರಲ್ಲಿ ಒಂದಂತೂ ಅನಿವಾರ್ಯವಾಗಿತ್ತು. ಎರಡಕ್ಕೂ ಅದರದೇ ಆದ ಮೆರಿಟ್ಸ್ ಹಾಗೂ ಡಿಮೆರಿಟ್ಸ್ ಇದ್ದವು.

ನಾಟಿ ಔಷಧದ ಮೆರಿಟ್ಸ್ ಹೀಗಿದ್ದವು

# ದೇಹಕ್ಕೆ ಯಾವುದೇ ತೊಂದರೆಯಿಲ್ಲ.

# ದೇಹಕ್ಕೆ ಅನಸ್ತೇಷಿಯಾ ಚುಚ್ಚುವ ಅಗತ್ಯವಿಲ್ಲ.

# ಪೈಪ್ ಸೇರಿಸುವ ಅಗತ್ಯವಿಲ್ಲ.

# ನಾಲ್ಕೈದು ದಿನ ಆಡ್ಮಿಟ್ ಆಗುವುದು ಬೇಡ.

# ಚಿಕಿತ್ಸೆ ತೀರ ಸುಲಭ. ಬೆಳಿಗ್ಗೆ ಆರು ಗಂಟೆಗೆ ಖಾಲಿ ಹೊಟ್ಟೆಯಲ್ಲಿ ವೈದ್ಯರು ನೀಡುವ ಔಷಧ ತೆಗೆದುಕೊಂಡರಾಯಿತು. ಸಂಜೆ ಆರು ಗಂಟೆಯೊಳಗೆ ಕಲ್ಲು ಮೂತ್ರದೊಂದಿದೆ ಹೊರಬಿದ್ದುಬಿಡುತ್ತದೆ. ಇಟ್ ಈಸ್ ಆಸ್ ಸಿಂಪಲ್ ಆಸ್ ದೆಟ್.

ಡಿಮೆರಿಟ್ಸ್

# ಔಷಧಿ ತೆಗೆದುಕೊಳ್ಳಲು ನಾನು 370 ಕಿಮಿ. ಪ್ರಯಾಣ ಮಾಡಿ ಕೊಪ್ಪಕ್ಕೆ ಹೋಗಬೇಕು.

# ಈ ಪ್ರಯಾಣದ ಅವಧಿಯಲ್ಲಿ ನೋವು ಸಹಿಸಿಕೊಳ್ಳಬೇಕು ಅಥವಾ ಸ್ಟ್ರಾಂಗ್ ಪೇನ್ ಕಿಲ್ಲರ್ಸ್ ತೆಗೆದುಕೊಳ್ಳಬೇಕು.

# ಮಾರ್ಗ ಮಧ್ಯೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡರೆ ಬೊಬ್ಬೆ ಹೊಡೆಯುವುದೊಂದೇ ಪರಿಹಾರ.

# ಒಂದು ವೇಳೆ, ಒಂದು ವೇಳೆ, ಒಂದು ವೇಳೆ ನಾಟಿ ಔಷಧಿ ಫೇಲ್ ಆದರೆ………

ಅತೀ ಹತ್ತಿರದ ಆಸ್ಪತ್ರೆ ಎಂದರೆ ಮಂಗಳೂರಿನ ಕಿಡ್ನಿ ಫೌಂಡೇಷನ್ ಗೆ ನನ್ನನ್ನು ಸಾಗಿಸಬೇಕು.

# ಇದೆಲ್ಲಕ್ಕೂ ದೊಡ್ಡ ತೊಂದರೆ ಎಂದರೆ ನಾನು ಎಡ್ಮಿಟ್ ಆಗಿದ್ದು ಬುಧವಾರ. ನಾಟಿ ವೈದ್ಯರು ಔಷಧಿ ಕೊಡುತ್ತಿದ್ದುದ್ದು ಗುರುವಾರ ಮತ್ತು ಭಾನುವಾರ ಮಾತ್ರ. ಮಾರನೇ ದಿನವೇ ಗುರುವಾರ. ರಾತ್ರಿಯೇ ಕೊಪ್ಪಕ್ಕೆ ಹೊರಡುವುದು ಅಸಾಧ್ಯದ ಮಾತು. ಇನ್ನು ಭಾನುವಾರದವರೆಗೆ ಕಾಯಬೇಕು. ಅಲ್ಲಿಯವರೆಗೆ ಪೇನ್ ಸಹಿಸಿಕೊಂಡಿರಬೇಕು.

ಇಷ್ಟೆಲ್ಲ ಇದ್ದರೂ ನನಗೆ ಮನಸ್ಸಿದ್ದುದು ಮಾತ್ರ ನಾಟಿ ಔಷಧಿಯ ಮೇಲೆಯೇ. ಮೊದಲಿನಿಂದಲೂ ಅದರ ಮೇಲೆ ಏನೋ ಒಂದು ಹೇಳಿಕೊಳ್ಳಲಾಗದ ವಿಶ್ವಾಸ. ಬೆಳಗಾವಿಯ ಸಮೀಪ ಈ ನಾಟಿ ವೈದ್ಯರ ಚಮತ್ಕಾರಗಳನ್ನು ಬಾಲ್ಯದಲ್ಲಿ ನಾನು ಕಂಡಿದ್ದು ಬಹುಶಃ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿರಬಹುದು.

ಒಂದು ಹಂತದಲ್ಲಿ ಸಿಸ್ಟೋಸ್ಕಾಪಿ ಬೇಡವೆಂದು ನಿರ್ಧರಿಸಿ, ಕೊಪ್ಪಕ್ಕೆ ಹೋಗುವುದೆಂದು ಹೇಳಿಬಿಟ್ಟೆ. ಆದರೆ ಮತ್ತೆ ಫೋನುಗಳು, ಮತ್ತೆ ಚರ್ಚೆ, ಮತ್ತೆ ಮಾತುಕತೆ ಎಲ್ಲವೂ ನಡೆದವು. ನನ್ನ ಹಲವು ವೈದ್ಯ ಮಿತ್ರರ ಸಲಹೆ ಪಡೆದೆ. ಈ ವೈದ್ಯ ಮಿತ್ರರಲ್ಲಿ ಆಯುರ್ವೇದ ಹಾಗೂ ಅಲೋಪತಿ ಎರಡೂ ವಿಧದ ವೈದ್ಯರಿದ್ದರು. ಇಬ್ಬರೂ ಹೇಳಿದ್ದು ಒಂದೇ. “ಎರಡೂ ಆಪ್ಟ್ ಮಾಡಿಕೊಳ್ಳುವಂತಹವೇ. ಆದರೆ ಈಗ ನೀನಿರುವ ಸ್ಥಿತಿಯಲ್ಲಿ ನಾಟಿ ಆಪ್ಟ್ ಮಾಡಿಕೊಳ್ಳುವುದು ಕಷ್ಟ. ಸಿಸ್ಟೋಸ್ಕಾಪಿ ಮಾಡಿಸಿಕೊಂಡು ಬಿಡು. ನಿನಗೂ ಒಂದು ರೀತಿಯ ಮಾನಸಿಕ ಸಮಾಧನ ಇರುತ್ತದೆ” ಅಂತ.

ಸರಿ ಅಂತ ಡಾಕ್ಟರ್ ನಾಗರಾಜ್ ರನ್ನು ಕರೆದು, ಸಿಸ್ಕೋಸ್ಕಾಪಿ ಮಾಡಿ ಎಂದೆ. ಆದರೆ ನಾನು ನನ್ನ ನಿರ್ಧಾರ ಹೇಳಲು ಸುಮಾರು ಮೂರು ಗಂಟೆ ಖರ್ಚು ಮಾಡಿಯಾಗಿತ್ತು. ಹೀಗಾಗಿ ರಾತ್ರಿ ಹನ್ನೊಂದು ಗಂಟೆಗೆ ಚಿಕಿತ್ಸೆ ನೀಡುವುದು ಸಾಧ್ಯವಿರಲಿಲ್ಲ. ಬೆಳಿಗ್ಗೆ ಆರು ಗಂಟೆಗೆ ಮಾಡಲಾಗುವುದು ಎಂದು ಹೇಳಿದರು. ನಾನು ಆದಷ್ಟು ಬೇಗ ಸಿಸ್ಟೋಸ್ಕಾಪಿ ಮಾಡಿಸಿಕೊಳ್ಳಲು ಸಿದ್ಧನಾಗಿದ್ದೆ. ಕಷ್ಟ ಆದಷ್ಟು ಬೇಗ ಸರಿದರೆ ಸುಖವಲ್ಲವೆ?

ಆದರೆ ಒಂದು ರೀತಿಯಿಂದ ಬೆಳಿಗ್ಗೆ ಆರುಗಂಟೆಗೇ ಸಿಸ್ಟೋಸ್ಕಾಪಿ ಮಾಡಿದ್ದು ಒಳ್ಳೆಯದೇ ಆಯಿತು. ರಾತ್ರಿಯಾಗಿತ್ತು. ಮಾತಾಡಿ ಆಡಿ ಸುಸ್ತಾಗಿದ್ದೆ. ಇನ್ನೇನು ಮಲಗಿಕೊಳ್ಳಬೇಕೆಂದು ಕಣ್ಣು ಮುಚ್ಚಿದೆ. ಅಷ್ಟರಲ್ಲಿ ಇಬ್ಬರು ವಾರ್ಡ್ ಬಾಯ್ ಗಳು ಕೈಯಲ್ಲಿ ಸೋಪು ಮತ್ತು ರೇಜರ್ ಹಿಡಿದು ಬಂದು “ಸಾರ್ ನಿಮ್ಮನ್ನು ಆಪರೇಷನ್ ಗೆ ರೆಡಿ ಮಾಡಬೇಕು” ಎಂದರು.

ನಿಧಾನವಾಗಿ ಕಣ್ಣುಬಿಟ್ಟೆ. ವಾರ್ಡ್ ಬಾಯ್ ಪುಟ್ಟರಾಜು ಮತ್ತು ವಾರ್ಡ್ ಬಾಯ್ ರಮೇಶ್ ನನ್ನನ್ನು ಅತ್ಯಂತ ನಿರ್ಭಾವುಕರಾಗಿ ನೋಡುತ್ತ ನಿಂತಿದ್ದರು.

(ನಾಳೆ : ಬೇರೆಯವರ ಮುಂದೆ ಬತ್ತಲಾಗಿ ಮಲಗಿಕೊಳ್ಳುವುದಿದೆಯಲ್ಲ….)

Older Entries

Follow

Get every new post delivered to your Inbox.

Join 2,048 other followers

%d bloggers like this: