ನನ್ನ ಫೋಟೋ

ಜಿ. ಎನ್. ಮೋಹನ್ ಅವರ ಪುಸ್ತಕ ಬಿಡುಗಡೆ ಸಮಾರಂಭದ ದಿನ ಯು. ಬಿ. ಪವನಜ ಸರ್ ತೆಗೆದ ಚಿತ್ರ. 

..............

ಮಂತ್ರಾಲಯದಲ್ಲೊಂದು ಪವಾಡ

ಅಂತಾರಾಷ್ಟ್ರೀಯ ಖ್ಯಾತಿಯ ಸಿನಿ ಛಾಯಾಗ್ರಾಹಕ, ಕನ್ನಡಿಗ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ  ವಿ. ಕೆ. ಮೂರ್ತಿಯವರ ಜೀವನ ಕಥನದ ಹೆಸರು ಬಿಸಿಲು ಕೋಲು. ಲೇಖಕಿ ಉಮಾ ರಾವ್. ಇದನ್ನು ಪ್ರಿಸಮ್ ಪ್ರಕಟಿಸಿದೆ. ಮೂರ್ತಿಯವರ ಬದುಕಿನಲ್ಲಿ ನಡೆದ ಘಟನೆಯೊಂದು ಇಲ್ಲಿದೆ. ಬಿಸಿಲು ಕೋಲು ಪುಸ್ತಕದಿಂದ ಇದನ್ನು ಆಯ್ದುಕೊಳ್ಳಲಾಗಿದೆ.

ಓದಲೇ ಬೇಕಾದ ಪುಸ್ತಕ

ಮಂತ್ರಾಲಯದಲ್ಲಿ ಅಂದು ನಡೆದ ಪವಾಡ ಇಂದಿಗೂ ಮೂರ್ತಿ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿದೆ.

ಅವತ್ತು ನಾನು (ಮೂರ್ತಿ) ನನ್ನ ಮೇಷ್ಟ್ರು ಸ್ನಾನಕ್ಕೆ ನದಿಗೆ ಹೋದೆವು. ನಮ್ಮ ಮೇಷ್ಟ್ರು ಕ್ಷೌರ ಮಾಡಿಕೊಳ್ಳುತ್ತಿದ್ದರು. ನಾನು ಸುಮ್ಮನೆ ನದಿ ನೋಡುತ್ತ ನಿಂತಿದ್ದೆ. ಇದ್ದಕ್ಕಿದ್ದಂತೆ ಒಬ್ಬ ಹೆಂಗಸು ಜೋರಾಗಿ ಕೂಗಿಕೊಳ್ಳುತ್ತ, ಅಳುತ್ತಿರುವುದು ಕೇಳಿಸಿತು. ನೋಡಿದರೆ, ಅವಳ ಒಂದರೆಡು ವರ್ಷದ ಮಗು ನದಿಯಲ್ಲಿ ಬಿದ್ದು ಕೊಚ್ಚಿಕೊಂಡು ಹೋಗ್ತಿದೆ. ಹತ್ತಿರದಲ್ಲೇ ಮೂರು ಜನ ಬ್ರಾಹ್ಮಣರು ನೋಡುತ್ತ ನಿಂತಿದ್ದರು. ಮಗು ಮುಳುಗಿ ಹೋಗುತ್ತಿದ್ದರೂ ಅವರು ಅಲ್ಲಿಂದ ಕದಲಲಿಲ್ಲ. ನಾನು ಓಡಿ ಹೋಗಿ ನದಿಗೆ ಧುಮುಕಿದೆ. ನಂಗೆ ಈಜೋಕೆ ಬರ್ತಿತ್ತು. ನದಿನೂ ಅಲ್ಲಿ ಅಂಥಾ ಆಳ ಏನೂ ಇರ್ಲಿಲ್ಲ. ಮಗೂನ್ನ ಎತ್ತಿಕೊಂಡು ಬಂದು, ಬಗ್ಗಿಸಿ ಒತ್ತಿ, ನೀರು ತೆಗೆದೆ. ಮಗು ಬದುಕಿಕೊಂಡಿದ್ದು ಕಂಡು ಎದೆ ತುಂಬಿ ಬಂತು.

ಆ ಮೂರೂ ಬ್ರಾಹ್ಮಣರು ಏಕೆ ಸಹಾಯಕ್ಕೆ ಹೋಗಿರಲಿಲ್ಲವೆಂದರೆ ಅದು ಶೂದ್ರ ಹೆಂಗಸಿನ ಮಗು ಎಂದು. ನಂಗೆ ಅಂಥಾ ಆಘಾತ ಎಂದೂ ಆಗಿರಲಿಲ್ಲ.

ಅಲ್ಲಿಂದ 11 ಗಂಟೆ ಹೊತ್ತಿಗೆ ಮಠಕ್ಕೆ ಹೋದ್ವಿ. ಎಲ್ಲೆಲ್ಲೂ ಗುಜುಗುಜು, ಉತ್ಸಾಹ. ಒಂದು ಮಗು ಮುಳುಗೇ ಹೋಗಿತ್ತಂತೆ, ಸಾಕ್ಷಾತ್ ರಾಘವೇಂದ್ರ ಸ್ವಾಮಿಗಳೇ ಬಂದು ಬದುಕಿಸಿದರಂತೆ…. ಎಂಥಾ ಪವಾಡ! ಈ ಕಥೆಯನ್ನು ಸ್ವಾಮಿಗಳ ಎದುರಿಗೆ ಹೇಳುತ್ತಿದ್ದವರು ಅದೇ ಮೂರು ಜನ ಬ್ರಾಹ್ಮಣರು!

ನಮ್ಮ ಮೇಷ್ಟ್ರಿಗೆ ರೇಗಿ ಹೋಯಿತು. “ಯಾರ್ರೀ ಹೇಳಿದ್ದು? ನನ್ನ ವಿದ್ಯಾರ್ಥಿ ಮಗೂನ್ನ ಉಳಿಸಿದ್ದು. ಮಗು ಮುಳುಗಿ ಹೋಗ್ತಿದ್ರೆ ಇವ್ರೆಲ್ಲ ನೋಡ್ತಾ ನಿಂತಿದ್ರು. ಮನುಷ್ಯರೇನ್ರೀ ಇವರು? ನಾಚಿಕೆಗೇಡು” ಎಂದು ಸ್ವಾಮಿಗಳೇ ಎದುರೇ ಕೂಗಾಡಿದರು.

ಸ್ವಾಮಿಗಳು ಆ ಬ್ರಾಹ್ಮಣರನ್ನೆಲ್ಲ ಕರೆಸಿ ಛೀಮಾರಿ ಹಾಕಿದರು. ನನ್ನನ್ನು ಕರೆದು ಆಶೀರ್ವಾದ ಮಾಡಿ ವಸ್ತ್ರ ಹೊದೆಸಿದರು. ಆ ಘಟನೆ ಎಂದಿಗೂ ಮರೆಯೋಕೇ ಆಗಲ್ಲ.

 

 

ಬೃಬೆಂಮಪಾ ಕನ್ನಡ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಲಾಲ್ ಬಾಗ್ ಗೋಡೆಯ ಮೇಲೆ ಬರೆಸಿರುವ ಚಿತ್ರಗಳ ಮೇಲಿನ ಸಂದೇಶ. ಇಂತಹ ಅನೇಕ ಬರಹಗಳು ರಾರಾಜಿಸುತ್ತಿವೆ.

ಚಿತ್ರ ಓಕೆ. ಕನ್ನಡ ತಪ್ಪು ಯಾಕೆ?

ಫೋಟೋ – ಸುಘೋಷ್ ಎಸ್. ನಿಗಳೆ


ಪ್ರಚಾರಕ್ಕಾಗಿ ವಿಶೇಷ ವಾಹನ

ನಮ್ಮ ಮನೆಯ ಬಳಿ ಇರುವ ನರ್ಸರಿಯೊಂದು ತನ್ನ ಸಂಸ್ಥೆಯ ಪ್ರಚಾರಕ್ಕಾಗಿ ಸೈಕಲ್ಲನ್ನು ಅಭಿವೃದ್ಧಿಪಡಿಸಿದ ಬಗೆಯಿದು.

.............

ಫೋಟೋ – ಸುಘೋಷ್ ಎಸ್ ನಿಗಳೆ

ಇದು ಎಂತ ಮಾರಾಯ್ರೆ…

ಎಚ್ ಎಸ್ ಆರ್ ಬಡಾವಣೆ ಬಳಿ ಕಂಡದ್ದು

ಫೋಟೋ – ಸುಘೋಷ್ ಎಸ್. ನಿಗಳೆ

ಕಾಗುಣಿತ ನೆನಪಿದೆಯೆ?

ವಿದ್ಯಾ ಮೂರ್ತಿ

ಮುಕ್ತ ಮುಕ್ತ ಧಾರಾವಾಹಿಯಲ್ಲಿನ ಧವಳಗಿರಿ ಗುರುಗಳ ಪರಮ ಭಕ್ತೆ ಹಾಗೂ ನನ್ನ(ದೇವಾನಂದಸ್ವಾಮಿ) ಅತ್ತೆ ಶಾರದಾ ಶ್ರೀಕಂಠ ಮೂರ್ತಿ ಎಲ್ಲರಿಗೂ ಪರಿಚಯ. ಶಾರದಾ ಶ್ರೀಕಂಠಮೂರ್ತಿ ನಿಜವಾದ ಹೆಸರು ವಿದ್ಯಾ ಮೂರ್ತಿ. ಕಿರಿ-ಹಿರಿ ತೆರೆಯೆರಡರಲ್ಲೂ ಅತ್ಯುತ್ತಮ ನಟಿ. ಅವರೊಡನೆ ಮೊನ್ನೆ ಶೂಟಿಂಗ್ ನಲ್ಲಿ ಮಾತಾಡುತ್ತಿರುವಾಗ ಯಾವುದೋ ವಿಷಯ ಪ್ರಸ್ತಾಪವಾಗಿ ಎಲ್ಲಿಗೋ ಹೋಗಿ, ಕೊನೆಗೆ ಅವರು ಕನ್ನಡ ಕಾಗುಣಿತ ರಾಗವಾಗಿ ಹೇಳಿದರು.

ನಾನು ಚಿಕ್ಕಂದಿನಲ್ಲಿ ಕನ್ನಡ ಕಾಗುಣಿತ ಕಲಿತಿಲ್ಲ. ಇಂದಿನ ಮಕ್ಕಳೂ ಕಲಿಯುತ್ತಿಲ್ಲ. ಆದರೆ ಹಿಂದೆ ಕನ್ನಡ ಕಾಗುಣಿತ ಕಡ್ಡಾಯವಾಗಿತ್ತು. ಕಾಗುಣಿತವನ್ನು ವಿದ್ಯಾ ಮೂರ್ತಿ ಮತ್ತೆ ನೆನಪು ಮಾಡಿಕೊಟ್ಟರು. ಅದು ಇಲ್ಲಿದೆ. ಥ್ಯಾಂಕ್ಸ್ ವಿದ್ಯಮ್ಮ…

 

ಕ ತಲಕಟ್ಟು ಕ

ಕ ದೀರ್ಘ ಕಾ

ಕ ಕೊಂದು ಸುಳಿ ಕಿ

ಕಿ ದೀರ್ಘ ಕೀ

ಕ ಕೊಂಬು ಕು

ಕು ದೀರ್ಘ ಕೂ

ಕ ಏತ್ವಾ ಕೆ

ಕೆ ಕೊಂದು ದೀರ್ಘ ಕೇ

ಕ ಐತ್ವಾ ಕೈ

ಕ ಓತ್ವಾ ಕೊ

ಕೋ ಕೊಂದು ದೀರ್ಘ ಕೋ

ಕ ಔತ್ವಾ ಕೌ

ಕ ಸೊನ್ನೆ ಕಂ

ಕ ಎರಡ ಸೊನ್ನೆ ಕಃ

 

21 ಕ್ಕೆ ಮದುವೆ, 18 ಕ್ಕೇ ವೋಟು.

ವಿಚಿತ್ರ, ಆದರೂ ಸತ್ಯ.

ಕಳಿಸಿಕೊಟ್ಟದ್ದು – ಜಗಳೂರು ಸೀತಾರಾಮ್.

ಮದುವೆಯಾಗಲು ಹುಡುಗನ ಕನಿಷ್ಠ ವಯಸ್ಸು 21.

ವೋಟ್ ಮಾಡಲು ಕನಿಷ್ಠ ವಯಸ್ಸು 18.

ಇದು ಏನನ್ನು ತೋರಿಸುತ್ತದೆ?

ದೇಶವನ್ನು ಕಂಟ್ರೋಲ್ ಮಾಡಲು ಬೇಕಾದ ಅನುಭವಕ್ಕಿಂತ ಹೆಂಡತಿಯನ್ನು ಕಂಟ್ರೋಲ್ ಮಾಡಲು ಹೆಚ್ಚು ಅನುಭವ ಬೇಕು.

ದುಃಖ ಯಾವಾಗಲೂ ಜೊತೆಯಿರುತ್ತದೆ…

Photo - Sun group

ಕಳಿಸಿಕೊಟ್ಟದ್ದು – ಹನ್ನಾ ವಿಜಯ್

ಕಿಟ್ಟಿಗೆ ಹಿಂದಿಯಿಂದ ಕನ್ನಡಕ್ಕೆ ಇದನ್ನು ಭಾಷಾಂತರ ಮಾಡಲು ಹೇಳಲಾಯಿತು.

“ದುಃಖ್ ಹಮೇಶಾ ಸಾತ್ ರೆಹತಾ ಹೈ. ಲೇಕಿನ್ ಖುಷಿ ಆತೀ ಜಾತೀ ರೆಹತೀ ಹೈ”

ಅವನು ಅದನ್ನು ಹೀಗೆ ಭಾಷಾಂತರಿಸಿದ.

ಹೆಂಡತಿ ಯಾವತ್ತಿಗೂ ಜೊತೆಯಿರುತ್ತಾಳೆ. ಆಕೆಯ ತಂಗಿ ಮಾತ್ರ ಬಂದು ಹೋಗಿ ಮಾಡುತ್ತಿರುತ್ತಾಳೆ. 🙂

‘ಸುಧಾ’ದಲ್ಲಿ ಸೆಟ್ ವೆಟ್ ಸೆಕ್ಸಿ

ಈ ವಾರದ ಸುಧಾದ ಜಾಣರ ಪೆಟ್ಟಿಗೆಯಲ್ಲಿ ಪ್ರಕಟವಾಗಿರುವ ನನ್ನ ಪತ್ರ.

...............

ಯುಗಾದಿಗೆ ಮೊದಲು, ಯುಗಾದಿಯ ನಂತರ…

ನಮ್ಮ ಮನೆ ಎದುರುಗಡೆ ಇರುವ ಎರಡು ಮರಗಳ ಫೋಟೋ ಇವು. ಯುಗಾದಿಗೆ ಮೊದಲು ಮೈತುಂಬ ಹೂತುಂಬಿಕೊಂಡ ಈ ಎರಡು ಮರಗಳು, ಯುಗಾದಿ ಮುಗಿಯುತ್ತಿದ್ದಂತೆ ಬೋಳಾದವು.

...............
.............
..................
.................
.............
...............

‘ಪ್ರೋಫೆಷನ್ ವೋರಾಟಗಾರ’ರಿಗೆ ಬುದ್ಧಿ ಕಲಿಸಿದ್ದು

ಯಾರದ್ದಂತೆ ಸರ್ಕಾರ, ಅವರಪ್ಪಂದಂತೆ ಸರ್ಕಾರ...

ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆಗಳಿಗೇನೂ ಕೊರತೆಯಿಲ್ಲ. ಪ್ರತಿಭಟನೆಗಳು ಪ್ರಜಾಪ್ರಭುತ್ವ ಜೀವಂತವಿರುವುದರ ಸಂಕೇತ. 80, 90 ರ ದಶಕಗಳಂತೂ ಪೂರ್ತಿ ಪ್ರತಿಭಟನೆ, ಹೋರಾಟ, ಚಳವಳಿಮಯ. ಆದರೆ ಇತ್ತೀಚೆಗೆ ಹೆಚ್ಚಿನ ಪ್ರತಿಭಟನೆಗಳು ಅರ್ಥ ಕಳೆದುಕೊಳ್ಳುತ್ತಿವೆ. ಪ್ರತಿಭಟನೆಗಳ ಸಂಖ್ಯೆ ಹೆಚ್ಚಾಗಿದ್ದರೂ ಅವುಗಳ ಗುಣಮಟ್ಟದಲ್ಲಿ ತೀರ ಕುಸಿತವುಂಟಾಗಿದೆ.

ಬೆಂಗಳೂರಿನಂತ  ನಗರಗಳಲ್ಲಂತೂ ವಾರಕ್ಕೆ ಹತ್ತರಂತೆ ಪ್ರತಿಭಟನೆಗಳು ನಡೆಯುತ್ತವೆ. ಕೆಲವು ಪ್ರತಿಭಟನೆಗಳು ಸಾಚಾ ಇದ್ದರೂ, ಇನ್ನೂ ಹಲವಾರು ಪ್ರತಿಭಟನೆಗಳು ಕೇವಲ ಮೀಡಿಯಾಗೋಸ್ಕರ ಮಾಡುವಂಥವುಗಳು. ಕೋಣದ ಮೇಲೆ ಕುಳಿತುಕೊಳ್ಳುವುದು, ರಾಜಭವನದ ಗೋಡೆಗೆ ಉಚ್ಚೆ ಹೊಯ್ಯುವ ಕೆಲ ಟಿಪಿಕಲ್ ಪ್ರತಿಭಟನೆಗಳೂ ಇವೆ. ಮೀಡಿಯಾಗಳಿಗೋಸ್ಕರ ಮಾಡುವ ಪ್ರತಿಭಟನೆಗಳ ಸ್ವರೂಪ ತುಂಬಾ ಚೆನ್ನಾಗಿರುತ್ತದೆ. ಕನಿಷ್ಠ ನಾಲ್ಕೈದು ವಿಡಿಯೋ ಕ್ಯಾಮೆರಾ, ಹತ್ತಾರು ಫೋಟೋಗ್ರಾಫರುಗಳು ಬಂದ ಬಳಿಕವೇ ಘೋಷಣೆಗಳು ಮೊಳಗುತ್ತವೆ. ತಮಟೆ ಲಬೋ ಲಬೋ ಬಾಯಿಬಡಿದುಕೊಳ್ಳುತ್ತದೆ. ಬೇರೆ ಬೇರೆ ಚ್ಯಾನಲ್ ಗಳಿಗೆ ಬೇರೆಬೇರೆಯವರು ಸ(ಸ್ವ)ರತಿಯಲ್ಲಿ ಮಾತಾಡುತ್ತಾರೆ. ಸ್ಟಿಲ್ ಫೋಟೋಗ್ರಾಫರುಗಳಿಗೆ ಬೇಕಾದ ಹಾಗೆ ಪೋಸು ಕೊಡುತ್ತಾರೆ. ಮೀಡಿಯಾದವರು ತಮ್ಮ ಕೆಲಸ ಮುಗಿಸಿಕೊಂಡು ಅತ್ತ ಹೋಗುತ್ತಿದ್ದಂತೆ ಕ್ಷಣಾರ್ಧದಲ್ಲಿ ಪ್ರತಿಭಟನೆ ಅಂತ್ಯಗೊಳ್ಳುತ್ತದೆ. ಎಲ್ಲರೂ ಮಂಗಮಾಯ. ನಾಳೆಯ ಪೇಪರ್ ನಲ್ಲಿ ಮಾತ್ರ ದೊಡ್ಡದಾಗಿ ಪ್ರಶಸ್ತಿ ಬರುತ್ತದೆ. ಸಾಮಾನ್ಯವಾಗಿ ‘ಪ್ರೊಫೆಷನ್ ವೋರಾಟಗಾರ’ರಿಂದ ಈ ರೀತಿಯ ಪ್ರತಿಭಟನೆಗಳು ಆಗಿಂದಾಗ್ಗೆ ನಡೆಯುತ್ತಲೇ ಇರುತ್ತವೆ.

ಹಿಂದೆ ಈ ಟಿವಿಯ ಶಿವಮೊಗ್ಗದ ಜಿಲ್ಲಾ ವರದಿಗಾರರಾಗಿ ಸಂತೋಷ್ ನಡುಬೆಟ್ಟ ಎಂಬುವವರಿದ್ದರು. ನನ್ನ ಆತ್ಮೀಯ ಸ್ನೇಹಿತರು. ಅವರು ಈ ರೀತಿಯ ಪ್ರೊಫೆಷನ್ ವೋರಾಟಗಾರರಿಗೆ ಸರಿಯಾಗಿ ಬುದ್ಧಿ ಕಲಿಸಿದ್ದರು. ಇಂತಿಂಥ ಜಾಗದಲ್ಲಿ ಇಷ್ಟಿಷ್ಟು ಹೊತ್ತಿಗೆ ಪ್ರತಿಭಟನೆಯಿದೆ. ದಯವಿಟ್ಟು ಬಂದು ಕವರ್ ಮಾಡಿ ಎಂದು ಬೇಡಿಕೆ ಬಂದ ತಕ್ಷಣ ಅವರು, ನಿಗದಿಪಡಿಸಿದ ಸಮಯಕ್ಕಿಂತ ಕನಿಷ್ಠ ಎರಡರಿಂದ ಮೂರು ಗಂಟೆ ತಡವಾಗಿ ಪ್ರತಿಭಟನಾ ಸ್ಥಳವನ್ನು ತಲುಪುತ್ತಿದ್ದರು. ಏನ್ ಸಾರ್ ಲೇಟು ಎಂದು ವೋರಾಟಗಾರರು ಕೇಳಿದಾಗಲೆಲ್ಲ, ನೀವು ನಮಗೋಸ್ಕರ ಪ್ರತಿಭಟನೆ ಮಾಡುತ್ತೀರೋ ಇಲ್ಲ ಜನರಿಗೆ, ಸರ್ಕಾರಕ್ಕೆ ನಿಮ್ಮ ಬೇಡಿಕೆಗಳು ತಿಳಿಯಲಿ ಅಂತ ಪ್ರತಿಭಟನೆ ಮಾಡುತ್ತೀರೋ? ಅರ್ಧಗಂಟೆ ಪ್ರತಿಭಟನೆ ಮಾಡಿದರೆ ಯಾರಿಗೂ ನಿಮ್ಮ ಹೋರಾಟ ಅರ್ಥವಾಗುವುದಿಲ್ಲ. ಹೀಗಾಗಿ ನಮಗಾಗಿ ಪ್ರತಿಭಟನೆ ಮಾಡಬೇಡಿ. ಜನರಿಗೋಸ್ಕರ ಮಾಡಿ. ಕನಿಷ್ಠ ಎರಡು-ಮೂರು ಗಂಟೆ ಮಾಡಿದರೆ ಜನರಿಗೆ ಗೊತ್ತಾಗುತ್ತದೆ. ನಿಮ್ಮ ಪ್ರತಿಭಟನೆಗೂ ಅರ್ಥ ಬರುತ್ತದೆ. ನಾನು ಆಗ ಬಂದು ಕವರ್ ಮಾಡುತ್ತೇನೆ ಅನ್ನುತ್ತಿದ್ದರು. ಈ ರೀತಿ ಮಾಡಿ ಮಾಡಿ ಹಲವಾರು ವೋರಾಟಗಾರರಿಗೆ ಬುದ್ಧಿ ಕಲಿಸಿದ್ದರು. ಹೆಂಗಿದೆ ಐಡಿಯಾ?

ಯುಗಾದಿಗೆ ನನ್ನ ವಿಶ್ ಲಿಸ್ಟ್

ಚಿತ್ರಕೃಪೆ - ಇಂಟರ್ನೆಟ್

ಸುಖ ಹೆಚ್ಚಲಿ

 

ದುಃಖ ಬೆಚ್ಚಲಿ

 

ಟೆರರಿಸ್ಟುಗಳು ಸಾಯಲಿ

 

ಸೈನಿಕರ ಆತ್ಮವಿಶ್ವಾಸ ವರ್ಧಿಸಲಿ

 

ಭ್ರಷ್ಟ ರಾಜಕಾರಣಿಗಳು ಠೇವಣಿ ಕಳೆದುಕೊಳ್ಳಲಿ

 

ಆರ್ ಟಿ ಐ ನೆರವು ಜನ ಹೆಚ್ಚು ಹೆಚ್ಚು ಪಡೆದುಕೊಳ್ಳಲಿ

ಕ್ರಿಕೆಟ್ ಆಟಕ್ಕಿಂತ ಕಾಶ್ಮೀರಿನ ವಿಷಯದಲ್ಲಿ ಜನ ಹೆಚ್ಚು ಜಾಗೃತಗೊಳ್ಳಲಿ

ಭಾರತ ಮ್ಯಾಚ್ ಗೆದ್ದಾಗ ಪೂನಮ್ ಪಾಂಡೆ ಬೆತ್ತಲೆ ಓಡದಿರಲಿ

ಹೊಸ ವಧುವರರಿಗೆ ಬರೇ ಹೆಣ್ಣು ಮಕ್ಕಳೇ ಹುಟ್ಟಲಿ

ಟ್ರಾಫಿಕ್ ಪೋಲಿಸ್ ಲಂಚ ಕೇಳುವುದು ಕಡಿಮೆಯಾಗಲಿ

ಕೋಕ್ ಗಿಂತ ಎಳನೀರು ಹೆಚ್ಚು ಮಾರಾಟವಾಗಲಿ

ಸಾವಯವ ಕೃಷಿಗೆ ಜಯವಾಗಲಿ

ಬೆಂಗಳೂರಿನಲ್ಲಿನ ರೌಡಿಗಳು ಪರಸ್ಪರ ಮತ್ತಷ್ಟು ಹೊಡೆದಾಡಿಕೊಳ್ಳಲಿ

ಎಡಪಂಥಿಯರು, ಬಲಪಂಥಿಯರು ತಮ್ಮ ಮಾರ್ಗ ಬಿಡದಿರಲಿ

 

ತೊತ್ತೊಚಾನ್ ನಂತಹ ಶಾಲೆಗಳು ಹೆಚ್ಚಲಿ

ರಿಯಾಲಿಟಿ ಶೋಗಳಲ್ಲಿ ರಾಕ್ಷಸಿಯರು ಮಕ್ಕಳ ಚಡ್ಡಿ ಬಿಚ್ಚದಿರಲಿ

(ಯಂತ್ರಗಳನ್ನು ಕಳಚೋಣ ಬನ್ನಿ, ಚಡ್ಡಿಗಳನ್ನಲ್ಲ)

ಕನ್ನಡ ವಾಹಿನಿಗಳ ಪತ್ರಕರ್ತರ ಕನ್ನಡ ಇನ್ನಾದರೂ ಸುಧಾರಿಸಲಿ

ಟೈಮ್ಸ್ ಆಫ್ ಇಂಡಿಯಾದಲ್ಲಿ “ಶೇಕ್ ಹ್ಯಾಂಡ್ ಹಳೆ ಫ್ಯಾಷನ್, ಮುತ್ತು ಕೊಡುವುದು ಹೊಸ ಫ್ಯಾಷನ್” ನಂತಹ ಲೇಖನಗಳು ಬಾರದಿರಲಿ

ಭಾರತದಲ್ಲಿ ಟಾಯ್ಲೆಟ್ ಗಳ ಸಂಖ್ಯೆ ಹೆಚ್ಚಲಿ

ಗೃಹಸಾಲದ ಮೇಲಿನ ಬಡ್ಡಿದರ ಮತ್ತಷ್ಟು ಏರದಿರಲಿ

ಡಾ. ಸುದರ್ಶನ್, ಅಣ್ಣಾ ಹಜಾರೆ, ಮಸಾನಬು ಫುಕುವೋಕಾ ಸಂತತಿ ಹೆಚ್ಚಲಿ

ಲಾಸ್ಟ್ ಬಟ್ ನಾಟ್ ದಿ ಲೀಸ್ಟ್…

ಈ ವಿಶ್ ಲಿಸ್ಟ್ ನ ಎಲ್ಲ ವಿಶ್ ಗಳೂ ಇದೇ ವರ್ಷ ಪೂರ್ಣಗೊಳ್ಳಲಿ….

 

ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…

ಯುಗಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ

ಹೊಸ ವರುಷಕೆ, ಹೊಸ ಹರುಷಕೆ

ಹೊಸತು ಹೊಸತು ತರುತಿದೆ.

ತಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಚಿತ್ರಕೃಪೆ - ಕ್ರಿಯಾಯೋಗ

ಬಾಡೂಟದಲ್ಲಿ ಬರೀ ಗ್ರೇವಿ ತಿಂದದ್ದು

ಹಳ್ಳಿಯವರಿಗೆ ಊಟ, ಸುಘೋಷ್ ಗೆ ಕಾಟ (ಚಿತ್ರಕೃಪೆ - ಇಂಟರ್ನೆಟ್)

ಕಳೆದ ಲೋಕಸಭಾ ಚುನಾವಣೆಯಲ್ಲಿ ನಡೆದ ಘಟನೆ. ಚುನಾವಣೆಗೂ ಮೊದಲು ರಾಜಕೀಯ ಪಕ್ಷಗಳ ಪ್ರಮುಖ ನಾಯಕರ ದಿನಚರಿಯನ್ನು ಜನರಿಗೆ ತೋರಿಸಲೆಂದು ‘ಎ ಡೇ ವಿತ್ ದಿ ಲೀಡರ್’ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದೆವು. ರಾತ್ರಿ 10.30 ರ ‘ಕನ್ನಡನಾಡಿ’ ಮುಗಿದ ಬಳಿಕ ಇದು ಪ್ರಸಾರವಾಗುತ್ತಿತ್ತು. ನನಗೆ ಕಾಂಗ್ರೆಸ್ ನ ಸಿದ್ದರಾಮಯ್ಯನವರ ಜೊತೆ ಇಡೀ ದಿನ ಇದ್ದು ಅವರ ದಿನಚರಿಯನ್ನು ಶೂಟ್ ಮಾಡಬೇಕಾಗಿತ್ತು. ಸಾಕಷ್ಟು ಮೊದಲೇ ಅವರಿಗೆ ವಿಷಯ ತಿಳಿಸಿ ಇಂತಿಂಥ ದಿನ ಬರುತ್ತೇವೆ ಎಂದು ಹೇಳಿದ್ದೆ. ನಿಗದಿತ ದಿನದಂದು ನಾನು ಹಾಗೂ ಕ್ಯಾಮರಾಮನ್ ಮೋಹನ್ ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಸಿದ್ದು ಮನೆಯಲ್ಲಿ ಹಾಜರಿದ್ದೆವು. ಅವರು ವ್ಯಾಯಾಮ ಮಾಡುವುದು, ಕಾರ್ಯಕರ್ತರೊಂದಿಗೆ ಮಾತನಾಡುವುದು, ತಿಂಡಿ ತಿನ್ನುವುದು, ಪುಸ್ತಕ ಓದುವುದು ಹೀಗೆ ಎಲ್ಲವನ್ನೂ ಶೂಟ್ ಮಾಡಿಕೊಳ್ಳುತ್ತಿದ್ದೆ. ಜೊತೆಜೊತೆಗೆ ಅವರ ಡ್ರೈವರ್, ಅಡುಗೆಯವರು, ಸೆಕ್ಯುರಿಟಿಯವರೊಂದಿಗೂ ಸಿದ್ದು ಅಭ್ಯಾಸಗಳು, ಚಟುವಟಿಕೆಗಳ ಬಗ್ಗೆ ಮಾತನಾಡುತ್ತಿದ್ದೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಿದ್ದರಾಮಯ್ಯ ಮೈಸೂರಿಗೆ ಹೊರಟರು. ಸರಿ, ನಾನು ಹಾಗೂ ಕ್ಯಾಮರಾಮನ್ ಮೋಹನ್ ಕೂಡ  ಅವರೊಡನೆ ಅವರ ಎಸ್ ಯು ವಿ ಏರಿದೆವು. ದಾರಿ ಮಧ್ಯದಲ್ಲಿಯೇ ಸಿದ್ದು ಸಂದರ್ಶನ ಮುಗಿಸಿಕೊಂಡೆ. ಮೈಸೂರು ತಲುಪಿ ಕೆಲ ಹಳ್ಳಿಗಳತ್ತ ಸಿದ್ದು ಕಾರ್ ದೌಡಾಯಿಸಿತು.

ಮಧ್ಯಾಹ್ನದ ಊಟ ಯಾವುದೊ ಒಂದು ಹಳ್ಳಿಯಲ್ಲಿ ಏರ್ಪಾಡಾಗಿತ್ತು. ಇಡೀ ಹಳ್ಳಿಯಲ್ಲಿ ಅಂದು ಸಂಭ್ರಮದ ವಾತಾವರಣ. ದೊಡ್ಡದಾಗಿ ಶಾಮಿಯಾನ ಹಾಕಿದ್ದರು. ಸಿದ್ದು ಕಾರ್ ಇಳಿಯುತ್ತಿದ್ದಂತೆ ಜನರ ಜೈಘೋಷ, ಮಹಿಳೆಯರಿಂದ ಆರತಿ ಬೆಳಗಿ ಸ್ವಾಗತ ಇತ್ಯಾದಿ. ಜನರೊಡನೆ ಸುಮಾರು ಹೊತ್ತು ಕಳೆದ ಬಳಿಕ ಸಿದ್ದು ಊಟಕ್ಕೆ ನಡೆದರು. ನಾನೂ ಊಟಕ್ಕೆ ಕುಳಿತುಕೊಳ್ಳುವಂತೆ ಕಾರ್ಯಕರ್ತರು ಆಹ್ವಾನಿಸಿದರು. ಆದರೆ ನನಗೆ ಶಾಟ್ ತೆಗುದುಕೊಳ್ಳಬೇಕಾದ್ದರಿಂದ ಎರಡನೇ ಪಂಕ್ತಿಗೆ ಕೂರೋಣ ಎಂದುಕೊಂಡೆ. ಅಷ್ಟರಲ್ಲಿ ಕ್ಯಾಮರಾನ್ ಮೋಹನ್, “ಸುಘೋಷ್ ನೀವು ಊಟ ಮುಗಿಸಿಬಿಡಿ. ನಿಮ್ಮದಾದ ಮೇಲೆ ಕ್ಯಾಮರಾ ಹಿಡಿದುಕೊಳ್ಳಿ. ಅಷ್ಟರಲ್ಲಿ ನಾನೂ ಊಟ ಮುಗಿಸುತ್ತೇನೆ” ಎಂದರು. ಸರಿ ಎಂದುಕೊಂಡು ನಾನು ಊಟಕ್ಕೆ ಕುಳಿತೆ.

ನಾನು ಹಾಗೂ ಮೋಹನ್, ಸಿದ್ದು ಮನೆಗೆ ಬೆಳಿಗ್ಗೆ ತಲುಪಿದ್ದು 6 ಗಂಟೆಗೆ. ಮಧ್ಯಾಹ ಊಟಕ್ಕೆ ಕುಳಿತಾಗ 2 ಗಂಟೆ. ಅಷ್ಟರವರೆಗೆ ನನ್ನ ಹಾಗೂ ಮೋಹನ್ ಹಣೆಯಲ್ಲಿ ಬರೆದದ್ದು ಕೇವಲ ಬೈಟೂ ಟೀ ಅಷ್ಟೇ. ಹೀಗಾಗಿ ಹೊಟ್ಟೆ ಚುರುಗುಟ್ಟುತ್ತಿತ್ತು.

ಸರಿ, ಎಂದುಕೊಂಡು ಊಟಕ್ಕೆ ಕುಳಿತುಕೊಂಡೆ. ಆಗ ಆಯಿತು ನೋಡಿ ಫಜೀತಿ. ಸಿದ್ದು ಬರುತ್ತಾರೆ ಎಂಬ ಸಂಭ್ರಮದಲ್ಲಿ ಹಳ್ಳಿಯವರು ಭರ್ಜರಿ ಬಾಡೂಟ ಮಾಡಿಸಿದ್ದರು. ತಟ್ಟೆಯಲ್ಲಿ ಅನ್ನ, ಉಪ್ಪು, ಬಿಟ್ಟರೆ ಮಿಕ್ಕಿದ್ದೆಲ್ಲವೂ ನಾನ್ ವೆಜ್. ನಾನೋ ಸಸ್ಯಾಹಾರಿ. ಆದರೆ ನನ್ನ ಸಸ್ಯಾಹಾರಕ್ಕೆ ಗಂಟುಬೀಳಲು ಹೊಟ್ಟೆ ಸುತಾರಾಂ ಒಪ್ಪುತ್ತಿಲ್ಲ. “ಕಲ್ಲನ್ನಾದರೂ ಒಳಗಿಳಿಸು, ಆದರೆ ಏನನ್ನಾದರೂ ಕಳಿಸು” ಎಂದು ಹೊಟ್ಟೆ ಕೂಗಿಕೊಳ್ಳುತ್ತಲೇ ಇತ್ತು. ಮನಸ್ಸು ಮಾತ್ರ “ಯಾವುದೇ ಕಾರಣಕ್ಕೂ ನಾನ್ ವೆಜ್ ಮುಟ್ಟಬೇಡ” ಎಂದು ಎಚ್ಚರಿಸುತ್ತಿತ್ತು. ಕೆಲ ಕ್ಷಣ ಗೊಂದಲದಲ್ಲಿ ಕಳೆದೆ. ನನ್ನನ್ನು ನೋಡಿ ಕಾರ್ಯಕರ್ತರು “ಏನ್ ಸಾರ್ ಊಟ ಸೇರ್ತಾ ಇಲ್ವಾ?” ಅಂದ್ರು.

“ಇಲ್ಲ ನಾನು ವೆಜಿಟೇರಿಯನ್” ಅಂದೆ.

“ಓಹ್ ಹಾಗಾ ಸಾರ್, ಇರಿ ಸಾರ್ ಹಾಗಿದ್ರೆ ಬರೀ ಗ್ರೇವಿ ಹಾಕ್ತೀವಿ. ಪೀಸ್ ಹಾಕಲ್ಲ. ಊಟ ಮಾಡಿ ಸಾರ್” ಎಂದವರೇ ಬಕೇಟಿನಿಂದ ಗ್ರೇವಿ ಸುರಿಸುರಿದು ಅನ್ನದ ಮೇಲೆ ಹಾಕಿದರು. ಈಗ ನಾನು ನನ್ನ ಮೆದುಳಿಗೆ ಹೆಚ್ಚು ಯೋಚಿಸಲು ಅವಕಾಶ ನೀಡದೆ ಉಸಿರು ಬಿಗಿಹಿಡಿದು ಕೆಲ ತುತ್ತು ಇಳಿಸಿದೆ. ಸ್ವಲ್ಪ ಸಮಾಧಾನವಾಯಿತು. ಆದರೆ ಪೂರ್ತಿ ಊಟ ಮಾಡಲು ಆಗಲೇ ಇಲ್ಲ. ಕ್ಯಾಮರಾಮನ್ ಮೋಹನ್ ಗೆ ಮಾತ್ರ ಅಂದು ಔತಣ. ಇಲೆಕ್ಟ್ರಾನಿಕ್ ಮೀಡಿಯಾದಲ್ಲಿ ಕ್ಯಾಮರಾಮನ್ ಮೊದಲು, ಆಮೇಲೆ ರಿಪೋರ್ಟರ್ ಎಂದು ನೆನಪಿಸಿಕೊಂಡು ಮತ್ತೆ ಸಿದ್ದು ದಿನಚರಿಯನ್ನು ಶೂಟ್ ಮಾಡಲು ಆರಂಭಿಸಿದೆ.

 

ಹೀಗೊಬ್ಬ ಯಕ್ಷಗಾನ ಪಾತ್ರಧಾರಿ

ಕರ್ನಾಟಕ ಸ್ಟೇಟ್ ಏಡ್ಸ್ ಪ್ರಿವೆನ್ಷನ್ ಸೊಸೈಟಿ ನಡೆಸಿದ ಜಾನಪದ ಕಮ್ಮಟದ ಸಂದರ್ಭದಲ್ಲಿ ತೆಗೆದ ಫೋಟೋ.

© SUGHOSH S. NIGALE