ಕ್ಷಮಿಸಿ….

“ಬೇರೆಯವರ ಮುಂದೆ ಬತ್ತಲಾಗಿ ಮಲಗುವುದಿದೆಯಲ್ಲ” ಲೇಖನ ಇಂದು ಹಾಕಬೇಕಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಪೋಸ್ಟ್ ಮಾಡಲಾಗುತ್ತಿಲ್ಲ. ಕ್ಷಮೆಯಿರಲಿ. ಈ ಲೇಖನ ನಾಳೆ ಪ್ರಕಟವಾಗಲಿದೆ.

ಪ್ರಿತಿಯಿರಲಿ

ಸುಘೋಷ್ ಎಸ್. ನಿಗಳೆ.

ಹಿತ್ತಲ ಗಿಡ ಮದ್ದಲ್ಲ….

ಅಷ್ಟರಲ್ಲಿ ಮತ್ತೊಮ್ಮೆ ನನ್ನ ಅಭಿಮಾನಿ ಡಾಕ್ಟರ್ ನಾಗರಾಜ್ ಬಂದು, “ನೋಡಿ, ಸಿಸ್ಟೋಸ್ಕಾಪಿ ಮಾಡಿಸಿಕೊಂಡರೆ ಒಳ್ಳೆಯದು. ನೀವು ಈಗ ಒಂದು ಅವರ್ ನಲ್ಲಿ ನಿಮ್ಮ ನಿರ್ಧಾರ ತಿಳಿಸಿದರೆ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಮಾಡಬಹುದು” ಎಂದು ಡೆಡ್ ಲೈನ್ ನೀಡಿ ಮಾಯವಾದರು.

ನಾಟಿ ಔಷಧಿ ಹಾಗೂ ಸಿಸ್ಟೋಸ್ಕಾಪಿ ಈ ಎರಡರ ಮಧ್ಯೆ ಒಂದನ್ನು ಆಯ್ಕೆ ಮಾಡಿಕೊಳ್ಳಲು ನನ್ನ ಬಳಿ ಟೈಮ್ ತುಂಬಾ ಕಡಿಮೆ ಇತ್ತು. ನಿರ್ಧಾರವಂತೂ ಮಾಡಲೇಬೇಕಿತ್ತು. ಈ ಎರಡರಲ್ಲಿ ಒಂದಂತೂ ಅನಿವಾರ್ಯವಾಗಿತ್ತು. ಎರಡಕ್ಕೂ ಅದರದೇ ಆದ ಮೆರಿಟ್ಸ್ ಹಾಗೂ ಡಿಮೆರಿಟ್ಸ್ ಇದ್ದವು.

ನಾಟಿ ಔಷಧದ ಮೆರಿಟ್ಸ್ ಹೀಗಿದ್ದವು

# ದೇಹಕ್ಕೆ ಯಾವುದೇ ತೊಂದರೆಯಿಲ್ಲ.

# ದೇಹಕ್ಕೆ ಅನಸ್ತೇಷಿಯಾ ಚುಚ್ಚುವ ಅಗತ್ಯವಿಲ್ಲ.

# ಪೈಪ್ ಸೇರಿಸುವ ಅಗತ್ಯವಿಲ್ಲ.

# ನಾಲ್ಕೈದು ದಿನ ಆಡ್ಮಿಟ್ ಆಗುವುದು ಬೇಡ.

# ಚಿಕಿತ್ಸೆ ತೀರ ಸುಲಭ. ಬೆಳಿಗ್ಗೆ ಆರು ಗಂಟೆಗೆ ಖಾಲಿ ಹೊಟ್ಟೆಯಲ್ಲಿ ವೈದ್ಯರು ನೀಡುವ ಔಷಧ ತೆಗೆದುಕೊಂಡರಾಯಿತು. ಸಂಜೆ ಆರು ಗಂಟೆಯೊಳಗೆ ಕಲ್ಲು ಮೂತ್ರದೊಂದಿದೆ ಹೊರಬಿದ್ದುಬಿಡುತ್ತದೆ. ಇಟ್ ಈಸ್ ಆಸ್ ಸಿಂಪಲ್ ಆಸ್ ದೆಟ್.

ಡಿಮೆರಿಟ್ಸ್

# ಔಷಧಿ ತೆಗೆದುಕೊಳ್ಳಲು ನಾನು 370 ಕಿಮಿ. ಪ್ರಯಾಣ ಮಾಡಿ ಕೊಪ್ಪಕ್ಕೆ ಹೋಗಬೇಕು.

# ಈ ಪ್ರಯಾಣದ ಅವಧಿಯಲ್ಲಿ ನೋವು ಸಹಿಸಿಕೊಳ್ಳಬೇಕು ಅಥವಾ ಸ್ಟ್ರಾಂಗ್ ಪೇನ್ ಕಿಲ್ಲರ್ಸ್ ತೆಗೆದುಕೊಳ್ಳಬೇಕು.

# ಮಾರ್ಗ ಮಧ್ಯೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡರೆ ಬೊಬ್ಬೆ ಹೊಡೆಯುವುದೊಂದೇ ಪರಿಹಾರ.

# ಒಂದು ವೇಳೆ, ಒಂದು ವೇಳೆ, ಒಂದು ವೇಳೆ ನಾಟಿ ಔಷಧಿ ಫೇಲ್ ಆದರೆ………

ಅತೀ ಹತ್ತಿರದ ಆಸ್ಪತ್ರೆ ಎಂದರೆ ಮಂಗಳೂರಿನ ಕಿಡ್ನಿ ಫೌಂಡೇಷನ್ ಗೆ ನನ್ನನ್ನು ಸಾಗಿಸಬೇಕು.

# ಇದೆಲ್ಲಕ್ಕೂ ದೊಡ್ಡ ತೊಂದರೆ ಎಂದರೆ ನಾನು ಎಡ್ಮಿಟ್ ಆಗಿದ್ದು ಬುಧವಾರ. ನಾಟಿ ವೈದ್ಯರು ಔಷಧಿ ಕೊಡುತ್ತಿದ್ದುದ್ದು ಗುರುವಾರ ಮತ್ತು ಭಾನುವಾರ ಮಾತ್ರ. ಮಾರನೇ ದಿನವೇ ಗುರುವಾರ. ರಾತ್ರಿಯೇ ಕೊಪ್ಪಕ್ಕೆ ಹೊರಡುವುದು ಅಸಾಧ್ಯದ ಮಾತು. ಇನ್ನು ಭಾನುವಾರದವರೆಗೆ ಕಾಯಬೇಕು. ಅಲ್ಲಿಯವರೆಗೆ ಪೇನ್ ಸಹಿಸಿಕೊಂಡಿರಬೇಕು.

ಇಷ್ಟೆಲ್ಲ ಇದ್ದರೂ ನನಗೆ ಮನಸ್ಸಿದ್ದುದು ಮಾತ್ರ ನಾಟಿ ಔಷಧಿಯ ಮೇಲೆಯೇ. ಮೊದಲಿನಿಂದಲೂ ಅದರ ಮೇಲೆ ಏನೋ ಒಂದು ಹೇಳಿಕೊಳ್ಳಲಾಗದ ವಿಶ್ವಾಸ. ಬೆಳಗಾವಿಯ ಸಮೀಪ ಈ ನಾಟಿ ವೈದ್ಯರ ಚಮತ್ಕಾರಗಳನ್ನು ಬಾಲ್ಯದಲ್ಲಿ ನಾನು ಕಂಡಿದ್ದು ಬಹುಶಃ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿರಬಹುದು.

ಒಂದು ಹಂತದಲ್ಲಿ ಸಿಸ್ಟೋಸ್ಕಾಪಿ ಬೇಡವೆಂದು ನಿರ್ಧರಿಸಿ, ಕೊಪ್ಪಕ್ಕೆ ಹೋಗುವುದೆಂದು ಹೇಳಿಬಿಟ್ಟೆ. ಆದರೆ ಮತ್ತೆ ಫೋನುಗಳು, ಮತ್ತೆ ಚರ್ಚೆ, ಮತ್ತೆ ಮಾತುಕತೆ ಎಲ್ಲವೂ ನಡೆದವು. ನನ್ನ ಹಲವು ವೈದ್ಯ ಮಿತ್ರರ ಸಲಹೆ ಪಡೆದೆ. ಈ ವೈದ್ಯ ಮಿತ್ರರಲ್ಲಿ ಆಯುರ್ವೇದ ಹಾಗೂ ಅಲೋಪತಿ ಎರಡೂ ವಿಧದ ವೈದ್ಯರಿದ್ದರು. ಇಬ್ಬರೂ ಹೇಳಿದ್ದು ಒಂದೇ. “ಎರಡೂ ಆಪ್ಟ್ ಮಾಡಿಕೊಳ್ಳುವಂತಹವೇ. ಆದರೆ ಈಗ ನೀನಿರುವ ಸ್ಥಿತಿಯಲ್ಲಿ ನಾಟಿ ಆಪ್ಟ್ ಮಾಡಿಕೊಳ್ಳುವುದು ಕಷ್ಟ. ಸಿಸ್ಟೋಸ್ಕಾಪಿ ಮಾಡಿಸಿಕೊಂಡು ಬಿಡು. ನಿನಗೂ ಒಂದು ರೀತಿಯ ಮಾನಸಿಕ ಸಮಾಧನ ಇರುತ್ತದೆ” ಅಂತ.

ಸರಿ ಅಂತ ಡಾಕ್ಟರ್ ನಾಗರಾಜ್ ರನ್ನು ಕರೆದು, ಸಿಸ್ಕೋಸ್ಕಾಪಿ ಮಾಡಿ ಎಂದೆ. ಆದರೆ ನಾನು ನನ್ನ ನಿರ್ಧಾರ ಹೇಳಲು ಸುಮಾರು ಮೂರು ಗಂಟೆ ಖರ್ಚು ಮಾಡಿಯಾಗಿತ್ತು. ಹೀಗಾಗಿ ರಾತ್ರಿ ಹನ್ನೊಂದು ಗಂಟೆಗೆ ಚಿಕಿತ್ಸೆ ನೀಡುವುದು ಸಾಧ್ಯವಿರಲಿಲ್ಲ. ಬೆಳಿಗ್ಗೆ ಆರು ಗಂಟೆಗೆ ಮಾಡಲಾಗುವುದು ಎಂದು ಹೇಳಿದರು. ನಾನು ಆದಷ್ಟು ಬೇಗ ಸಿಸ್ಟೋಸ್ಕಾಪಿ ಮಾಡಿಸಿಕೊಳ್ಳಲು ಸಿದ್ಧನಾಗಿದ್ದೆ. ಕಷ್ಟ ಆದಷ್ಟು ಬೇಗ ಸರಿದರೆ ಸುಖವಲ್ಲವೆ?

ಆದರೆ ಒಂದು ರೀತಿಯಿಂದ ಬೆಳಿಗ್ಗೆ ಆರುಗಂಟೆಗೇ ಸಿಸ್ಟೋಸ್ಕಾಪಿ ಮಾಡಿದ್ದು ಒಳ್ಳೆಯದೇ ಆಯಿತು. ರಾತ್ರಿಯಾಗಿತ್ತು. ಮಾತಾಡಿ ಆಡಿ ಸುಸ್ತಾಗಿದ್ದೆ. ಇನ್ನೇನು ಮಲಗಿಕೊಳ್ಳಬೇಕೆಂದು ಕಣ್ಣು ಮುಚ್ಚಿದೆ. ಅಷ್ಟರಲ್ಲಿ ಇಬ್ಬರು ವಾರ್ಡ್ ಬಾಯ್ ಗಳು ಕೈಯಲ್ಲಿ ಸೋಪು ಮತ್ತು ರೇಜರ್ ಹಿಡಿದು ಬಂದು “ಸಾರ್ ನಿಮ್ಮನ್ನು ಆಪರೇಷನ್ ಗೆ ರೆಡಿ ಮಾಡಬೇಕು” ಎಂದರು.

ನಿಧಾನವಾಗಿ ಕಣ್ಣುಬಿಟ್ಟೆ. ವಾರ್ಡ್ ಬಾಯ್ ಪುಟ್ಟರಾಜು ಮತ್ತು ವಾರ್ಡ್ ಬಾಯ್ ರಮೇಶ್ ನನ್ನನ್ನು ಅತ್ಯಂತ ನಿರ್ಭಾವುಕರಾಗಿ ನೋಡುತ್ತ ನಿಂತಿದ್ದರು.

(ನಾಳೆ : ಬೇರೆಯವರ ಮುಂದೆ ಬತ್ತಲಾಗಿ ಮಲಗಿಕೊಳ್ಳುವುದಿದೆಯಲ್ಲ….)

ನಾಟಿ ವೈದ್ಯವೋ, ಸಿಸ್ಟೋಸ್ಕಾಪಿಯೋ…

(ಫೋಟೋ ಕೃಪೆ – ಲೈಫ್)

ನಿದ್ದೆಯಿಂದ ಎದ್ದಾಗ ಬೆಳಗಾಗಿತ್ತು. ರಾತ್ರಿಯ ಡ್ಯೂಟಿ ಡಾಕ್ಟರ್ ಬಂದು ಬ್ಲಡ್ ಟೆಸ್ಟ್ ನ ರಿಪೋರ್ಟ್ ಹೇಳಿದರು. “ಡಬ್ಲೂಬಿಸಿ ಕೌಂಟ್ 12600 ಆಗಿದೆ. ಅಂದರೆ ಬ್ಲಡ್ ಇನ್ಫೆಕ್ಷನ್ ಆಗಿದೆ. ಹೀಗಾಗಿ ಇದು ಅಪೆಂಡಿಸೈಟಿಸ್ ಆಗಿರುವ ಸಾಧ್ಯತೆ ಹೆಚ್ಚಾಗಿದೆ. ಏನಕ್ಕೂ ಮಧ್ಯಾಹ್ನ ಸ್ಕಾನ್ ಇದೆ. ನಂತರ ಸ್ಪಷ್ಟವಾಗಿ ಗೊತ್ತಾಗುತ್ತದೆ” ಎಂದು ಹೇಳಿಹೋದರು.

ನಿರಂತರವಾಗಿ ಸಲೈನ್ ಹಚ್ಚಿದ್ದರಿಂದ ಏನನ್ನೂ ತಿನ್ನದಂತೆ ಸೂಜಿಮೆಣಸಿನಕಾಯಿ ಸಿಸ್ಟರ್ ಬಂದು ಬೆದರಿಕೆ ಹಾಕಿ ಹೋಗಿದ್ದಳು. ನೀರಡಿಕೆ ತಡೆಯಲಿಕ್ಕೆ ಆಗುತ್ತಿರಲಿಲ್ಲ. ಆದರೆ ಮಧ್ಯಾಹ್ನ ಸ್ಕಾನ್ ಇದೆ ಎಂದು ವೈದ್ಯರು ಹೇಳಿದ ತಕ್ಷಣ, “ಹೆಚ್ಚು ಹೆಚ್ಚು ನೀರು ಕುಡಿಯಿರಿ. ಬ್ಲಾಡರ್ ಫುಲ್ ಇರ್ಬೇಕು. ಆಗಷ್ಟೇ ಸ್ಕಾನಿಂಗ್” ಎಂದು ಮತ್ತೊಮ್ಮೆ ಸಿಸ್ಟರ್ ಹೇಳಿದಾಗ ಅವಳಿಗೆ ಬ್ಲಾಡರ್-ಪೂರ್ವಕ…..ಓಹ್ ಸಾರಿ…..ಹೃದಯ ಪೂರ್ವಕ ಥ್ಯಾಂಕ್ಸ್ ಹೇಳಿದೆ. ಅಷ್ಟರಲ್ಲಾಗಲೇ ‘ಸುಘೋಷ ಆಸ್ಪತ್ರೆಗೆ ಆಡ್ಮಿಟ್ ಅಂತೆ, ಸಿಕ್ಕಾಪಟ್ಟೆ ಹೊಟ್ಟೆ ನೋವಂತೆ, ಇನ್ನೊದು ಅಂತೆ ಮತ್ತೊಂದು ಅಂತೆ,’ ಎಂಬ ಸುದ್ದಿ ಬೆಂಗಳೂರಿನ ನನ್ನ ಬಂಧುಗಳಿಗೆ ತಲುಪಿಯಾಗಿತ್ತು. ಫೋನ್ ಗಳು ಆರಂಭವಾದವು. ಆದರೆ ಸುದ್ದಿ ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿತು.

ಎಳನೀರು ಕುಡಿಕುಡಿದು ಬ್ಲಾಡರ್ ಫುಲ್ ಮಾಡಿಕೊಂಡೆ. ಸ್ಕಾನಿಂಗ್ ಸೆಂಟರ್ ನತ್ತ ‘ಮೇರಾ ನಾಮ್ ಜೋಕರ್’ ಪಿಚ್ಚರ್ ನಲ್ಲಿ ರಾಜ್ ಕಪೂರ್ ನಡೆಯುವ ಹಾಗೆ ನಡೆದುಕೊಂಡೇ ಹೋದೆ. ಮಧ್ಯಾಹ್ನ ಎರಡೂವರೆಗೆ ಅಬ್ಡಾಮಿನ್ ಸ್ಕಾನ್ ಆಯಿತು. ಅಲ್ಲೇ ಡಾ. ರಮೇಶ್ ತೋರಿಸಿಬಿಟ್ಟರು. ಅಪೆಂಡಿಸೈಟಿಸ್ ಅಲ್ಲವೇ ಅಲ್ಲ. ಮೂರು ಕಿಡ್ನಿ ಸ್ಟೋನ್ಸ್ ಫಾರ್ಮ್ ಆಗಿದೆ.

“ಹಾಗಾದರೆ ಇಂಜೆಕ್ಷನ್ ತೆಗೆದುಕೊಂಡು ಅವುಗಳನ್ನು ತೆಗೆಯಬಹುದಲ್ಲವೆ?” ಅತ್ಯುತ್ಸಾಹಾನಂದತುಂದಿತನಾಗಿ ಕೇಳಿದೆ. “ಸ್ಕಾನ್ ಮಾಡುವುದು ಅಷ್ಟೇ ನನ್ನ ಕೆಲಸ. ಹೆಚ್ಚಿನ ಮಾಹಿತಿಗಾಗಿ ಸರ್ಜನ್ ಸಂಪರ್ಕಿಸಿ” ಎಂದುಬಿಟ್ಟರು ಡಾ. ರಮೇಶ್. ಏನೇ ಆದರೂ ಒಂದು ರೀಲಿಫ್ ಇತ್ತು. ಸಧ್ಯ ಅಪೆಂಡಿಸೈಟಿಸ್ ಅಲ್ಲ. ಹೀಗಾಗಿ ಆಪರೇಷನ್ ಭಯವಿಲ್ಲ. ಕಿಡ್ನಿ ಸ್ಟೋನ್ ತೀರಾ ಕಾಮನ್ ಎಂಬೆಲ್ಲ ವಿಚಾರಗಳು ನುಗ್ಗಿ ಬಂದು ಆ ಮಟ್ಟಿಗೆ ಮನಸ್ಸು ಶಾಂತವಾಯಿತು.

ಸಂಜೆ ನಾಲ್ಕೂವರೆ ಸುಮಾರಿಗೆ ಸರ್ಜನ್ ಡಾ. ಮಧುಸೂದನ್ ವಾರ್ಡ್ ಗೆ ಬಂದರು. ತಮ್ಮ ನೀಲಿ ನೀಲಿ ಬಣ್ಣದ ಜೆಲ್ ಪೆನ್ ನಲ್ಲಿ ಡಯಗ್ರಾಮ್ ಬಿಡಿಸಿಕೊಂಡು ಬಂದಿದ್ದರು. “ಹುಂ….ನೋಡಿ ಈಗ ಮೂರು ಕಿಡ್ನಿ ಸ್ಟೋನ್ ಗಳು ಕಂಡುಬಂದಿವೆ. ಮೊದಲನೆಯದು ಕಿಡ್ನಿಯಿಂದ ಹೊರಬಿದ್ದು ಯುರೇಟರ್ ನಲ್ಲಿ ಬಂದು ಕುಳಿತಿದೆ. ಅದರ ಗಾತ್ರ 13*8 ಎಂಎಂ. ಉಳಿದವೆರಡು ಕಿಡ್ನಿಯಲ್ಲಿವೆ. ಒಂದು 8 ಎಂಎಂ ನದು ಮತ್ತೊಂದು 3 ಎಂಎಂ ನದು. ಈ 3 ಎಂಎಂ ಕಲ್ಲಿನ ಬಗ್ಗೆ ಚಿಂತೆಯಿಲ್ಲ. ಅದನ್ನು ಟ್ಯಾಬ್ಲೆಟ್ ಗಳ ಮೂಲಕ ತೆಗೆದುಬಿಡಬಹುದು. ಆದರೆ ಉಳಿದೆರಡು ಕಲ್ಲುಗಳನ್ನು ತೆಗೆಯಲು ಸಿಸ್ಟೋಸ್ಕಾಪಿ ಮಾಡಬೇಕಾಗತ್ತದೆ” ಎಂದರು ಮಧುಸೂದನ್ ಡಾಕ್ಟ್ರು. ಮೊಟ್ಟಮೊದಲಬಾರಿಗೆ ಈ ಶಬ್ದ ಕೇಳಿದ್ದೆ.

“ಸಿಸ್ಟೋಸ್ಕಾಪಿ ಅಂದ್ರೆ?” ಎಂದೆ. “ಏನಿಲ್ಲ ಒಂದು ಪೈಪನ್ನು ಪೆನಿಸ್ ಮುಖಾಂತರ ಪಾಸ್ ಮಾಡುತ್ತೇವೆ. ನಂತರ ಯುರೇಟರ್ ಹಾಗೂ ಕಿಡ್ನಿಯಲ್ಲಿರುವ ಎರಡು ಕಲ್ಲುಗಳನ್ನು ಒಡೆದು ಹೊರತೆಗೆಯುತ್ತೇವೆ”.

ಒಂದು ಕ್ಷಣ ಏನು ಹೇಳಬೇಕೆಂದು ತಿಳಿಯಲಿಲ್ಲ. ಡಾಕ್ಟರ್ ಹೇಳಿದ ವರ್ಣನೆ ನಾನು ಡಿಹೈಡ್ರೇಟ್ ಆಗುವಂತೆ ಮಾಡಿತು. “ಡಾಕ್ ಇಸ್ ದೇರ್ ನೋ ಅಲ್ಟರ್ನೇಟಿವ್?” ದೈನ್ಯದಿಂದಲೇ ಕೇಳಿದೆ. ವೆಲ್…. ಅನ್ ಫಾರ್ಚುನೇಟ್ಲಿ ನಾಟ್ ಎಂದರು.

“ಐ ಆಮ್ ಓಕೆ ವಿತ್ ಇಟ್. ಬಟ್ ವರಿಡ್ ಅಬೌಟ್ ದಿ ಪೇನ್ ದಟ್ ಐ ನೀಡ್ ಟು ಅಂಡರ್ ಗೋ” ಎಂದೆ.

“ಇಲ್ಲ ಇಲ್ಲ. ಪೇನ್ ಇರುವುದಿಲ್ಲ. ನಿಮಗೆ ಲೋಕಲ್ ಅನಸ್ತೇಷಿಯಾ ಕೊಟ್ಟಿರ್ತೀವಿ. ಹೀಗಾಗಿ ಪೇನ್ ಗೊತ್ತಾಗುವುದಿಲ್ಲ. ಯೂ ವೋಂಟ್ ಫೀಲ್ ಎನಿಥಿಂಗ್” ಎಂದು ಭರವಸೆ ನೀಡಿದರು ಡಾ. ಮಧುಸೂದನ್. “ನೀವು ಸಿಸ್ಟೋಸ್ಕಾಪಿಗೆ ರೆಡಿ ಇದ್ದರೆ ಹೇಳಿ. ಅಷ್ಟರಲ್ಲಿ ನಾನು ರೌಂಡ್ ಮುಗಿಸಿ ಬರುತ್ತೇನೆ. ಗುಡ್ ಲಕ್” ಎಂದವರೇ ತಮ್ಮ ಹಿಂದೆ ತಂದಿದ್ದ ಹಿಂಡುಹಿಂಡು ಸಿಸ್ಟರ್ ಗಳೊಂದಿಗೆ ಮೆರವಣಿಗೆ ಮುಂದುವರೆಸಿದರು.

ಜೂನಿಯರ್ ಡಾಕ್ಟರ್ ನಾಗರಾಜ್ ಗೆ, “ಸಿಸ್ಟೋಸ್ಕಾಪಿಗೆ ಎಷ್ಟು ಖರ್ಚಾಗಬಹುದು?” ಎಂದು ಕೇಳಿದೆ. ಡಾ. ನಾಗರಾಜ್, ನನ್ನ ಅಭಿಮಾನಿ. “ಒಂದು ನಿಮಿಷ ಚೆಕ್ ಮಾಡಿ ಹೇಳುತ್ತೇನೆ. ಹೇಗೂ ನಿಮಗೆ ಇನ್ಶೂರೆನ್ಸ್ ಇದೆಯಲ್ವ…ಮತ್ಯಾಕೆ ಚಿಂತೆ?” ಎಂದು ಪುಕ್ಕಟ್ಟೆ ಸಲಹೆ ನೀಡಿ ಸೀನಿಯರ್ ಗಳ ಬಳಿಗೆ ತೆರಳಿದರು. ಅರ್ಧಗಂಟೆಯಲ್ಲ ಮರಳಿದ ಅವರು, ಸುಮಾರು 30 ಸಾವಿರ ಖರ್ಚಾಗಬಹುದು. ನಾನ್ ಮೆಡಿಕಲ್ ಎಕ್ಸಪೆಂಡಿಚರ್ ಸುಮಾರು 10 ಸಾವಿರ ಇಟ್ಟುಕೊಂಡರೂ 40 ಸಾವಿರದ ಒಳಗೆ ಎಲ್ಲ ಮುಗೀಬಹುದು ಅಂತ ರೇಟ್ ಕಾರ್ಡ್ ಮುಂದೆ ಹಿಡಿದರು. ಅವರು ಹಾಗೆ ಹೇಳುವುದಕ್ಕೂ ಕೊಪ್ಪದ ನನ್ನ ಮನೆಯಿಂದ ಅಣ್ಣನ ಫೋನ್ ಬರುವುದಕ್ಕೂ ಸರಿಹೋಯಿತು. ಅಲ್ಲಾಗಲೇ ವಿಷಯ ತಿಳಿಸಿಯಾಗಿತ್ತು. ಅಣ್ಣ ಹೇಳಿದ, “ಸುಘೋಷಾ, ಇಲ್ಲೊಬ್ರು ನಾಟಿ ವೈದ್ಯರಿದ್ದಾರೆ. ಅವ್ರು ಒಳ್ಳೇ ಔಷಧಿ ಕೊಡ್ತಾರೆ. 28 ಎಂಎಂ ವರೆಗೂ ನಾವ್ ತಗದೀದಿವಿ ಅಂತ ಹೇಳ್ತಿದಾರೆ. ನೀ ಒಂದ್ ಕೆಲಸಾ ಮಾಡಿದ್ರೆ ಆಯ್ತೆನಾ ಅಂತ. ಕಾರ್ ಮಾಡ್ಕೊಂಡು ಇಲ್ಲೇ ಕೊಪ್ಪಕ್ ಬಂದ್ ಬಿಡು. ಅವರು ಬೆಳಿಗ್ಗೆ ಆರು ಗಂಟೆಗೆ ಔಷಧಿ ಕೊಟ್ರೆ ಸಂಜೆ ಆರು ಗಂಟೆ ವಳಗೆ ಕಲ್ಲು ಹೊರಗೆ ಬಿದ್ಬಿಡತ್ತಂತೆ”. ಅಂದ ಹಾಗೆ ಆ ನಾಟಿ ವೈದ್ಯರು 200 ರೂಪಾಯಿ ಚಾರ್ಜ್ ಮಾಡುತ್ತಾರೆ ಎಂದು ಹೇಳಲು ಅಣ್ಣ ಮರೆಯಲಿಲ್ಲ.

ದ್ವಂದ್ವದ ಉಗಮವಾಗಿತ್ತು.

(ನಾಳೆ: ಹಿತ್ತಲ ಗಿಡ ಮದ್ದಲ್ಲ….)

ಮೊದಲ ದಿನ ಮೌನ…ಹೊಟ್ಟೆನೋವಿನಿಂದಾಗಿ ಅಳುವೇ ತುಟಿಗೆ ಬಂದಂತೆ….

ಪ್ರತಿನಿತ್ಯ ಗುಡ್ ಬಾಯ್ ಹಾಗೆ ಐದೂವರೆ ಆರುಗಂಟೆಗೆಲ್ಲ ಎದ್ದುಬಿಡುತ್ತೇನೆ. ಆದರೆ ಸನ್ ದೋ ಹಜಾರ್ ದಸ್ ಜನೆವರಿ ಮಾಹೆಯ 20 ನೇ ದಿನದಂದು ತಾನಾಗಿಯೇ ಎಚ್ಚರವಾದಾಗ ಈಟಿವಿಯಲ್ಲಿ ಮುಂಜಾನೆ ಕನ್ನಡಿ ನಾಡಿಯ ಮಾಂಟೇಜ್ ಗುಡುಗುಡು ಉರುಳುತ್ತಿತ್ತು. ಹೊಟ್ಟೆಯಲ್ಲಿ ಏನೋ ಒಂದು ರೀತಿಯ ನೋವು. ಸರಿಯಾಗಿ ಹೇಳಿಕೊಳ್ಳಲಾಗದ ಚಡಪಡಿಕೆ. ಹಾಸಿಗೆಯಲ್ಲಿ ಎದ್ದುಕುಳಿತೆ, ಮತ್ತೆ ಮಲಗಿದೆ, ಮಗ್ಗಲು ಬದಲಾಯಿಸಿದೆ, ಅಂಗಾತ-ಕವುಚಿ ಮಲಗಿ ನೋಡಿದೆ. ಊಹುಂ….ಏನೇ ಆದರೂ ನೋವು ನಿಲ್ಲುತ್ತಿಲ್ಲ. ಇನ್ನು ಮಲಗಿ ಪ್ರಯೋಜನವಿಲ್ಲವೆಂದುಕೊಂಡು ಎದ್ದುಹೋಗಿ ನಿತ್ಯದ ಅಭ್ಯಾಸದಂತೆ ಒಂದು ಲೋಟ ಭರ್ತಿ ನೀರು ಕುಡಿದೆ.

ನೋವು ಹೆಚ್ಚಾಯಿತು.

ಶೌಚಕ್ಕೆ ಹೋದರೆ ಯಾವುದೇ ಸಮಸ್ಯೆಯಿಲ್ಲದೆ ಸಾಂಗವಾಗಿ ನೆರವೇರಿತು. ಬೆಳಿಗ್ಗಿನ ತಿಂಡಿ ತಿನ್ನಲು ಆಗಲಿಲ್ಲ. ಬ್ಲಾಗ್ ಮೀಟರ್ ಒಳ್ಳೆಯ ಟಿ ಆರ್ ಪಿ ತೋರಿಸುತ್ತಿದ್ದರೂ, ಕಂಪ್ಯೂಟರ್ ಮುಂದೆ 15 ನಿಮಿಷಕ್ಕೂ ಹೆಚ್ಚು ಕೂರಲಾಗಲಿಲ್ಲ. ಒಂಬತ್ತುವರೆ ಸುಮಾರಿಗೆ ಮತ್ತೆ ಮಲಗಿಬಿಟ್ಟೆ.

ಆಗಿನಿಂದ ಶುರವಾಯಿತು ನೋಡಿ ಹೋಯ್ಕೋ ಬಡ್ಕೋ. ಏನೇ ಮಾಡಿದರೂ ಹೊಟ್ಟೆ ಶಾಂತವಾಗುವ ಬದಲು ನೋವು ಹೆಚ್ಚುತ್ತಿತ್ತು. ಹನ್ನೊಂದು ಗಂಟೆಯವರೆಗೆ ಕೇವಲ ನರಳುತ್ತಿದ್ದವನು, ನೋವು ಸಹಿಸಲಾರದೆ ಅಳಲಾರಂಭಿಸಿದೆ. ಐ ಹ್ಯಾಡ್ ನೋ ಅಲ್ಟರ್ ನೇಟಿವ್. ಆದರೆ ಪಾದರಸದಂತೆ ಓಡಾಡಿಕೊಂಡಿದ್ದ ನಾನು ಈ ರೀತಿಯ ನೋವಿಗೆಲ್ಲ ಜಗ್ಗುವವನಲ್ಲ ಎಂಬುದು ನನ್ನ ಬಾಳ ಸಂಗಾತಿಯ ಆತ್ಮವಿಶ್ವಾಸ. ಹೀಗಾಗಿ ತಕ್ಷಣ ಪ್ಯಾರಾಸಿಟಮಾಲ್ ಕೊಟ್ಟಳು. ಕಾವಲಿ ಕಾಯಿಸಿಕೊಂಡು ಬಂದು ಅದರ ಮೇಲೆ ಬಟ್ಟೆ ಬಿಸಿ ಮಾಡಿ ಹೊಟ್ಟೆಗೆ ಶಾಖ ನೀಡಲಾರಂಭಿಸಿದಳು. ಸುಮಾರು ಒಂದು ಗಂಟೆಯ ನರಳಾಟದ ಬಳಿಕ ನೋವು ಕಂಟ್ರೋಲ್ ಗೆ ಬಂತು. ಆದರೆ ಸಂಪೂರ್ಣ ನಿಂತಿರಲಿಲ್ಲ. ಹೊಟ್ಟೆಗೆ ನೀಡಿದ ಶಾಖದ ಪ್ರಭಾವವೋ, ಪ್ಯಾರಾಸಿಟಮಾಲ್ ಮ್ಯಾಜಿಕ್ಕೋ, ಅಂತೂ ನಿದ್ದೆಗೆ ಜಾರಿಬಿಟ್ಟೆ, ನೋವಿನಲ್ಲೇ.

ಆದರೆ ಮತ್ತೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ನೋವು ಒತ್ತಿಕೊಂಡು ಬಂತು. ಈ ಬಾರಿ ಬಂದ ನೋವು ಮಾತ್ರ ಪ್ಯಾರಾಸಿಟಮಾಲ್ ಹೊಟ್ಟೆಗೆ ಕಳುಹಿಸುದದರ ಬಗ್ಗೆ ತೀರ ಕೋಪಮಾಡಿಕೊಂಡಂತಿತ್ತು. ಹೀಗಾಗಿ ಎರಡು ಪಟ್ಟು ಜೋರಾಗಿ ಹೊಟ್ಟೆ ನೋಯಲಾರಂಭಿಸಿತು. ಸುಮಾರು 35 ವರ್ಷಗಳ ಕಾಲ ಏರ್ ಫೋರ್ಸ್ ನ ಮೆಡಿಕಲ್ ಟ್ರೇಡ್ ನಲ್ಲಿದ್ದು, ಚೀನಾ, ಬಾಂಗ್ಲಾ, ಪಾಕಿಸ್ತಾನ ವಾರ್ ಗಳಲ್ಲಿ ಭಾರತೀಯ ಸೈನಿಕರಿಗೆ ಚಿಕಿತ್ಸೆ ನೀಡಿರುವ ನನ್ನ ಮಾವ, ನನ್ನ ಸ್ಥಿತಿ ನೋಡಿ ಮೊದಲ ಬಾರಿ ಚಿಂತಿತರಾದರು. ತಕ್ಷಣ ಮೆಡಿಕಲ್ ಶಾಪ್ ಗೆ ಹೋದವರೆ ಬರಾಲ್ಗನ್ ಹಾಗೂ ಮತ್ತೊಂದು ಮಾತ್ರೆ ತಂದು ಕೊಟ್ಟರು. ಯಾವುದೇ ಪರಿಣಾಮ ಕಂಡುಬರಲಿಲ್ಲ. ಸಂಜೆ ಆರುಗಂಟೆ ವೇಳೆಗೆ ನಮ್ಮ ಕುಟುಂಬ ವೈದ್ಯರಾದ ಡಾ. ಸತೀಶ್ ಬಂದವರೇ ನನ್ನ ಸ್ಥಿತಿ ಪರಿಕ್ಷೀಸಿದರು. ಆಗ ಅವರು ಗೆಸ್ ಮಾಡಿದ್ದು ಅಕ್ಯೂಟ್ ಅಪೆಂಡಿಸೈಟಿಸ್.

ಆಂಟಿಬಯೋಟಿಕ್ ಹಾಗೂ ಪೇನ್ ಕಿಲ್ಲರ್ ಮಾತ್ರೆಗಳನ್ನು ಕೊಟ್ಟು ನಾಳೆಯವರೆಗೆ ನೋಡಿ, ನಂತರ ಸರ್ಜನ್ ರನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು. ಆದರೆ ಡಾ. ಸತೀಶ್ ಅವರು ಪ್ರಿಸ್ರ್ಕೈಪ್ ಮಾಡಿದ ಗುಳಿಗೆಳನ್ನು ನುಂಗಲು ಆಹಾರ ಸೇವಿಸುವುದು ಅನಿವಾರ್ಯವಾಗಿತ್ತು. ನನಗೆ ಇಂದಿಗೂ ನನ್ನ ಬಗ್ಗೆಯೇ ಖುಷಿ ಕೊಡುವ ನನ್ನ ಗುಣವೆಂದರೆ, ಯಾವುದಾದರೂ ಒಂದು ಕೆಲಸ ನನಗೆ ಸವಾಲಿನದು ಎನಿಸಿದರೆ ಅದನ್ನು ಹಟಕ್ಕೆ ಬಿದ್ದು ಸಾಧಿಸುವುದು. ಹೀಗಾಗಿ ಬಾಯಿ ರುಚಿ ಕೆಟ್ಟು, ಹೊಟ್ಟೆ ನೋವು ತಾರಕಕ್ಕೇರಿದ್ದರೂ ಅನಾಮತ್ತಾಗಿ ಗಬಗಬನೆ ಊಟ ಮಾಡಿ “ಹೆಂಗೆ ಮಗನೆ?” ಎಂದೆ ಹೊಟ್ಟಗೆ.

ಗುಳಿಗೆ ನುಂಗಿದೆ.

ದುರಾದೃಷ್ಟ ಊಟಮಾಡಿದ ಹತ್ತುನಿಮಿಷದ ಒಳಗೆ ಗುಳಿಗೆಯ ಸಮೇತ ವಾಂತಿಯಾಯಿತು.

ಎರಡುಗಂಟೆ ಬಿಟ್ಟು ಮತ್ತೆ ಆಹಾರ ಸೇವಿಸಿ ಗುಳಿಗೆ ನುಂಗಿದರೆ ಮತ್ತೆ ವಾಂತಿ. ರಾತ್ರಿ ಹತ್ತೂವರೆ ಸುಮಾರಿಗೆ ಹೊಟ್ಟೆನೋವು, ವಾಂತಿ, ಪೇನ್ ಕಿಲ್ಲರ್, ನಿರಂತರ ಅಳುವಿನಿಂದಾಗಿ ಬೆಂಡಾಗಿಬಿಟ್ಟಿದ್ದೆ. ಆಸ್ಪತ್ರೆಗೆ ಅಡ್ಮಿಟ್ ಮಾಡದೇ ಬೇರೆ ವಿಧಿಯೇ ಇರಲಿಲ್ಲ. ರಾತ್ರಿ ಹನ್ನೊಂದೂ ಕಾಲರ ಸುಮಾರಿಗೆ ನನ್ನ ಮಾಮ ಶ್ರಿನಿವಾಸ್ ಹಾಗೂ ಅವರ ಮಗ ಅಭಿಜಿತ್ ಕಾರು ತೆಗೆದುಕೊಂಡು ಬಂದರು. ನನ್ನನ್ನು ಕೂರಿಸಿಕೊಂಡು ಕಾರ್ ನೇರವಾಗಿ ಹೋಗಿದ್ದು, ಗಿರಿನಗರದ ರಾಧಾಕೃಷ್ಣ ಆಸ್ಪತ್ರೆಗೆ. ನನ್ನ ಮಗ ಅಲ್ಲೇ ಹುಟ್ಟಿದವನಾದ್ದರಿಂದ ಎಲ್ಲ ವೈದ್ಯರ, ಸಿಸ್ಟರ್ ಗಳ ಪರಿಚಯ ಚೆನ್ನಾಗಿತ್ತು. ಮೇಲಾಗಿ ಮುಖ್ಯಮಂತ್ರಿಗಳ ಮಗ ಬೇರೆ. ವೈದ್ಯರು ಮೊದಲ ಮಾಡಿದ ಕೆಲಸ ನನಗೆ ಪೇನ್ ಕಿಲ್ಲರ್ ನ ಸ್ಟ್ರಾಂಗ್ ಇಂಜೆಕ್ಷನ್ ನೀಡಿ, ಅಡ್ಮಿಟ್ ಮಾಡಲು ಹೇಳಿದ್ದು. ಆಗ ಗಡಿಯಾರ ರಾತ್ರಿ ಒಂದು ಗಂಟೆ ತೋರಿಸುತ್ತಿತ್ತು. ಬ್ಲಡ್ ಟೆಸ್ಟ್ ಗೆಂದು ಸಿಸ್ಟರ್ ಬಂದು ಬ್ಲಡ್ ತೆಗೆದುಕೊಂಡು ಹೋದಳು. ಎಡಗೈಗೆ ಸಲೈನ್ ಚುಚ್ಚಿದಳು.

ನಾನು ನಿಧಾನವಾಗಿ ನಿದ್ದೆಗೆ ಜಾರಿದೆ…..

(ನಾಳೆ : ನಾಟಿ ವೈದ್ಯವೋ, ಸಿಸ್ಟೋಸ್ಕಾಪಿಯೋ…)

ನಾಳೆಯಿಂದ ನನ್ನ ಆಸ್ಪತ್ರೆಯ ದಿನಗಳ ನೆನಪು ಮಾಲಿಕೆ ಆರಂಭ

ಇಪ್ಪತ್ತೊಂಬತ್ತು ವರ್ಷಗಳಲ್ಲಿ ಈ ರೀತಿಯದ್ದನ್ನು ಅನುಭವಿಸಿರಲಿಲ್ಲ. ಆಸ್ಪತ್ರೆ, ಅಡ್ಮಿಟ್, ಮಾತ್ರೆ, ಇಂಜೆಕ್ಷನ್ ಎಂಬುದನ್ನು ಅರಿಯದವನಾಗಿದ್ದೆ. ಆದರೆ ಮೊನ್ನೆ ಉಂಟಾದ ಹೊಟ್ಟೆ ನೋವು, ಇಡೀ ದಿನ ಹಾಸಿಗೆಯ ಮೇಲೆ ಮಲಗಿ ಬಿಕ್ಕಿಬಿಕ್ಕಿ ಅಳುವ ಹಾಗೆ ಮಾಡಿ ಬಿಟ್ಟಿತು. ಸಿಸ್ಟೋಸ್ಕಾಪಿ ಮಾಡಿಸಿಕೊಳ್ಳುವ ಹಾಗೆ ಮಾಡಿತು. ಅಂದಿನಿಂದ ಹಿಡಿದು ಮತ್ತೆ ಆರಾಮಾಗುವನತನಕದ ಅನುಭವಗಳನ್ನು ನಾಳೆಯಿಂದ ಹಂಚಿಕೊಳ್ಳಲಿದ್ದೇನೆ.

ನಿರೀಕ್ಷಿಸಿ….

ಪ್ರೀತಿಯಿರಲಿ,

ಸುಘೋಷ್ ಎಸ್. ನಿಗಳೆ

ನಾನು ಸುಘೋಷ್ ನಿಗಳೆಯೂ ಅಲ್ಲ, ದೇವಾನಂದಸ್ವಾಮಿಯೂ ಅಲ್ಲ, 202

ಸುಮಾರು ಕಳೆದ ಒಂದು ವಾರದಿಂದ ಬ್ಲಾಗ್ ಅಪ್ ಡೇಟ್ ಮಾಡಲು ಆಗಿಲ್ಲ. ಕಾರಣ ನನ್ನ ಕಿಡ್ನಿಯಲ್ಲಿ ಕಾಣಿಸಿಕೊಂಡು ಕಲ್ಲಗಳು. ಒಂದು ದಿನ ಇದ್ದಕ್ಕಿದ್ದಂತೆ ಬೆಳಿಗ್ಗೆ ಸಿಕ್ಕಾಪಟ್ಟೆ ಹೊಟ್ಟೆ ನೋವು ಬಂದು ನರಳಾಡಿಬಿಟ್ಟೆ. ರಾತ್ರಿಯ ಹೊತ್ತಿಗೆ ಆಸ್ಪತ್ರೆಗೆ ಹೋದಾಗ, ಅಬ್ಡಾಮಿನ್ ಸ್ಕಾನಿಂಗ್ ಮಾಡಿಸಿದಾಗ ಕಂಡಿದ್ದು ಮೂರು ಕಲ್ಲುಗಳು. ಅದಾದ ಬಳಿಕ ಆಗಿದ್ದು ಸಿಸ್ಟೋಸ್ಕಾಪಿ. ನಾನಿದ್ದ ರೂಂ ನಂ. 202. ಹೀಗಾಗಿ ನನಗೆ ಅಲ್ಲಿ ಚಿಕಿತ್ಸೆ ದೊರೆತಿದ್ದು 202 ಆಗಿ. ಸುಘೋಷ್ ನಿಗಳೆಯಾಗಿ ಅಥವಾ ದೇವಾನಂದ ಸ್ವಾಮಿಯಾಗಿ ಅಲ್ಲ. ಇದೀಗ ಚೇತರಿಸಿಕೊಳ್ಳುತ್ತಿದ್ದೇನೆ. ಶೀಘ್ರದಲ್ಲಿಯೇ ಮತ್ತೆ ಬ್ಲಾಗ್ ಅಪ್ಡೇಟ್ ಆರಂಭಿಸುತ್ತೇನೆ. ನೆಟ್ಟಗೆ ಕೂತಿರಬಾರದು, ಕೇವಲ ಮಲಗಿರಬೇಕು ಎಂದು ಡಾಕ್ಟರ್ ಹೇಳಿರುವುದರಿಂದ ಈ ಶಿಕ್ಷೆ.

ಶೀಘ್ರದಲ್ಲೇ ಕಾಣುವೆ,

ಸುಘೋಷ್ ಎಸ್. ನಿಗಳೆ.

ಟ್ರಾಫಿಕ್ ಪೋಲಿಸರು ಹೀಗೂ ಇರುತ್ತಾರೆ ಭಾಗ 3

ಇದು ನಾನು ನೋಡಿದ ಘಟನೆ. ಸ್ಥಳ ಕತ್ರಿಗುಪ್ಪೆ ಸಮೀಪದ ರಿಂಗ್ ರೋಡಿನಲ್ಲಿ ಐಸಿಐಸಿಐ ಬ್ಯಾಂಕ್  ಎದುರು. ಅದರ ಮುಂದೆ ಗಿಡಗಳಿಗವೆ. ಅಲ್ಲಿ ತಿಂಗಳಿನಲ್ಲಿ ಇಪ್ಪತ್ತೈದು ದಿನ ಒಬ್ಬ ನಿರ್ದಿಷ್ಟ ಟ್ರಾಫಿಕ್ ಎಸ್ಐ ಹಾಗೂ ಇಬ್ಬರು ನಿರ್ದಿಷ್ಟ ಪೋಲಿಸ್ ಪೇದೆಗಳು ಇರುತ್ತಾರೆ.

ಐಸಿಐಸಿಐ ಎಟಿಎಂ ನಲ್ಲಿ ಹಣ ಡ್ರಾ ಮಾಡಿಕೊಂಡು ಹೊರಬಂದಾಗ ಮಹಿಂದ್ರಾ ಗೂಡ್ಸ್ ಜೀಪ್ ಒಂದನ್ನು ಪೋಲಿಸ್ ಪ್ಯಾದೆ ಹಿಡಿದಿದ್ದ. ಯೂ ಟರ್ನ್ ನಿಷೇಧದ ತಿರುವಿನಲ್ಲಿ ಯೂ ಟರ್ನ್ ತೆಗೆದುಕೊಂಡಿರುವೆ ಎಂದು ಪ್ಯಾದೆ. ಇಲ್ಲ, ಇನ್ನೂ ಸ್ವಲ್ಪ ಮುಂದೆ ಹೋದರೆ ಡಿವೈಡರ್ ಬರುತ್ತದೆ.ಅಲ್ಲಿ ಯೂ ಟರ್ನ್ ತೆಗೆದುಕೊಂಡಿದ್ದೇನೆ ಎಂದು ಡ್ರೈವರ್. ವಾದವಿವಾದ ಸಾಗಿತ್ತು. ಪ್ಯಾದೆ ಆತನನ್ನು ಕರೆದುಕೊಂಡು ಹೋಗಿ ಎಸ್ಐ ಎದುರು ನಿಲ್ಲಿಸಿದ. ಡ್ರೈವರ್ ದೊಡ್ಡ ದನಿ ತೆಗೆದು ಮಾತನಾಡುತ್ತ, ತಾನು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಸಾಬೀತು ಮಾಡುವಲ್ಲಿ ಅಂತೂ ಸಫಲನಾದ. ಎಸ್ಐ ಆತನಿಗೆ ಹೋಗಲು ಹೇಳಿದ. ಪ್ರಕರಣ ಬೇಗ ಮುಗಿದಿದ್ದಕ್ಕೆ ಅಲ್ಲಿ ನಿಂತು ತಮಾಷೆ ನೋಡುತ್ತಿದ್ದ ಜನರಿಗೆ ಬೇಜಾರಾಯಿತು. ನನಗೆ ಬ್ಯಾಂಕಿನಲ್ಲಿ ಕೆಲಸವಿತ್ತಾದ್ದರಿಂದ ನಾನು ಬ್ಯಾಂಕ್ ಪ್ರವೇಶಿಸಿದೆ. ಐಸಿಐಸಿಐನ ಎಟಿಎಂ ಬ್ಯಾಲೆನ್ಸ್ ಸ್ಲಿಪ್ ಕೊಡುವಾಗ ಒಂದು ಟ್ರಾನ್ಸಾಕ್ಷನ್ ಸ್ಲಿಪ್ ಕೊಡುವ ಬದಲು ಮೂರು ಟ್ರಾನ್ಸಾಕ್ಷನ್ ಸ್ಲಿಪ್ ಕೊಡುತ್ತಿತ್ತು. ಅದನ್ನು ಮೂರನೇ ಬಾರಿ ಬ್ಯಾಂಕ್ ನ ಗಮನಕ್ಕೆ ತರಲು ಹೋಗಿದ್ದೆ. ನನ್ನ ಕೆಲಸ ಮುಗಿಯಿತು. ಹೊರಗೆ ಬಂದು ನೋಡಿದರೆ ಅಬ್ಬಾ ಅದೇನು ದೃಶ್ಯ. ಅದೇ ಡ್ರೈವರ್, ಪೋಲಿಸ್ ಪ್ಯಾದೆಯನ್ನು ವಾಚಾಮಗೋಚರ ಬೈಯುತ್ತಿದ್ದಾನೆ. “ಏನು ಮೊಬೈಲ್ ನಂಬರ್ ಕೇಳ್ತೀಯಾ? ನನ್ನ ನಂಬರ್ ತೆಗೆದುಕೊಳ್ಳೋದಾದರೆ ನಿನ್ನ ನಂಬರ್ ಕೂಡ ಕೊಡು. ಅದ್ಯಾರಿಗೆ ರಿಪೋರ್ಟ್ ಮಾಡುತ್ತೀಯೋ ನಾನೂ ನೋಡುತ್ತೇನೆ. ರೂಲ್ಸ್ ಏನು ಅಂತ ಪಬ್ಲಿಕ್ ಗೆ ಹೇಳಿಕೊಡುವ ಮೊದಲು ನೀನು ಮೊದಲು ರೂಲ್ಸ್ ತಿಳ್ಕೊ. ನೀನು ಪಬ್ಲಿಕ್ ಗೆ ಗೌರವ ಕೊಟ್ರೆ ಪಬ್ಲಿಕ್ಕೂ ನಿನಗೆ ಗೌರವ ಕೊಡುತ್ತೆ. ಬೆಳಿಗ್ಗೆಯಿಂದ ಹಿಂಗೆ ಅಂಗಡಿ ತೆರೆದುಕೊಂಡು ಕೂತರೆ ಗೌರವ ಹೇಗೆ ಬರುತ್ತೆ? ನಿನ್ನಂಥವರ ಎದುರು ನಾಯಿಗೆ ಬಿಸಾಕಿದ ಹಾಗೆ 100 ರೂಪಾಯಿ ಬಿಸಾಕಿದರೆ ಸುಮ್ಮನಾಗ್ತೀರ….”ಹೀಗೆ ಸಾಗಿತ್ತು ಡ್ರೈವರ್ ನ ಮಾತಿತ ಓಘ. ಡ್ರೈವರ್ ಕಡಿಮೆಯೆಂದರೂ 100 ಡೆಸಿಬಲ್ ಪರಿಮಾಣದಲ್ಲಿ ಮಾತನಾಡುತ್ತಿದ್ದರೆ, ಪೋಲಿಸ್ ಪ್ಯಾದೆ ಥರಗುಟ್ಟಿ ಹೋಗಿದ್ದ. ಎಸ್ಐ ಪೇದೆಯನ್ನು ವಾಪಸ್ ಬರುವಂತೆ ಹೇಳಿ ಹೇಳಿ ಸಾಕಾಗಿ ಹೋಗಿದ್ದ. ಪೋಲಿಸರ ಮಾನ ಎರಡೂಮುಕ್ಕಾಲು ಕಾಸಿಗೆ ಹರಾಜಾಗಿ ಹೋಗಿತ್ತು. ಜನ ಎಲ್ಲ ನಿಂತು ತಮಾಷೆ ನೋಡಿದ್ದರು. ಅಂತೂ ಡ್ರೈವರ್ ಶಾಂತನಾಗಿ ವಾಪಸ್ ಹೋಗಿ ತನ್ನ ಜೀಪಿನಲ್ಲಿ ಕುಳಿತ. ನಾನು ತಕ್ಷಣ ಹೋದವನೆ “ತುಂಬಾ ಚೆನ್ನಾಗಿ ಮಾತನಾಡಿದಿರಿ. ನಿಮ್ಮಂಥವರು ಬೇಕು” ಎಂದೆ. “ಸಾರ್, ನಾಲ್ಕು ಜನ ಪಬ್ಲಿಕ್ ನನ್ನ ಜೊತೆ ನಿಲ್ಲಲಿ ಸಾರ್ ಈ ಪೋಲಿಸರ ………….ಬಿಡುತ್ತೆನೆ” ಎಂದು ನಗುತ್ತ ಗಾಡಿ ಸ್ಟಾರ್ಟ್ ಮಾಡಿ ಹೊರಟು ಹೋದ.

ನನಗೆ ಅನಿಸಿದ್ದು.

ಭಾರತದಲ್ಲಿ ಇಂದಿಗೂ ಈ ರೀತಿಯ ಸಣ್ಣ ಸಣ್ಣ ವಿಶಲ್ ಬ್ಲೋವರ್ಸ್ ಇದ್ದಾರೆ. ಇಂತಹವರಿಂದಾಗಿಯೇ ಭ್ರಷ್ಟಾಚಾರ ನಿಯಂತ್ರಣದಲ್ಲಿದೆ. ಆದರೆ ಪ್ರತಿ ತಿಂಗಳೂ ಮಂತ್ಲಿ ಫಿಕ್ಸ್ ಮಾಡಿರುವ ಇನ್ಸ್ ಪೆಕ್ಟರ್, ಎಸಿಪಿ, ಡಿಸಿಪಿ, ಅವರಪ್ಪ, ಅವರಜ್ಜ ಬಡಪಾಯಿ ಪೋಲಿಸ್ ಪೇದೆಗಳ ಮೇಲೆ ಪ್ರೆಶರ್ ಹಾಕುತ್ತಿದ್ದರೆ, ಪಾಪ ಪೇದೆಗಳಾದರೂ ಬೆಳಿಗ್ಗೆ ಬೆಳಿಗ್ಗೆ ಅಂಗಡಿ ತೆರೆಯದೆ ಇನ್ನೇನು ಮಾಡುತ್ತಾರೆ. ವಿಕ್ಟಿಮ್ ಈಸ್ ದಿ ವೀಕೆಸ್ಟ್….

ಟ್ರಾಫಿಕ್ ಪೋಲಿಸರೂ ಹೀಗೂ ಇರುತ್ತಾರೆ ಭಾಗ -2

ಇದು ನನ್ನ ಮಿತ್ರನ ಮಿತ್ರನಿಗೆ ಆದ ಅನುಭವ.

ಆತನದ್ದು ಹೊಚ್ಚ ಹೊಸ ನೀಲಿ ಬಣ್ಣದ R15. ತೆಗೆದುಕೊಂಡು ವಾರವಷ್ಟೇ ಕಳೆದಿತ್ತು. ಬಿಸಿಬಿಸಿಬಿಸಿ ರಕ್ತ ಬೇರೆ. ಬೆಂಗಳೂರಿನ ಬಿಝಿಬಿಝಿಬಿಝಿ ರೋಡಿನಲ್ಲಿ R15 ಯದ್ವಾ ತದ್ವಾ ಸಾಗಿತ್ತು. ಬಿಡುತ್ತಾನೆಯೆ ಪೋಲಿಸಣ್ಣ. ಹಿಡಿದ. “ಓವರ್ ಸ್ಪೀಡ್” ಎಂದ. ಈತನ ಬಳಿ ಹಣ ಇಲ್ಲ.

“ಸಾರ್ ದುಡ್ಡಿಲ್ಲ”.

“ನನಗದೆಲ್ಲ ಗೊತ್ತಿಲ್ಲ. ತೆಗೆದುಕೊಂಡು ಬಾ” ಹೇಳಿತು ಪೋಲಿಸಣ್ಣ. ಈತನ ಹತ್ತಿರ ಕಾರ್ಡ್ ಕೂಡ ಇಲ್ಲ. ಪೋಲಿಸಣ್ಣನ ಮುಖ ನೋಡುತ್ತ ನಿಂತೇ ಇದ್ದ. ಐದು ನಿಮಿಷ ಕಳೆಯಿತು. ಹತ್ತು ನಿಮಿಷ ಕಳೆಯಿತು. ಪೋಲಿಸ್ ಬಿಡೆ, ಈತ ಕೊಡೆ.

“ಸರಿ, ಗಾಡಿ ಕೀ ಕೊಡು” ಅಂದಿತು ಪೋಲಿಸ್. ಈತ ಕೊಟ್ಟ. ಪೋಲಿಸಣ್ಣ ಗಾಡಿಯ ಮೇಲೆ ಕುಳಿತು ಸ್ಟಾರ್ಟ್ ಮಾಡಿದವನೇ ಬುರ್ ಎಂದು R15 ತೆಗೆದುಕೊಂಡು ಕ್ಷಣಾರ್ಧದಲ್ಲಿ ಹೋಗಿಬಿಟ್ಟ. ಈತನಿಗೆ ಒಂದು ಕ್ಷಣ ಏನು ಮಾಡಬೇಕೆಂದು ಗೊತ್ತಾಗಲೇ ಇಲ್ಲ. ಅಲ್ಲಿದ್ದ ಇತರ ಪೋಲಿಸರ ಮುಖ ನೋಡಿದ. ತಮಗೂ ಅವನಿಗೂ ಸಂಬಂಧವೇ ಇಲ್ಲದಂತೆ ಅವರು ನಿಂತಿದ್ದರು. ಈತನಿಗೆ ಭಯ ಶುರುವಾಯಿತು. ಆತ ಪೋಲಿಸ್ ಯೂನಿಫಾರ್ಮ್ ಧರಿಸಿದ್ದ ಕಳ್ಳನಾಗಿದ್ದರೆ ಹೋಯಿತು ತನ್ನ ಲಕ್ಷದ ಬೈಕ್ ಎಂದು. ಐದು ನಿಮಿಷದಲ್ಲಿ ಈತನ ದೇಹದಿಂದ ಎರಡು ಲೀಟರ್ ಬೆವರು ಹರಿದುಹೋಗಿತ್ತು. ಇನ್ನೊಂದು ನಿಮಿಷ ಕಳೆದಿದ್ದರೆ ಡಿಹೈಡ್ರೇಷನ್ ನಿಂದ ಸಾಯುವ ಸ್ಥಿತಿ. ಬೈಕ್ ತೆಗೆದುಕೊಂಡು ಹೋಗಿದ್ದ ಪೋಲಿಸಣ್ಣ ರಭಸದಿಂದ ಬಂದು ಗಕ್ಕನೆ ಬ್ರೇಕ್ ಹಾಕಿ ಬೈಕ್ ನಿಲ್ಲಿಸಿದ. ಕೀ ತೆಗೆದು ಈತನಿಗೆ ಕೊಡುತ್ತ, ತುಂಬಾ ದಿನಗಳಿಂದ ಈ ಬೈಕ್ ಹೊಡೆಯಬೇಕೆಂದಿದ್ದೆ. ಸಿಕ್ಕಿರಲಿಲ್ಲ. ಚೆನ್ನಾಗಿದೆ ಬೈಕು. ಆದರೆ ನಿಧಾನವಾಗಿ ಓಡಿಸು ಎಂದು ಈತನನ್ನು ಬೀಳ್ಕೊಟ್ಟ.

ಟ್ರಾಫಿಕ್ ಪೋಲಿಸರು ಹೀಂಗೂ ಇರುತ್ತಾರೆ….

(ಫೋಟೋ ಕೃಪೆ – ದಿ ಹಿಂದು. ಫೋಟೋ ರೆಫೆರೆನ್ಸಿಗೆ ಮಾತ್ರ)

ಕೆಲ ದಿನಗಳ ಹಿಂದೆ ನನ್ನ ಕಸಿನ್ ಅಭಿಜಿತ್ ನಿಗೆ ಆದ ಅನುಭವ.

ಆತ ಇತ್ತೀಚೆಗಷ್ಟೇ ಹಳೆ ಮಾದರಿಯ ಮಿರಿಮಿರಿ ಕಪ್ಪು ಬಣ್ಣದ ಸೆಕೆಂಡ್ ಹ್ಯಾಂಡ್ ಎನ್ಫೀಲ್ಡ್ ಬುಲೆಟ್ ಖರೀದಿಸಿದ್ದಾನೆ. ರಸ್ತೆಯಲ್ಲಿ ಆತ ಹೊರಟರೆ ಜನ ಹಂಗೆ ನಿಂತು ನೋಡಬೇಕು. ಅಂತ ಸೌಂಡು, ಅಂತ ಜೋರು ಬುಲೆಟ್ಟದು.  ಮೊನ್ನೆ ಸಿಗ್ನಲ್ ಜಂಪ್ ಮಾಡಿದ್ದಕ್ಕೆ ಟ್ರಾಫಿಕ್ ಪೋಲಿಸ್ ಅಡ್ಡಗಟ್ಟಿದ್ದ. ಫೈನ್ ಹಾಕುವುದಾಗಿ ಹೇಳಿದ. ಆದರೆ ಫೈನ್ ಹೋಗಲಿ ಅಡ್ಜಸ್ಟ್ ಮಾಡಿಕೊಳ್ಳುವುದಕ್ಕೂ ಈತನ ಬಳಿ ದುಡ್ಡಿಲ್ಲ. “ದುಡ್ಡಿಲ್ಲ ಸಾರ್” ಎಂದಿದ್ದಾನೆ ಟ್ರಾಫಿಕ್ ಪೋಲಿಸ್ ಗೆ. “ನನಗದೆಲ್ಲ ಗೊತ್ತಿಲ್ಲ. ಸುಮ್ನೆ ಫೈನ್ ಕಟ್ಟು” ಎಂದು ಕಡ್ಡಿ ಮುರಿದಂತೆ ಹೇಳಿದೆ ಪೋಲಿಸ್. “ದುಡ್ಡಿಲ್ಲ” ಎಂದು ಜೇಬುಗಳನ್ನು ತೆಗೆದು ತೋರಿಸಿದರೂ ಆತ ನಂಬಿಲ್ಲ. ಪುಣ್ಯಕ್ಕೆ ಅಭಿಜಿತ್ ಬಳಿ ಕಾರ್ಡ್ ಇತ್ತು. ಹೀಗಾಗಿ “ಸಾರ್, ನನ್ನ ಲೈಸೆನ್ಸ್ ನಿಮ್ಮ ಬಳಿಯೇ ಇರಲಿ. ಇಲ್ಲೇ ಹತ್ತಿರದಲ್ಲಿ ಎಟಿಎಂ ಇದೆ. ದುಡ್ಡು ವಿತ್ ಡ್ರಾವ್ ಮಾಡಿಕೊಂಡು ಬಂದು ಫೈನ್ ಕಟ್ಟುತ್ತೇನೆ” ಎಂದು ಬೈಕ್ ಏರಿ ಎಟಿಎಂಗೆ ಹೋಗಿದ್ದಾನೆ. ಈತನ ದುರಾದೃಷ್ಟಕ್ಕೆ ಮೂರ್ನಾಲ್ಕು ಬಾರಿ ಪ್ರಯತ್ನಿಸಿದರೂ ದುಡ್ಡು ಬಂದಿಲ್ಲ. ಮಷಿನ್ ಪ್ರಾಬ್ಲಂ. ಹತ್ತಿರದಲ್ಲಿ ಬೇರೆಲ್ಲೂ ಎಟಿಎಂ ಇಲ್ಲ. ದೂರ ಹೋಗೋಣವೆಂದರೆ ಗಾಡಿಯಲ್ಲಿ ಪೆಟ್ರೋಲ್ ಇಲ್ಲ. ಪೆಟ್ರೋಲ್ ಹಾಕಿಸಿಸೋಣವೆಂದರೆ ದುಡ್ಡೇ ಇಲ್ಲ.

ವಾಪಸ್ ಪೋಲಿಸನ ಬಳಿಗೆ ಬಂದು, “ಸಾರ್ ಎಟಿಎಂ ನಲ್ಲಿ ದುಡ್ಡಿಲ್ಲ” ಎಂದಿದ್ದಾನೆ. ನನಗದೆಲ್ಲ ಗೊತ್ತಿಲ್ಲ. ಫೈನ್ ಕಟ್ಲೇ ಬೇಕು ಎಂದು ಮತ್ತೊಮ್ಮೆ ಕಡ್ಡಿ ಮುರಿದಿದೆ ಪೋಲಿಸ್. ಈತನಿಗೆ ಏನೂ ತೋಚದೆ “ಸರಿ ಸಾರ್ ಮನೆಗೆ ಹೋಗಿ ತರುತ್ತೇನೆ” ಎಂದು ಬೈಕ್ ಏರಿ ಹೊರಡಬೇಕು ಅಷ್ಟರಲ್ಲಿ ಟ್ರಾಫಿಕ್ ಪೋಲಿಸ್ ತಡೆದು,

“ತಗೋ ಲೈಸೆನ್ಸ್ ವಾಪಸ್. ನೋಡು. ನಿನ್ನನ್ನು ಈಗ ಹೋಗಲು ಬಿಡುತ್ತಿದ್ದೇನೆ. ಆದರೆ ನಿನ್ನನ್ನು ನೋಡಿ ಅಲ್ಲ. ನಿನ್ನ ಬೈಕ್ ನೋಡಿ. ಒಂದಾನೊಂದು ಕಾಲದಲ್ಲಿ ನನ್ನ ಇಲಾಖೆಯ ಎನ್ಫೀಲ್ಡ್ ಬುಲೆಟ್ಟನ್ನು ನಾನು ಓಡಿಸುತ್ತಿದ್ದೆ. ಆಹಾ…ಎಂತಹ ಫೀಲ್ ಆ ಗಾಡಿ ಓಡಿಸುವಾಗ. ರಾತ್ರಿಯ ರೌಂಡ್ಸ್ ಗೆ ಹೊರಟೆನೆಂದರೆ ಕಳ್ಳರು, ಖದೀಮರು, ರೌಡಿಗಳು ನನ್ನ ಬುಲೆಟ್ ಸದ್ದಾಗುತ್ತಲೆ ಕುಂಡೆಗೆ ಕಾಲು ಕೊಟ್ಟು ಓಡುತ್ತಿದ್ದರು. ಈಗ ನೋಡು ಸ್ಪ್ಲೆಂಡರ್, ಪಲ್ಸರ್ ಕೊಟ್ಟುಬಿಟ್ಟಿದ್ದಾರೆ. ಒಂಚೂರು ಸುಖವಿಲ್ಲ. ಹೋಗು ಮಜಾ ಮಾಡು” ಎಂದು ಬಿಟ್ಟುಬಿಟ್ಟಿದ್ದಾನೆ. ಈತ ಬೈಕ್ ಏರಲು ಹೋದರೆ, ಮತ್ತೆ ಈತನನ್ನು ನಿಲ್ಲಿಸಿ ಹತ್ತಿರದ ಬೇಕರಿಗೆ ಕರೆದುಕೊಂಡು ಹೋಗಿ ಕೇಕ್ ತಿನ್ನಿಸಿ ಕಳಿಸಿದ್ದಾನೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಬೆಂಗಳೂರಿನಲ್ಲಿ ಈ ರೀತಿಯ ಪೋಲಿಸರೂ ಇದ್ದಾರೆ.

ನಿನ್ನೆಯಿಂದ ಡಿಸೈಡ್ ಮಾಡಿದ್ದೀನಿ, ಸಿಗರೇಟು ಸೇದಲ್ಲ ಅಂತ.

ಅಂದು ಜನವರಿ 2, 2010. ರಂಗಶಂಕರದಲ್ಲಿ ಊರ್ಮಿಳೆ ನಾಟಕ ನೋಡಲು ಹೋಗಿದ್ದೆ. ರಂಗಶಂಕರಕ್ಕೆ ಹೋದಮೇಲೆ ಸಿಗರೇಟು ಸೇದದಿದ್ದರೆ ಪಾಪ ಸುತ್ತಿಕೊಳ್ಳುತ್ತದೆ. ಹೀಗಾಗಿ ಪುಣ್ಯ ಸಂಪಾದಿಸಲೇಬೇಕೆಂಬ ಹಟದಿಂದ ನಾನು ಮತ್ತು ನನ್ನ ಗೆಳೆಯ ಹತ್ತಿರದ ಕಾಂಡಿಮೆಂಟ್ಸ್ ಅಂಗಡಿಗೆ ಹೋದೆವು. (ರಂಗಶಂಕರದಲ್ಲಿ 10 ರೂಪಾಯಿಯ ಟೀ ಕುಡಿದರೂ ಪಾಪ ಸುತ್ತಿಕೊಳ್ಳುತ್ತದೆ. ಅದಕ್ಕೆ ಹತ್ತಿರದ ಕಾಂಡಿಮೆಂಟ್ಸ್ ಅಂಗಡಿಗೆ ಹೋಗಿದ್ದು).

“ಬೈಟ್ ಟೂ ಟೀ, ಎರಡು ಕಿಂಗ್” ನಾನು ಆರ್ಡರ್ ಮಾಡಿದೆ.

ಗೆಳೆಯ ಹೇಳಿದ “ಒಂದೇ ಕಿಂಗ್ ಸಾಕು”.

“ಯಾಕೆ?”

“ನನಗೆ ಬೇಡ”.

ಠಯಾಕಪ್ಪಾ?”

“ನಾನು ಸ್ಮೋಕಿಂಗ್ ಬಿಟ್ಟುಬಿಟ್ಟೆ”.

“ಯಾವಾಗಿಂದಪ್ಪ?”

“ನಿನ್ನೆಯಿಂದ. ಡಿಸೈಡ್ ಮಾಡಿದ್ದೀನಿ, ಸಿಗರೇಟು ಸೇದಲ್ಲ ಅಂತ. ಎರಡು ದಿನ ಆಯ್ತು. ಫುಲ್ ಕಂಟ್ರೋಲ್ ಮಾಡ್ತಾ ಇದೀನಿ”.

“ಹ್ಹೆ..ಹ್ಹೆ…ನಾನು ನೋಡು. ನನಗೆ ಕಂಟ್ರೋಲ್ ಮಾಡಕ್ಕೆ ಬರೋದೇ ಇಲ್ಲ. ಹೀಗಾಗಿ ಡಿಸೈಡೇ ಮಾಡ್ಲಿಲ್ಲ…”

ಎಂದು ಲೈಟರ್ ತಲೆ ಮೊಟಕಿದೆ.

ಭಾರತೀಯ ವಿದ್ಯಾ ಭವನದಲ್ಲಿನ ಕಾರ್ಯಾಗಾರದ ಫೋಟೋಗಳು

‘ಭಾರತೀಯ ವಿದ್ಯಾ ಭವನ’‘ಮಾಧ್ಯಮ ಭಾರತಿ’ಯ ವತಿಯಿಂದ ಎರಡು ದಿನಗಳ ಟಿವಿ ಸ್ಕ್ರಿಪ್ಟಿಂಗ್ ವರ್ಕ್ ಶಾಪ್ ನಿನ್ನೆ ಮುಕ್ತಾಯಗೊಂಡಿತು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಉದ್ಯೋಗಿಗಳು, ನಿವೃತ್ತ ನೌಕರರು ಪಾಲ್ಗೊಂಡಿದ್ದ ಕಾರ್ಯಾಗಾರದಲ್ಲಿ ನಾನು, ನಿರ್ದೇಶಕ ಸುನೀಲ್ ಕುಮಾರ್ ಸಿಂಗ್ (ಗೋಧೂಳಿ, ಯಾವ ಜನ್ಮದ ಮೈತ್ರಿ, ಎಲ್ಲ ಮರೆತಿರುವಾಗ ಖ್ಯಾತಿಯ), ಮಂಜುನಾಥ್ ಚಾಂದ್, ಸತ್ಯಬೋಧ ಜೋಶಿ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿದ್ದೆವು. ಎರಡು ದಿನಗಳ ಕಾರ್ಯಾಗಾರದಲ್ಲಿ ಟಿವಿ ಸೀರಿಯಲ್ ಹಾಗೂ ನ್ಯೂಸ್ ಬರವಣಿಗೆ ಕುರಿತ ತರಬೇತಿ ನಡೆಯಿತು. ಮಾಧ್ಯಮ ಭಾರತಿಯ ನಿರ್ದೇಶಕ ಜಯರಾಮ ಅಡಿಗರ ನೇತೃತ್ವದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ನಾನು ಕೋಆರ್ಡಿನೇಟ್ ಮಾಡಿ, ಧಾರಾವಾಹಿ ಹಾಗೂ ನ್ಯೂಸ್ ಬರವಣಿಗೆಗಳೆರಡಕ್ಕೂ ತರಬೇತಿ ನೀಡಿದೆ. ಕಾರ್ಯಾಗಾರದ ಕೆಲ ಫೋಟೋಗಳು ಇಲ್ಲಿವೆ.

ಕೊನೆಗೂ ಅವನು ಬಾಡಿ ಸುಡೋದಕ್ಕೆ ಲಂಚ ತಗೊಂಡ ಸಾರ್

ಇಲೆಕ್ಟ್ರಾನಿಕ್ ಮೀಡಿಯಾದಲ್ಲಿ ಹಲವು ಬಾರಿ ಒಳ್ಳೆಯ ಕಾರ್ಯಕ್ರಮಗಳನ್ನ, ಜನರ ನಿಜವಾದ ಸಮಸ್ಯೆಗಳನ್ನ ಕವರ್ ಮಾಡಲು ಆಗುವುದೇ ಇಲ್ಲ. ಮುಖ್ಯ ಕಾರಣ – ಲಿಮಿಟೆಡ್ ರಿಪೋರ್ಟರ್ಸ್ ಹಾಗೂ ಲಿಮಿಟೆಡ್ ಕ್ಯಾಮರಾಗಳು. ಪ್ರತಿಯೊಂದನ್ನು ‘ತೋರಿಸಬೇಕಾದ’ ಅನಿವಾರ್ಯತೆ ಇರುವ ಇಲೆಕ್ಟ್ರಾನಿಕ್ ಮೀಡಿಯಾದಲ್ಲಿ ಕ್ಯಾಮೆರಾ ಇಲ್ಲದಿದ್ದರೆ, ಪಿಳಿಪಿಳಿ ಕಣ್ಣುಬಿಡುತ್ತ ಬೇರೆ ಅಸೈನ್ ಮೆಂಟ್ ಗೆ ಹೋದ ಕ್ಯಾಮೆರಾ ಕಾಯುತ್ತ ಕೂರಬೇಕಾಗುತ್ತದೆ. ಒಮ್ಮೊಮ್ಮೆ ತೀವ್ರ ಒತ್ತಡದಲ್ಲಿ ನಿಜವಾದ ಇಶ್ಯೂಗಳನ್ನು ಕವರ್ ಮಾಡಲಾಗುವುದಿಲ್ಲ.

ಅಂದು ಯಾವುದೋ ಈವೆಂಟ್ ಕವರ್ ಮಾಡುತ್ತಿದ್ದೆ. ಯಾವುದೋ ರಾಜಕಾರಣಿಯ ಕಾರ್ಯಕ್ರಮ. ಒಂದಾದ ಮೇಲೊಂದರಂತೆ ನನಗಂದು ಅಸೈನ್ ಮೆಂಟ್ ಗಳಿದ್ದವು. ವೀರಾವೇಶದಿಂದ ಹೋರಾಡುತ್ತ, ಕ್ಯಾಮೆರಾಮನ್ ನನ್ನು ಸುಸ್ತು ಹೊಡೆಸುತ್ತ, ಡ್ರೈವರ್ ನಿಗೆ ಫಾಸ್ಟ್ ಹೋಗುವಂತೆ ಒತ್ತಾಯಿಸುತ್ತ ಬೆಂಗಳೂರು ನಗರ ತುಂಬ ಸಂಚರಿಸುತ್ತಿದ್ದೆ. ಈ ಮಧ್ಯೆ ಮೊಬೈಲ್ ಕರೆಯೊಂದು ಬಂತು.

“ಸಾರ್, ನಮ್ಮ ಚಿಕ್ಕಮ್ಮ ಒಬ್ರು ತೀರ್ಕೊಂಡು ಬಿಟ್ಟಿದ್ದಾರೆ. ಈಗ ಬಾಡಿಯನ್ನು ಸ್ಮಶಾನಕ್ಕೆ ತಂದರೆ ಇಲ್ಲಿ, ವಿದ್ಯುತ್ ಚಿತಾಗಾರದಲ್ಲಿ ಸುಡಲು ಲಂಚ ಕೇಳುತ್ತಿದ್ದಾರೆ. ಕಾರ್ಪೋರೇಷನ್ ನವರು ಫಿಕ್ಸ್ ಮಾಡಿರೋವಷ್ಟು ದುಡ್ಡು ಕೊಡ್ತೀವಿ ಅಂದ್ರೆ, ಕೇಳ್ತಾ ಇಲ್ಲ. ನಾಲ್ಕೂವರೆ ಸಾವಿರ ರೂಪಾಯಿ ಕೇಳ್ತಾ ಇದಾರೆ ಸಾರ್. ನಾವು ಬಡವ್ರು. ಅಷ್ಟೋ ಕೋಡೋದಕ್ಕೆ ಆಗೋದಿಲ್ಲ. ನೀವು ಬಂದು ಸಹಾಯ ಮಾಡಿ ಸಾರ್” ಅಂದಿತು ಅತ್ತ ಕಡೆಯ ಧ್ವನಿ.

“ಓ ಹೌದಾ…”ಅಂದ ನಾನು 5W1H ಪ್ರಶ್ನೆಗಳನ್ನೆಲ್ಲ ಕೇಳಿ, “ನಿಮಗೆ ಒಂದೆರಡು ನಿಮಿಷದಲ್ಲಿ ನಮ್ಮ ಕ್ರೈಮ್ ರಿಪೋರ್ಟರ್ ನಿಂದ ಫೋನ್ ಮಾಡಿಸುತ್ತೇನೆ. ವೇಟ್ ಮಾಡಿ” ಎಂದು ಹೇಳಿ ಫೋನಿಟ್ಟೆ. ತಕ್ಷಣ ನಮ್ಮ ಕ್ರೈಮ್ ರಿಪೋರ್ಟರ್ ಗೆ ಫೋನ್ ಮಾಡಿದರೆ, ಆತ ಅದ್ಯಾವುದೋ ಅವಳಿ ಕೊಲೆಯೋ, ಜವಳಿ ಕೊಲೆಯೋ ಕವರ್ ಮಾಡುವುದರಲ್ಲಿ ಬಿಝಿಯಾಗಿದ್ದ. ಹೀಗಾಗಿ ಚೀಫ್ (ಈ ಘಟನೆ ನಡೆದಾಗ ಈ ಟಿವಿಯ ಬೆಂಗಳೂರು ಚೀಫ್ ಯಾರಿದ್ದರೆಂದು ನೆನಪಿಲ್ಲ) ಗೆ ಫೋನ್ ಮಾಡಿ ಸರ್ ಹಿಂಗಿಂಗೆ ಹಿಂಗಿಂಗೆ ಎಂದು ಹೇಳಿ, ಆ ವ್ಯಕ್ತಿಯ ನಂಬರ್ ಫಾರ್ವರ್ಡ್ ಮಾಡಿದೆ.

ಸುಮಾರು ಅರ್ಧಗಂಟೆ ಕಳೆದಿರಬೇಕು. ಮತ್ತೆ ಆ ವ್ಯಕ್ತಿಯ ಫೋನು. “ಸಾರ್ ಯಾರೂ ಕಾಲ್ ಮಾಡಿಲ್ಲ ಸಾರ್. ದಯವಿಟ್ಟು ನೀವೇ ಬಂದ್ಬಿಡಿ ಸಾರ್. ಇಲ್ಲಿ ಬಾಡಿ ಇಟ್ಕೊಂಡು ಕುತೀದಿವಿ ಸಾರ್. ಇಲ್ಲಿಯ ಸ್ಟಾಫ್ ಈಗ ರೋಪ್ ಹಾಕ್ತಾ ಇದಾರೆ. ಏನ್ ಪ್ರೆಸ್ನೋವ್ರನ್ನ ಕರೀತೀರಾ? ಕರೀರಿ ನೋಡೋಣ ಅಂತೆಲ್ಲ ಮಾತಾಡ್ತಾ ಇದಾರೆ ಸಾರ್. ನೀವೇ ಬಂದ್ಬಿಡಿ ಸಾರ್ ಪ್ಲೀಸ್” ಎಂದು ತುಂಬಾ ವಿನಂತಿಸಿತು ಧ್ವನಿ. ನನಗೋ ನನ್ನ ಅಸೈನ್ ಮೆಂಟ್ ಗಳ ಒತ್ತಡ. ಚೀಫ್ ಗೆ ಫೋನ್ ಮಾಡಿದರೆ, “ಎಲ್ಲರೂ ಬಿಝಿ, ಎಲ್ಲ ಕ್ಯಾಮರಾಗಳೂ ಬಿಝಿ” ಎಂಬ ರೆಡಿಮೇಡ್ ಉತ್ತರ. ನಾನೇ ಕಾಲ್ ಮಾಡುತ್ತೇನೆ ಎಂದು ಆ ವ್ಯಕ್ತಿಗೆ ಹೇಳಿದ್ದರೂ, ಮತ್ತೆ ಕಾಲ್ ಮಾಡಲಾಗಲಿಲ್ಲ.

ಸುಮಾರು ಎರಡು ಗಂಟೆ ಬಳಿಕ ಮತ್ತೆ ಕಾಲ್. ಮತ್ತೇ ಅದೇ ರಿಕ್ವೆಸ್ಟ್. ನಾನು ನಾಲ್ಕೈದು ಅಸೈನ್ ಮೆಂಟ್ ಗಳನ್ನು ಕವರ್ ಮಾಡಿ ಅವುಗಳನ್ನು ಫೈಲ್ ಮಾಡುವ ತರಾತುರಿಯಲ್ಲಿದ್ದೆ. ನಾನು ಮತ್ತೆ ಪ್ರಯತ್ನಿಸುತ್ತೇನೆ ಅಂತ ಹೇಳಿ ಫೋನಿಟ್ಟೆ.

ಸುಮಾರು ಹೊತ್ತು ಕಳೆದರೂ ಫೋನ್ ಬರಲಿಲ್ಲ. ವಿಷಯ ಸಾಲ್ವ್ ಆಗಿರಬೇಕು ಎಂದುಕೊಂಡು ಸುಮ್ಮನಾದೆ. ಸಂಜೆಯ ವೇಳೆಗೆ ಮತ್ತೆ ಆ ವ್ಯಕ್ತಿಯ ಫೋನ್ ಬಂತು. “ಸಾರ್ ಒಳ್ಳೆ ಮರ್ಯಾದೆ ಮಾಡಿದ್ರಲ್ಲಾ ಸಾರ್ ನಮಗೆ. ಬರ್ತಿವಿ ಬರ್ತಿವಿ ಅಂತ ಬರ್ಲೇ ಇಲ್ವಲ್ಲ ಸಾರ್. ಕೊನೆಗೂ ಅವನು ಬಾಡಿ ಸುಡೋದಕ್ಕೆ ಲಂಚ ತಗೊಂಡ ಸಾರ್. ಬೇರೆ ಯಾರಿಗೂ ಹೀಗೆ ಮಾಡ್ಬೇಡಿ ಸಾರ್” ಎಂದು ಫೋನಿಟ್ಟ.

ನನಗೆ ನನ್ನ ಬಗ್ಗೆಯೇ ಸಿಟ್ಟು ಬಂದಿತ್ತು;ಮಾಧ್ಯಮವೆಂಬ ಆಯುಧ ನನ್ನ ಕೈಯಲ್ಲಿದ್ದರೂ ಅಸಹಾಯಕನಾಗಿದ್ದಕ್ಕೆ…..

ತಿ…. ಮುಚ್ಕೊಂಡು ಹೋಗ್ಬೇಕು….

ಪ್ರತಿಬಾರಿ ‘ಮುಕ್ತ ಮುಕ್ತ’ ಸಂವಾದವಾದಾಗಲೂ ನಾವು ಹೋಗುತ್ತಿರುವ ಊರಿನ ದೂರವನ್ನಾಧರಿಸಿ ಎಲ್ಲ ಕಲಾವಿದರೂ ಒಂದು ಅಥವಾ ಎರಡು ಬಸ್ ನಲ್ಲಿ ತೆರಳುತ್ತೇವೆ. ಆದರೆ ಮೊನ್ನೆ ಚಿತ್ರದುರ್ಗದಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ ಸಂವಾದದ ಹಿಂದಿನ ದಿನ ಮಗನ ನಾಮಕರಣ ಕಾರ್ಯಕ್ರಮವಿದ್ದುದರಿಂದ ಎಲ್ಲರೊಡನೆ ಹೋಗಲಾಗಲಿಲ್ಲ. ಹೀಗಾಗಿ ಮಾರನೇ ದಿನ ಬೆಳಿಗ್ಗೆ ‘ಸುವರ್ಣ ಕರ್ನಾಟಕ ಸಾರಿಗೆ’ಯಲ್ಲಿ ಬೆಂಗಳೂರಿನಿಂದ ದುರ್ಗಕ್ಕೆ ಹೋಗುವ ಸುಯೋಗ ನನಗೊದಗಿಬಂತು.

ಮುಂಜಾನೆ ಏಳೂವರೆಗೆಲ್ಲ ದುರ್ಗದ ಬಸ್ ಹತ್ತಿಬಿಟ್ಟೆ. ಈಗಿತ್ತಲಾಗಿ ಸುವರ್ಣ ಸಾರಿಗೆಯಲ್ಲಿ ತುಂಬಾ ಕಂಫರ್ಟೇಬಲ್ ಆಗಿ ಸೀಟ್ ಸಿಗುತ್ತದೆ. ಕರ್ಚೀಫು, ಟವಲ್ ಹಾಕುವುದಾಗಲಿ, ಸೀಟ್ ಮೇಲೆ ಉಗುಳುವುದಾಗಲಿ ಮಾಡಿ ಸೀಟ್ ಹಿಡಿಯಬೇಕಾದ ಅಗತ್ಯವಿಲ್ಲ. ಹೀಗಾಗಿ ನನಗೂ ನನ್ನ ಪ್ರಿಯವಾದ ವಿಂಡೋ ಸೀಟ್ ಸಿಕ್ಕಿತು. ಕುಳಿತ ತಕ್ಷಣ ನಾನು ಐಪೋಡ್ ಮರೆತಿರುವುದು ಜ್ಞಾಪಕ್ಕೆ ಬಂತು. ಒಮ್ಮೆ ಬೇಜಾರಾದರೂ, ಮತ್ತೊಮ್ಮೆ ಬಸ್ ನಲ್ಲಿನ ಚಟುವಟಿಕೆಗಳನ್ನು, ಜನರ ಮಾತುಗಳನ್ನು ಗಮನಿಸಬಹುದೆಂದು ಸಮಾಧಾನಪಟ್ಟುಕೊಂಡೆ. ಆದರೆ ದುರ್ಗದಲ್ಲಿ ಇಳಿಯುವಾಗ ನನ್ನ ತಲೆಯೆಂಬ ತಲೆಯು, ಕೆಟ್ಟುಕೆರಹಿಡಿದು, ವಿಚಾರಗಳೆಲ್ಲ ಹೊಲಸುಮೇಲೋಗರವಾಗಿ, ದಿಮಿದಿಮಿ ಕುದಿಯುವ ಅಗ್ನಿಕುಂಡವಾಗಿ ಪರಿಣಮಿಸಿಬಿಟ್ಟಿತ್ತು. ಐಪೋಡ್ ತರದೇ ಹೋದುದಕ್ಕೆ ನನ್ನನ್ನು ನಾನು ಜೀವನ ಪೂರ್ತಿ ಕ್ಷಮಿಸಿಕೊಳ್ಳದ ಹಂತ ತಲುಪಿಬಿಟ್ಟಿದ್ದೆ. ದುರ್ಗದ ಲಾಜ್ ನಲ್ಲಿ ತಣ್ಣನೇ ನೀರು ಕುಡಿದಾಗಲೇ ರಕ್ತಕಣಗಳು ಶಾಂತವಾದವು. ಹೀಗೆಲ್ಲ ಆಗಲು ಕಾರಣವಾಗಿದ್ದು ಬಸ್ ನಲ್ಲಿ ನನ್ನ ಸೀಟ್ ಹಿಂಭಾಗದಲ್ಲಿ ಕುಳಿತ ಇಬ್ಬರು ಪ್ರಯಾಣಿಕರು.

ನವರಂಗೋ, ಪೀಣ್ಯದಲ್ಲೋ ಬಸ್ ಹತ್ತಿದ ಇವರು ಅಲ್ಲಿಂದಲೇ ಮಾತಿಗೆ ಶುರವಿಟ್ಟುಕೊಂಡರು. ಇಬ್ಬರೂ ಮಾತಿಗೆ ಶುರುವಿಟ್ಟುಕೊಂಡರು ಎಂಬುದಕ್ಕಿಂತ, ಒಬ್ಬ ಮಾತನಾಡುತ್ತಲೇ ಇದ್ದ, ಮತ್ತೊಬ್ಬ ಕೇಳುತ್ತಲೇ (?) ಇದ್ದ. ಹಾಗೇ ಮಾತನಾಡಿದ್ದರೆ ಏನೂ ತೊಂದರೆಯಿರಲಿಲ್ಲ. ಆದರೆ ಮಾತನಾಡುತ್ತಿದ್ದವನ ಪ್ರತಿ ನಾಲ್ಕನೆಯ ಅಥವಾ ಐದನೆಯ ಸೆಂಟೆನ್ಸ್ “ತಿಕ ಮುಚ್ಕೊಂಡು ಹೋಗ್ಬೇಕು” ಎಂಬುದಾಗಿತ್ತು. ಉದಾಹರಣೆಗೆ ಆತನ ಮಾತಿನ ಓಘ ಹೀಗಿತ್ತು.

ಉದಾಹರಣೆ -1 “ನಮ್ಮ ಹುಡುಗ ಒಬ್ನು ಜರ್ಮನಿಯಲ್ಲವ್ನೆ. ಅವನು ಯೋಳ್ತಾ ಇದ್ದ. ಅಲ್ಲೆಲ್ಲ ರಸ್ತೆ ಮೇಲೆ ಹಾರ್ನ್ ಹೊಡೆಯೋ ಹಾಗೇ ಇಲ್ವಂತೆ. ಮುಂದಿನವನು ನಿಧಾನವಾಗಿ ಹೋಗ್ತಾ ಇದ್ರೆ ಅವನ ಹಿಂದೆ ನಾವು ತಿಕ ಮುಚ್ಕೊಂಡು ವೋಯ್ತಾ ಇರಬೇಕು. ಹಾರ್ನ್ ಮಾಡಂಗೇ ಇಲ್ಲ. ಮಾಡಿದ್ರೆ ಪೈನ್ ಹಾಕ್ತಾರೆ ಪ್ರೋಲಿಸ್ರು…”

ಉದಾಹರಣೆ ಎರಡು – “ಜರ್ಮನಿಯಲ್ಲಿ ಎಲ್ಲ ಬೇಕಂದ್ರಲ್ಲಿ ಬಾರ್ ಇಲ್ಲ. ಎಲ್ಲಿ ಬೇಕಂದ್ರಲ್ಲಿ ಕುಡಿಯೋಅಂಗಿಲ್ಲ. ಕುಡಿಯಕ್ಕಂತಾನೇ ಒಂದು ಜಾಗ ಮಾಡಿದಾರೆ. ಅಲ್ಲ್ ವೋಗ್ಬೇಕು. ಬಾಟ್ಲಿ ತಗೋಬೇಕು. ಮನೆಗೆ ಹೋಗಿ ತಿಕ ಮುಚ್ಕೊಂಡು ಕುಡೀಬೇಕು”.

ಉದಾಹರಣೆ ಮೂರು – “ಮೊನ್ನೆ ಸೀನಪ್ಪ ಸಿಕ್ಕಿದ್ದ. ಎತ್ತು ಮಾರಿ ಟ್ರ್ಯಾಕ್ಟರ್ ತಗೋತಿವ್ನಿ ಅಂದ. ನಾ ಯೋಳ್ದೆ. ಎತ್ತ್ ಇದ್ರೆ ಭೂಮಿಗೆ ನಿಂಗೆ ಇಬ್ರಿಗೂ ಅನುಕೂಲ. ತಿಕ ಮುಚ್ಕೊಂಡು ಎತ್ತಿನ್ ಹಿಂದೆ ಹೆಜ್ಜೆ ಹಾಕೋದು ಕಲಿ ಅಂತ”

ಉದಾಹರಣೆ ನಾಲ್ಕು – “ಮೊಪೆಡ್ ಗೆ ಪೆಟ್ರೋಲ್ ಹಾಕಿಸ್ದೆ. ನೂರು ರೂಪಾಯಿಗೆ ಅಂತ ಹೇಳ್ದೆ. 99.85 ಪೈಸೆದು ಹಾಕ್ದ. ತಿಕ ಮುಚ್ಕೊಂಡು ನೂರು ರೂಪಾಯ್ದು ಹಾಕು ಅಂತ ಹೇಳ್ದೆ. ತಿಕ ಮುಚ್ಕೊಂಡು ಹಾಕ್ದ ನೋಡು”.

ಹೀಗೆ ಸಾಗಿತ್ತು ಆತಿನ ಮಾತಿನ ಪ್ರವಾಹ. ಸ್ವಲ್ಪ ಹೊತ್ತಾಗಿದ್ರೆ ಕೇಳ್ಬಹುದಾಗಿತ್ತು. ಆದರೆ ಯೋಚಿಸಿ. ಬೆಂಗಳೂರಿನಿಂದ ದುರ್ಗದವರೆಗೂ ಈ ರೀತಿಯ ಮಾತನ್ನು ಕೇಳುವುದು ಎಂತಹ ಖುಷಿಯ ಸಂಗತಿ ಎಂದು…ಹೀಗಾಗಿಯೇ ನನ್ನ ತಲೆ ಎಂಬುದು ಹೊಲಸುಮೇಲೋಗರವಾಗಿದ್ದು.

ಕೆಲ ದಿನಗಳ ಬಳಿಕ ನನ್ನ ಗೆಳೆಯನ ಹತ್ತಿರ ಈ ಘಟನೆಯನ್ನು ಹೇಳಿದೆ. ಅದಕ್ಕೆ ಆತ ಹೇಳಿದ್ದು “ಅಯ್ಯೋ ಆತನಿಗೆ ತಿಕ ಮುಚ್ಕೊಂಡು ಕೂತ್ಕೋ ಅಂತ ಹೇಳ್ಬಾರ್ದಾಗಿತ್ತಾ?”

ಸಾವಿನ ಸುದ್ದಿಯ ಕವರೇಜ್ ನಲ್ಲಿ ನನಗಾದ ಮತ್ತೊಂದು ಅನುಭವ

ವಿಷ್ಣು ಸಾವಿನ ಕವರೇಜ್ ಕುರಿತಂತೆ ಸಾಕಷ್ಟು ಚರ್ಚೆಯಾಗಿದೆ. ಈ ಸಂದರ್ಭದಲ್ಲಿ ನನಗೆ ಮತ್ತೊಂದು ಘಟನೆ ನೆನಪಿಗೆ ಬಂದಿದೆ. ಅದನ್ನು ನಿಮ್ಮ ಮುಂದೆ ಇಡುತ್ತಿದ್ದನೆ.

ಖ್ಯಾತ ಪತ್ರಕರ್ತ ಜಿ ಎಸ್ ಸದಾಶಿವ ನಿಧನರಾಗಿದ್ದರು. ನನಗೆ ಅವರ ಬಗ್ಗೆ ಏನೆಂದರೆ ಏನೇನೂ ಗೊತ್ತಿರಲಿಲ್ಲ. ಮನೆಯಲ್ಲಿಯೇ ಪಾರ್ಥಿವ ಶರೀರ ಇಟ್ಟಿದ್ದರು. ಕವರೇಜ್ ಗೆಂದು ಹೋಗಿದ್ದೆ. ಅಲ್ಲಿ ಘಟಾನುಘಟಿ ಪತ್ರಕರ್ತರ ದಂಡೇ ನೆರೆದಿತ್ತು. ಆದರೆ ಯಾರೊಬ್ಬರೂ ನನಗೆ ಬೈಟ್ ಮಾತ್ರ ಕೊಡಲೊಲ್ಲರು. “ನಾನು ಬೇಡ. ಅವರದ್ದು ತಗೋಳಿ. ಅವರು ನನಗಿಂತ ಸೀನಿಯರ್ರು”, “ನಾನು ಬೇಡ. ಇವರದ್ದು ತಗೋಳಿ, ಇವರು ಸದಾಶಿವ ಅವರ ಜೊತೆ ತುಂಬ ಒಡನಾಡಿದವರು”, “ನಾನು ಬೇಡ. ಮತ್ತೊಬ್ಬರದ್ದು ತಗೋಳಿ. ಮತ್ತೊಬ್ಬರು ನನಗಿಂತ ಬೆಟರ್ರು…”ಹೀಗೆ ಏನೇನೋ ಕಾರಣಗಳು. ನಾನೂ ಬೈಟ್ ತೆಗೆದುಕೊಳ್ಳಲು ಉತ್ಸುಕನಾದಷ್ಟೂ, ಜನ ನನ್ನಿಂದ ದೂರ ಓಡಿಹೋಗುತ್ತಿದ್ದರು.

ಆಗ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಬಂದವರು ಟಿ ಎನ್ ಸೀತಾರಾಮ್. ನನಗೆ ಸ್ವಲ್ಪ ನೆಮ್ಮದಿಯಾಯಿತು. ಈ ಮೊದಲು ಒಂದೆರಡು ಬಾರಿ ಸೀತಾರಾಮ್ ಅವರ ಇಂಟರ್ವ್ಯೂ ಮಾಡಿದ್ದೆನಾದ್ದರಿಂದ ತಕ್ಕಮಟ್ಟಿಗಿನ ಪರಿಚಯವಿತ್ತು. ಸೀತಾರಾಮ್ ನನ್ನತ್ತ ನೋಡಿ, ಪರಿಚಯ ತೋರಿಸಿ ಒಳಹೋದರು. ಸ್ವಲ್ಪ ಹೊತ್ತಾದ ಮೇಲೆ ಅವರು ಹೊರಬರುತ್ತಿದ್ದಂತೆ ನೇರವಾಗಿ ಮೈಕ್ ಹಿಡಿಯಲು ಹೋಗಿಬಿಟ್ಟೆ. ತಕ್ಷಣ ಸೀತಾರಾಮ್ ಪಕ್ಕಕ್ಕೆ ಸರಿದು, ನಾನು ಮಾತನಾಡುವುದಿಲ್ಲ ಎಂದು ಬಿಟ್ಟರು. ನಾನು ಪೆಚ್ಚಾದೆ. ಹಾಗೆ ಹೇಳಿದವರೇ ತಮ್ಮ ಪರಿಚಯದವರ ಹತ್ತಿರ ಮಾತನಾಡುತ್ತ ನಿಂತುಬಿಟ್ಟರು. ನಾನು ತೀರ ಅಸಮಧಾನಗೊಂಡೆ.

ಕೆಲ ಹೊತ್ತಿನ ಬಳಿಕ ನನ್ನ ಹೆಗಲ ಮೇಲೆ ಕೈಹಾಕಿ ನನ್ನನ್ನು ಪಕ್ಕಕ್ಕೆ ಕರೆದುಕೊಂಡ ಹೋದ ಟಿಎನ್ಎಸ್, “ನೋಡಿ ಸುಘೋಷ್, ಸಾವಿನ ಮನೆಯಲ್ಲಿ ನಾನು ಮಾತನಾಡುವುದಿಲ್ಲ. ನಾನು ಈಗ ಮಾತನಾಡಿದರೆ ಅದು ಕೃತಕವೆನಿಸಿಬಿಡುತ್ತದೆ. ಬೇಕಾದರೆ ಒಂದೆರಡು ದಿನ ಬಿಟ್ಟು ಬನ್ನಿ. ಖಂಡಿತವಾಗಿ ಬೈಟ್ ಕೊಡುವೆ” ಎಂದರು.

ಆಗ ಬೈಟ್ ಸಿಗದಿದ್ದಕ್ಕೆ ನಾನು ಅಸಮಧಾನಗೊಂಡಿದ್ದೆನಾದರೂ, ಇಂದು ಅವರ ಮಾತಿನ ಅರ್ಥ ಹೆಚ್ಚು ತಿಳಿಯುತ್ತಿದೆ, ಮತ್ತಷ್ಟು ಅರ್ಥ ಹೊಳೆಯುತ್ತಿದೆ ಹಾಗೂ ಪ್ರಸ್ತುತ ಎನಿಸುತ್ತಿದೆ.

ಇದೆಲ್ಲ ಮತ್ತೆ ನೆನಪಾಗಿದ್ದಕ್ಕೆ ಕಾರಣ, ಇದೇ ಜನವರಿ 9 ರಂದು ಜಿ ಎಸ್ ಸದಾಶಿವ ಅವರ ಮೂರನೇ ಪುಣ್ಯತಿಥಿ….

ಸುನಾಮಿ ಮಗು…

(ಫೋಟೋ – ಇಂಟರ್ನೆಟ್)

ಸುನಾಮಿ ಅಲೆಯಲ್ಲಿ ಹೆತ್ತವರನ್ನು ಕಳೆದುಕೊಂಡ ಪುಟ್ಟ ಹುಡುಗ, ಸಮುದ್ರದ ಮುಂದೆ ಕುಳಿತು ಹೇಳಿದ. “ನೀನು ಸಾವಿರ ಸಾರಿ ಬಂದು ನನ್ನ ಪಾದ ಮುಟ್ಟಿದರೂ, ನಾನು ನಿನ್ನ ಕ್ಷಮಿಸೋಲ್ಲ”

(ಎಸ್ಎಂಎಸ್ ಬಂದಿದ್ದು)

ಅದನ್ನು ಪುಸ್ತಕ ಬಿಡುಗಡೆ ಕಾರ್ಯಕ್ರಮ ಎನ್ನವುದಕ್ಕಿಂತ….

ಅದನ್ನು ಪುಸ್ತಕ ಬಿಡುಗಡೆ ಕಾರ್ಯಕ್ರಮ ಎನ್ನವುದಕ್ಕಿಂತ ಪತ್ರಕರ್ತರು ಹಾಗೂ ರಾಜಕಾರಣಿಗಳ ಆತ್ಮಾವಲೋಕನ ಕಾರ್ಯಕ್ರಮ ಎಂದರೆ ಹೆಚ್ಚು ಸೂಕ್ತವಾದೀತು. ‘ವಿಜಯ ಕರ್ನಾಟಕ’ದ ಚೀಫ್ ರಿಪೋರ್ಟರ್ ಪಿ. ತ್ಯಾಗರಾಜ್ ಅವರ ಮೂರು ಪುಸ್ತಕಗಳು ಒಳಸುಳಿ, ದಂಡಪಿಂಡಗಳು ಹಾಗೂ ಚಾಟಿಚಟಾಕಿ ನಿನ್ನೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಗೊಂಡವು. ಪುಸ್ತಕಗಳನ್ನ ಬಿಡುಗಡೆ ಮಾಡಿದವರು, ರಾಜಕೀಯದಲ್ಲಿದ್ದೂ ಇನ್ನೂ ಮಾನ-ಮರ್ಯಾದೆ ಇಟ್ಟುಕೊಂಡಿರುವ ಕಾಂಗ್ರೆಸ್ ನ ಸಿದ್ದರಾಮಯ್ಯ, ಬಿಜೆಪಿಯ ಸುರೇಶ್ ಕುಮಾರ್ ಹಾಗೂ ಜೆಡಿಎಸ್ ನ ನಾಣಯ್ಯ. ಕವಿವರ್ಯ ಸಿದ್ದಲಿಂಗಯ್ಯ ಮಾತನಾಡಿದ ಬಳಿಕ ಅಖಾಡಾಕ್ಕೆ ಇಳಿದ್ದದು ವಿಕ ಸಂಪಾದಕ ವಿಶ್ವೇಶ್ವರ ಭಟ್.

ಸದಾ ನಗುಮೊಗದ, ಸುತ್ತಲಿದ್ದವರನ್ನು ನಕ್ಕುನಗಿಸುವ, ತಮ್ಮ ಮಾತಿನಲ್ಲಿ ಜ್ಞಾನಸುಧೆಯನ್ನೇ ಹರಿಸುವ ವಿಶ್ವೇಶ್ವರ್ ಭಟ್ ಮಾತ್ರ ನಿನ್ನೆ ಮಾಡಿದ ಭಾಷಣದಲ್ಲಿ ಭ್ರಷ್ಟ ರಾಜಕಾರಣಿಗಳ ಹಚಡಾ ತೆಗೆದಿಟ್ಟರು. ಕಳೆದ ಐದು ವರ್ಷಗಳ ರಾಜಕಾರಣ – ಧರ್ಮಸಿಂಗ್-ಸಿದ್ದು ಕಾಂಬಿನೇಷನ್ ಸರ್ಕಾರ – ದಿಂದ ಆರಂಭಿಸಿ ಪ್ರಸಕ್ತ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ರಾಜಕೀಯ ಹಾದರವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಚುನಾವಣೆಯಲ್ಲಿ ಕುಡಗೋಲು ತೆಗೆದುಕೊಂಡು, ಕೋಟಿಗಟ್ಟಲೆ ಸುರಿದು ಹೊಡೆದಾಡಿ, ಚುನಾವಣೆ ಬಳಿಕ ಅಧಿಕಾರಕ್ಕಾಗಿ ಒಂದಾದ ಕಾಂಗ್ರೆಸ್-ಜೆಡಿಎಸ್, ನಂತರ ಬಿಜೆಪಿ-ಜೆಡಿಎಸ್, ಸಂಪಂಗಿ ಪ್ರಹಸನ, ಅರ್ಧ ಕರ್ನಾಟಕ ಅತಿವೃಷ್ಟಿಯಿಂದಾಗಿ ನೀರಿನಲ್ಲಿ ಮುಳುಗಿದ್ದರೆ ಕುರ್ಚಿಗಾಗಿ ರೆಸಾರ್ಟ್ ಗಳಲ್ಲಿ ಈಜುಹೊಡೆಯುತ್ತಿದ್ದ ಶಾಸಕರು, ಬಿಜೆಪಿಯ ನೀತಿಗೆಟ್ಟ ಆಪರೇಷನ್ ಕಮಲ, ರೇಣುಕಾ ಮಹಾತ್ಮೆ ಎಲ್ಲವನ್ನೂ ಭಟ್ ವಿವರಿಸಿದರು. ಇಷ್ಟೆಲ್ಲ ಮಾಡಲು ಈ ರಾಜಕಾರಣಿಗಳಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದಾಗ ರವೀಂದ್ರ ಕಲಾಕ್ಷೇತ್ರದಲ್ಲಿ ಫುಲ್ ಕರತಾಡನ.

“ರಾಜ್ಯವೆಂದರೆ ಮನೆಯಿದ್ದಂತೆ. ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಅಯೋಗ್ಯರನ್ನು ಮಂತ್ರಿ ಮಾಡುತ್ತಿದ್ದಾರಲ್ಲ…ಮನೆ ನಡೆಸಬೇಕೆಂದು ನಾವು ಮನೆಮಗಳನ್ನು ಹಾದರಕ್ಕೆ ಕಳಿಸುತ್ತೇವೆಯೆ?” ಎಂದು ಭಟ್ ಕೇಳಿದಾಗ ಪ್ರೇಕ್ಷಕರಿಂದ ಸಂಪೂರ್ಣ ಸಪೋರ್ಟ್. ‘ರೇಣುಕಾ ಮಹಾತ್ಮೆ’ಯನ್ನು ಟೀಕಿಸಲಾರಂಭಿಸಿದ್ದ ಕಾಂಗ್ರೆಸ್, ಎನ್ ಡಿ ತಿವಾರಿ ಪ್ರಕರಣ ಹೊರಬಂದ ಕೂಡಲೇ ಬಾಲ ಮುದುರಿಕೊಂಡದ್ದು, ಸುಭಾಷ್ ಭರಣಿ ಸಾಹೇಬರು ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಒಂದೇ ದಿನ ಮೂರು ಪಾರ್ಟಿಗಳನ್ನು ಬದಲಿಸಿದ್ದು, ನಿನ್ನೆ ಕಾಂಗ್ರೆಸ್-ಜೆಡಿಎಸ್ ನಲ್ಲಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ನಾಲಾಯಕ್ ಎಂದು ಬಣ್ಣಿಸುತ್ತಿದ್ದವರು, ಇಂದು ಅದೇ ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ರಾತ್ರೋರಾತ್ರಿ ಮಂತ್ರಿಗಳಾಗಿ ಮೆರೆದಿದ್ದು – ಹೀಗೆ ಪ್ರತಿಯೊಂದನ್ನು ಕೆದಕುತ್ತ ಹೋದಾಗ ಸುರೇಶ್ ಕುಮಾರ್, ಸಿದ್ದರಾಮಯ್ಯ, ನಾಣಯ್ಯ ‘ಮೌನವೇ ನಮ ತಾಯಿ-ತಂದೆ, ಮೌನವೇ ನಮ ಬಂಧು ಬಳಗ’ ಎಂಬಂತೆ ಕುಳಿತಿದ್ದರು.

ಭಟ್ಟರ ನಂತರ ಬ್ಯಾಟಿಂಗ್ ಗೆ ಇಳಿದದ್ದು ನಾಣಯ್ಯ. ವಿಶ್ವೇಶ್ವರ್ ಭಟ್, ನಾಣಯ್ಯನವರನ್ನು ಬಣ್ಣಿಸಿದ್ದು ಪ್ರಸ್ತುತ ರಾಜಕಾರಣದ ಸಾಕ್ಷಿಪ್ರಜ್ಞೆ ಎಂದು. ಅದು ನಿಜವೂ ಹೌದು. ನಾಣಯ್ಯ ಮಾತನಾಡುತ್ತ ತಾವು ಮುಂದಿನ ಬಾರಿ ಚುನಾವಣೆ ಎದುರಿಸುವುದಿಲ್ಲ. ಕಾರಣ ತಮ್ಮ ಬಳಿ ದುಡ್ಡಿಲ್ಲ. ಅಸೆಂಬ್ಲಿ ಚುನಾವಣೆ ಎದುರಿಸಲು ಕನಿಷ್ಠ 10 ಕೋಟಿ ಬೇಕು. ನಾನೆಲ್ಲಿಂದ ತರಲಿ ಎಂದು ಪ್ರಶ್ನಿಸಿದರು. ರಾಜಕಾರಣಿಗಳಷ್ಟೇ ಅಲ್ಲ ಪತ್ರಕರ್ತರೇನೂ ಸಾಚಾಗಳಾಗಿ ಉಳಿದಿಲ್ಲ. ಅವರಲ್ಲಿ ಕೂಡ ಪ್ರಾಮಾಣಿಕತೆ ಮತ್ತು ನಿಷ್ಠುರತೆ ಕಡಿಮೆಯಾಗುತ್ತಿದೆ. “ರಾಜಕಾರಣಿಗಳಿಂದ ಸೈಟ್ ಗಿಟ್ಟಿಸಿಕೊಂಡರೆ ಟೀಕೆ ಮಾಡುವುದು ಹೇಗೆ?” ಎಂದಾಗ, ವಿಶ್ವೇಶ್ವರ್ ಭಟ್, ವಿಕದ ಯಾವುದೇ ಪತ್ರಕರ್ತ ಸೈಟ್ ಪಡೆದಿಲ್ಲ ಎಂದು ಜವಾಬು ನೀಡಿದರು. ಅಪವಾದಗಳಿದ್ದೇ ಇರುತ್ತವೆ ಎಂದ ನಾಣಯ್ಯ, “ರಾಜಕಾರಣಿಗಳನ್ನು ಆರಿಸುವುದು ಜನರೇ. ಜನರೇ ಆರಿಸಿ, ಇದೀಗ ನೀವು ಭ್ರಷ್ಟರು ಎಂದರೆ ಹೇಗೆ? ಹೀಗಾಗಿ ಚುನಾವಣೆಯಲ್ಲಿ ಸರಿಯಾದವರನ್ನು ಆರಿಸಿ” ಎಂದು ಮನವಿ ಮಾಡಿಕೊಂಡರು.

ನಂತರ ಮಾತನಾಡಿದ್ದು ಸುರೇಶ್ ಕುಮಾರ್. ವಿಶ್ವೇಶ್ವರ್ ಭಟ್, ಸುರೇಶ್ ಕುಮಾರರನ್ನು ಬಣ್ಣಿಸಿದ್ದು ಲಿಟರೇಟ್ ರಾಜಕಾರಣಿ ಎಂದು. ಅದೂ ಕೂಡ ನಿಜ. ಸುರೇಶ್ ಕುಮಾರ್ ಮೊದಲ ಚುನಾವಣೆ ಎದುರಿಸಿದ್ದು 1983 ರಲ್ಲಿ ಅಂತೆ. ಆಗ ಅವರಿಗೆ ಖರ್ಚಾಗಿದ್ದು 2400 ರೂಪಾಯಿ. ಅದನ್ನು ಕೂಡ ನೀಡಿದ್ದು ಅವರ ಮಿತ್ರರು. “ಮುಂದಿನ ಚುನಾವಣೆ ನಾನೂ ಎದುರಿಸುವುದಿಲ್ಲ. ಏಕೆಂದರೆ ಅದಕ್ಕೆ ಬೇಕಾದಷ್ಟು ಹಣ ನನ್ನ ಬಳಿಯೂ ಇಲ್ಲ” ಎಂದು ಅಲವತ್ತುಕೊಂಡದ್ದು ಸಾತ್ವಿಕ ಸುರೇಶ್ ಕುಮಾರ್. ಅವರು ಕೂಡ ರಾಜಕಾರಣದ ಹಲವು ಮೂವ್ ಮೆಂಟ್ ಗಳನ್ನು ಹೇಳಿದರೂ, ತಮಗೆ ಎಲ್ಲ ಮಾತನಾಡಲು ಸ್ವಾತಂತ್ರ್ಯವಿಲ್ಲ. ಹೀಗಾಗಿ ಎಲ್ಲ ಮಾತನಾಡಲು ಬಯಸಿದರೂ, ಎಲ್ಲ ಮಾತನಾಡಲಾಗುವುದಿಲ್ಲ ಎಂದರು.

ಎಂದಿನಂತೆ ಸಿದ್ದರಾಮಯ್ಯ ಮಾತನಾಡಿದ್ದು ಮನಬಿಚ್ಚಿ. ಮಧ್ಯೆ ಮಧ್ಯೆ ಹಾಸ್ಯ ಚಟಾಕಿಯನ್ನು ಹಾರಿಸುತ್ತ, ಪತ್ರಕರ್ತರನ್ನೂ ಪೇಚಿಗೆ ಸಿಲುಕಿಸುತ್ತ, ತಾವು ಸಂಪೂರ್ಣವಾಗಿ ಕೈ, ಬಾಯಿ ಕೆಡಿಸಿಕೊಳ್ಳದೇ ಇರುವುದಕ್ಕೆ ತಾವೇ ಸಮಾಧಾನಪಡುತ್ತ, ಜಾತೀಯತೆ ಎಂಬುದು ಹೇಗೆ ಅನಕ್ಷರಸ್ಥರಿಗಿಂತ ಅಕ್ಷರಸ್ಥರಲ್ಲಿ ವ್ಯಾಪಕವಾಗಿದೆ, ಸೋ ಕಾಲ್ಡ್ ಮೇಲ್ಜಾತಿಯವರ ಮುಂದೆ ಸಿಗರೇಟು ಸೇದಿದಕ್ಕೆ, ಮೇಲ್ಜಾತಿಯವರು ನಿಮಗೆ ಮತ ನೀಡುವುದಿಲ್ಲ ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿದ್ದನ್ನ ಜ್ಞಾಪಿಸಿಕೊಳ್ಳುತ್ತ, 15 ರಿಂದ 20 ಶೇಕಡಾ ಮತದಾನವಾಗುವ ಬೆಂಗಳೂರಿನ ಎಕ್ಸಟೆನ್ ಶನ್ ಏರಿಯಾಗಳ ಜನರ ಬಗ್ಗೆ ಆಕ್ರೋಶಪಡುತ್ತಾ, ವಿಕ ದ ಪತ್ರಕರ್ತರು ಸೈಟ್ ಪಡೆದಿಲ್ಲವಾದರೆ ಏನಾಯ್ತು, ಇತರರು ಪಡೆದಿದ್ದಾರಲ್ಲ ಎಂದು ಕೇಳಿ ಭಟ್ಟರನ್ನು ನೋಡುತ್ತ, ಹಳ್ಳಿಗಳಲ್ಲಿ ತಮ್ಮ ಕುರಿಯನ್ನೋ ಕೋಳಿಯನ್ನೋ ಯಾರೋ ಕದ್ದುಕೊಂಡು ಹೋದಾಗ ಮಹಿಳೆಯರು ಮನೆಯ ಮುಂದೆ ಕುಳಿತು ಅವನ್ ಬಾಯ್ ಸೀದ್ ಹೋಗಾ, ಅವನ ಮಕ್ಕ್ಳು ಸಾಯಾ, ಎಂದು ಶಾಪಹಾಕುವಂತೆ, ಅದೇ ಭಾಷೆಯನ್ನು ಇಂದಿನ ರಾಜಕಾರಣಿಗಳು ಬಳಸುತ್ತಿರುವುದರ ಬಗ್ಗೆ ಬೇಸರಿಸುತ್ತ, ಅತ್ಯುತ್ತಮ ಅನ್ನಬಹುದಾದ ಭಾಷಣ ಮಾಡಿದರು ಸಿದ್ದು.

ಕೊನೆ ಡವಡvk…

ಅಂದ ಹಾಗೆ ಇಡೀ ಕಾರ್ಯಕ್ರಮದಲ್ಲಿ ಯಾರೊಬ್ಬರ ಬಾಯಿಂದಲೂ ಎರಡು ಶಬ್ದಗಳು ಮಾತ್ರ ಬರಲೇ ಇಲ್ಲ. ಅವು ‘ಗಣಿ’ ಮತ್ತು ‘ರೆಡ್ಡಿ’.

ಸರ್ವಂ ಶ್ರೀ ವಾಸುದೇವಾರ್ಪಣಮಸ್ತು….

ಸಾವಿನ ಕವರೇಜ್ ಕುರಿತು ಮೀಡಿಯಾ ವಿದ್ಯಾರ್ಥಿ ಹೀಗೆನ್ನುತ್ತಾರೆ…

ನಿನ್ನೆ ಅಂದರೆ ಶನಿವಾರ ‘ವಿಜಯ ಕರ್ನಾಟಕ’ದಲ್ಲಿ ಶ್ರಿ. ಜಿ. ಎನ್. ಮೋಹನ್ ಅವರು ಮೀಡಿಯಾ ಮಿರ್ಚಿ ಅಂಕಣದಲ್ಲಿ “ಈ ದೇಹದಿಂದ ದೂರವಾದೆ ಏಕೆ ಆತ್ಮನೆ?” ಎಂದು ಬರೆದಿದ್ದರು. ಅದರಲ್ಲಿ ನನ್ನ ಕುರಿತು ಹೀಗಿತ್ತು.

ಈ ಅಂಕಣ ಓದಿದ ಬೆಂಗಳೂರು ವಿಶ್ವವಿದ್ಯಾನಿಲಯದ ಮಾಧ್ಯಮ ವಿದ್ಯಾರ್ಥಿ ಹಾಗೂ ಈಗಾಗಲೇ ಹಲವು ಲೇಖನಗಳನ್ನು ಬರೆದು ಭರವಸೆ ಮೂಡಿಸಿರುವ ವಿದ್ಯಾರ್ಥಿ ಪತ್ರಕರ್ತ ಆದಿತ್ಯ ಭಾರದ್ವಾಜ್ ನನಗೆ ಕಳಿಸಿದ ಎಸ್ಎಂಎಸ್ ಇಲ್ಲಿದೆ.

“ಹಲೋ ಸರ್. ಇಂದಿನ ಮೀಡಿಯಾ ಮಿರ್ಚಿ ಓದಿದೆ. ತುಂಬ ಸಮಯೋಚಿತವಾದ ಚಾಟಿ ಏಟು. ಮೊನ್ನೆ ಮೊದಲ ಬಾರಿಗೆ ಪ್ರೋ. ಅಶೋಕ್ ಕುಮಾರ್ ಪರ್ಮಿಷನ್ ಪಡೆದು ಅಶ್ವತ್ಥ್ ಮತ್ತು ವಿಷ್ಣು ಅವರ ಸಾವಿನ ಕವರೇಜಿಗೆಂದು ಕ್ಯಾಮೆರಾ ಹಿಡಿದು ಹೋಗಿದ್ದೆ. ನನಗೋ ಆ ಸಾವಿನ ಮನೆಯಲ್ಲಿ ಬೈಟ್ ಗಾಗಿ ಯಾರ ಮುಂದೆ ಮೈಕ್ ಹಿಡಿಯಲೂ ಏನೋ ಅರಿಯದ ಮುಜುಗರ. ಆದರೆ ಅಲ್ಲಿದ್ದ ಇತರ ಚ್ಯಾನಲ್ ಪತ್ರಕರ್ತರಿಗೆ ನನ್ನ ಮುಜುಗರ ಹಾಸ್ಯದ ವಸ್ತುವಾಗಿತ್ತು. ಆಶ್ಚರ್ಯ ಅಂದ್ರೆ ಕ್ಯಾಮೆರಾ ಮುಂದೆ ನಿಂತು ಮಾತನಾಡುತ್ತಿದ್ದ ಅವರ ಆಪ್ತರಲ್ಲೇ ಆ ಮುಜುಗರ ಇರಲಿಲ್ಲ. For me it was a good experience and education. I think the camera is the culprit. It has made us a society insensitive”.

ಟಿಓಐ ನಲ್ಲಿ ನನ್ನ ಪತ್ರ

01.01.10 ರ ಟಿಓಐ ನ ಎಡಿಟ್ ಪೇಜ್ ನಲ್ಲಿ ಪ್ರಕಟವಾಗಿರುವ ನನ್ನ ಪತ್ರ.

ಆಂಗ್ಲ ಹೊಸವರ್ಷದಲ್ಲಿ ನನ್ನ ವಿಶ್ ಲಿಸ್ಟ್ ಹೀಗಿದೆ…

ಸುಖ ಹೆಚ್ಚಲಿ

ದುಃಖ ಬೆಚ್ಚಲಿ

ಟೆರರಿಸ್ಟುಗಳು ಸಾಯಲಿ

ಸೈನಿಕರ ಆತ್ಮವಿಶ್ವಾಸ ವರ್ಧಿಸಲಿ

ಭ್ರಷ್ಟ ರಾಜಕಾರಣಿಗಳು ಠೇವಣಿ ಕಳೆದುಕೊಳ್ಳಲಿ

ಶಶಿ ಥರೂರ್ ಟ್ವಿಟರ್ ಬಳಸದಿರಲಿ

ರಾಜ್ಯ ಕಾಂಗ್ರೆಸ್ ಇನ್ನೂ ಸಶಕ್ತವಾಗಲಿ

ಕೋಪನ್ ಹೆಗನ್ ಮುಂದಿನ ಬಾರಿ ಯಶಸ್ಸು ಕಾಣಲಿ

ಆರ್ ಟಿ ಐ ನೆರವು ಜನ ಹೆಚ್ಚು ಹೆಚ್ಚು ಪಡೆದುಕೊಳ್ಳಲಿ

ಹೊಸ ವಧುವರರಿಗೆ ಬರೇ ಹೆಣ್ಣು ಮಕ್ಕಳೇ ಹುಟ್ಟಲಿ

ಟ್ರಾಫಿಕ್ ಪೋಲಿಸ್ ಲಂಚ ಕೇಳುವುದು ಕಡಿಮೆಯಾಗಲಿ

ಕೋಕ್ ಗಿಂತ ಎಳನೀರು ಹೆಚ್ಚು ಮಾರಾಟವಾಗಲಿ

ಸಾವಯವ ಕೃಷಿಗೆ ಜಯವಾಗಲಿ

ಬೆಂಗಳೂರಿನಲ್ಲಿನ ರೌಡಿಗಳು ಪರಸ್ಪರ ಮತ್ತಷ್ಟು ಹೊಡೆದಾಡಿಕೊಳ್ಳಲಿ

ರಂಗಾಯಣಕ್ಕೆ ಲಿಂಗದೇವರ ದರ್ಶನವಾಗಲಿ

ಎಡಪಂಥಿಯರು, ಬಲಪಂಥಿಯರು ತಮ್ಮ ಮಾರ್ಗ ಬಿಡದಿರಲಿ

ಲಾಸ್ಟ್ ಬಟ್ ನಾಟ್ ದಿ ಲೀಸ್ಟ್…

ನನ್ನ ಪ್ರೇಯಸಿಗೆ ಇನ್ನಾದರೂ ನಾನು ಪ್ರೀತಿಸುತ್ತಿರುವುದು ತಿಳಿಯಲಿ