ಕ್ಯಾಮೆರಾ ಕಂಡೊಡನೆ ಶೋಕ ನಾಪತ್ತೆ

2 Comments

speak

ಡಾ. ರಾಜ್ ನಿಧನರಾಗಿ ಒಂದು ವರ್ಷವಾಗಿತ್ತು. ಮೊದಲ ಪುಣ್ಯತಿಥಿಯ ಮುನ್ನಾದಿನ ಕರ್ಟನ್ ರೇಸರ್ ಸ್ಟೋರಿ ಮಾಡಲು ರಾಜ್ ಸಮಾಧಿಗೆ ತೆರಳಿದ್ದೆ. ಸಮಾಧಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಯತಿರಾಜ್ ಎಂದಿನಂತೆ ರಾಜ್ಯದ ವಿವಿಧ ಕಡೆಗಳಿಂದ ಬರುತ್ತಿರುವ ಜನತೆ, ಅಂಕಿ-ಸಂಖ್ಯೆ, ಸಮಾಧಿಗೆ ಇನ್ನೂ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಹೀಗೆ ಮಾತನಾಡುತ್ತ ಯತಿರಾಜ್, “ಸುಘೋಷ್, ಕಳೆದ ಒಂದು ತಿಂಗಳ ಹಿಂದೆ ಕೋಲಾರದಿಂದ ಒಬ್ಬ ಮನುಷ್ಯ ಬಂದಿದ್ದಾನೆ. ಹಳದಿ-ಕೆಂಪು ಬಣ್ಣದ ಸೈಕಲ್ ತುಳಿಯುತ್ತ ಇಲ್ಲೇ ಸಮಾಧಿಯ ಬಳಿಯೇ ಸುತ್ತಾಡುತ್ತಿರುತ್ತಾನೆ. ಡಾ. ರಾಜ್ ಅಭಿಮಾನಿಯಂತೆ. ಅವರ ಎಲ್ಲ ಚಿತ್ರಗಳನ್ನೂ ನೋಡಿದ್ದಾನಂತೆ. ಆದರೆ ಅವರು ತೀರಿಕೊಂಡಾಗಿನಿಂದ ಮನಸ್ಸಿಗೆ ತೀರ ನೋವಾಗಿ ಅದರಿಂದ ಹೊರಬರಲಾರದೆ ಮೌನವೃತ ಕೈಗೊಂಡಿದ್ದಾನಂತೆ. ಹೀಗೆ ಮೌನವೃತ ಕೈಗೊಳ್ಳುವದರ ಬದಲು ಅಣ್ಣಾವ್ರ ನೆನಪಿನಲ್ಲಿ ಸಮಾಜಕ್ಕೆ ಉಪಯೋಗವಾಗುವಂತಹದ್ದೇನಾದರೂ ಮಾಡು ಎಂದರೆ ಕೇಳಲೊಲ್ಲ. ಅವನ ಮೇಲೆ ಸ್ಟೋರಿ ಮಾಡಬಹುದು” ಎಂದರು. ಎಲಾ..ಎಲಾ…ಡಾ. ರಾಜ್ ತೀರಿಕೊಂಡಿದ್ದಕ್ಕೆ ಈ ಪಾರ್ಟಿ ಮೌನವೃತ ಮಾಡುತ್ತಿದ್ದಾನಲ್ಲ. ‘ಒಳ್ಳೆ’ ಸ್ಟೋರಿ ಮಾಡಬೇಕು ಎಂದುಕೊಂಡು ಆತನನ್ನು ಕರೆಸಿದೆ. ಕ್ಯಾಮೆರಾಮನ್ ಗೆ ಸ್ಟೋರಿ ಬ್ರೀಫ್ ಮಾಡಿ ಆತ ಸಮಾಧಿಯ ಬಳಿ ಸೈಕಲ್ ನಡೆಸುವುದು, ನಡೆದುಕೊಂಡು ಬರುವುದು, ಸಮಾಧಿ ಬಳಿ ಅಣ್ಣಾವ್ರ ಭಾವಚಿತ್ರವನ್ನು ನೋಡುತ್ತ ಜೋಲು ಮುಖ ಹಾಕಿಕೊಂಡು ಕುಳಿತಿರುವುದು ಹೀಗೆ ಹಲವು ಶಾಟ್ ಗಳನ್ನು ತೆಗೆಸಿಕೊಂಡೆ. ಸರಿ ಬೈಟ್ ಗಾಗಿ ನಿಂತುಕೊಂಡಾಗಲೇ ಸಮಸ್ಯೆಯಾಗಿದ್ದು. ಪಾರ್ಟಿ ಮೌನವೃತಧಾರಿ. ಹಾಗಾದರೆ ಬೈಟ್ ಹೇಗೆ ತೆಗೆಯುವುದು. ಇದಕ್ಕೆ ಮತ್ತೆ ಯತಿರಾಜನೇ ಮಧ್ಯಸ್ಥಿಕೆ ವಹಿಸಿದ. ಆತನನ್ನೂ, ಯತಿರಾಜ್ ನನ್ನು ನಿಲ್ಲಿಸಿ ಡಬಲ್ ಫ್ರೇಮ್ ಇಡಲು ಹೇಳಿದೆ. ನಾನು ಪ್ರಶ್ನೆ ಕೇಳುವುದು, ಮೌನವೃತಧಾರಿ ಕೈಸನ್ನೆ, ಬಾಯಿ ಸನ್ನೆ ಮಾಡುವುದು, ಯತಿರಾಜ್ ಅದನ್ನು ಅರ್ಥಮಾಡಿಕೊಂಡು ಮಾತನಾಡುವುದು ಹೀಗೆ ಸಾಗಿತ್ತು ನಮ್ಮ ಬೈಟ್ ನ ವೈಖರಿ. ನಾನು ಕೇಳಿದ್ದಕ್ಕೆ ಆ ಪಾರ್ಟಿ ಏನೇನೋ ಕೈಸನ್ನೆ ಮಾಡುತ್ತಿದ್ದ. ಅದು ಯತಿರಾಜನಿಗೂ ಎಷ್ಟು ಅರ್ಥವಾಗುತ್ತಿತ್ತೋ ಗೊತ್ತಿಲ್ಲ. ಆತನಿಗೆ ಅರ್ಥವಾಗಿದ್ದನ್ನು ಆತ ಬಂದಷ್ಟು ಹೇಳುತ್ತಿದ್ದ. ಈ ತಮಾಷೆ ನೋಡುತ್ತಿದ್ದ ಜನ ಸುತ್ತಲೂ ಜಮಾಯಿಸಿದ್ದರು. ನಂತರ ಅದ್ಯಾಕೋ ಆಸಾಮಿಗೆ ಕ್ಯಾಮೆರ ಮುಂದೆ ಹೀಗೆಲ್ಲ ಮಾಡುವುದು ತೀರ ಬೇಜಾರು ಎನಿಸಿರಬೇಕು. ಒಂದು ಸಂದರ್ಭದಲ್ಲಿ ತಾನು ಮಾಡಿದ ಕೈಸನ್ನೆಯನ್ನು ಯತಿ, ಸರಿಯಾಗಿ ಇಂಟಪ್ರಿಟ್ ಮಾಡುತ್ತಿಲ್ಲ ಎಂದು ಬೇಸರಿಸಿ ಧಡಾರ್ ಎಂದು ಮಾತನಾಡಲು ಆರಂಭಿಸಿಬಿಟ್ಟ. ಹ್ಹೆ..ಹ್ಹೆ..ಹ್ಹೆ….ಎಂದು ಮೊದಲು ನನ್ನ ಕ್ಯಾಮರಾಮನ್ ನಗಲಾರಂಭಿಸುತ್ತಿದ್ದಂತೆ ಸುತ್ತಲಿದ್ದ ಜನ ಹೋ…ಎಂದು ಕಿರುಚಿದರು. ನನಗೆ ಏನೂ ಮಾಡಲು ತೋಚದೆ, ರಾಜ್ ಅಭಿಮಾನಿ ಮೌನವೃತಧಾರಿಯಾದ ಸ್ಟೋರಿಗೆ ಎಳ್ಳು ನೀರು ಬಿಟ್ಟು ಕಾರ್ ಏರಿದೆ. ಅಣ್ಣಾವ್ರ ಹೆಸರಿನಲ್ಲಿ ಏನೆನೆಲ್ಲ ಮಾಡುತ್ತಾರೆ ಅಲ್ವಾ?

ಹುಡುಗನ ಬದುಕಿನ ಪುಟಗಳು…

2 Comments

100_1778

ಗಂಟೆಗೆ ಇಂತಿಷ್ಟು ವೇಗದಲ್ಲಿ ಇಂತಿಷ್ಟು ಎತ್ತರದಲ್ಲಿ ಹಾರುತ್ತಿರುವ ವಿಮಾನದಿಂದ ಇಂತಿಷ್ಟು ಭಾರದ ಕಲ್ಲನ್ನು ಎಸೆದರೆ ಅದು ಭೂಮಿಗೆ ಬೀಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬತಹ ಭೌತಶಾಸ್ತ್ರದ ಪ್ರಶ್ನೆಗಳು ನನ್ನ ಭೌತಿಕವನ್ನೇ ಅಲ್ಲಾಡಿಸಿದ್ದ ಸಮಯ. ಬಯಾಲಜಿ, ಗಣಿತ, ಕೆಮಿಸ್ಟ್ರಿಯಲ್ಲಿ ಹಿಡಿತವಿತ್ತಾದ್ದರೂ ನನ್ನ ನೈಜ ಬದುಕಿಗೆ ಜೀವಮಾನವಿಡಿ ಎಳ್ಳಷ್ಟೂ ಸಂಬಂಧವಿರದ ಗಣಿತದ ಸಮಸ್ಯೆಗಳನ್ನೂ, ರಸಾಯನಶಾಸ್ತ್ರದ ಸೂತ್ರಗಳನ್ನು ಅಧ್ಯಯನ ಮಾಡುವುದರಲ್ಲಿ ಯಾವುದೇ ಒಲವಿರಲಿಲ್ಲ. ನಾಟಕ, ಏಕಪಾತ್ರಾಭಿನಯ, ಹಾಡು, ನೃತ್ಯ, ಆಧ್ಯಾತ್ಮ, ಚರ್ಚೆ/ಭಾಷಣ ಸ್ಪರ್ಧೆ, ಸ್ಕೇಟಿಂಗ್, ಟ್ರೆಕ್ಕಿಂಗ್, ಸೈಕ್ಲಿಂಗ್, ಪ್ಲಾಂಚೆಟ್,  ಹೀಗೆ ಛಪ್ಪನ್ನೈವತ್ತಾರು ಹವ್ಯಾಸಗಳು ಮಾತ್ರ ಎರ್ರಾಬಿರ್ರಿ ಮೈದುಂಬಿಕೊಂಡಿದ್ದವು. ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡು ಇದನ್ನೆಲ್ಲ ಮೇಂಟೇನ್ ಮಾಡುವುದು, ರಾಜಕಾರಣಿಯಾಗಿದ್ದು ಪ್ರಾಮಾಣಿಕನಾಗಿರುವುದಷ್ಟೇ ಕಷ್ಟವಾಗಿತ್ತು. ಇಂತಿರುವಾಗ, ಕಾಲನೆಂಬ ಕಾಲನು ಕೊಂಚವೂ ತಡಮಾಡದೆ, ಏಪ್ರಿಲ್ ತಿಂಗಳನ್ನು ಧುತ್ತಂತ ಎದುರಿಗಿಟ್ಟು, ‘ಪರೀಕ್ಷೆ ಎದುರಿಸು ಮಗನೆ’ ಎಂದುಬಿಟ್ಟನು.

ಪರೀಕ್ಷೆ ಎದುರಿಸಿದ್ದರೆ ವಿದ್ಯಾದೇವತೆ ಸರಸ್ವತಿಯಾಣೆಗೂ ದಡ ಸೇರುವುದು ಕಷ್ಟವೇನಾಗಿರಲಿಲ್ಲ. ಆದರೆ, ಇನ್ನೊಂದು ವರ್ಷ ಅದೇ ಸೈನ್ಸನ್ನು ಓದುವಷ್ಟು ತಾಳ್ಮೆ, ಆಸಕ್ತಿ ಸೂಜಿಮೊನೆಯಷ್ಟೂ ಇರಲಿಲ್ಲ. ಈ ಮಧ್ಯೆ ಬಿಳಿಬಿಳಿ ಬಣ್ಣದ ನಾಜೂಕು ಕಟಿಯ ಕ್ಲಾಸ್ ಮೇಟ್ ಹಾಗೂ ನಾನಾರು, ಎಲ್ಲಿಂದ ಬಂದೆ, ಎಲ್ಲಿ ಹೋಗುವೆ, ಬ್ರಹ್ಮಚರ್ಯವೇ ಜೀವನ, ಮದುವೆಯಾಗುವುದೇ ಮರಣ ಎಂಬ ಆಧ್ಯಾತ್ಮಿಕ ವಿಚಾರಗಳ ನಡುವೆ ನುಜ್ಜುಗುಜ್ಜಾಗಿ ಪರೀಕ್ಷೆ ತಪ್ಪಿಸಿಕೊಳ್ಳಲು ಪರೀಕ್ಷೆಯ ದಿನದಂದು ಪರೀಕ್ಷೆಗೆ ಹೋಗುವುದಾಗಿ ಹೇಳಿ ಅಮ್ಮನಿಗೆ ನಮಸ್ಕರಿಸಿ ಮನೆಯಿಂದ ಎಸ್ಕೇಪ್ ಆಗಿಬಿಟ್ಟೆ.

ಮೇಯಲು ಬಿಟ್ಟ ಎಮ್ಮೆ ಸಂಜೆಯಾಗುತ್ತಿದ್ದಂತೆ ವಿಧೇಯವಾಗಿ ಕೊಟ್ಟಿಗೆಗೆ ಹಿಂತಿರುವಂತೆ ಪ್ರತಿನಿತ್ಯ ಮನೆಗೆ ಹಿಂತಿರುಗುತ್ತಿದ್ದ ನಾನು ರಾತ್ರಿ ಹತ್ತಾದರೂ ಪತ್ತೆಯಾಗದಿದ್ದಾಗ ಅಮ್ಮ ಕಂಗಾಲಾಗಿ ನೆಂಟರಿಷ್ಟರಿಗೆಲ್ಲ ವಿಷಯ ತಿಳಿಸಿ ಎಲ್ಲೆಡೆ ಹುಡುಕಿದ್ದೇ ಹುಡುಕಿದ್ದು. ಅಪ್ಪ ಬೇರೆ, ನನ್ನ ಅಜ್ಜನ ಮನೆಗೆ ಹೋಗಿದ್ದ. ಇತ್ತ ನಾನು ತಲೆಯಲ್ಲಿ ಬಿಲಿಯಾಂತರ ವಿಚಾರಗಳನ್ನು ತುಂಬಿಕೊಂಡು ಬಸ್ ಹತ್ತಿ ಸೀದಾ ಹೋಗಿದ್ದು ನನ್ನ ಅಜ್ಜನ ಮನೆಗೇ. ಅಲ್ಲಾಗಲೇ ಸ್ವಂತ ಕೆಲಸ ಮಾಡಿಕೊಂಡಿದ್ದ ನನ್ನ ಪ್ರೀತಿಯ ಅಣ್ಣ ಹಾಗೂ ವಾತ್ಸಲ್ಯಮಯಿ ಅಪ್ಪ (ಹೌದು. ನನ್ನ ಅಪ್ಪ ನಿಜವಾಗಲೂ ವಾತ್ಸಲ್ಯಮಯಿ) ನನ್ನನ್ನು ರಿಸೀವ್ ಮಾಡಿಕೊಂಡು ಮೊದಲು ಮಾಡಿದ ಕೆಲಸ…..ನನಗೆ ಧೈರ್ಯ ತುಂಬಿದ್ದು.

ಆಕ್ಚುಲಿ, ಸಮಸ್ಯೆಯ ಪ್ರಸವವಾಗಿದ್ದು ಸೈನ್ಸ್ ಆಯ್ದುಕೊಂಡದ್ದರಿಂದ. ಎಲ್ಲರೂ ಮಾಡುವ ತಪ್ಪಿನಂತೆ ನಾನೂ ಗೆಳೆಯರ ಗುಂಪಿನಲ್ಲಿ ಗೋವಿಂದನಾಗಿ, ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲಗಳಲ್ಲಿಯೂ ಯುನಿವರ್ಸಲ್ ಟ್ರೂತ್ ಆಗಿರುವ ವಿಜ್ಞಾನ ಶಾಖೆಯನ್ನು ಆಯ್ದುಕೊಂಡಿರುವವರು ಉತ್ತಮರು, ಕಾಮರ್ಸ್ ಮಧ್ಯಮರು ಹಾಗೂ ಆರ್ಟ್ಸ್ ಅಧಮರು ಎಂಬ ಪ್ರಭಾವಳಿಗೆ ಆಕರ್ಷಿತನಾಗಿ ಸೈನ್ಸ್ ತೆಗೆದುಕೊಂಡಿದ್ದೆ. ಮೊದಲ ಹೊಡೆತ ಅಲ್ಲೇ ಬಿದ್ದಿತ್ತು.

ಮಗನ ಘನಂದಾರಿ ಕೆಲಸ ಅಪ್ಪ-ಅಮ್ಮನಲ್ಲೂ ಆತಂಕ ಉಂಟುಮಾಡಿತ್ತು. ಮುಂದೇನು ಎಂದು ಎಲ್ಲರಲ್ಲಿ ಕೊರೆಯುತ್ತಿದ್ದರೂ, ಯಾರೂ ಕೂಡ ನನ್ನನ್ನು ಪ್ರಶ್ನಿಸುತ್ತಿರಲಿಲ್ಲ.

ಆದರೆ ಮುಂದಿನ ಓದಿನ ದಿಕ್ಕನ್ನು ಸೂಚಿಸಿದ್ದು ನನ್ನದೇ ವಿಜ್ಞಾನ ಕಾಲೇಜಿನ ಪ್ರಿನ್ಸಿಪಾಲ್ ಗಲಗಲಿ ಎಂಬುವವರು. ಅವರ ಸಲಹೆಯಂತೆ ಆರ್ಟ್ಸ್ ಶಾಖೆಗೆ ಮತ್ತೆ ಮೊದಲ ವರ್ಷದಿಂದ ಸೇರಿ ನನ್ನ ಪ್ರಿಯ ವಿಷಯಗಳಾದ ಇತಿಹಾಸ, ಸೈಕಾಲಜಿ, ಲಾಜಿಕ್ ಆಯ್ದುಕೊಂಡು ಶಿಕ್ಷಣ ಮುಂದುವರೆಸಿದೆ. ಪಿಯುಸಿ ಎರಡನೇ ವರ್ಷದಲ್ಲಿ ಕಾಲೇಜಿಗೆ ಎರಡನೇ ರಾಂಕ್ ಗಳಿಸಿದೆ. ಎಂ ಎಸ್ ಡಬ್ಲ್ಯೂ ಆಸಕ್ತಿಯಿಂದ ಓದಿದೆ. ನನ್ನ ಎಲ್ಲ ಹವ್ಯಾಸಗಳನ್ನು ಮುಂದುವರೆಸುವುದೂ ಸಾಧ್ಯವಾಯಿತು. ಇದೀಗ ಉತ್ತರ ಕರ್ನಾಟಕದ ಎನ್ ಜಿ ಓ ಒಂದರಲ್ಲಿ ವ್ಯವಸ್ಥಾಪಕನಾಗಿ ದುಡಿಯುತ್ತ ಹಣ, ಕೀರ್ತಿ ಹಾಗೂ ಮನಸ್ಸಿಗೆ ತೃಪ್ತಿಯನ್ನೂ ಕಂಡುಕೊಂಡಿದ್ದೇನೆ.

‘ಕತೆಯಲ್ಲಿ ಬಾಂದಾತ ಮನೆಗೂ ಬಂದು ಕದ ತಟ್ಟಿದ’

Leave a comment

guhe

(ಯಶವಂತ ಚಿತ್ತಾಲರ ‘ಕಥೆಯಾದಳು ಹುಡುಗಿ’ ಕಥಾಸಂಕಲನದ ‘ಕತೆಯಲ್ಲಿ ಬಾಂದಾತ ಮನೆಗೂ ಬಂದು ಕದ ತಟ್ಟಿದ’ ಕಥೆಯಿಂದ ಆಯ್ದ ಭಾಗ).

ಕತೆ ನಾನೂ ಓದಿದ ನಾಟಕದ್ದೇ. ಬಹುಶಃ ನೋಯಲ್ ಕಾವರ್ಡ್ ನದಿರಬೇಕು ಅನ್ನಿಸಿತು. ಹೆಸರು ಥಟ್ಟನೆ ನೆನಪಾಗಲಿಲ್ಲ. ಅವನೂ ಸ್ಪಷ್ಟಪಡಿಸಲಿಲ್ಲ. ಮಾನವೀಯ ಮುಖಾಮುಖಿಯ ಮೇಲೆ, ನಮ್ಮ ನಿಶ್ಚಯದ ಮೇಲೆ, ಕ್ರಿಯೆಯ ಮೇಲೆ ಪರಿಸರದಲ್ಲಿಯ ಬೆಳಕು ಎಷ್ಟೊಂದು ನಾಟಕೀಯವಾದ ಪ್ರಬಾವ ಬೀರಬಲ್ಲದೆಂಬುದನ್ನು ಅತ್ಯಂತ ಪರಿಣಾಮಕಾರಿಯಾದ ರೀತಿಯಲ್ಲಿ ತೋರಿಸಿಕೊಡುವ ನಾಟಕವದು.

ಒಬ್ಬ ಸೇಲ್ಸ್ ಮನ್ ಹಾಗೂ ಅವನ ಕಂಪನಿಯ ಎಂಡಿ ನಡುವಿನ ಮುಖಾಮುಖಿ ನಾಟಕದ ಕೇಂದ್ರ ಘಟನೆ. ಸೇಲ್ಸ್ ಮನ್ 20 ವರ್ಷಗಳ ದೀರ್ಘಕಾಲ ಈ ಕಂಪನಿಗಾಗಿ ದುಡಿದೂ, ಮ್ಯಾನೇಜಮೆಂಟಿನ ದುರ್ಲಕ್ಷ್ಯಕ್ಕೆ ಗುರಿಯಾಗಿ ನೊಂದವನು. ಆಗಷ್ಟೇ ಎಂಡಿಯ ಸ್ಥಾನಕ್ಕೆ ಬಂದವನು ಇವನ ಬಾಲ್ಯದ ಗೆಳೆಯನಾಗಿಯೂ ಅನೇಕ ವರ್ಷಗಳ ವರೆಗೆ ಇವನೊಡನೆ ಸಂಪರ್ಕ ತಪ್ಪಿದವನು. ಸಂದರ್ಶನ ಆರಂಭವಾದಾಗ ಅತ್ಯಾಧುನಿಕ ಬೆಡಗಿನ, ಸಜ್ಜಿಕೆಯಿದ್ದ ಎಂಡಿಯ ಕ್ಯಾಬಿನ್ ನಲ್ಲಿ ಕಣ್ಣುಕುಕ್ಕಿಸುವ, ಮನಸ್ಸಿಗೆ ದಿಗ್ಭ್ರಮೆ ಹಿಡಿಸುವ ವಿದ್ಯುದ್ದೀಪಗಳ ಬೆಳಕು ಇರುತ್ತದೆ. ತನ್ನ ಭಡತಿಯ ಬಗ್ಗೆ ಮಾತನಾಡುವ ಉದ್ದೇಶದಿಂದ ಹೋದ ಸೇಲ್ಸ್ ಮನ್, ಎಂಡಿಗೆ ತನ್ನ ಗುರುತೇ ಸಿಕ್ಕಿಲ್ಲವೆಂದು ತಿಳಿದಾಗ ಅಧೀರನಾಗುತ್ತಾನೆ. ತಮ್ಮ ಚಿಕ್ಕಂದಿನ ಅತ್ಯಂತ ಆತ್ಮೀಯ ಕ್ಷಣಗಳ ನೆನಪು ಮಾಡಿಕೊಟ್ಟರೂ, ತಾನು ಅವನಿಗೆ ಹೆಚ್ಚು ಪರಕೀಯನಾಗುತ್ತಿದ್ದುದನ್ನು ಕಂಡು ಹತಾಶನಾಗುತ್ತಾನೆ. ಕ್ಯಾಬಿನ್ ಬಿಟ್ಟು ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಕಟ್ಟಡದ ಇಲೆಕ್ಟ್ರಿಕ್ ಫ್ಯೂಸ್ ಹಾರಿ ಹೋಗಿ ಕ್ಯಾಬಿನ್ ಕತ್ತಲೆಯಲ್ಲಿ ಮುಳುಗತ್ತದೆ. ಎಂಡಿಯ ಸೆಕ್ರೆಟರಿ ಒಳಗೆ ಬಂದು ಇಂತಹ ತುರ್ತಿನ ಸನ್ನಿವೇಶಗಳಿಗಾಗಿಯೇ ಸಿದ್ಧಮಾಡಿ ಇಟ್ಟಂತಿದ್ದ ಎರಡು ದೊಡ್ಡ ಮೇಣದ ಬತ್ತಿಗಳನ್ನು ಮೇಜಿನ ಮೇಲಿಟ್ಟು ಹೋಗುತ್ತಾಳೆ. ಕೋಣೆಯಲ್ಲಿ ಆಗ ಹರಡಿದ ಮೇಣದ ಬತ್ತಿಯ ಮಂದ ಬೆಳಕಿನಲ್ಲಿ ಎಂಡಿ ಒಮ್ಮೆಗೇ ಚೇತರಿಸಿಕೊಂಡವರ ಹಾಗೆ, “ಅರೆ ನೀನು? ಯಾವಾಗ ಬಂದೆ? ಯಾಕೆ ಹೀಗೆ ಮಾತನಾಡದೆ ಕೂತಿದ್ದೀ?” ಎಂದು ಶುರುಮಾಡಿದವರು ಹೊತ್ತು ಹೋದ ಹಾಗೆ ಭಾವನಾವಶರಾಗುತ್ತ ಬಾಲ್ಯದ ಅನೇಕ ಸಂಗತಿಗಳನ್ನು ತಾವೇ ನೆನೆದುಕೊಳ್ಳಲು ತೊಡಗುತ್ತಾರೆ. ಈ ಬದಲಿಗೆ ಕಾರಣವಾಗಿದ್ದು ರೂಮಿನಲ್ಲಿ ಆಗ ನೆಲೆಸಿದ ಮೇಣದ ಬತ್ತಿಯ ಬೆಳಕಾಗಿತ್ತು. ಎಂಡಿ ಅವನ ನೌಕರಿಯ ಬಗ್ಗೆ, ಹೆಂಡತಿಯ ಬಗ್ಗೆ ಮಕ್ಕಳ ಬಗ್ಗೆ ತುಂಬಿದ ಅಂತಃಕರಣದಿಂದ ವಿಚಾರಿಸುತ್ತಾರೆ. ತಾನು ಬಂದ ಉದ್ದೇಶ ಪ್ರಕಟಿಸಲು ಇದೇ ಸರಿಯಾದ ಕ್ಷಣವೆಂದು ಬಗೆದು ಇವನು ಬಾಯಿತೆರೆಯಬೇಕು ಎಂದುಕೊಳ್ಳುವಷ್ಟರಲ್ಲಿ ರೂಮಿನೊಳಗೆ ಮೊದಲಿನ ಹಾಗೆ ಕಣ್ಣುಕುಕ್ಕಿಸುವ ವಿದ್ಯುದ್ದೀಪಗಳು ಝಗ್ ಎಂದು ಬೆಳಗಿಕೊಳ್ಳುತ್ತವೆ.

“ಮುಂದಿನದನ್ನು ನೀವು ಸರಿಯಾಗಿ ಊಹಿಸಿಕೊಳ್ಳಬಲ್ಲಿರಿ ಸರ್” ಎಂದು ಕತೆ ಮುಗಿಸಿದ ವೋಮ, ನನ್ನಲ್ಲಿ ವಿಸ್ಮಯದಂತೆ ಒಂದು ಬಗೆಯ ಅಸಮಧಾನಕ್ಕೂ ಕಾರಣವಾಗಹತ್ತಿದ್ದ.

ಟೇಕನ್ ಫಾರ್ ಗ್ರಾಂಟೇಡ್

Leave a comment

111

ಲಂಬೋದರ ಸಹೋದ್ಯೋಗಿಗಳೊಂದಿಗೆ ಉತ್ತರ ಕರ್ನಾಟಕದ ಟೂರ್ ಗೆ ಹೋಗಿದ್ದ. ಬೆಳಗಾವ್ ಕುಂದಾ, ಧಾರವಾಡ ಪೇಡಾ, ಗೋಕಾರ್ ಕರದಂಟು ಹೀಗೆ ಹೋದ ಕಡೆಯಲ್ಲೆಲ್ಲ ಏನಾದರೊಂದು ಖರೀದಿಸುತ್ತಿದ್ದ. ಇಳಕಲ್ ಗೆ ಬಂದಾಗ ಅಲ್ಲಿಯ ಸೀರೆ ಫೇಮಸ್ ಎಂದು ಗೊತ್ತಾಯಿತು. ಹೆಂಡತಿಗೆ ಸೀರೆ ಖರೀದಿಸೋಣ ಎಂದುಕೊಂಡ ಲಂಬೋದರ, ಆದರೆ ತನ್ನ ಹೆಂಡತಿ ಸೀರೆ ಉಡುವುದನ್ನು ಬಿಟ್ಟು ವರ್ಷಗಳೇ ಕಳೆದಿವೆ. ಸೀರೆ ಎಂದರೆ ಆಕೆಗೆ ಅಷ್ಟಕಷ್ಟೇ ಎಂಬ ಸತ್ಯ ಹೊಳೆದು ಸೀರೆ ಕೊಳ್ಳಲಿಲ್ಲ.

ಟೂರ್ ಮುಗಿಸಿ ಮನೆಗೆ ಬಂದವನೇ ತಾನು ಕೊಂಡು ತಂದ ಸಾಮಾನುಗಳನ್ನೆಲ್ಲ ಮನೆಯವರೆದುರು ಪ್ರದರ್ಶಿಸಿದ.

“ಬೇಡ ಬೇಡ ಅಂತ ಹೇಳಿದ್ರೂ ಯಾಕೆ ಇಷ್ಟೆಲ್ಲಾ ಸಾಮಾನು ತರಕ್ಕೊದ್ರಿ….” ಅಂತ ಮಿಸೆಸ್ ಲಂಬೋದರ ಸಿಡಿಮಿಡಿಗೊಂಡಳು.

ಆಗಷ್ಟೇ ದೇವಸ್ಥಾನದಿಂದ ಮರಳಿದ ಲಂಬೋದರನ ತಾಯಿ, “ಲಂಬೋದರ, ಇಳಕಲ್ ಸೀರೆ ತರಲು ಹೇಳಿದ್ದನೆಲ್ಲ….. ತಂದಿದ್ದೀಯಾ?” ಎಂದು ಕೇಳಿದಳು.

Follow

Get every new post delivered to your Inbox.

Join 2,051 other followers

%d bloggers like this: