ಕನ್ನಡದ ಹೆಮ್ಮೆಯ ವಾರಪತ್ರಿಕೆ ಸುಧಾದ ಜಾಣರ ಪೆಟ್ಟಿಗೆಯ ಪ್ರತಿಸ್ಪಂದನದಲ್ಲಿ ನನ್ನ ಸಂದರ್ಶನ ಪ್ರಕಟಕವಾಗಿದೆ.
ಕನ್ನಡದ ಹೆಮ್ಮೆಯ ವಾರಪತ್ರಿಕೆ ಸುಧಾದ ಜಾಣರ ಪೆಟ್ಟಿಗೆಯ ಪ್ರತಿಸ್ಪಂದನದಲ್ಲಿ ನನ್ನ ಸಂದರ್ಶನ ಪ್ರಕಟಕವಾಗಿದೆ.
ಮುಕ್ತ ಮುಕ್ತದಲ್ಲಿ ನಟನಾದ ಬಳಿಕ ಆಗಿರುವ ಅನುಭವಗಳಲ್ಲಿ ಇದು ಈವರೆಗಿನ ಅತ್ಯಂತ ಕ್ಲಾಸಿಕ್ ಅನುಭವ. ಜನರು ಈ ಧಾರಾವಾಹಿಯನ್ನು ಹೇಗೆಲ್ಲ ನೋಡುತ್ತಾರೆ, ಎಷ್ಟು ಆಸಕ್ತಿಯಿಂದ ವೀಕ್ಷಿಸುತ್ತಾರೆ, ಈ ಧಾರಾವಾಹಿಯಿಂದ ಏನೆಲ್ಲ ಬಯಸುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ.
ಧರ್ಮ ಭಾರತಿ ಎಂಬ ಮ್ಯಾಗಝೀನ್ ನಲ್ಲಿ ನಾನು ಬರೆದ ಲೇಖನವೊಂದಕ್ಕೆ ಸಂಭಾವನೆಯನ್ನು ಎಂಓ ಮಾಡಲಾಗಿತ್ತು. ಅದನ್ನು ಹಿಡಿದುಕೊಂಡು ಅಂಚೆಯಣ್ಣ ನನ್ನ ಮನೆ ಬಾಗಿಲು ತಟ್ಟಿದರು. ಬಾಗಿಲು ತೆರೆಯುತ್ತಲೇ ನನ್ನನ್ನು ನೋಡಿದವರೆ ಎಕ್ಸೈಟ್ ಆಗಿ “ಓಹ್..ಸಾರ್ ನೀವಾ…” ಎಂದು ಮಾತಿಗಾರಂಭಿಸಿ ಸುಮಾರು ಹದಿನೈದು ನಿಮಿಷಗಳ ಕಾಲ ಹಾಗೆಯೇ ಮಾತಾಡುತ್ತ ನಿಂತುಬಿಟ್ಟರು.
ಚಿಕ್ಕವನಿದ್ದಾಗಿನಿಂದಲೂ ನನಗೆ ಅಂಚೆಯಣ್ಣ ಅಂದರೆ ಎಲ್ಲಿಲ್ಲದ ಪ್ರೀತಿ. ಅಮ್ಮನಿಗೆ ಪತ್ರ ಬರೆಯುವ ಹವ್ಯಾಸ ತುಂಬಾ ಇತ್ತು. ಅದು ನನಗೂ ಹರಿದು ಬಂತು. ಹೊಸವರ್ಷಕ್ಕೆ ದೀಪಾವಳಿಗೆ ಗ್ರೀಟಿಂಗ್ ಕಾರ್ಡ್ ಕಳಿಸುವುದು, ಶಾಲೆಯ ಫಲಿತಾಂಶ ಬಂದ ಮೇಲೆ ಅದನ್ನು ನೆಂಟರಿಷ್ಟರಿಗೆ ತಿಳಿಸುವುದು ಹೀಗೆಲ್ಲ ಮೊದಲು ತುಂಬಾ ಪತ್ರ ಬರೆಯುತ್ತಿದ್ದೆ. ಆದರೆ ಕಳೆದ ಹಲವಾರು ವರ್ಷಗಳಿಂದ ಒಂದೇ ಒಂದು ಪತ್ರ ಬರೆದಿಲ್ಲ. ಕಾರಣ ಸುಲಭ. ಮೊಬೈಲ್ ಬಂದಿದೆ ಅದಕ್ಕೆ. ಇರಲಿ.
ಧಾರಾವಾಹಿ, ಪಾತ್ರಗಳು, ಕಂಟೆಂಟ್ ಎಲ್ಲವನ್ನು ಮಾತನಾಡಿದ ಬಳಿಕ ಅಂಚೆಯಣ್ಣ ಹೇಳಿದರು.
“ಸರ್ ನಿಮಗೊಂದು ರಿಕ್ವೆಸ್ಟ್ ಮಾಡ್ಕೋತಿನಿ. ಬೇಜಾರು ಮಾಡ್ಕೋಬೇಡಿ. ದಯವಿಟ್ಟು ಇದನ್ನ ಸೀತಾರಾಮ್ ಸಾರ್ ಅವರಿಗೂ ಹೇಳಿ” ಅಂದರು.
“ಪರ್ವಾಗಿಲ್ಲ ಹೇಳಿ” ಅಂದೆ.
“ಸರ್, ನೋಡಿ ನಮ್ಮದು ತುಂಬಾ ಹಳೆಯ ಡಿಪಾರ್ಟಮೆಂಟ್. ನಾವು ಪ್ರಧಾನಿ ಬಳಿಯೂ ಹೋಗುತ್ತೇವೆ. ಬಡವನ ಮನೆಗೂ ಹೋಗುತ್ತೇವೆ. ಆದರೆ ನಮ್ಮ ಕಷ್ಟ ಮಾತ್ರ ಹಾಗೇ ಇದೆ. ನಿಮ್ಮ ಸೀರಿಯಲ್ ನಲ್ಲಿ ಪತ್ರ, ಪಾರ್ಸೆಲ್ ಎಲ್ಲ ಹಿಡ್ಕೊಂಡು ಶಂಕರಮೂರ್ತಿ ಮನೆಗೋ, ನಿಮ್ಮ ಮನೆಗೋ ಬರ್ತಾರಲ್ಲ ಆಗ ಅವರ ಕೈಯಲ್ಲಿ ‘ಪೋಸ್ಟ್’ ಅಂತ ಕೂಗ್ಸಿ ಸಾರ್. ‘ಕೊರಿಯರ್’ ಅಂತ ಬೇಡ” ಅಂದರು.
ಒಂದು ಕ್ಷಣ ನನಗೆ ಏನು ಹೇಳಬೇಕೆಂದು ತೋಚಲಿಲ್ಲ.
“ಖಂಡಿತ ಸೀತಾರಾಮ್ ಸರ್ ಗೆ ಹೇಳುತ್ತೇನೆ” ಅಂದೆ. ಅಂಚೆಯಣ್ಣ ಖುಷಿಯಾಗಿ ಮುಂದಿನ ಮನೆಗೆ ಪೋಸ್ಟ್ ಹಾಕಲು ಹೋದರು. ಸರ್ಕಾರ ಮುಂದಿನ ಅಧಿವೇಶನದಲ್ಲಿ ಅಂಚೆ ಇಲಾಖೆಯನ್ನು ಖಾಸಗಿಯವರ ಕೈಗೆ ಕೊಡುವ ನಿರ್ಧಾರ ಮಾಡಲು ಹೊರಟಿದೆ. ನಮ್ಮ ರಾಜಕಾರಣಿಗಳ ಚರ್ಮ ನಿಜಕ್ಕೂ ದಪ್ಪ ಅಲ್ವಾ?
‘ಮುಕ್ತ ಮುಕ್ತ’ ದ ನನ್ನ ದೇವಾನಂದ ಸ್ವಾಮಿ ಪಾತ್ರ ತೀರ ಮುಗ್ಧ ಹಾಗೂ ಸಾಫ್ಟ್. ಚಿಕ್ಕಂದಿನಿಂದಲೂ ಅಪ್ಪ-ಅಮ್ಮನ ಮಾತುಗಳನ್ನು ಕೇಳಿಕೊಂಡು, ಅದನ್ನು ಶಿರಸಾವಹಿಸುತ್ತ ಬಂದು ಕೊನೆಗೆ ಹೆಂಡತಿ ಹಾಗೂ ಅಪ್ಪನ ನಡುವಿನ ಜಗಳದಿಂದಾಗಿ ನುಜ್ಜುಗುಜ್ಜಾಗುವ ಪಾತ್ರ. ಮದುವೆಯಾದ ಮೇಲೆ “ಕೇವಲ ಹೆಂಡತಿ ಮಾತು ಮಾತ್ರ ಕೇಳಿಕೊಂಡು ಇರುವವ”, “ಹೆಂಡತಿಯ ಗುಲಾಮ” ಅಂತೆಲ್ಲ ಅಪ್ಪನಿಂದ, ತಮ್ಮನಿಂದ ಹೇಳಿಸಿಕೊಳ್ಳುವ ಪಾತ್ರ ಅದು. ಪಾತ್ರದ ಮುಗ್ಧತೆ ಹಾಗೂ ತಾಳ್ಮೆ ಅತಿಯಾಯಿತು ಅಂತ ಅನ್ನಿಸುವಾಗಲೇ ಯಾವುದೋ ಸಂದರ್ಭದಲ್ಲಿ ತನ್ನ ಸ್ವಂತಿಕೆಯನ್ನು ಪ್ರದರ್ಶಿಸಿಬಿಡುತ್ತಾರೆ ದೇವಾನಂದಸ್ವಾಮಿ. ಆದರೆ ನೋಡುವ ಜನರಿಗೆ ಮಾತ್ರ ‘ಅಮ್ಮಾವ್ರ ಗಂಡ’ ಅಂತಲೇ ಅನ್ನಿಸಿದೆ.
ಇಂತಿಪ್ಪ ಸನ್ನಿವೇಶದಲ್ಲಿ ಮೊನ್ನೆ ವಿಜಯನಗರ ಬಿಂಬ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸಿತ್ತು. 7 ರಿಂದ 14 ವರ್ಷದ ಸುಮಾರು 80 ಜನ ಮಕ್ಕಳಿದ್ದರು. ಜಿ. ಎನ್. ಮೋಹನ್ ಅವರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಪತ್ರಿಕೆ ಹಾಗೂ ಬ್ಲಾಗಿಂಗ್ ಕುರಿತು ನಾನು ಕಾರ್ಯಾಗಾರ ನಡೆಸಿಕೊಡಬೇಕಿತ್ತು. ನಾನು ಮಕ್ಕಳ ನಡುವೆ ಕಾಲಿಡುತ್ತಲೇ, ಗುಸುಗುಸು ಪಿಸುಪಿಸು ಶುರುವಾಯಿತು. ಮಕ್ಕಳ ನಡುವೆ ಮುಕ್ತ ಮುಕ್ತ, ದೇವಾನಂದ, ಅಂತೆಲ್ಲ ಹೆಸರುಗಳು ಓಡಾಡತೊಡಗಿದವು. ಆದರೆ ನನ್ನ ಹೆಂಡತಿಯ ಹೆಸರು ಮಾತ್ರ ಮಕ್ಕಳಿಗೆ ನೆನಪಿಗೆ ಬರಲೊಲ್ಲದು. ಕೊನೆಗೆ ಸುಮಾರು 10 ವರ್ಷದ ಹುಡುಗಿಯೊಬ್ಬಳು ಬಂದು ಮುದ್ದು ಮುದ್ದಾಗಿ ಕೇಳಿದಳು, “ಹೇಯ್…ಯೂ….ದಾಟ್ ಗರ್ಲ್ಸ್ ಹಸ್ಬೆಂಡ್ ನೋ….” ಅಂತ.
ಈಗ ಹೇಳಿ ನಾನು ಅಮ್ಮಾವ್ರ ಗಂಡ ತಾನೆ?
‘ಮುಕ್ತ ಮುಕ್ತ’ದಲ್ಲಿ ನಟಿಸುತ್ತಿರುವ ಈ ಸಂದರ್ಭದಲ್ಲಿ ಜನರ ಮಧ್ಯೆ ತಿರುಗಾಡುವಾಗ ನಡೆಯುವ ಸ್ವಾರಸ್ಯಕರ ಘಟನೆಗಳನ್ನು ಆಗಾಗ ಬರೆಯುತ್ತಿದ್ದೆನೆ. ಮೊನ್ನೆ ನಮ್ಮ ಮನೆ ಸಮೀಪದ ಪಾರ್ಕ್ ನಲ್ಲಿ ನಡೆದ ಘಟನೆಯೊಂದು ಹೀಗಿದೆ.
ಸಾಮಾನ್ಯವಾಗಿ ಮಕ್ಕಳು ಹಾಗೂ ಮಹಿಳೆಯರು ‘ಮುಕ್ತ ಮುಕ್ತ’ ಧಾರಾವಾಹಿಯ ವಿಶೇಷ ಅಭಿಮಾನಿಗಳು. 2 ವರ್ಷದ ಮಕ್ಕಳೂ ಮುಕ್ತ ಮುಕ್ತ ಟೈಟಲ್ ಸಾಂಗ್ ಬಂದಾಕ್ಷಣ ತದೇಕಚಿತ್ತರಾಗಿ ನೋಡುತ್ತಾರೆ ಎಂದು ನನಗೆ ಅನೇಕರು ಹೇಳಿದ್ದಾರೆ. ಇನ್ನು ಮಹಿಳೆಯರಂತೂ ಸರಿಯೇ ಸರಿ. ಮನೆಯ ಸಮೀಪದ ಪಾರ್ಕ್ ಗೆ ಮಗ ಉದಾತ್ತನೊಂದಿಗೆ ಹೋಗಿದ್ದೆ. ಪಾರ್ಕ್ ಪ್ರವೇಶಿಸಿದಾಕ್ಷಣ ದುರುಗುಟ್ಟಿ ನೋಡುವಿಕೆ ಆರಂಭವಾಯಿತು. ನನಗಿದು ಸಾಮಾನ್ಯ. ಉದಾತ್ತನ್ನು ಪಾರ್ಕ್ ನಲ್ಲಿದ್ದ ಜಾರುಗುಂಡಿಯ ಮೇಲೆ ಆಡಿಸತೊಡಗಿದೆ. ಅಲ್ಲಿ ವಿವಿಧ ವಯೋಮಾನದ ಹಲವಾರು ಮಕ್ಕಳು ಕೂಡ ಆಡುತ್ತಿದ್ದರು. ಕೆಲ ಕ್ಷಣ ಕಳೆದ ಬಳಿಕ ಮಹಿಳೆಯೊಬ್ಬರು ನನ್ನ ಬಳಿ ಬಂದು “ಸಾರ್ ನೀವು ದೇವಾನಂದ ಸ್ವಾಮಿ ಅಲ್ವಾ?” ಎಂದರು. “ಹೌದು” ಎಂದು ತಲೆಯಾಡಿಸಿದೆ. “ನಿಮ್ಮ ಆಕ್ಟಿಂಗ್ ತುಂಬಾ ಚೆನ್ನಾಗಿದೆ ಸಾರ್” ಎಂದು ಮಾತಿಗಾರಂಭಿಸದರು. ಟಿಎನ್ಎಸ್ ನಿರ್ದೇಶನ, ನಿವೇದಿತಾಳ ತನ್ಮಯತೆ, ಶಾರದಮ್ಮನ ವಾಹ್ ಅನ್ನಿಸುವಂತಹ ನಟನೆ, ಮಧುಸೂದನ್ ನ ಮ್ಯಾನರಿಸಂ ಎಲ್ಲದರ ಬಗ್ಗೆ ಮಾತುಕತೆ ಸಾಗುತ್ತಿತ್ತು. ಈ ಮಾತುಕತೆ ನಡೆಯುವಾಗ ನನ್ನ ಪಕ್ಕದಲ್ಲಿ ಹುಡುಗನೊಬ್ಬ ಬಂದು ನಿಂತುಕೊಂಡಿದ್ದ. ನನ್ನ ಅಭಿಮಾನಿಯಿರಬೇಕು ಎಂದು ನಾನು ಕೂಡ ಸುಮ್ಮನಿದ್ದೆ. ಆತನನ್ನು ಮಾತನಾಡಿಸುವ ಗೋಜಿಗೂ ಹೋಗಲಿಲ್ಲ. ಆದರೆ ಆ ಹುಡುಗನಲ್ಲಿ ಏನೋ ಒಂದು ರೀತಿಯ ಚಡಪಡಿಕೆ ಇರುವುದನ್ನು ಗುರುತಿಸಿದೆ. ಬಹುಶಃ ಈತನೂ ನನ್ನನ್ನು ಮಾತನಾಡಿಸಲು ಹವಣಿಸುತ್ತಿರಬೇಕು ಎಂದುಕೊಂಡೆ. ನನ್ನ ಹಾಗೂ ಆ ಮಹಿಳೆಯ ಮಾತು ಮುಂದುವರೆಯುತ್ತಿತ್ತು. ಹುಡುಗನ ಚಡಪಡಿಕೆ ಹೆಚ್ಚುತ್ತಿತ್ತು.
ಹುಡುಗ ಕೊನೆಗೆ ನಮ್ಮಿಬ್ಬರ ಮಾತನ್ನು ತುಂಡರಿಸಿ ಕೇಳಿಯೇ ಬಿಟ್ಟ, “ಅಂಕಲ್, ಸ್ವಲ್ಪ ಆ ಕಡೆ ನಿಂತು ಮಾತಾಡ್ತೀರಾ? ನಮಗಿಲ್ಲಿ ಆಟ ಆಡ್ಬೇಕು”
ಹೇಗಿದೆ ಚಮಕ್?
ಮುಕ್ತ ಮುಕ್ತ ಶೂಟಿಂಗ್ ಸಂದರ್ಭದಲ್ಲಿನ ಫೋಟೋ ಇದು. ನಿವೇದಿತಾ (ಜಯಶ್ರೀ) ಕ್ಸೋಸ್ ಅಪ್ ನಲ್ಲಿ ಡೈಲಾಗ್ ಹೇಳುತ್ತಿದ್ದಾರೆ. ನಾನು ಮುಂದಿನ ಡೈಲಾಗ್ ಗೆ ಲೈನ್ಸ್ ನೋಡಿಕೊಳ್ಳುತ್ತಿದ್ದೇನೆ….
ಮೊನ್ನೆ ಮುಕ್ತ ಮುಕ್ತದ ಔಟ್ ಡೋರ್ ಶೂಟ್ ಇತ್ತು. ರಾತ್ರಿ ಎಚ್ ಎಂ ಐ ಲೈಟ್ ಹಾಕಿ, ಅದಕ್ಕೆ ಗ್ರಿಡ್ ಹಾಕಿದಾಗ ನನ್ನ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ.
ಈ ಬಾರಿಯ ಸುಧಾ ದಲ್ಲಿ ಮುಕ್ತ ಮುಕ್ತ ಧಾರಾವಾಹಿಯಲ್ಲಿ ನನ್ನ ಅತ್ತೆ ಪಾತ್ರ ಮಾಡುತ್ತಿರುವ ವಿದ್ಯಾ ಮೂರ್ತಿ ಅವರ ಸಂದರ್ಶನ ಪ್ರಕಟವಾಗಿದೆ.
ಮೊನ್ನೆ ನಾನು ಹಾಗೂ ನಮ್ಮ ಲೈಟ್ ಆಫೀಸರ್ (ಶೂಟಿಂಗ್ ನಲ್ಲಿ ಲೈಟ್ ನೋಡಿಕೊಳ್ಳುವವರು) ನಡುವೆ ನಡೆದ ಸಂಭಾಷಣೆ.
“ಸಾ, ನಮ್ಮ ಊರ್ ಕಡೆ ಜಾತ್ರೆ ಐತೆ. ನೀವ್ ಬರ್ಬೇಕು ಸಾ”
“ಹೌದೇನೋ? ಎಲ್ಲಿ ಜಾತ್ರೆ?”
“ನಮ್ ಊರಲ್ಲಿ ಸಾ. ನೀವ್ ಮಂಡ್ಯ ತಾವ ಬಂದು ಪೋನ್ ಹಾಕಿ. ನಾ ಬಂದ್ ಕರ್ಕಂಡ್ ವೋಯ್ತಿನಿ”
“ಟ್ರೈ ಮಾಡ್ತೀನಿ ಕಣೋ. ಟೈಮ್ ಆದ್ರೆ ಖಂಡಿತ ಬರ್ತಿನಿ. ಆದ್ರೆ ನಾ ಬಂದೇ ಬರ್ತಿನಿ ಅಂತ ಕಾಯ್ತಾ ಕೂರ್ಬೇಡ”
“ಸಾಕು ಬಿಡಿ ಸಾ. ನೀವು ಅಂಗ್ ಹೇಳಿದ್ರಲ್ಲ….ಸಾಕು. ಲಾಸ್ಟ್ ಟೈಮ್ ಇದೇ ಟೈಮಲ್ಲಿ ಸಾ ಇವ್ರೆಲ್ಲ ಬರ್ತಿನಿ ಅಂತ ಯೋಳಿ ನನ್ಮಕ್ಳು ಕೈಕೊಟ್ ಬಿಟ್ರು?”
“ಯಾಕೆ ಏನಾಯ್ತು?”
“ನೋಡಿ ಸಾ ಎಲ್ರಿಗೂ ಇನ್ವಿಟೇಸನ್ ಕೊಟ್ಟಿದೆ. ನಮ್ ಊರ್ ಕಡೆ ಜಾತ್ರೆ ಬರ್ಲಾ ಎಲ್ಲಾರೂ ಅಂತ. ಎಲ್ಲಾ ನನ್ಮಕ್ಳೂ ವಪ್ಕಂಡಿದ್ರು. ಅವ್ರು ಬತ್ತಾರೆ ಅಂತ ಹೇಳಿ 70 ಕೆಜಿ ಮಟನ್ನು, 40 ಕೆಜಿ ಚಿಕನ್ನು ಪೆಶಲ್ಲಾಗಿ ಮಾಡ್ಸಿದ್ದೆ. ಮೂರು ಟಗರು ಕಡ್ಸಿದ್ದೆ ಸಾ. ಇನ್ನು ಕೆಲವ್ರು ಎಣ್ಣೆ ಗಿರಾಕಿ ಅಂತ ಗೊತ್ತಿತ್ತು. ಅಂಗಾಗಿ 5 ಸಾವಿರ ರೂಪಾಯಿ ಬಾಟ್ಳು ತರ್ಸಿದ್ದೆ. ಇನ್ನೂ ಹುಡ್ರಲ್ವಾ, ಕ್ಯಾಶ್ ಇರಾಕಿಲ್ಲ ಅಂತ ಬೆಂಗ್ಳೂರಿಂದ ನಮ್ ಮಂಡ್ಯಕ್ಕೆ ಮಂಜನ್ ಸುಮೋ ಬುಕ್ ಮಾಡಿ ಅವಂಗ್ ವಂದ್ ಸಾವಿರ್ ರೂಪಾಯಿ ಕೊಟ್ಟಿದ್ದೆ, ಎಲ್ಲಾರ್ನೂವೇ ಕಕ್ಕಂಡ್ ಬಾ ಅಂತ. ನೀವ್ ನಂಬಲ್ಲ ಸಾ….ನನ್ಮಕ್ಳು ವಬ್ರೂ ಬರ್ಲಿಲ್ಲ ಅವತ್ತು. ಎಲ್ಲಾರೂ ಕೈ ಎತ್ತಿ ಬುಟ್ರು. ಎಷ್ಟೋ ಬೇಜಾರಾಗೋಯ್ತು ಅಂದ್ರೆ, ಮಟನ್ನು, ಚಿಕನ್ನು, ಎಣ್ಣೆ ಎಲ್ಲಾ ವಯ್ದು ನಮ್ ಊರ್ ತಾವ ನಾಲೆ ವಳಗ್ ಎಸೆದ್ ಬುಟ್ಟೆ. ಕಾಸ್ ವೋಯ್ತು ಅಂತ ಬೇಜಾರಿಲ್ಲ ಸಾ….ಆದ್ರೆ ಎಲ್ಲಾ ಸೇರ್ಕಂಡು ನನ್ ಮನಸ್ಸು ಮುರುದ್ರು. ಅವತ್ತೇ ಡಿಸೈಡ್ ಮಾಡ್ದೆ. ಯಾವ್ನ್ ಬರ್ತಾನೆ ಅಂತ ಗ್ವತ್ತಿರತ್ತೋ ಅವಂಗಷ್ಟೇಯಾ ಇನ್ವಿಟೇಸನ್ ಕ್ವಡೋದು ಅಂತ. ಈ ಟೈಮ್ ನೀವ್ ಬನ್ನಿ ಸಾ. ಚೆನ್ನಾಗಿರತ್ತೆ. ನಮ್ಮ ಕಬ್ಬಿನ ತ್ವಾಟದಾಗೆ ಕುಂತ್ಕಂಡ್ ಅಂಗೆ ಬಾಡೂಟ, ಎಣ್ಣೆ ಇಳಿಸ್ತಾ ಇದ್ರೆ…ಆಹಾಹಾ…ಏನ್ ಚಂದ ಸಾ…”
ಮೇಕಪ್ ಚಂದ್ರಣ್ಣ ಮುಕ್ತ ಮುಕ್ದದಲ್ಲಿ ನನಗೆ ಮೇಕಪ್ ಮಾಡಿದವರು. ಖ್ಯಾತ ನಟ ಶಂಕರನಾಗ್ ಅವರಿಗೆ ಪರ್ಸನಲ್ ಮೇಕಪ್ ಮನ್ ಆಗಿ ಕೂಡ ಚಂದ್ರಣ್ಣ ಕೆಲಸ ಮಾಡಿದವರು ಎಂದು ಗೊತ್ತಾದಾಗ ಅವರ ಬಗ್ಗೆ ಆಸಕ್ತಿ ಬೆಳೆಯಿತು. ಅವರೊಡನೆ ಮಾತನಾಡುತ್ತಿದ್ದಾಗ ಮತ್ತಷ್ಟು ವಿಷಯಗಳು ಸಂಗ್ರಹವಾದವು. ಹೀಗಾಗಿ ಚಂದ್ರಣ್ಣನ ಕುರಿತು ಲೇಖನ ಬರೆಯಲು ಮುಂದಾದೆ. ನಾನು ಬರೆದ ಲೇಖನ ಈ ಬಾರಿಯ ‘ಚಿತ್ರ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ತಮಗಾಗಿ ಈ ಲೇಖನ….
‘ಮುಕ್ತ ಮುಕ್ತ’ದಲ್ಲಿ ನನ್ನ ‘ವಿಜಯ ಘೋಷ’ ಚ್ಯಾನಲ್ ಉದ್ಧಾಟನೆ ಆಗಿದೆ. ಶೂಟಿಂಗ್ ದಿನದ ಎರಡು ಫೋಟೋಗಳು….
‘ಮುಕ್ತ ಮುಕ್ತ’ ದಲ್ಲಿನ ನನ್ನ ಪಾತ್ರ(ದೇವಾನಂದಸ್ವಾಮಿ) ಹೆಂಡತಿ (ನಿವೇದಿತಾ)ಗೆ ಬಹುವಚನ ಬಳಸುವುದರ ಬಗ್ಗೆ ಓದುಗರೊಬ್ಬರು ‘ಸುಧಾ’ದ ‘ಜಾಣರ ಪೆಟ್ಟಿಗೆ’ಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಆಕ್ಷೇಪಕ್ಕೆ ಈ ವಾರದ ‘ಸುಧಾ’ದಲ್ಲಿ ಇಬ್ಬರು ಓದುಗರು ಉತ್ತರಿಸಿದ್ದಾರೆ.
ಘಜನಿಯ ಅಮೀರ್
ಪಾ ದ ಅಮಿತಾಭ್
ಮೇರೆ ಅಂಗನೇಮೇ ಯ ಮತ್ತದೇ ಅಮಿತಾಭ್
ಚಾಚಿ ಚಾರ್ಸೋಬೀಸ್ ನ ಕಮಲ್
ಎಲ್ಲ ಫಿಲ್ಮ್ ಗಳ ರಜನಿ
ಅದ್ಭುತ ಎಕ್ಸಪ್ರೆಷನ್ನಿನ ಶ್ರೀದೇವಿ
ಕ್ಲಾಸಿಕ್ ನಟನೆಯ ಸ್ಮಿತಾ ಪಾಟೀಲ್
ಹೀಗೆ ಮೊನ್ನೆ ಎಲ್ಲರನ್ನೂ ನೆನೆಸಿಕೊಂಡು ಬಿಟ್ಟೆ
ಅವರ ನಟನೆಗೆ ಸಲಾಂ ಹೊಡೆದು ಬಿಟ್ಟೆ
ಕಹಾಂ ರಾಜಾಭೋಜ, ಕಹಾಂ ಗಂಗೂತೇಲಿ ಎಂದುಕೊಂಡು ಬಿಟ್ಟೆ
ಕಾರಣ ಇಷ್ಟೆ,
ಮೊನ್ನೆ ‘ಮುಕ್ತ ಮುಕ್ತ’ ಶೂಟಿಂಗ್ ನಲ್ಲಿ ಕಣ್ಣಿಗೆ ಎರಡು ಹನಿ ಗ್ಲಿಸರಿನ್
ಹೆಚ್ಚಿಗೆ ಬಿದಿತ್ತು ಅಷ್ಟೆ……!!
ಈ ವಾರದ ‘ಸುಧಾ’ದಲ್ಲಿ ನನ್ನ “ಮುಕ್ತ ಮುಕ್ತ”ದ ಪಾತ್ರ (ದೇವಾನಂದಸ್ವಾಮಿ) ಹೆಂಡತಿಯನ್ನು ಬಹುವಚನದಿಂದ ಏಕೆ ಕರೆಯುತ್ತದೆ ಎಂದು ಪ್ರಶ್ನಿಸಲಾಗಿದೆ.
ಕಿರುತೆರೆ ಕಲಾವಿದರು ಬೆಂಗಳೂರಿಗರಿಗೆ ಅಪರೂಪದವರೇನಲ್ಲ. ನಾನು ಈ ಹಿಂದೆ ಹೇಳಿದಂತೆ ಹಾದಿಗೊಬ್ಬ, ಬೀದಿಗಿಬ್ಬರು ಕಿರುತೆರೆ ಕಲವಿದರು ಬೆಂಗಳೂರಿಲ್ಲಿದ್ದಾರೆ. ಆದರೆ ಇದೇ ಕಿರುತೆರೆ ಕಲಾವಿದರು ಬೆಂಗಳೂರೇತರ ಜಿಲ್ಲೆಗಳಲ್ಲಿ ಕಂಡರೆ, ಅನೇಕ ಸಲ ಜನರಿಗೆ ನಂಬುವುದು ಕಷ್ಟವಾಗುತ್ತದೆ.
ಶೂಟಿಂಗ್ ಸಲುವಾಗಿ ಮೊನ್ನೆ ಕಾರವಾರಕ್ಕೆ ಹೋಗಿದ್ದೆ. ಎಂದಿನಂತೆ ನಾನು ಹೋದಲ್ಲೆಲೆಡೆ, ಮುಕ್ತ ಮುಕ್ತ ದ ಬಗ್ಗೆಯೇ ಚರ್ಚೆ. ನನ್ನ ಆಕ್ಟಿಂಗ್, ಮುಕ್ತ ಮುಕ್ತ ಕಥೆ ಸಾಗುತ್ತಿರುವ ರೀತಿ, ಟಿಎನ್ಎಸ್ ಸರ್ ಅವರ ವಿಭಿನ್ನ ಧಾರಾವಾಹಿ – ಹೀಗೆ ಜನರೊಡನೆ ಚರ್ಚೆ ಸಾಗಿತ್ತು. ಸಂಜೆ ಶೂಟಿಂಗ್ ಮುಗಿಸಿದ ಬಳಿಕ ನಮ್ಮ ಕ್ಯಾಮರಾಮನ್ ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ತಮ್ಮ ಪತ್ನಿಗೆ ನನ್ನನ್ನು ಪರಿಚಯಸಿತ್ತ, “ಯಾರು ಗೊತ್ತಾಯ್ತಲ್ಲ?” ಎಂದರು. ಅವರ ಪತ್ನಿ ನನ್ನನ್ನು ಕಂಡು ಗುರುತಿಸಿ ಸಂತಸದಿಂದ ನಮಸ್ಕಾರ ಮಾಡಿದರು. ಅಷ್ಟರಲ್ಲಿ ಕ್ಯಾಮರಾಮನ್ ಅವರ ವಯಸ್ಸಾದ, ದಪ್ಪ ಕನ್ನಡಕ ಹಾಕಿಕೊಂಡಿದ್ದ ತಾಯಿ ಕೂಡ ಹೊರಬಂದರು. ಮತ್ತೆ ನಮ್ಮ ಕ್ಯಾಮರಾಮನ್ ತಮ್ಮ ತಾಯಿಗೆ, “ನೋಡಮ್ಮ, ದೇವಾನಂದಸ್ವಾಮಿ ಬಂದಿದಾರೆ” ಎಂದರು. ಅದಕ್ಕೆ ಆ ತಾಯಿ “ಅಯ್ಯೋ ಹೌದಲ್ಲೋ…ಥೇಟ್ ದೇವಾನಂದಸ್ವಾಮಿಯ ಥರಾನೇ ಇದ್ದಾನಲ್ಲಪ್ಪ” ಎಂದು ಉದ್ಗರಿಸಿದರು. ಕ್ಯಾಮರಾಮನ್ಗೆ ಮುಜುಗರವಾದಂತಾಗಿ, “ಏ ಏನಮ್ಮ,,,ಥೇಟ್ ಹಾಗೆಯೇ ಇದ್ದಾನೆ ಅಂದ್ರೇನು?…ಅವರೇ ಬಂದಿರೋದು” ಎಂದರು. ‘ಮುಖ್ಯಮಂತ್ರಿ ಮಗ’ನನ್ನು ತಮ್ಮ ಮನೆಯಲ್ಲಿ ಕಂಡ ತಾಯಿಯ ಸಂತಸ ಇಮ್ಮಡಿಸಿತು. ನನಗೆ ಮಾತ್ರ ನಗು ತಡೆಯಲಾಗಲಿಲ್ಲ.
ನಿನ್ನೆಯ ವಿಜಯ ಕರ್ನಾಟಕದ ವಿಜಯಬಂಧದಲ್ಲಿ ಹೀಗೊಂದು ಕ್ಲೂ…
ಆರೋಗ್ಯ ಇಲಾಖೆಯ ವಾಜಪೇಯಿ ಆರೋಗ್ಯಶ್ರೀ ಕಾರ್ಯಕ್ರಮದ ಕುರಿತು ಶಾರ್ಟ್ ಫಿಲ್ಮ್ ಮಾಡಲೆಂದು ಮೊನ್ನೆ ಬಳ್ಳಾರಿಗೆ ಹೋಗಿದ್ದೆ. ಅಲ್ಲಿ ಆರೋಗ್ಯಶ್ರೀ ಕ್ಯಾಂಪ್ ಇತ್ತು. ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಕಾರ್ಯಕ್ರಮ. ಬಳ್ಳಾರಿಯ ರಣಬಿಸಿಲು ನೆನೆಸಿಕೊಂಡು ಮುಂಜಾನೆಯೇ ತಂಬಿಬೆಗಟ್ಟಲೆ ನೀರು ಕುಡಿದು ಕ್ಯಾಮೆರಾ ಯೂನಿಟ್ ನೊಂದಿಗೆ ಮುನ್ಸಿಪಲ್ ಮೈದಾನಕ್ಕೆ ಹೋಗಿದ್ದೆ. ಆದರೆ ಅದೃಷ್ಟ…ವರುಣ ದೇವ ಪ್ರಸನ್ನನಾಗಿ ಇಡೀ ಮೈದಾನದ ತುಂಬ ಮೋಡ ಕವಿದ ವಾತಾವರಣವನ್ನು ನಿರ್ಮಿಸಿದ್ದ. ಹೀಗಾಗಿ 10 ಗಂಟೆಯ ಸುಮಾರಿಗೆ ನನಗೆ ನೇಚರ್ ಕಾಲ್ ಬಂದುಬಿಟ್ಟಿತು. ಅದಾಗಲೇ ಪ್ರಕೃತಿಯ ಕರೆಗೆ ಓಗೋಟ್ಟು ಬಂದಿದ್ದ ಕ್ಯಾಮರಾಮನ್ ಆಂಜಿ ಅವರಿಗೆ ಕೇಳಿದೆ. “ಟಾಯ್ಲೆಟ್ ಎಲ್ಲಿದೆ ಗೊತ್ತಾ?”
“ಅಯ್ಯೋ ನಾನೂ ತುಂಬಾ ಹುಡುಕಿದೆ ಸಾರ್. ಇಡೀ ಗ್ರೌಂಡ್ ನಲ್ಲಿ ಸಿಗಲಿಲ್ಲ. ಕೊನೆಗೆ ಹೊರಗೆ ಸುಮಾರು ಅರ್ಧ ಕಿಮಿ ದೂರ ನಡೆದುಕೊಂಡು ಹೋಗಿ ಕಾರ್ಯಕ್ರಮ ಮುಗಿಸಿದೆ” ಎಂದರು ಆಂಜಿ.
ಸರಿ, ಎಂದು ನಾನೂ ‘ಆಪರೇಷನ್ ನೇಚರ್ ಕಾಲ್’ ಗೆ ಮುಂದಾದೆ. ಗ್ರೌಂಡ್ ಗೆ ತಾಕಿದಂತೆ ಮತ್ತೊಂದು ಗ್ರೌಂಡ್ ಇತ್ತು. ಆ ಗ್ರೌಂಡ್ ನ ಮೂಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಚೇರಿಯಿತ್ತು. ಅಲ್ಲಿ ಟಾಯ್ಲೆಟ್ ಇರಬಹುದು ಎಂದು ಅಂದುಕೊಂಡು ಹೋದೆ. ಆದರೆ ನನಗೆ ನಿರಾಸೆ ಕಾದಿತ್ತು. ಎಲ್ಲ ರೂಮ್ ಗಳಿಗೂ ಬೀಗ ಜಡಿಯಲಾಗಿತ್ತು. ಅಷ್ಟರಲ್ಲಿ ನನಗೆ ನೇಚರ್ ಕಾಲ್ ತಡೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ. ಇನ್ನೇನು ನಾನೂ ಅರ್ಧ ಕಿಮಿ ನಡೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ, ವ್ಯಕ್ತಿಯೊಬ್ಬರು ಬಂದು ಕೈಕುಲುಕಿದರು. ನಮ್ಮ ಮುಂದಿನ ಸಂಭಾಷಣೆ ಹೀಗಿತ್ತು.
“ಸರ್, ನೀವು ಮುಕ್ತ ಮುಕ್ತ ದಲ್ಲಿ ಮಾಡುತ್ತೀರಿ ಅಲ್ವಾ? ”
“ಹೌದು”
“ದೇವಾನಂದಸ್ವಾಮಿ, ಮುಖ್ಯಮಂತ್ರಿಗಳ ಮಗ ಅಲ್ವಾ?”
“ಹೌದು”
“ನಾನು ನಾಗರಾಜ್ ಅಂತ. ನೀವು ತುಂಬಾ ಚೆನ್ನಾಗಿ ಆಕ್ಟ್ ಮಾಡ್ತೀರಿ ಸರ್”
“ಥ್ಯಾಂಕ್ಯು ಸರ್”
“ನಿಮ್ಮ ಸೀರಿಯಲ್ ತುಂಬಾ ಚೆನ್ನಾಗಿದೆ”
“ಥ್ಯಾಂಕ್ಯು ಸರ್”
“ಎಲ್ಲರ ಆಕ್ಟಿಂಗ್ ತುಂಬಾ ಚೆನ್ನಾಗಿದೆ”
“ಥ್ಯಾಂಕ್ಯು ಸರ್”
“ಇಲ್ಲೇನು ಸಾರ್ ಬಂದಿದ್ದು?”
“ವಾಜಪೇಯಿ ಆರೋಗ್ಯಶ್ರೀ ಕ್ಯಾಂಪ್ ಬಗ್ಗೆ ಶಾರ್ಟ್ ಫಿಲ್ಮ್ ಮಾಡಲು ಬಂದಿದ್ದೇನೆ”
“ಓಹ್ ಹೌದಾ ಸರ್…”
“ಸರ್, ನನಗೆ ಟಾಯ್ಲೆಟ್ ಗೆ ಹೋಗಬೇಕಿತ್ತು. ಇಲ್ಲಿ ಎಲ್ಲಾದ್ರೂ ಟಾಯ್ಲೆಟ್ ಇದ್ಯಾ?”
“ಅಯ್ಯೋ ಬನ್ನಿ ಸಾರ್…”
ಎನ್ನುತ್ತಾ ನಾಗರಾಜ್ ಅವರು ಸ್ಕೌಟ್ಸ್ ಬಿಲ್ಡಿಂಗ್ ನ ಒಂದು ರೂಂನ ಬೀಗ ತೆಗೆಸಿದರು. ಒಳಗೆ ಕರೆದುಕೊಂಡು ಹೋಗಿ ಮತ್ತೊಂದು ರೂಂನ ಬೀಗ ತೆಗೆಸಿದರು. ಒಳಗೆ ಹೋಗಿ ಮತ್ತೊಂದು ಬಾಗಿಲು ತೆರೆದರು. ಟಾಯ್ಲೆಟ್ ಬಾಗಿಲು ನನ್ನ ಭಾಗ್ಯದ ಬಾಗಿಲಿನಂತೆ ಕಂಡಿತು ನನಗೆ. ಟಾಯ್ಲೆಟ್ ನಲ್ಲಿ ನೀರಿಲ್ಲದ ಕಾರಣ ಮೋಟರ್ ಆನ್ ಮಾಡಿಸಿದರು. ನಾನು ನನ್ನ ನೇಚರ್ ಕಾಲ್ ಪೂರೈಸಿ, ಹೊರಗೆ ಬಂದು ನಾಗರಾಜ್ ಅವರಿಗೆ ಮನಃಪೂರ್ವಕವಾಗಿ ವಂದಿಸಿದೆ.
ಎಂತೆಂತಹ ಅನುಭವ ಮಾರಾಯ್ರೆ…..
‘ಮುಕ್ತ ಮುಕ್ತ’ ನಿನ್ನೆ 500 ಕಂತುಗಳನ್ನು ಪೂರೈಸಿದೆ. ‘ಮುಕ್ತ ಮುಕ್ತ’ದ ವೀಕ್ಷಕರಿಗೆ ಕೃತಜ್ಞತೆಗಳು ಹಾಗೂ ಹಾರ್ದಿಕ ಅಭಿನಂದನೆಗಳು…ತಮ್ಮ ಬೆಂಬಲ ಹಾಗೂ ಫೀಡ್ ಬ್ಯಾಕ್ ನಿರಂತರವಾಗಿ ಹರಿದು ಬರುತ್ತಿರಲಿ.
ಡೆಕ್ಕನ್ ಕ್ರಾನಿಕಲ್ ಪತ್ರಿಕೆ ಕನ್ನಡ ಟೆಲಿ ಸೀರಿಯಲ್ ಗಳ ಪ್ರಖ್ಯಾತ ಜೋಡಿಗಳನ್ನು ಪಟ್ಟಿ ಮಾಡಿದೆ. ಅದರಲ್ಲಿ ಮುಕ್ತ ಮುಕ್ತದ ದೇವಾನಂದ (ನಾನು) ಹಾಗೂ ನಿವೇದಿತಾ (ಜಯಶ್ರೀ) ಜೋಡಿ ಸ್ಥಾನಪಡೆದುಕೊಂಡಿದೆ. ಈ ಜೋಡಿಗಳಿಗೆ ತಮ್ಮ ಸಹ ನಟ/ನಟಿಯ ಕುರಿತು ಏನೆನ್ನಿಸುತ್ತದೆ ಎಂಬುದಕ್ಕೆ ಎಲ್ಲರೂ ಉತ್ತರಿಸಿದ್ದಾರೆ. ಮೇ 1, (ಶನಿವಾರ) ದ ಡೆಕ್ಕನ್ ಕ್ರಾನಿಕಲ್ ನಲ್ಲಿ ಪ್ರಕಟವಾಗಿದೆ.
ನನ್ನ ಮೊದಲ ಧಾರಾವಾಹಿ ‘ಮುಕ್ತ ಮುಕ್ತ’ ದಲ್ಲಿಯೇ ನನಗೆ ನಟ ಹಾಗೂ ಸ್ಕ್ರಿಪ್ಟ್ ರೈಟರ್ ಆಗುವ ಎರಡು ಅವಕಾಶಗಳು ಒದಗಿ ಬಂದಿವೆ. ‘ಮುಕ್ತ ಮುಕ್ತ’ ಕ್ಕೆ ಶ್ರೀ ಟಿ.ಎನ್. ಸೀತಾರಾಮ್ ಅವರ ಮಾರ್ಗದರ್ಶನದಲ್ಲಿ ಸಂಭಾಷಣೆ ಬರೆಯುತ್ತಿದ್ದೇನೆ.
‘ಮುಕ್ತ ಮುಕ್ತ’ ದ ‘ಕಲ್ಯಾಣಿ’ ಪಾತ್ರಧಾರಿ ಧನ್ಯಶ್ರೀ ಶ್ರೀಹರಿ ಈ ಬಾರಿಯ ಸುಧಾ ಪ್ರತಿಸ್ಪಂದನದಲ್ಲಿ…
ಬಹಳ ದಿನಗಳ ನಂತರ ಮೊನ್ನೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವ ಅವಕಾಶ ಬಂತು. ಸುಲಭವಾಗಿ ವಿಂಡೋ ಸೀಟ್ ಕೂಡ ಸಿಕ್ಕಿತು. ಸೀಟ್ ಅಲಂಕರಿಸುತ್ತಿದ್ದಂತೆಯೆ ನನ್ನ ಪಕ್ಕ ಬಂದು ಕುಳಿತ ಹುಡುಗನೊಬ್ಬ ನನ್ನೊಂದಿಗೆ ಮಾತಿಗೆ ತೊಡಗಿದ.
ಹುಡುಗ – ಸಾರ್, ನೀವು ಮುಕ್ತ ಮುಕ್ತ ದಲ್ಲಿ ಮಾಡ್ತೀರಲ್ವಾ? ದೇವಾನಂದಸ್ವಾಮಿ ಅಲ್ವ?
ನಾನು – ಹೌದು. ನಾನು ಸುಘೋಷ್ ಅಂತ. ತಮ್ಮ ಹೆಸರು?
ಹುಡುಗ – ಸಾರ್ ನನ್ನ ಹೆಸರು ………….ಅಂತ.
ನಾನು – ಏನ್ ಕೆಲಸ ಮಾಡ್ತೀರಿ?
ಹುಡುಗ – ನಾನು ………….ಕಾಲೇಜಲ್ಲಿ ……………..ಅಸಿಸ್ಟೆಂಟ್ ಆಗಿ ಕೆಲಸ ಮಾಡ್ತೀದಿನಿ.
ನಾನು – ಓಹ್…
ಹುಡುಗ – ಸಾರ್, ನಾನು ಮೊದ್ಲಿಂದಾನೂ ಮುಕ್ತ ಮುಕ್ತ ನೋಡ್ತೀನಿ ಸರ್. ಸೀತಾರಾಮ್ ಅವರ ಎಲ್ಲ ಸೀರಿಯಲ್ ಗಳನ್ನೂ ಬಿಡದೆ ನೋಡ್ತಿನಿ.
ನಾನು – ಓಹ್ ಹೌದಾ….ತುಂಬ ಸಂತೋಷ.
ಹೀಗೆ ನಮ್ಮ ಮಾತು ಶೂಟಿಂಗು, ಆಕ್ಟಿಂಗು, ಕಥೆ, ಅಂತೆಲ್ಲ ಸುತ್ತಾಡಿ ಬರುವ ಹೊತ್ತಿಗೆ ಆ ಹುಡುಗ ಇಳಿಯುವ ಸ್ಟಾಪ್ ಬಂದಿತ್ತು. ಮುಂದಿನ ಮಾತುಕತೆ ಹೀಗಾಯಿತು.
ಹುಡುಗ – ಸಾರ್ ನಾನು ಇಳಿಯೋ ಸ್ಪಾಪ್ ಬಂತು. ಬರ್ತೀನಿ.
ನಾನು – ಆಯ್ತು.
ಹುಡುಗ – ಸಾರ್, ನಾನು ಸೀತಾರಾಮ್ ಅವರನ್ನ ಕೇಳ್ದೆ ಅಂತ ಹೇಳಿ ಸಾರ್…..
ನಾನು – !!!!!!!!!!!!!!!!!!!!!!!!!!!!!!!!
ಶಾಂಭವಿ (ಸೀತಾ ಕೋಟೆ), ಕಲ್ಯಾಣಿ (ಧನ್ಯಶ್ರೀ ಶ್ರೀಹರಿ), ಶರ್ಮಿಳಾ(ಸುಶ್ಮಿತಾ) ಹಾಗೂ ಶಶಿಕಾಂತ (ಕಾರ್ತಿಕ್ ಹೆಬ್ಬಾರ್) ಅವರನ್ನು ನೀವೆಲ್ಲ ಮುಕ್ತ ಮುಕ್ತ ದಲ್ಲಿ ನೋಡಿಯೇ ಇರುತ್ತೀರಿ. ಈಗ ಈ ನಾಲ್ವರೂ ಸೇರಿ ‘ಅರ್ಣವ’ ಎಂಬ ಹೊಸ ಭರತನಾಟ್ಯ ಡ್ಯಾನ್ಸ್ ಗ್ರುಪ್ ಒಂದನ್ನು ಹುಟ್ಟುಹಾಕಿದ್ದಾರೆ. ಸೀತಕ್ಕ, ಧನ್ಯ, ಹಾಗೂ ಸುಶ್ಮಿತಾ ನೃತ್ಯಗಾರ್ತಿಯರಾದರೆ, ಕಾರ್ತಿಕ್ ಹಾಡುಗಾರರು. ಶಾಸ್ತ್ರೀಯ ಭರತನಾಟ್ಯವನ್ನು ಪ್ರಚುರಪಡಿಸುವುದು ಅರ್ಣವದ ಉದ್ದೇಶ. ಅರ್ಣವಕ್ಕೆ ಆಲ್ ದಿ ಬೆಸ್ಟ್….
ಮುಕ್ತ ಮುಕ್ತದಲ್ಲಿ ಆಕ್ಟ್ ಮಾಡಲು ಶುರುಮಾಡಿದಾಗಿನಿಂದ ಎಲ್ಲರೂ ನನ್ನನ್ನು ಗುರುತಿಸುತ್ತಾರೆ ಎಂದು ಹಲವು ಬಾರಿ ನಾನೇ ಹೇಳಿಕೊಂಡಿದ್ದೇನೆ. ಆ ಘಟನೆಗಳನ್ನು ಬರೆದಿದ್ದೇನೆ. ಅದರ ಉಲ್ಟಾ ಘಟನೆಯೊಂದು ಹೀಗಿದೆ.
ಸಿಸ್ಟೋಸ್ಕೋಪಿ ಆದ ಬಳಿಕ ಸ್ಟೆಂಟ್ ರಿಮೂವಲ್ ಇತ್ತು. ಹಾಗಾಗೆ ಮತ್ತೆ ಗಿರಿನಗರದ ರಾಧಾಕೃಷ್ಣನ ಮೊರೆ ಹೋಗಿದ್ದೆ. ಅಲ್ಲಿ ಸ್ಟೆಂಟ್ ರಿಮೂವಲ್ ಗೂ ಮೊದಲು ಎಕ್ಸ್ ರೇ ತೆಗೆಯಲು ಸೂಚಿಸಿದರು. ಸರಿ ಎಂದು ನಾನು ಎಕ್ಸ್ ರೇ ರೂಂನತ್ತ ಹೆಜ್ಜೆ ಹಾಕಿದೆ. ಅಲ್ಲಿ ಅದಾಗಲೇ ನಾಲ್ಕೆಂಟು ಜನ ಎಕ್ಸ್ ರೇ ಗಾಗಿ ಕಾಯುತ್ತಿದ್ದರು. ಲ್ಯಾಬ್ ಅಸಿಸ್ಟೆಂಟ್ ಮಾತ್ರ ಬಂದಿರಲಿಲ್ಲ.
ಒಂದೈದು ನಿಮಿಷ ಬಿಟ್ಟು ಬಂದ ಆತ ಸರದಿ ಪ್ರಕಾರ ಎಕ್ಸ್ ರೇ ತೆಗೆಯಲು ಶುರುಮಾಡಿದ. ನನ್ನ ಸರದಿ ಬರಲು ಇನ್ನೂ ಹತ್ತು ನಿಮಿಷವಿತ್ತಾದ್ದರಿಂದ ಸುಮ್ಮನೇ ಏಕೆ ಕೂರುವುದು ಎಂದು ನನ್ನ ಬ್ಯಾಗ್ ತೆಗೆದೆ. ಮೂರ್ನಾಲ್ಕು ಚೆಕ್ ಗಳನ್ನು ಕಲೆಕ್ಷನ್ ಗೆ ಹಾಕಬೇಕಿತ್ತು. ಪೇ ಇನ್ ಸ್ಲಿಪ್ ಗಳನ್ನು ಮೊದಲೇ ತಂದಿದ್ದೆ. ಹೀಗಾಗಿ ಸ್ಲಿಪ್ ಗಳನ್ನು ತುಂಬುತ್ತ, ಪಿನ್ ಮಾಡತೊಡಗಿದೆ. ಲ್ಯಾಬ್ ಅಸಿಸ್ಟೆಂಟ್ ಸರದಿ ಸಾಲಿನಲ್ಲಿ ಇರುವವರನ್ನು ಕರೆಯಲು ಹೊರ ಬಂದಾಗಲೆಲ್ಲ ನನ್ನನ್ನು ನೋಡುತ್ತಿದ್ದ. ಕೊನೆಗೆ ನನ್ನ ಸರದಿಯೂ ಬಂತು.
ಎಕ್ಸ್ ರೇ ಟೇಬಲ್ ಮೇಲೆ ಮಲಗಿದೆ.
“ಕೆಯುಬಿ ಎಕ್ಸ್ ರೇ ಅಲ್ವಾ? ಯಾವಾಗಾ ಸಿಸ್ಟೋಸ್ಕೋಪಿ ಆಗಿದ್ದು?” ಎಂಬಿತ್ಯಾದಿ ವಿಷಯಗಳನ್ನು ಮಾತನಾಡುತ್ತ ಕೊನೆಗೆ ಆತ ಕೇಳಿದ
“ನೀವು ಕೊರಿಯರ್ ಆಫೀಸ್ ನಲ್ಲಿ ಕೆಲಸ ಮಾಡುತ್ತೀರಾ?”
ಈಗ ಹೇಳಿ ಕಲಾವಿದರ ಪಾಪ್ಯುಲಾರಿಟಿ ಎಷ್ಟಿದೆ ಎಂದು……….