‘ಡಬ್ಬಿ’ ಎಂಬ ಡಿಸಿಪಿಯ ಖಾಕಿ ದರ್ಬಾರು.

369

ಆಗ ಬೆಂಗಳೂರು ಸೆಂಟ್ರಲ್ ವಿಭಾಗದ ಡಿಸಿಪಿ ಆಗಿದ್ದವರು ಶ್ರೀಮಾನ್ ಡಬ್ಬಿ ಎಂಬ ವ್ಯಕ್ತಿ. ‘ಡಬ್ಬಿ’ ಹೊರಗಿನಿಂದ ಚೆನ್ನಾಗಿಯೇ ಇದ್ದರೂ ಪತ್ರಕರ್ತರು ಹಾಗೂ ವಕೀಲರು ಎಂದರೆ ಅವರಿಗೆ ಕಿಂಚಿತ್ತೂ ಆಗಿಬರುತ್ತಿರಲಿಲ್ಲ. ಗಣರಾಜ್ಯೋತ್ಸವ, ಸ್ವಾತಂತ್ರ್ಯದಿನಾಚರಣೆ, ಯಾವುದೋ ವಿವಿಐಪಿಯ ಕಾರ್ಯಕ್ರಮ ಹೀಗೆ ಪತ್ರಕರ್ತರು ಎದುರಾಗುವ ಭಾಗಶಃ ಎಲ್ಲ ಕಾರ್ಯಕ್ರಮಗಳಲ್ಲಿ ಪತ್ರಕರ್ತರ ಜೊತೆ ಅನವಶ್ಯಕವಾಗಿ ಕಾಲು ಕೆರೆದು ಜಗಳ ಮಾಡುತ್ತಿದ್ದರು. ಖಾಕಿ ದರ್ಪ ತೋರಿಸಲು ಮುಂದಾಗಿ ಪತ್ರಕರ್ತರ ಪ್ರತಿಭಟನೆಯನ್ನೂ ಎದುರಿಸುತ್ತಿದ್ದರು. ಆದರೆ ಎಷ್ಟೇ ಪ್ರತಿಭಟನೆ ಎದುರಿಸಿದರೂ ತಾವಿರುವುದೇ ಹೀಗೆ ಎಂದು ಆಗಾಗ ಪತ್ರಕರ್ತರ ಜೊತೆ ಅವರ ಹಾಕ್ಯಾಟ ನಡೆಯುತ್ತಲೇ ಇತ್ತು.

369

ಇಂತಿಪ್ಪ ಸನ್ನಿವೇಶದಲ್ಲಿ, ಬಿಡದಿ ಬಳಿಯ ಟೋಯೋಟಾ ಕಾರ್ಖಾನೆಯ ಕಾರ್ಮಿಕರು ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಬೆಂಗಳೂರಿನ ಬಹುಮಹಡಿ ಕಟ್ಟಡದ ಆವರಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಬೆಳಿಗ್ಗೆ ಸುಮಾರು ಏಳು ಗಂಟೆಯ ಸಮಯ. ಮಾರ್ನಿಂಗ್ ಶಿಫ್ಟ್ ನಲ್ಲಿದ್ದೆನಾದ್ದರಿಂದ ಬೇಗಬೇಗನೆ ಕ್ಯಾಮೆರಾಮ್ಯಾನ್ ಜೊತೆ ಬಹುಮಹಡಿ ಕಟ್ಟಡದ ಆವರಣ ಹೊಕ್ಕೆ. ಸುಮಾರು ಮೂನ್ನೂರಕ್ಕೂ ಹೆಚ್ಚು ಕಾರ್ಮಿಕರು, ಮೀನಾಕ್ಷಿ ಸುಂದರಂ ನೇತೃತ್ವದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದರು. ಬೈಟ್ ತೆಗೆದುಕೊಳ್ಳುವ ಮೊದಲು ಮಾಹಿತಿ ಸಂಗ್ರಹಿಸಿ, ಅಲ್ಲಿಯವರೆಗೆ ಕ್ಯಾಮೆರಾಮನ್ ಗೆ ಕಟ್ ಇನ್ಸ್ ಹಾಗೂ ಕಟ್ ಅವೇಸ್ ತೆಗೆದುಕೊಳ್ಳಲು ಹೇಳಿ ಕಾರ್ಮಿಕರ ಬಳಿ ಮಾತನಾಡುತ್ತಿದ್ದೆ. ಕೆಲ ಹೊತ್ತು ಕಳೆಯುವಷ್ಟರಲ್ಲಿ ಸ್ಥಳಕ್ಕೆ ಕೆಎಸ್ಆರ್ಪಿಯ ಎರಡು ಬಸ್ ಗಳು ಬಂದು ನಿಂತವು. ಅವುಗಳಿಂದ ದುಬುದುಬು ಪೋಲಿಸರು ಇಳಿದು ಕಾರ್ಮಿಕರನ್ನು ಸುತ್ತವರೆದು ನಿಂತರು. ನಾನು ಇನ್ನೇನು ಬೈಟ್ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಡಿಸಿಪಿ ‘ಡಬ್ಬಿ’ ಯವರ ಆಗಮನವಾಯಿತು. ಆಸಾಮಿ ಕಾರಿನಿಂದ ಕೆಳಗೆ ಇಳಿದಿದ್ದೇ ತಡ ನೇರವಾಗಿ ಮೀನಾಕ್ಷಿ ಸುಂದರಂ ಬಳಿ ಹೋಗಿ ಕೊರಳ ಪಟ್ಟಿ ಹಿಡಿದು ……..ಮಗನೆ ಹಲ್ಕಟ್, ಪ್ರೋಟೆಸ್ಟ್ ಮಾಡ್ತೀಯಾ?” ಎನ್ನುತ್ತಾ ದರದರನೇ ಎಳೆದುಕೊಂಡು ಜೀಪಿಗೆ ಹತ್ತಿಸಿದರು. ಸಾಹೇಬರ ಅವತಾರ ಕಂಡು ಇನ್ನು ತಮಗೆ ಆರ್ಡರ್ಸ್ ಬೇಕಿಲ್ಲ ಎಂದುಕೊಂಡ ಪೇದೆಗಳು ಕಾರ್ಮಿಕರನ್ನು ಹಿಡಿದು ಬಸ್ ನಲ್ಲಿ ತುಂಬಲಾರಂಭಿಸಿದರು. ಈ ಗಲಾಟೆಯಲ್ಲಿ ನನ್ನ ಹತ್ತಿರ ನಿಂತಿದ್ದ ಕ್ಯಾಮೆರಾಮನ್ ಶಾಟ್ಸ್ ತೆಗೆದುಕೊಳ್ಳಲು ಆಚೀಚೆ ಓಡಲಾರಂಭಿಸಿದ. ನಾನೂ ಕೂಡ ಕಾರ್ಮಿಕ ಕಾಂಟಾಕ್ಟ್ ನಂಬರ್ ತೆಗೆದುಕೊಳ್ಳಲು ಪೋಲಿಸ್ ಬಸ್ ಸುತ್ತ ಸುತ್ತುತ್ತ ಪರದಾಡುತ್ತಿದ್ದೆ.

369

ಬಸ್ ಸುತ್ತಿ ಈ ಕಡೆ ಬಂದಾಗ ಅಲ್ಲಿನ ದೃಶ್ಯ ನೋಡಿ ನಾನು ಶಾಕ್. ನನ್ನ ಕ್ಯಾಮಾರಾಮನ್ ನ್ನು ಹತ್ತು-ಹನ್ನೆರಡು ಪೋಲಿಸರು ಸುತ್ತುವರೆದಿದ್ದಾರೆ. ಮಧ್ಯೆ ಡಿಸಿಪಿ ‘ಡಬ್ಬಿ’ ನಿಂತುಕೊಂಡು ಕ್ಯಾಮಾರಾಮನ್ ಅನ್ನು ‘ವಿಚಾರಿಸಿ’ಕೊಳ್ಳುತ್ತಿದ್ದಾರೆ. ಆತನ ಕ್ಯಾಮಾರಾವನ್ನು ಆಗಲೇ ಕಿತ್ತುಕೊಂಡು ಪೇದೆಯೊಬ್ಬನಿಗೆ ನೀಡಲಾಗಿದೆ. ತಕ್ಷಣ ಡಬ್ಬಿ ಬಳಿ ಹೋದ ನಾನು ಬೂಮ್ ತೋರಿಸಿ ಸರ್, ನಾವು ಈಟಿವಿಯರು ಎಂದೆ. ಡಬ್ಬಿ ಐಡಿಯನ್ನು ಕೇಳಿತು. ನನ್ನ ಐಡಿ ತೋರಿಸಿದೆ. ಕ್ಯಾಮಾರಾಮನ್ ಕೂಡ ತನ್ನ ಐಡಿ ತೋರಿಸಿದ. ಆದರೆ ಆಗಷ್ಟೇ ಈಟಿವಿಯಲ್ಲಿ ಕ್ಯಾಮರಾ ಅಸಿಸ್ಟೆಂಟ್ ಗಳಿಗೆ ಬಡ್ತಿ ನೀಡಿ ಜೂನಿಯರ್ ಕ್ಯಾಮೆರಾಮನ್ ಗಳಾಗಿ ಮಾಡಲಾಗಿತ್ತು. ಹೀಗಾಗಿ ನನ್ನ ಕ್ಯಾಮೆರಾಮನ್ ಐಡಿಯ ಡೆಸಿಗ್ನೇಷನ್ ಜಾಗದಲ್ಲಿ ‘ಕ್ಯಾಮೆರಾ ಅಸಿಸ್ಟೆಂಟ್’ ಎಂದು ಬರೆಯಲಾಗಿತ್ತು. ಹೀಗಾಗಿ ‘ಡಬ್ಬಿ’ ಮತ್ತೆ ಕ್ಯಾತೆ ತೆಗೆಯಿತು. ಕೊನೆಗೆ ನಾನು ಸ್ಪಲ್ಪ ಮುಖಗಂಟಿಕ್ಕಿಕೊಂಡು ಮಾತನಾಡಿದ್ದರಿಂದ ಕ್ಯಾಮೆರಾ ವಾಪಸ್ ನೀಡಿ ಜೀಪ್ ಏರಿ ಹೊರಟಿತು. ಇದನ್ನೆಲ್ಲ ಬಸ್ ನಲ್ಲಿದ್ದ ಕಾರ್ಮಿಕರು ವಿಕ್ಷಿಸುತ್ತಿದ್ದರು.

ಆತನ ಜೀಪನ್ನು ಎರಡೂ ಬಸ್ ಗಳು ಹಿಂಬಾಲಿಸಿದವು. ಆದರೆ ‘ಡಬ್ಬಿ’, ಮೀನಾಕ್ಷಿ ಸುಂದರಂರ ಕೊರಳ ಪಟ್ಟಿ ಹಿಡಿದು ಎಳೆದುಕೊಂಡು ಹೋಗುತ್ತಿದ್ದ ಫೂಟೆಜ್ ಕೇವಲ ನಮಗೆ ಸಿಕ್ಕಿದ್ದರಿಂದ ಕ್ಯಾಸೆಟ್ ಆಫೀಸಿಗೆ ಕೊಡಲು ಆಫೀಸಿನತ್ತ ಗಾಡಿ ತಿರುಗಿಸಿದೆವು. ಹೀಗಾಗಿ ಕಾರ್ಮಿಕರನ್ನು ತುಂಬಿಕೊಂಡಿದ್ದ ಬಸ್ ಗಳು ಎಲ್ಲಿ ಹೋಗಿವೆ ಎಂದು ತಿಳಿಯಲಿಲ್ಲ. ಕೊನೆಗೆ ಅವರನ್ನು ಆಡುಗೋಡಿಯ ಕೆಎಸ್ಆರ್ಪಿ ಗ್ರೌಂಡಿನಲ್ಲಿ ಕೂರಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಅಲ್ಲಿ ಹೋದೆವು. ನಾನು ಹಾಗೂ ಕ್ಯಾಮೆರಾಮನ್ ಗಾಡಿಯಿಂದ ಇಳಿಯುತ್ತಿದ್ದಂತೆ ಕಾರ್ಮಿಕರೆಲ್ಲರೂ ಭರ್ಜರಿ ಚಪ್ಪಾಳಿ ಬಾರಿಸಿ, ಶಿಳ್ಳೆ ಹೊಡೆದು ನಮ್ಮನ್ನು ಸ್ವಾಗತಿಸಿದರು. ಅಲ್ಲಿಯೇ ನಿಂತಿದ್ದ ಡಬ್ಬಿಯ ಮುಖ ಕಪ್ಪಿಟ್ಟಿತ್ತು. ಕಾರ್ಮಿಕ ಮುಖಂಡರೊಬ್ಬರ ಜೊತೆ ಪೋಲಿಸ್ ಅಧಿಕಾರಿಯ ವರ್ತನೆಯನ್ನು ಶೂಟ್ ಮಾಡಿರುವುದೇ ‘ಡಬ್ಬಿ’ಯ ಪಿತ್ತ ನೆತ್ತಿಗೇರಲು ಕಾರಣವಾಗಿತ್ತು.

369

‘ಡಬ್ಬಿ’ಯ ಸದ್ದು – ಪ್ರತಿಷ್ಠಿತ ಕನ್ನಡ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉತ್ತಮ ಕ್ರೈಮ್ ವರದಿಗಾರರೊಬ್ಬರು ‘ಡಬ್ಬಿ’ಯ ‘ವಿಶೇಷ ಪ್ರಕರಣ’ವೊಂದರ ಬಗ್ಗೆ ಬರೆದರೆಂದು, ಪತ್ರಿಕೆಯ ಮಾಲೀಕರ ಜೊತೆ ಮಾತನಾಡಿ ಆ ವರದಿಗಾರರನ್ನು ‘ಡಬ್ಬಿ’ ಕೆಲಸದಿಂದಲೇ ಕಿತ್ತಿಹಾಕಿಸಿತ್ತು. ಹೇಗಿದೆ ‘ಡಬ್ಬಿ’ಯ ಪ್ರಭಾವ?

ಇನ್ನು ಮೇಲೆ ಕೈಯಿಂದ ತೊಳೆದುಕೊಳ್ಳಬಾರದಂತೆ….

144

ಸೆಪ್ಟೆಂಬರ್ 26 ರ ಪ್ರಜಾವಾಣಿಯಲ್ಲಿ ಈ ಮೇಲಿನ ಜಾಹೀರಾತು ಪ್ರಕಟವಾಗಿದೆ. ‘ಅದಕ್ಕಾಗಿ’ ಕೈಯನ್ನು ಬಳಸಿದರೆ ಹೆಪಟೈಟಿಸ್, ಟೈಫಾಯಿಡ್, ಕಾಲರಾ, ಗ್ಯಾಸ್ಟ್ರೋ-ಎಂಟರೈಟಿಸ್, ಆಮಶಂಕೆ ಇತ್ಯಾದಿ ರೋಗಗಳು ಬರುತ್ತವೆ ಎಂದು ಜಾಹಿರಾತಿನಲ್ಲಿ ಧಮಕಿ ಕೂಡ ಹಾಕಲಾಗಿದೆ. ಅಷ್ಟೇ ಅಲ್ಲ ಕೈಯಿಂದ ತೊಳೆದುಕೊಳ್ಳುವುದು ಎಷ್ಯು ಅಪಾಯಕಾರಿಯೆಂದು ವಿವರಿಸಲಾಗಿದೆ. ಈ ಸಮಸ್ಯೆಗೆ ಆ ಕಂಪನಿಯೇ (ಹೈಜೀಕ್ಲೀನ್) ಪರಿಹಾರ ಸೂಚಿಸಿದೆ. ಅದಕ್ಕಾಗಿ ಅಟ್ಯಾಚೇಬಲ್ ಬಿಡೆಟ್ ಗಳನ್ನು ಬಳಸಬೇಕಂತೆ. ಇದು ಪರಿಸರ ಸ್ನೇಹಿಯಂತೆ. ಕೇವಲ ಹತ್ತು ಸೆಕೆಂಡ್ ನಲ್ಲಿ ತೊಳೆದು ಮುಗಿಸುತ್ತದಂತೆ. ಹೀಗೆಯೇ ಮುಂದುವರೆಯುತ್ತದೆ ಇದರ ಪ್ರವರ.

ಇದನ್ನು ಓದಿದಾಗ ನನಗೆ ನಾವು ಯಾವ ಸ್ಥಿತಿಗೆ ಬಂದಿದ್ದೇವೆ ಎನಿಸಿತು. ಆರ್ಯಾವರ್ತದ ಶೇ. 69 ರಷ್ಟು ಜನರಿಗೆ ಇಂದಿಗೂ ಕೂಡ ಸರಿಯಾದ ಶೌಚಾಲಯದ ವ್ಯವಸ್ಥೆಯೇ ಇಲ್ಲದ ಸಂದರ್ಭದಲ್ಲಿ, ತೊಳೆಯಲು ಕೈಯನ್ನು ಬಳಸಬೇಡಿ ಎಂದು ಹೇಳುವ ಕಂಪನಿಗಳು ಶುರುವಾಗುತ್ತಿವೆಯಲ್ಲ ಎಂದು ಆಶ್ಚರ್ಯವಾಯಿತು. ಗ್ರಾಮೀಣ ಜಂಬೂದ್ವೀಪದಲ್ಲಿ ಇಂದಿಗೂ ಎಪಿಎಂಸಿ ಯಾರ್ಡ್ ಗಳು ಓಪನ್ ಶೌಚಗಳಾಗಿರುವಾಗ, ಮಹಿಳೆಯರು ಶೌಚಕ್ಕೆ ಹೋದಾಗ ಅತ್ಯಾಚಾರದಂತಹ ಪ್ರಕರಣಗಳು ಸಂಭವಿಸುತ್ತಿರುವಾಗ ಅಟ್ಯಾಚೆಬಲ್ ಬಿಡೆಟ್ ನಂತಹ ಉತ್ಪನ್ನಗಳು ಪ್ರಜಾಪ್ರಭುತ್ವವನ್ನು ಅಣಕಿಸುವಂತಿಲ್ಲವೆ? ಇಂತಹ ಉತ್ಪನ್ನಗಳನ್ನು ಮಾರಾಟ ಮಾಡುವ ಬದಲು ಲೋ ಕಾಸ್ಟ್ ಶೌಚಾಲಯಗಳನ್ನು ಕಟ್ಟಿಸುವ, ಅದಕ್ಕೆ ಫೈನಾನ್ಸ್ ಒದಗಿಸಿ ಆ ಮೂಲಕ ಸಮಾಜ ಸೇವೆ ಹಾಗೂ ವ್ಯಾಪಾರ ಎರಡೂ ಮಾಡುವ ಬುದ್ಧಿ ನಮ್ಮ ಕಾರ್ಪೋರೇಟ್ ಲೀಡರ್ಸ್ ಗಳಿಗೆ ಇನ್ನೂ ಏಕೆ ಬಂದಿಲ್ಲ?

ಕೇವಲ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಈ ರೀತಿಯ ಬಿಡೆಟ್ ಗಳಿದ್ದವು. ಈಗ ಮನೆಮನೆಗೂ ಹಾಕಿಸಿಕೊಳ್ಳಿ ಎಂದು ಕಂಪನಿಗಳು ಹೇಳುತ್ತಿವೆ. ಕೈಯನ್ನು ಬಳಸಿ ಇಂದಿನವರೆಗೆ ಎಷ್ಟು ಜನರಿಗೆ ಇವರು ಹೇಳಿರುವ ರೋಗಗಳು ಬಂದಿವೆಯೋ ನನಗಂತೂ ಗೊತ್ತಿಲ್ಲ.

ಆಶ್ಚರ್ಯವೆಂದರೆ ಈ ಜಾಹೀರಾತಿನ ಮುಂದಿನ ಪುಟದಲ್ಲಿ ಬೈಲೈನ್ ಇಲ್ಲದ, ಜಾಹಿರಾತು ಎಂದೂ ಪ್ರಕಟವಾಗದ ಪೂರಕ ಲೇಖನವೊಂದು ಪ್ರಕಟವಾಗಿದೆ ಅದು ಇಲ್ಲಿದೆ.

142

ಒಂದು ಕಿಂಗ್ ಸಿಗರೇಟ್ ಹಾಗೂ ಅಣ್ಣ ಬಸವಣ್ಣ….

ವಗಕಾ

ಆತ ಹಾಗೆ ನೋಡಿದರೆ ಚೈನ್ ಸ್ಮೋಕರ್ ಏನೂ ಅಲ್ಲ. ಆದರೆ ದಿನಕ್ಕೆ ಹೆಚ್ಚೆಂದರೆ ಒಂದು ಸಿಗರೇಟು ಸೇದುತ್ತಿದ್ದ. ತೀವ್ರ ಕೆಲಸದ ಒತ್ತಡದಿಂದಾಗಿ ಕಳೆದ ಒಂದು ವಾರದಿಂದ ಒಂದೂ ಸಿಗರೇಟು ಸೇದಿರಲಿಲ್ಲ. ಸಿಗರೇಟು ಸೇದಬೇಕೆಂಬ ಹಪಹಪಿ ತೀವ್ರವಾಗಿತ್ತು. ರಸ್ತೆ ಬದಿಯ ದೊಡ್ಡ ಮರದ ಪುಟ್ಟ ಗೂಡಂಡಗಡಿಯಲ್ಲಿ ಹಾಫ್ ಟೀ ಹಾಗೂ ಒಂದು ಕಿಂಗ್ ಸಿಗರೇಟು ಸೇದುತ್ತ ಹೊಗೆ ಬಿಡುತ್ತಿದ್ದರೆ ವ್ಯಗ್ರವಾಗಿರುತ್ತಿದ್ದ ಮನಸ್ಸು ನಿಧಾನವಾಗಿ ಶಾಂತವಾಗುತ್ತಿತ್ತು.

ಎಂದಿನಂತೆ ಗೂಡಂಗಡಿ ಎದುರು ತನ್ನ ನೆಚ್ಚಿನ ಸ್ಪ್ಲೆಂಡರ್ ಬೈಕ್ ನಿಲ್ಲಿಸಿದ. ಸಿಂಗಲ್ ಸ್ಟಾಂಡ್ ಹಾಕುವುದು ಸೋಮಾರಿತನ ಎಂದು ತಿಳಿದಿದ್ದ ಆತ ಎಂದಿಗೂ ಡಬಲ್ ಸ್ಟಾಂಡ್ ಹಾಕುವುದನ್ನೇ ಅಭ್ಯಾಸ ಮಾಡಿಕೊಂಡಿದ್ದ. ಅಂದೂ ಹಾಗೆಯೇ ಡಬಲ್ ಸ್ಟಾಂಡ್ ಹಾಕಿದ. ಕಿಂಗ್ ಸಿಗರೇಟ್ ಗೆ ನಾಲ್ಕೂವರೆ ರೂಪಾಯಿ. ಐದು ರೂಪಾಯಿಯ ಕಾಯಿನ್ ಹೊರ ತೆಗೆದ. ಹೊಳೆಹೊಳೆಯುವ ಐದು ರೂಪಾಯಿಯ ಒಂದು ಕಡೆ, ತುಂಬ ಮುದ್ದಾಗಿ 5 ಎಂದು ಬರೆದಿತ್ತು. ಕಾಯಿನ್ ತಿರುಗಿಸಿ ನೋಡಿದ. ಅಣ್ಣ ಬಸವಣ್ಣನ ಚಿತ್ರ ಸುಂದರವಾಗಿ ಮೂಡಿಬಂದಿತ್ತು. ತಕ್ಷಣ ಈತನಿಗೆ ನೆನಪಾಯಿತು. ಇದೇ ಅಂತರಂಗ ಶುದ್ಧಿ….ಇದೇ ಬಹಿರಂಗ ಶುದ್ದಿ…ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ.…ಛೆ…ಬಸವಣ್ಣ ಇರುವ ಕಾಯಿನ್ ನಿಂದ ಸಿಗರೇಟು ಕೊಳ್ಳುವುದೇ? ಇನ್ನೇನು ಆ ಕಾಯಿನ್ ಅಂಗಡಿಯವನಿಗೆ ಕೊಡಬೇಕು. ಅಷ್ಟರಲ್ಲಿ ಅದನ್ನು ಜೇಬಿಗಿಳಿಸಿ ವಾಪಸ್ ಬೈಕ್ ಏರಿದ…….

B/o ಅಂದ್ರೆ ಏನೆಂದು ಅಪ್ಪನಾದ ಮೇಲೆ ಗೊತ್ತಾಯ್ತು…

su

ಇಲ್ಲಿಯವರೆಗೆ ನಾನು ಬಳಸುತ್ತಿದ್ದುದು ಅಥವಾ ನನಗೆ ಗೊತ್ತಿದ್ದುದು ಕೇವಲ S/o, D/o, W/o ಇತ್ಯಾದಿ ಅಷ್ಟೇ. ಆದರೆ ಮುದ್ದುವನ್ನು ಆಸ್ಪತ್ರೆಯಿಂದ ಕರೆದುಕೊಂಡು ಬರುತ್ತಿದ್ದ ದಿನ ಕೆಲ ಫಾರ್ಮಾಲಿಟಿಸ್ ಗಳನ್ನು ಪೂರೈಸುತ್ತಿದ್ದೆ. ಆಗ ಫಾರ್ಮ್ ಒಂದರಲ್ಲಿ  B/o ಎಂದು ನರ್ಸ್ ಬರೆದಳು. ಇದೇನಪ್ಪಾ B/o ಎಂದು ತಲೆ ಕೆಡಿಸಿಕೊಂಡೆ. ಅರ್ಥವಾಗಲಿಲ್ಲ. ನಂತರ ಅದು ಇದು ಮಾತನಾಡುತ್ತಿದ್ದ ಸಂದರ್ಭದಲ್ಲಿ B/o ಎಂದರೆ ‘ಬೇಬಿ ಆಫ್’ ಎಂಬುದು ತಿಳಿಯಿತು.

ಅಪ್ಪನಾದ ಮೇಲೆ ಹಲವು ವಿಷಯಗಳು ಮೊಟ್ಟ ಮೊದಲ ಬಾರಿಗೆ ಗೊತ್ತಾಗುತ್ತಿವೆ. ಮೂರ್ನಾಲ್ಕು ದಿನಗಳ ಆಸ್ಪತ್ರೆಯ ವಾಸದಲ್ಲಿ ಹಲವು ಮೆಡಿಕಲ್ ಟರ್ಮ್ ಗಳು, ಔಷಧಿಗಳ ಹೆಸರುಗಳು, ಸಿಸ್ಟರ್ ಗಳ ವರ್ತನೆಗಳು, ಡಾಕ್ಟರ್ ಗಳ ಸೂಚನೆಗಳು ಎಲ್ಲವನ್ನೂ ಅರೆದು ಕುಡಿದು ಬಿಟ್ಟಿದ್ದೇನೆ.

ಅಂದ ಹಾಗೆ ಅಪ್ಪನಾದ ಸಂದರ್ಭದಲ್ಲಿ ನನಗೆ ಬಂದ ಕೆಲ ಆಯ್ದ ಎಸ್ ಎಂ ಎಸ್ ಗಳು, ಅದಕ್ಕೆ ನನ್ನ ಪ್ರತಿಕ್ರಿಯೆಗಳು ಇಲ್ಲಿವೆ.

1. Yuppie…..Sughosh baap ban gaya aur main uncle…..

-Shridhar Vivan, Bangalore Mirror.

(Thank God at last you agreed that you are uncle…)

————————

2. Hey Congrats….welcome to Daddy’s world and a bit of sleepless nights for the next few years.

-Keertibhanu, Theatre Artist.

(You are happy or what for my sleepless nights…?)

————————-

3. Sooper….Congrats Naana

-Ravi Mandya, Actor.

(ಸೂಪರ್ ಅಂತೆ ಸೂಪರ್…ನಿಂಗೆನ್ ಗೊತ್ತು ನನ್ನ ಪರಿಸ್ಥಿತಿ)

————————-

4. Congratulations…May God bless the baby. By the way when is the party?

-Raghavendra Kulkarni.

(Oh first let me recover from paying the hospital bills Raghu…)

————————-

5. Congrats Sughosh….And also tell my wish to your wife also…

-Narendra Madikeri.

(What do you think…I’m a postman?)

————————

6. Congratulations Daddy!!

-Nanaih

(You are the one who identified me correctly).

————————

7. Congrats Man…

-Vinod Dhondale. Episode Director, Mukta Mukta

(Some people now believed that I’ m also a MAN…)

————————

8. Hey Congrats!!

-Vidyarashmi, Kannadaprabha.

(Hey Thank you!!)

———————–

9. Congrats V V happy…

-Arpana H.S. ETV.

(Thanks for double happiness….but it is not twins Arpana….)

———————–

10. Congrats. Let many come in your life….

Prakash, BJP.

(Ok Ok….I think it is your government which is bringing two child norm…..?)

———————–

11. Congrats to both of you. May God bless him with good health, good talent (like you), and lots of happiness.

-Arati, Doordarshan.

(You are second one to identify me correctly…)

———————–

12. Oh congrats. Welcome to our team…

-Anil Bharadwaj, Suvarna Anchor.

(Are you planning a match or something?)

————————

13. Oh ida general check uppu….Any way congrats Dad and Mom….

-Shreedevi Kalasad. Sudha.

(ಸೂಕ್ಷ್ಮ ಅರಿತ್ಕೊಬೇಕು ತಾಯಿ…..)

‘ತಂದೆಯರ ಸಂಘ’ ಸೇರಿದ ಸುಘೋಷ್ ನಿಗಳೆ

suvidya baby

ಆತ್ಮೀಯರೆ,

ಇಲ್ಲಿದೆ ಹೊಸ ಸುದ್ದಿ. ದಿನಾಂಕ 16 ನೇ ಸೆಪ್ಟೆಂಬರ್ 2009 ರಂದು ನನ್ನ ಜೀವನ ಸಂಗಾತಿ ವಿದ್ಯಾ, ಗಂಡು ಮಗುವಿಗೆ ಜನ್ಮನೀಡಿದ್ದಾಳೆ. ತಾಯಿ, ಮಗು ಹಾಗೂ ಅಪ್ಪ ಮೂವರು ಆರೋಗ್ಯವಾಗಿದ್ದಾರೆ.  ಇದೀಗ ನಾನು ‘ತಂದೆಯರ ಸಂಘ’ವನ್ನು ಸೇರಿದಂತಾಗಿದೆ. ಇನ್ನು ಮೇಲೆ ಸ್ಲೀಪ್ ಲೆಸ್ ನೈಟ್ಸ್ ಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಮಿತ್ರರೊಬ್ಬರು ಕಿವಿಮಾತು ಹೇಳಿದ್ದಾರೆ….ಇದೇ ವೇಳೆ ವಿವಿಧ ಬಗೆಯ ಗ್ರೀಟಿಂಗ್ ಎಸ್ಎಂಎಸ್ ಗಳು ನನಗೆ ಬಂದಿವೆ. ಆಯ್ದ ಕೆಲವುಗಳನ್ನು ಸಧ್ಯದಲ್ಲಿಯೇ ಪ್ರಕಟಿಸುತ್ತೇನೆ.

ಈ ಎಲ್ಲ ಓಡಾಟಗಳ ಮಧ್ಯೆ ಬ್ಲಾಗ್ ಅಪ್ ಡೇಟ್ ನಿಧಾನವಾಗಿದೆ. ದಯವಿಟ್ಟು ಕ್ಷಮಿಸಬೇಡಿ.

ವಿಶ್ವಾಸವಿರಲಿ

ಸುಘೋಷ್ ಎಸ್. ನಿಗಳೆ.

ಹೊಸ ಸುದ್ದಿ ಕಾದಿದೆ….

100_1695

ಆತ್ಮೀಯರೆ,

ಕ್ಷಮಿಸಿ. ಕಳೆದ ಎರಡು ದಿನಗಳಿಂದ ಬ್ಲಾಗ್ ಅಪ್ ಡೇಟ್ ಮಾಡಿಲ್ಲ. ವಿಶೇಷ ಕಾರಣವಿದೆ. ಒಂದೆರಡು ದಿನಗಳಲ್ಲಿ ತಿಳಿಸುತ್ತೇನೆ.

ಪ್ರೀತಿಯಿರಲಿ

ಸುಘೋಷ್ ಎಸ್. ನಿಗಳೆ.

ರಾಜಕಾರಣಿಗಳ ಮನೆ ಆಕ್ಚುಲಿ ಹಿಂಗಿರಬೇಕಲ್ವೆ?

Poli house

ಚಿತ್ರ – ನಾನು

ಸ್ಥಳ – ಗುಡ್ಡದ ಪಾಳ್ಯ ಸಮೀಪ, ಕಿಬ್ಬನಹಳ್ಳಿ ಹೋಬಳಿ, ತಿಪಟೂರು ತಾಲೂಕು.

‘ಮುಕ್ತ ಮುಕ್ತ ಸಂವಾದ’ ಹಾಗೂ ತಿಪಟೂರಿನ ಶ್ರೀಸಾಮಾನ್ಯ

ತಿಪಟೂರು

ಭ್ರಮೆ ಒಡೆಯಿತು. ಕಣ್ಣು ತೆರೆಯಿತು. ಪರದೆ ಸರಿಯಿತು. ಸಣ್ಣ ಊರಲ್ಲಿ ಯಾರು ಬರುತ್ತಾರೆ? ಜನರ ಕ್ವಾಲಿಟಿ ಏನು ಮಹಾ ಇರುತ್ತದೆ? ಹಾಲ್ ಕೂಡ ಸಣ್ಣದಂತೆ…. ಇತ್ಯಾದಿ ಸಂಶಯಗಳೊಂದಿಗೆ ತಿಪಟೂರಿಗೆ ಹೋದಾಗ ಮಧ್ಯಾಹ್ನ 12.30. ಬಿ.ಎಂ.ಶ್ರೀ ರೆಸಿಡೆನ್ಸಿಯಲ್ಲಿ ಫ್ರೆಶ್ ಆಗಿ, ಅತಿಥೇಯರೊಬ್ಬರ ಮನೆಯಲ್ಲಿ ಪುಷ್ಕಳ ಊಟಮುಗಿಸಿಕೊಂಡು ಸಂವಾದ ನಡೆಯುವ ಸ್ಥಳಕ್ಕೆ ಹೋದಾಗ ನನಗೆ ನಿಜಕ್ಕೂ ಶಾಕ್!!

ಹಾಲ್ ಅಕ್ಷರಶಃ ಜಾಮ್ ಪ್ಯಾಕ್ಡ್ ಆಗಿತ್ತು. ಸ್ಟೇಜ್ ಮುಂದೆ ಸಹ ಜನರು ಒತ್ತೊತ್ತಾಗಿ ನೆಲದ ಮೇಲೆ ಕುಳಿತಿದ್ದರು. ಸ್ಟೇಜ್ ಬಲಕ್ಕೆ, ಎಡಕ್ಕೆ, ಹಿಂದೆ ಕೊನೆಕೊನೆಗೆ ಸ್ಜೇಜ್ ಪಕ್ಕ ಮಾಡಿರುವ ಮೆಟ್ಟಿಲುಗಳ ಮೇಲೆ ಸಹ ಜನರು ಸುಮಾರು ಮೂರು ಗಂಟೆ ಕಾಲ ನಿಂತು ಮುಕ್ತ ಮುಕ್ತ ಸಂವಾದಕ್ಕೆ ಸಾಕ್ಷಿಯಾದರು!!

ಎಲ್ಲಕ್ಕಿಂತ ಖುಶಿಯಾಗಿದ್ದು ಜನರು ಕೇಳುತ್ತಿದ್ದ ಪ್ರಶ್ನೆಗಳಿಗೆ. ಸಾಮಾನ್ಯವಾಗಿ ಕೌಟುಂಬಿಕ ಪ್ರಶ್ನೆಗಳನ್ನು ನಾನು ನೋಡಿರುವ ಮೂರು ಸಂವಾದಗಳಲ್ಲಿ ಹೆಚ್ಚು ಕೇಳಲಾಗಿತ್ತು. ಆದರೆ ಈ ಸಂವಾದದಲ್ಲಿ ಮಾತ್ರ ರಾಜಕೀಯ, ಭ್ರಷ್ಟಾಚಾರ, ವ್ಯವಸ್ಥೆಯ ಆರೋಗ್ಯ, ಜೂನಿಯರ್ ವಕೀಲರು ಎದುರಿಸುತ್ತಿರುವ ಸಂಕಷ್ಟ ಮುಂತಾದವುಗಳ ಬಗ್ಗೆ ಪ್ರೇಕ್ಷಕರಿಂದ ಮೌಲ್ಯಾಧಾರಿತ ಪ್ರಶ್ನೆಗಳು ಬಂದವು. ನಿರ್ದೇಶಕ ಟಿ. ಎನ್. ಸೀತಾರಾಮ್ ಕೂಡ ಆ ಪ್ರಶ್ನೆಗಳಿಗೆ ಅಷ್ಟೇ ಮೌಲ್ಯಯುತ ಹಾಗೂ ಕನ್ವಿನ್ಸಿಂಗ್ ಉತ್ತರ ನೀಡಿದರು. ಅಫ್ ಕೋರ್ಸ್ ಹಾಸ್ಯದ ಟಚ್ ಜೊತೆಗೆ.

ತಿಪಟೂರಿನ ಓರ್ವ ಶ್ರೀಸಾಮಾನ್ಯ ಕೇಳಿದ್ದ ಪ್ರಶ್ನೆಗೆ ಟಿ. ಎನ್. ಸೀತಾರಾಮ್ ಸೇರಿದಂತೆ, ಕಲಾವಿದರು, ಪ್ರೇಕ್ಷಕರು ತಲೆದೂಗಿದರು. ಇಟ್ ವಾಸ್ ಶಾಟ್ ಎಟ್ ದಿ ಸೆಂಟರ್…..ಆ ವ್ಯಕ್ತಿಯ ಕಾನ್ಫಿಡೆನ್ಸ್ ಲೆವೆಲ್, ಪ್ರಶ್ನೆ ಕೇಳಿದ ರೀತಿ, ಪ್ರಶ್ನೆಯ ಹಿಂದಿದ್ದ ಸಾಮಾಜಿಕ ಕಳಕಳಿ, ಅವರು ಮುಕ್ತಾ ಮುಕ್ತಾ ವನ್ನು ಎಷ್ಟು ಕೂಲಂಕುಷವಾಗಿ ವೀಕ್ಷಿಸುತ್ತಾರೆ ಎಂಬುದನ್ನು ಅವರ ಪ್ರಶ್ನೆ ಪ್ರತಿನಿಧಿಸಿತ್ತು. ಪ್ರಶ್ನೆ ಮುಗಿದ ಕೂಡಲೆ ಜನರಿಂದ ಚಪ್ಪಾಳೆಯೂ ಬಂತು. ಅಂಡ್ ಬಿಲಿವ್ ಮಿ ಆ ಪ್ರಶ್ನೆ ಕೇಳಿದ್ದು ಬೇರಾರೂ ಅಲ್ಲ ನಾವು ತೀರ ಸಾಮಾನ್ಯ ವ್ಯಕ್ತಿ ಎಂದು ಪರಿಗಣಿಸುವ ಓರ್ವ ಆಟೋ ಚಾಲಕ!!

ತಿಪಟೂರಿನ ಸಂವಾದದ ಹಲವು ವಿಶೇಷಗಳನ್ನು ನೀವು ನೋಡಿಯೇ ಆನಂದಿಸಬೇಕು. ಬರುವ ಭಾನುವಾರ (20-09-2009) ರಂದು ತಿಪಟೂರಿನ ಸಂವಾದ ‘ಈ ಟಿವಿ’ಯಲ್ಲಿ ಬೆಳಿಗ್ಗೆ 10.05 ಕ್ಕೆ ಪ್ರಸಾರವಾಗಲಿದೆ. ದಯವಿಟ್ಟು ವೀಕ್ಷಿಸಿ.

‘ಮುಕ್ತ ಮುಕ್ತ’ ಸಂವಾದ ತಿಪಟೂರಿನಲ್ಲಿ…

Picture 063

ಈ ಬಾರಿಯ ‘ಮುಕ್ತ ಮುಕ್ತ’ ಸಂವಾದ ಇಂದು ಭಾನುವಾರ ತಿಪಟೂರಿನಲ್ಲಿ ನಡೆಯಲಿದೆ. ತಿಪಟೂರಿನ ಎಲ್ಲ ನಾಗರಿಕರಿಗೆ ಸಂವಾದಕ್ಕೆ ಆತ್ಮೀಯ ಸ್ವಾಗತ.

ಸುಘೋಷ್ ಎಸ್. ನಿಗಳೆ.

ಬಾಹರ್ ವತ್ತಾಚ್ ನಖರೇವಾಲಿ…..

123

ಕಾಲೇಜಿನ ಪರಮ ಪಡಪೋಶಿತನದ ದಿನಗಳವು. ಏರ್ಪೋರ್ಟಿನಿಂದ ಗೆಳೆಯನ ಅಣ್ಣನೊಬ್ಬ ವಿದೇಶಕ್ಕೆ ಹೋಗುವವನಿದ್ದ. ಆತನನ್ನು ಬೀಳ್ಕೊಡಲು ನಮ್ಮ ಗೆಳೆಯರ ಗುಂಪೆಲ್ಲ ಏರ್ ಪೋರ್ಟಿಗೆ ಹೋಗಿತ್ತು. ವಿಮಾನ ಪ್ರಯಾಣ ಮೊದಲಬಾರಿಯಾಗಿದ್ದರಿಂದ ಆತನಂತೂ ಫುಲ್ ನರ್ವಸ್ ಆಗಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದ. ಬಾಲವೊಂದಿಲ್ಲದ ಕೋತಿಗಳಾಗಿದ್ದ ನಾವೆಲ್ಲ ಕ್ಖೆ..ಕ್ಖೆ..ಕ್ಖೆ…ಕ್ಖೆ…. ಎಂದು ನಗಾಡಿಕೊಂಡು, ತಮಾಷೆ ಮಾಡಿಕೊಳ್ಳುತ್ತ ನಿಂತಿದ್ದೆವು. ಅಷ್ಟರಲ್ಲಾಗಲೇ ಏರ್ ಪೋರ್ಟಿನಲ್ಲಿ ಮುದ್ದಿನ ಸೊಕ್ಕಿನ ಬೆಕ್ಕಿನ ಹಾಗೆ ಠಳಾಯಿಸುತ್ತಿದ್ದ ಏರ್ ಹಾಸ್ಟೆಸ್ ಗಳು ನಮ್ಮ ಗಮನ ಸೆಳೆದಿದ್ದರು. ಅವರ ಬಿಗಿಬಿಗಿ ಉಡುಪು, ಬಿಳಿಬಿಳಿ ಕಾಲುಗಳು, ತೀರ ಫ್ರೋಫೆಷನ್ ಎನಿಸುವಂತಹ ನಡೆಯುವ ಸ್ಟೈಲ್, ನೋಟ, ಕೂದಲು ಕಟ್ಟಿಕೊಂಡಿದ್ದ ಪರಿ ಎಲ್ಲವನ್ನೂ, ಅವರ ಬಗ್ಗೆ ನಾವು ಪಿಎಚ್ ಡಿ ಮಾಡುತ್ತಿದ್ದೆವೋ ಎಂಬಂತೆ ತೀರ ಗಮನವಿಟ್ಟು ನೋಡುತ್ತಿದ್ದೆವು. ಗೆಳೆಯರ ಗುಂಪಿನಲ್ಲಿದ್ದಾಗ ಎರಡು ವಿಷಯಗಳ ಬಗ್ಗೆ ಯಾವುದೇ ಪೂರ್ವ ಸೂಚನೆಯಲ್ಲಿದೆ ಚರ್ಚೆಗಳಾರಂಭವಾಗಿ ಬಿಡುತ್ತಿದ್ದವು. ಮೊದಲೆನಯದು ದೇವರ ಬಗ್ಗೆಯಾದರೆ ಎರಡನೆಯದು ಹುಡುಗಿರಯ ಕುರಿತದ್ದು. (ಎತ್ತಣಿಂದೆತ್ತ ಸಂಬಂಧವಯ್ಯಾ ಕುಮಾರಾ….?)

ಸರಿ, ಏರ್ ಹಾಸ್ಟೆಸ್ ಗಳ ಕುರಿತು ಚರ್ಚೆ ಆರಂಭವಾಗಿಯೇ ಬಿಟ್ಟಿತು. ಅವರ ದೇಹದ ಪ್ರತಿಯೊಂದರ ಬಗೆಯೂ ಕಾಮೆಂಟುಗಳು ನಮ್ಮನಮ್ಮಲ್ಲಿ ಆರಂಭವಾದವು. ಅವರ ಸ್ಟೈಲ್ ಕುರಿತು ಗಂಭೀರ ಚರ್ಚೆ ನಡೆಯಲಾರಂಭಿಸಿತು. ಅವರದು ಕೃತಕ ಸೌಂದರ್ಯ ಎಂದು ಒಂದು ಗುಂಪು ವಾದಿಸಿದರೆ, ಮತ್ತೊಂದು ಗುಂಪು ಅಲ್ಲ ಅದು ಗಾಡ್ ಗಿಫ್ಟ್ ಎಂದು ಕೈಕುಟ್ಟಿ ಹೇಳಲಾರಂಭಿಸಿತು. ಚರ್ಚೆಯಲ್ಲಿ ಪಾಲ್ಗೊಂಡಿದ್ದ ತನ್ವೀರ ತನ್ನ ಕನ್ನಡ ಆಕ್ಸೆಟ್ ನ ಉರ್ದುವಿನಲ್ಲಿ ಕ್ಯಾ ಬಾತಾ ಕರ್ ತೈಜಿ ತುಮ್ನಾ,..ಯೇ ಏರ್ ಹಾಸ್ಪೇಸ್ ಛೋಂಕ್ರ್ಯಾ…ಯಹಾಂ ಏರ್ ಪೋರ್ಟ್ ಪೇ ವತ್ತಾಚ್ ನಖರೇವಾಲಿ….ಪ್ಲೇನ್ ಕೇ ಅಂದರ್ ಕಾಮ್ ವಾಲಿ….ಭೈ ಎಂದದ್ದೇ ತಡ, ಚರ್ಚೆ ಮುಗಿದೇ ಹೋಯಿತು.

ಆ ದಿನಗಳು ಭಾಗ – 2

vijay times

ಪತ್ರಿಕೋದ್ಯಮವೆಂಬ ಪತ್ರಿಕೋದ್ಯಮದ ಪಿತ್ತ ನೆತ್ತಿಯಲ್ಲಿನ ಬ್ರಹ್ಮರಂಧ್ರದಲ್ಲಿ ಭವ್ಯ ಬಂಗಲೆ ಕಟ್ಟಿಕೊಂಡಿದ್ದ ಸಮಯ. ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿಗಳಲ್ಲಿರುತ್ತಿದ್ದ ಉತ್ಸಾಹಕ್ಕಿಂತ ಗುಲಗುಂಜಿಯಷ್ಟು ಕಮ್ಮಿ ಉತ್ಸಾಹದೊಂದಿಗೆ ಅಸೈನ್ ಮೆಂಟ್ ಗಳಿಗೆ ಹೋಗುತ್ತಿದ್ದೆ.

ಕೆಪಿಟಿಸಿಎಲ್ ನ ಕಾರ್ಯಕ್ರಮ. ವಿದ್ಯುತ್ ಉತ್ಪಾದನಾ ಘಟಕವೊಂದನ್ನು ಅಂದಿನ ಹೈಟೆಕ್ ಮುಖ್ಯಮಂತ್ರಿ ಎಸ್. ಎಂ. ಕಿಷ್ನ ದೂರದರ್ಶನದಲ್ಲಿದ್ದ ಅಡಿಟೋರಿಯಂನಿಂದ ರೀಮೋಟ್ ಕಂಟ್ರೋಲ್ ಮೂಲಕ ಉದ್ಘಾಟನೆ ಮಾಡುವವರಿದ್ದರು. ನಮ್ಮೂರಿನ ಪಂಚಾಯತಿ ಮೆಂಬರನ್ನೂ ಸರಿಯಾಗಿ ನೋಡಿರದಿದ್ದ ನಾನು ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಕವರ್ ಮಾಡಲು ಹೊರಟಿದ್ದೆನಾದ್ದರಿಂದ ಭಯ, ಭಕ್ತಿ, ಉತ್ಸಾಹಗಳೆಲ್ಲ ಯದ್ವಾ ತದ್ವಾ ತುಂಬಿಕೊಂಡಿದ್ದವು. ಕಾರ್ಯಕ್ರಮಕ್ಕೆ ಸಾಕಷ್ಟು ಮೊದಲೇ ಹೋಗಿ ಪತ್ರಕರ್ತರ ನಡುವೆ ಆಸೀನನಾದೆ. ಕೆಲವೇ ಹೊತ್ತಿನಲ್ಲಿ ಮುಖ್ಯಮಂತ್ರಿ ಕಿಷ್ನ ಗಂಭೀರವಾಗಿ ಮುಗುಳ್ನಗುತ್ತ ಆಗಮಿಸಿ ಬಟನ್ ಒತ್ತಿ  ವಿದ್ಯುತ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು. ಉದ್ಘಾಟನೆ ಮುಗಿದ ತಕ್ಷಣ ಪತ್ರಕರ್ತರು ಪ್ರಶ್ನೆ ಕೇಳಲು ಆರಂಭಿಸಿದರು. ಆಗ ಕೆಪಿಟಿಸಿಎಲ್ ಅಧಿಕಾರಿಗಳು ಪತ್ರಿಕಾಗೋಷ್ಠಿಗೆ ಮತ್ತೊಂದು ರೂಮಿನಲ್ಲಿ ವ್ಯವಸ್ಥೆ ಮಾಡಿರುವುದಾಗಿ ಹೇಳಿ,  ನಮ್ಮನ್ನು ಕರೆದುಕೊಂಡು ಹೋಗಲು ಅನುವಾದರು. ಇದಕ್ಕಾಗಿಯೇ ಕಾಯುತ್ತಿದ್ದ ಪತ್ರಕರ್ತರು ನೀಹಿಂದು ನಾಮುಂದು ಎಂದು ಭಯಂಕರ ಸ್ಪೀಡಿನೊಡನೆ ರೂಮಿನತ್ತ ಓಡಲು ಆರಂಭಿಸಿದರು. ಇವರೇಕೆ ಹೀಗೆ ಓಡುತ್ತಿದ್ದಾರೆ ಎಂದು ಮೊದಲಿಗೆ ಅರ್ಥವಾಗಲಿಲ್ಲ. ಎಲ್ಲರೂ ಹೋಗುವ ಗಡಿಬಿಡಿಯಲ್ಲಿ ಎಸ್ಎಂಕೆ ನನ್ನ ಸಮೀಪವೇ ಇದ್ದುದರಿಂದ ತೀವ್ರ ಪುಳಕಿತನಾಗಿ ಅವೊರೊಂದಿಗೆ ನಿಧಾನವಾಗಿಯೇ ರೂಮ್ ಪ್ರವೇಶಿಸಿದೆ. ನೋಡಿದರೆ ಏನಿದೆ ಅಲ್ಲಿ….ಇರೋ ಬರೋ ಕುರ್ಚಿ, ಟೇಬಲ್, ಸ್ಟೂಲ್ ಹೀಗೆ ಪತ್ರಕರ್ತರು ಪ್ರಷ್ಠವಿಡಬಹುದಾದಂತಹ ಜಾಗಗಳನ್ನೆಲ್ಲ ಆಕ್ರಮಿಸಿಕೊಂಡಿದ್ದಾರೆ. ಕೊನೆಗೆ ಹೇಗೋ ಮಾಡಿ ಚೂರು ಜಾಗ ಸಂಪಾದಿಸಿಕೊಂಡು ಕುಳಿತುಕೊಂಡೆ.

ಪತ್ರಕರ್ತರ ಪ್ರಶ್ನೆಗಳು ಆರಂಭವಾದವು. ಎಂದಿನಂತೆ ವಿದ್ಯುತ್ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಹಾಗೂ ಅತೀ ಮೌಲ್ಯಯುತ ಪ್ರಶ್ನೆಗಳನ್ನು ಕೇಳಿದ್ದು ವಿಜಯ ಕರ್ನಾಟಕದ ಶ್ರೀಶ ಸರ್. ಪತ್ರಕರ್ತರು ಪ್ರಶ್ನೆ ಕೇಳಿದ್ದು, ಸಿಎಂ ಕಿಷ್ನ ಉತ್ತರಿಸಿದ್ದು ನನಗೆ ಸಾಧಾರಣ ಅರ್ಥವಾಗಿತ್ತು. ಆದರೆ ಮೆಗಾವ್ಯಾಟ್, ಲೋಡ್ ಶೆಡ್ಡಿಂಗ್, ಎಮ್ಓಯು, ಟ್ರಾನ್ಸಮಿಶನ್ ಲಾಸ್ ಎಂದೆಲ್ಲ ಮಾತನಾಡಿದ್ದು ಸೀದಾ ಬೌನ್ಸ್ ಹೊಡೆದಿತ್ತು.

ಕೊಂಚ ಆತಂಕದಿಂದಲೇ ಆಫೀಸಿಗೆ ಬಂದು ಸ್ಟೋರಿ ಫೈಲ್ ಮಾಡಲು ಕುಳಿತೆ. ನಾನು ಬರೆದುಕೊಂಡಿದ್ದ ನೋಟ್ಸ್ ಗಳನ್ನೆಲ್ಲ ಕಷ್ಟಪಟ್ಟು ಒಂಚೂರು ಬಿಡದೇ ಕಂಪ್ಯೂಟರ್ ಗೆ ತುಂಬಿಸಿದೆ. ಆದರೆ ಫೈಲ್ ಮಾಡಿದ ಸ್ಟೋರಿ ಬಗ್ಗೆ ಕಾನ್ಫಿಡನ್ಸೇ ಇರಲಿಲ್ಲ. ಬರೆದ ಪ್ರತಿ ಸೆಂಟೆನ್ಸೂ ಕೂಡ,” ನಾನು ಹೇಳುತ್ತಿರುವ ಮಾಹಿತಿ ಸರಿಯಾಗಿದೆಯಾ?” ಎಂದು ನನ್ನನ್ನು ಪ್ರಶ್ನಿಸತೊಡಗಿದಂತೆ ಭಾಸವಾಯಿತು. ಅವಿಶ್ವಾಸ ಏರುತ್ತ ಹೋಯಿತು. ಕೊನೆಕೊನೆಗೆ ಎಸ್ ಎಂ ಕೃಷ್ಣ ಸರಿಯೋ ಅಥವಾ ಎಂ ಎಸ್. ಕೃಷ್ಣ ಸರಿಯೋ ಎಂಬಂತಹ ಗೊಂದಲ ಆರಂಭವಾಯಿತು. ಯಾರಾದರೂ ನನ್ನನ್ನು ಈ ಪರಿಸ್ಥಿತಿಯಿಂದ ಪಾರಾಮಾಡಬಾರದೆ ಎನಿಸಿತು. ದೇವರಿಗೆ ಮೊರೆಯಿಟ್ಟೆ. ಮೊರೆ ಕೇಳಿಸಿತು ಅಂತ ಕಾಣುತ್ತದೆ.

ಸುದ್ದಿಯನ್ನು ಚೀಫ್ ಗೆ ನೀಡಬೇಕು ಎನ್ನುವಷ್ಟರಲ್ಲಿ ಆಫೀಸ್ ಬಾಯ್ ಬಿಳಿಹಾಳೆಯ ಮೇಲೆ ಮುದ್ದಾಗಿ ಟೈಪ್ ಮಾಡಿದ್ದ ಕನ್ನಡ ಅಕ್ಷರಗಳನ್ನು ನನ್ನ ಪಕ್ಕದ ಕುರ್ಚಿಯ ಮೇಲೆ ಕುಳಿತಿದ್ದ ನನಗಿಂತ ಹಿರಿಯ ವರದಿಗಾರರಿಗೆ ನೀಡಿ, “ಸಾರ್… ಟ್ರಾನ್ಸಲೆಷನ್ ಅಂತೆ. ವಿಟಿಗೂ ಇಂಪಾರ್ಟಂಟ್ ಸ್ಟೋರಿ ಅಂತ ಹೇಳಿದ್ದಾರೆ” ಅಂದ. ಆ ಹಿರಿಯ ವರದಿಗಾರರು ಹಾಗೂ ನಾನು ಸೇರಿಕೊಂಡು ಅದನ್ನು ಇಂಗ್ಲೀಷಿಗೆ ಟ್ರಾನ್ಸಲೇಟ್ ಮಾಡಿದೆವು. ಎಸ್. ಎಂ. ಕಿಷ್ನ ಕಾರ್ಯಕ್ರಮದ ವರದಿಯನ್ನು ವಿಕ ಗೆ ಬರೆದಿದ್ದ ಶ್ರೀಶ ಸರ್,  ಅದನ್ನು ವಿಟಿಗೂ ಕಳಿಸಿಕೊಟ್ಟಿದ್ದ ಪ್ರತಿ ಅದಾಗಿತ್ತು.

ಆ ದಿನಗಳು

145

ಅಂದಿಗೂ ಇಂದಿಗೂ ಬಹುಶಃ ಎಂದಿಗೂ, ಕನ್ನಡ ಚಾನೆಲ್ ಗಳಲ್ಲಿ ನುಗ್ಗಲು ‘ಈ ಟಿವಿ’ ಲಾಂಚ್ ಪ್ಯಾಡ್ ಆಗಿರುವಂತೆ ಪ್ರಿಂಟ್ ಮೀಡಿಯಾದಲ್ಲಿ ನುಗ್ಗಲು ವಿಜಯ ಟೈಮ್ಸ್ ಅದ್ಭುತ ವೇದಿಕೆ ಒದಗಿಸಿಕೊಡುತ್ತಿದ್ದ ಸಂದರ್ಭ. ವಿಜಯ ಟೈಮ್ಸ್ ನಲ್ಲಿ ಪ್ರಕಟಿತ ಪ್ರತಿ ಪದಕ್ಕೆ ಎಂಟಾಣೆ ಲೆಕ್ಕದಲ್ಲಿ ಸ್ಟ್ರಿಂಗರ್ ಆಗಿ ಸೇರಿದ್ದೆ. (ಪ್ರತಿ ಪದಕ್ಕೆ ಎಂಟು ಆಣೆ ಹಾಗೂ ಫೋಟೋ ಗೆ ಇದಕ್ಕಿಂತ ಜಾಸ್ತಿ. ಎಷ್ಟು ಎಂದು ಸರಿಯಾಗಿ ನೆನಪಿಲ್ಲ. ಆಶ್ಚರ್ಯವಾಯಿತೆ?) ನನ್ನ ಗೆಳೆಯರೆಲ್ಲ ನಾನು ಬಂದ ಕೂಡಲೇ ‘ಎಂಟಾಣೆಗೊಂದ್ ಎಂಟಾಣೆಗೊಂದ್’ ಎಂದು ಕಾಲೆಳೆಯುತ್ತಿದ್ದರು.

ಆದರೆ ಅದಾಗಿ ಮೂರೇ ದಿನಕ್ಕೆ ಅದೇ ವಿಜಯ ಟೈಮ್ಸ್ ನಲ್ಲಿ ಟ್ರೇನಿ ಜರ್ನಲಿಸ್ಟ್ ಆಗಿ ಸೇರಿದ್ದೆ. ವಾರ ಕಳೆಯುತ್ತಿದ್ದಂತೆ ಯುದ್ಧಭೂಮಿಗೆ ಕಳಿಸಲಾರಂಭಿಸಿದರು. ಭಾರೀ ಸಿದ್ಧತೆಯೊಂದಿಗೆ, ಶ್ರದ್ಧೆಯೊಂದಿಗೆ, ಭಯ-ಭಕ್ತಿಯೊಂದಿಗೆ ಪ್ರತಿನಿತ್ಯವೂ ಬೆಳಗಾ ಬೆಳಗಾ ಪ್ರೆಸ್ ಕ್ಲಬ್ಬಿಗೆ ಹೋಗಿ ಮಧ್ಯಾಹ್ನದವರೆಗೂ ಅಲ್ಲಿದ್ದು, ಬೇಕಾಗಿದ್ದ ಬೇಡವಾಗಿದ್ದ ಕನಿಷ್ಠ ಎಂಟು ಹತ್ತು ಪ್ರೆಸ್ ಕಾನ್ಫರೆನ್ಸ್ ಗಳನ್ನು ಕವರ್ ಮಾಡಿಕೊಂಡು ಆಫೀಸಿಗೆ ಮರಳಿ ಎಲ್ಲವನ್ನೂ ಶ್ರದ್ಧೆಯಿಂದ ಫೈಲ್ ಮಾಡುತ್ತಿದ್ದೆ. ಮಾರನೆ ದಿನ ಪೇಪರ್ ನಲ್ಲಿ ಒಂದೋ ಎರಡೋ ವರದಿಗಳು ಪ್ರಕಟವಾಗಿರುತ್ತಿದ್ದವು. ಇಂತಿಪ್ಪ ಸನ್ನಿವೇಶದಲ್ಲಿ ಪ್ರೇಸ್ ಕ್ಲಬ್ ಅಲ್ಲದೆ ಇತರ ಕಾರ್ಯಕ್ರಮಗಳಿಗೂ ನನ್ನನ್ನು ಕಳಿಸಿಕೊಡಲು ಆರಂಭಿಸಿದರು.

ಜಸ್ಟಿಸ್ ವೆಂಕಟಾಚಲಯ್ಯ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಕಾರ್ಯಕ್ರಮವೊಂದು ಹೋಟೆಲ್ ಏಟ್ರಿಯಾದಲ್ಲಿ ಸಂಜೆ ಏರ್ಪಾಡಾಗಿತ್ತು. ಸಮಯ ಕೊಂಚ ಏರುಪೇರಾಗಿ ಸ್ವಲ್ಪ ಲೇಟಾಗಿ ಸಭಾಂಗಣ ಪ್ರವೇಶಿಸಿದೆ. ಬೆಳಗಾವಿಯಂತಹ ಪ್ಯೂರ್ ಗ್ರಾಮೀಣ ಸೊಗಡಿನ ಪ್ರದೇಶದಲ್ಲಿ ಬೆಳೆದಿದ್ದ ನನಗೆ ಬೆಂಗಳೂರಿನ ಝಾಂಗ್ ಪ್ಯಾಂಗ್ ಅಚ್ಚರಿ ಮೂಡಿಸಿತ್ತು. ಹೀಗಾಗಿ ಹೋಟೆಲ್ ಏಟ್ರಿಯಾ ಸ್ವರ್ಗದಂತೆಯೂ ಅಲ್ಲಿರುವ ರಿಸೆಪ್ಶನಿಸ್ಟ್ ಗಳು ರಂಭೆ, ಊರ್ವಶಿಯಂತೆಯೂ ಕಂಡರು. ಅವರನ್ನೆಲ್ಲ ದಾಟಿಕೊಂಡು ಪತ್ರಕರ್ತರು ಕುಳಿತಿದ್ದ ಗುಂಪನ್ನು ಸೇರಿಕೊಂಡೆ. ಸ್ಟೇಜ್ ಮೇಲೆ ಆಗಷ್ಟೇ ಸ್ವಾಗತ ಭಾಷಣ ಮುಗಿದಿತ್ತು. ಹೀಗಾಗಿ ಜಸ್ಚಿಸ್ ವೆಂಕಟಾಚಲಯ್ಯ ಭಾಷಣ ಇನ್ನೂ ಆಗಿಲ್ಲ ಎಂದು ಸಮಾಧಾನವಾಯಿತು. ಆದರೆ ಸ್ಟೇಜ್ ಮೇಲೆ ಕಣ್ಣಾಡಿಸುತ್ತಿದ್ದಂತೆ ನನಗೆ ವೆಂಕಟಾಚಲಯ್ಯ ಕಂಡುಬರಲಿಲ್ಲ. ಅದು ಹೇಗೆ ಕಾರ್ಯಕ್ರಮ ಆರಂಭಿಸಿಬಿಟ್ಟರು ಎಂದು ಅಚ್ಚರಿಯಾದರೂ ಸುಮ್ಮನಿದ್ದೆ. ಈ ಮಧ್ಯೆ ನನ್ನ ಕಣ್ಣುಗಳು ಈ ಹುಡುಗಾಟ ನಡೆಸಿದ್ದಾಗಲೇ ಸ್ಟೇಜ್ ಮೇಲೆ ಯಾರದೋ ಹೆಸರು ಅನೌನ್ಸ್ ಆಗಿ ಅವರು ಬಂದು ಭಾಷಣ ಆರಂಭಿಸಿಬಿಟ್ಟರು. ಹೋಗಿದ್ದೇನೆ ಕರ್ತವ್ಯ ಎಂದುಕೊಂಡು ಅವರ ಭಾಷಣವನ್ನೂ ಗೀಚಿಕೊಳ್ಳತೊಡಗಿದೆ. ಆದರೆ ಅವರ ಇಂಗ್ಲಿಷ್ ಪ್ರತಿಭೆಯೂ, ಅವರ ಸೆಂಟೆನ್ಸ್ ಗಳೂ ನನ್ನ ನೋಟ್ ಪ್ಯಾಡ್ ಮೇಲೆ ಇಳಿಯಲು ಒಲ್ಲೆ ಎನ್ನುತ್ತಿದ್ದವು. ಹೇಗೂ ವೆಂಕಟಾಚಲಯ್ಯ ಅಲ್ಲವಲ್ಲ ಎಂದು ನಾನೂ ಕಾಟಾಚಾರಕ್ಕೆ ಗೊತ್ತಾದಷ್ಟು ಬರೆದುಕೊಳ್ಳತೊಡಗಿದೆ. ಸ್ಟೇಜ್ ಮೇಲಿನ ವ್ಯಕ್ತಿ ಮುಕ್ಕಾಲು ಗಂಟೆ ಮಾತನಾಡಿ ಭಾಷಣ ಮುಗಿಸಿದಾಗ ಸಭೆಯಲ್ಲಿ ಜೋರಾಗಿ ಕರತಾಡನ. ನಿರೂಪಕ ಬಂದು ಭಯಂಕರ ಆಕ್ಸೆಂಟ್ ಭರಿತ ಇಂಗ್ಲೀಷಿನಲ್ಲಿ “ಥ್ಯಾಂಕ್ಸ್ ಫಾರ್ ಎನ್ ಲೈಂಟ್ನಿಂಗ್ ಅಸ್ ಜಸ್ಟಿಸ್ ವೆಂಕಟಾಚಲಯ್ಯ” ಎಂದು ಅಭಿನಂದನೆ ಸಲ್ಲಿಸಿದ. ನನಗೆ ಕಾಲ ಕೆಳಗಿನ ಭೂಮಿಯ ಮೇಲಿನ ಕಾರ್ಪೆಟ್ ಸರಿದ ಅನುಭವ. ವೆಂಕಟಾಚಲಯ್ಯ ಮಾತನಾಡಿಬಿಟ್ಟಿದ್ದಾರೆ. ನಾನೂ ಏನೂ ಬರೆದುಕೊಂಡಿಲ್ಲ. ಏನು ಮಾಡಬೇಕು ಗೊತ್ತಾಗುತ್ತಿಲ್ಲ. ಪೂರ್ಣ ತಲೆ ಕೆಟ್ಟು ಹೋಯಿತು.

ಹಾಗೆಯೇ ಆಫೀಸಿಗೆ ಬಂದೆ. ಸ್ಟೋರಿ ಫೈಲ್ ಮಾಡಲು ಕುಳಿತರೆ ನಾನು ಬರೆದುಕೊಂಡಿದ್ದ ನೋಟ್ಸ್ ನ ತಲೆಬುಡ ಅರ್ಥವಾಗುತ್ತಿಲ್ಲ. ಡೆಡ್ ಲೈನ್ ಬೇರೆ ಸಮೀಪಿಸುತ್ತಿದೆ. ಹೊಸದಾಗಿ ಕೆಲಸಕ್ಕೆ ಬೇರೆ ಸೇರಿದ್ದೇನೆ. ಹೀಗೆ ಮಾಡಿಕೊಂಡಿದ್ದೇನೆ ಎಂದು ಗೊತ್ತಾದರೆ ಚೀಫ್ ಬಿಟ್ಟಾರೆಯೆ. ಯೋಚಿಸಿ ಯೋಚಿಸಿ ಅಳುಬರುವಂತಾಯಿತು. (ಥೂ ಅಳುಮುಂಜಿ…ಹುಡುಗ್ರು ಯಾವಾಗಾದ್ರೂ ಅಳ್ತಾರಾ)

ಆಗ ನನಗೆ ದೇವರಾಗಿ ಒದಗಿದ್ದು ಒಬ್ಬ ಹಿರಿಯ ಪತ್ರಕರ್ತ. ಅವರೂ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಈ ಮೊದಲೇ ಅವರನ್ನು ಪರಿಚಯಮಾಡಿಕೊಂಡಿದ್ದೆನಾದ್ದರಿಂದ ಅವರಿಗೆ ನೇರವಾಗಿ ಫೋನಾಯಿಸಿದೆ. ಕಷ್ಟ ಹೇಳಿಕೊಂಡೆ. “ಹೆದರಬೇಡಪ್ಪಾ, ನಿನ್ನ ಈಮೇಲ್ ಐಡಿ ಕೊಡು. ನಾನು ಫೈಲ್ ಮಾಡಿರುವ ಸ್ಟೋರಿಯನ್ನು ಮೇಲ್ ಮಾಡುತ್ತೇನೆ. ಅದನ್ನು ನೋಡಿಕೊಂಡು ನಿನ್ನ ಸ್ಟೋರಿ ಬರೆ. ಆದರೆ ವರ್ಡ್ ಟು ವರ್ಡ್ ಕಾಪಿ ಮಾಡಬೇಡ ಆಯ್ತಾ” ಎಂದರು. ಬಿಪಿ ನಾರ್ಮಲ್ ಗೆ ಬಂತು. ದೇಹದ ಜೀವಕೋಶಗಳು ಶಾಂತಗೊಂಡವು. ಐದು ನಿಮಿಷದಲ್ಲಿ ಅವರ ಮೇಲ್ ಬಂತು. ಅದನ್ನು ನೋಡಿ ನನ್ನ ಕಾಪಿ ತಯಾರಿಸಿದೆ. ಫೈಲ್ ಮಾಡಿದೆ. ಅಂದು ಸಹಾಯ ಮಾಡಿದ್ದ ಅವರು ಇಂದಿಗೂ ನನ್ನ ಹಲವು ಸ್ಟೋರಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.

(ಆಮೇಲೆ ನನ್ನ ಅಚಾತುರ್ಯ ಗೊತ್ತಾಗಿದ್ದು. ಜಸ್ಟಿಸ್ ವೆಂಕಟಾಚಲಯ್ಯ ಹಾಗೂ ಲೋಕಾಯುಕ್ತ ಜಸ್ಟಿಸ್ ವೆಂಕಟಾಚಲ ನಡುವೆ ಕನ್ ಫ್ಯೂಸ್ ಮಾಡಿಕೊಂಡಿದ್ದೆ. ಹೀಗಾಗಿಯೇ ಎಲ್ಲ ಅವಾಂತರವಾಗಿದ್ದು…)

ಅಯ್ಯಾ ಎಂದರೆ ಸ್ವರ್ಗ…ಎಲವೋ ಎಂದರೆ ನರಕ….

behaviour

ಈ ಪ್ರಸಿದ್ಧ ವ್ಯಕ್ತಿಗಳು ಅಂತ ಇರ್ತಾರೆ. ನಿಮಗೂ ಗೊತ್ತಿರಬಹುದು. ಅವರ ಕುರಿತು ಎರಡು ಘಟನೆಗಳು –

ಘಟನೆ – 1

ಸಾಹಿತ್ಯಕ್ಕೆ ಸಂಬಂಧಿಸಿದ ಸ್ಟೋರಿ ಮಾಡುತ್ತಿದ್ದೆ. ಬೈಟ್ ಸಲುವಾಗಿ ಸಾಹಿತಿಗಳನ್ನು ಹುಡುಕುತ್ತಿದ್ದಾಗ ಹೊಳೆದ ಹೆಸರು ಓರ್ವ ಪ್ರಸಿದ್ಧ ಲೇಖಕರದ್ದು. ಫೋನ್ ನಂಬರ್ ಸಂಪಾದಿಸಿದವನೇ ನಂಬರ್ ಡಯಲ್ ಮಾಡಿದೆ. ಪರಿಚಯ ಮಾಡಿಕೊಂಡೆ. ಸ್ಟೋರಿ ಲೈನ್ ತಿಳಿಸಿ ಬೈಟ್ ಬೇಕೆಂದೆ. ತುಂಬ ಸಂತೋಷಗೊಂಡರು. ಬೈಟ್ ತೆಗೆದುಕೊಳ್ಳಲು ಮನೆಗೇ ಕರೆದರು. ಅಡ್ರೆಸ್ ಕೇಳಿದೆ. ತುಂಬ ವಿವರವಾಗಿ ತಿಳಿಸಿದರು. ಅವರು ಅಡ್ರೆಸ್ ಹೇಳಿದ ರೀತಿ ಹೇಗಿತ್ತೆಂದರೆ ಯಾವುದೇ ಸಂದೇಹವಿಲ್ಲದೆ, ಯಾರನ್ನೂ ಕೇಳದೇ ನಮ್ಮ ಕಾರ್ ಹೋಗಿ ನಿಂತಿದ್ದು ಅವರ ಮನೆ ಮುಂದೆಯೇ. ಕಾರಿನಿಂದ ನಾನು ಮತ್ತು ಕ್ಯಾಮೆರಾಮನ್ ಇಳಿದ ತಕ್ಷಣ, ಹೊರಗೆ ಬಂದವರೇ ಸ್ವಾಗತಿಸಿದರು. ಮಗನ ಪರಿಚಯ ಮಾಡಿಸಿ ಒಳ ಕೋಣೆಗೆ ಕರೆದುಕೊಂಡು ಹೋದರು. ಬೈಟ್ ಕೊಡುವುದಕ್ಕಿಂತ ಮೊದಲು ಕಾಫಿ ಕೊಟ್ಟರು. ಉಭಯಕುಶಲೋಪರಿ ವಿಚಾರಿಸಿದರು. ನನ್ನ ಬಗ್ಗೆ, ಕ್ಯಾಮೆರಾಮನ್ ಬಗ್ಗೆ ಕೇಳಿದರು. ಬೈಟ್ ಬ್ಯಾಕ್ ಗ್ರೌಂಡ್ ಗಾಗಿ ಏನಾದರೂ ಬೇಕಾದರೆ ತೆಗೆದುಕೊಳ್ಳಿ ಎಂದು ಹಲವು ವಸ್ತುಗಳನ್ನು ತೋರಿಸಿದರು.  ನಂತರ ನನಗೆ ಬೇಕಾದಂತೆ ಅಗತ್ಯಕ್ಕೆ ತಕ್ಕ ಹಾಗೆ ಬೈಟ್ ನೀಡಿ “ಸಾಕಾ?” ಎಂದು ಕೇಳಿದರು. ಹೊರಗಡೆ ಹೋಗಿದ್ದ ಅವರ ಪತ್ನಿ ಅಷ್ಟರಲ್ಲಿ ಮನೆಗೆ ಬಂದರು. ಅವರೂ ಕೂಡ ಪ್ರಸಿದ್ಧ ಲೇಖಕಿಯೇ. ಬಂದವರೇ ಸೀದಾ ಅಡಿಗೆ ಮನೆಗೆ ಹೋಗಿ, ತಟ್ಟೆ ತುಂಬ ಉಪ್ಪಿಟ್ಟು ತುಂಬಿಕೊಂಡು ಬಂದು ಉಪಚರಿಸಿದರು. ಆತ್ಮೀಯವಾಗಿ ಬೀಳ್ಕೊಟ್ಟರು. ಅದಾದ ನಂತರ, ಬೈಟ್ ಬೇಕೆಂದಾಗಲೆಲ್ಲ ಅವರನ್ನು ಸಂಪರ್ಕಿಸಿದ್ದೇನೆ. ಮನೆಗೆ ಹೋಗಿದ್ದೇನೆ. ಕನಿಷ್ಠ, ಕಾಫಿಯಿಲ್ಲದೆ ವಾಪಸ್ ಬಂದ ನೆನಪಂತೂ ನನಗಾಗಲಿ, ನನ್ನ ಸಹೋದ್ಯೋಗಿ ವರದಿಗಾರರಿಗಾಗಲಿ ಇಲ್ಲ.

ಘಟನೆ – 2

ಈಟಿವಿಯ ಬುಕ್ ಟಾಕ್ ಕಾರ್ಯಕ್ರಮಕ್ಕೆ ಕವಿಯೊಬ್ಬರ ಬೈಟ್ ಬೇಕಾಗಿತ್ತು. ಫೋನ್ ಮಾಡಿದೆ. ಗತ್ತಿನಿಂದಲೇ ಮಾತನಾಡಿದರು. ಕವಿಗಳಲ್ವಾ ಎಂದುಕೊಂಡು ಸುಮ್ಮನಾದೆ. ಮನೆಗೆ ಹೋದೆವು. ನಮ್ಮ ಕಾರ್ ಬಂದ ತಕ್ಷಣ ಇವರೂ ಸಹ ಹೊರಗೆ ಬಂದರು. ಆದರೆ ನಮ್ಮನ್ನು ಬರಮಾಡಿಕೊಳ್ಳಲಲ್ಲ. ಮನೆಯಲ್ಲಿ ಬೇಡ. ಇಲ್ಲಿ ಬನ್ನಿ ನನ್ನ ಪ್ರತ್ಯೇಕ ರೂಮ್ ಟೆರೇಸ್ ಮೇಲಿದೆ. ಅಲ್ಲಿ ಹೋಗೋಣ ಎಂದು ಕರೆದುಕೊಂಡು ಹೋದರು. ಫೋನ್ ನಲ್ಲೇ ಬುಕ್ ಟಾಕ್ ನ ಥೀಮ್ ಹೇಳಿದ್ದೆ. ಆಯಿತು ಬನ್ನಿ ಎಂದಿದ್ದ ಕವಿ ಮಹಾಶಯರು ನಾನು ಹೋದ ಮೇಲೆ “ಹೇಳಿ ಏನು ಸ್ಟೋರಿ?” ಎಂದರು. ಮತ್ತೆ ಎಲ್ಲ ವಿವರಿಸಿದೆ. “ಸರಿ” ಎಂದು ತಮ್ಮ ಪುಸ್ತಕ ಸಂಗ್ರಹದಿಂದ ಯಾವುದೋ ಪುಸ್ತಕ ತೆಗೆದು. ಓದಲಾರಂಭಿಸಿದರು. ಹದಿನೈದು ನಿಮಿಷ ಕಳೆಯಿತು. ಅಷ್ಟರಲ್ಲಿ ನಾನು ಮತ್ತು ಕ್ಯಾಮರಾಮನ್, ಕುರ್ಚಿಗಳನ್ನು ಜೋಡಿಸಿ ಬ್ಯಾಕ್ ಗ್ರೌಂಡ್ ಸಿದ್ಧಮಾಡಿದೆವು. “ಸರ್ ಇಲ್ಲಿ ಕುಳಿತುಕೊಳ್ಳಬಹುದು” ಎಂದೆ. ಇರ್ರೀ ಸ್ವಲ್ಪ….ಪ್ರೀಪೇರ್ ಆಗ್ಬೇಡ್ವಾ…ಎಂದು ಧಿಮಾಕಿನಿಂದಲೇ ನುಡಿದರು. ನಂತರ ಪುಸ್ತಕದಲ್ಲಿಯೇ ಕಣ್ಣು ನಾಟಿಸಿ “ಯಾವ ಡ್ರೆಸ್ ಹಾಕ್ಕೊಳ್ಳಿ?” ಎಂದು ವಿಚಾರಿಸಿದರು. ನನ್ನ ಉತ್ತಕ್ಕೂ ಕಾಯದೇ, “ಜುಬ್ಬಾ ಹಾಕಿಕೊಳ್ಳುತ್ತೇನೆ. ನಮ್ಮ ಸಾಹಿತಿಗಳ ಯೂನಿಫಾರ್ಮ್ ಅಲ್ವೆ ಅದು” ಎಂದೆನ್ನುತ್ತಾ ಮತ್ತೆ ಕೆಳಗಿಳಿದು ಹೋದರು. ಹೋಗುವಾಗ “ಬರೇ ನನ್ನ ಮೇಲಿನ ಭಾಗವಷ್ಟೇ ಕ್ಯಾಮೆರಾದಲ್ಲಿ ಬರುತ್ತೆ ತಾನೆ?” ಎಂದರು. ಹೌದೆಂದೆ. ಆಸಾಮಿ ಮೇಲೆ ಬಂದಾಗ ಚೌಕುಳಿ ಚೌಕುಳಿ ಲುಂಗಿಯ ಮೇಲೆ ಗರಿಗರಿಯಾದ ಜುಬ್ಬಾ ಹಾಕಿಕೊಂಡು ಪ್ರತ್ಯಕ್ಷರಾದರು. ಶೂಟಿಂಗ್ ಪೂರ್ತಿ ಗತ್ತಿನಿಂದಲೇ ನಡೆದುಕೊಂಡರು. ಬಂದ ಕೆಲಸ ಮುಗಿಸಿ ಹೊರನಡೆದೆ.

ಇದೇ ಕವಿಗಳ ಮನೆಗೆ ನನ್ನ ಸಹೋದ್ಯೋಗಿಯೊಬ್ಬಾಕೆ ಹೋದಾಗ ಕವಿಪತ್ನಿ ಹೊರಗೆ ಬಂದು “ಏನು ಬೇಕು ಏನು ಬೇಕು” ಎಂದು ಆವೇಶದಿಂದ ಕೋಪದಿಂದ ಕೇಳಿದರಂತೆ. ಆಕೆಯ ಅವತಾರ ನೋಡಿ ನನ್ನ ಸಹೋದ್ಯೋಗಿ ಸ್ಪಲ್ಪ ಖಾರವಾಗಿಯೇ ಉತ್ತರಿಸಿದಳಂತೆ. ನಂತರ ಕ್ಯಾಮರಾಮನ್ ಬಳಿ ಹೇಳಿದಳಂತೆ, ಹೇಗೆ ಮಾತಾಡಿದ್ಲು ನೋಡಿ. ನಾನೇನೋ ಅವಳ ಗಂಡನ್ನ ಹಾರಿಸ್ಕೊಂಡು ಹೋಗೋಕೆ ಬಂದಂತೆ ಆಡ್ತಾಳೆ…

ಘಟನೆ – 1 ರ ಸಾಹಿತಿ ದಂಪತಿಯ ಹೆಸರು ಹಂಪನಾ ಎಂದು. ಘಟನೆ – 2 ರ ಕವಿಗಳ ಹೆಸರು…….

ತುಂಬ ಸಿಂಪಲ್ ಆಕ್ಸಿಡೆಂಟ್

147

ಅದೊಂದು ಕ್ರಾಸ್ ರೋಡ್.

ನಾಲ್ಕು ರಸ್ತೆ ಕೂಡುವ ಜಾಗ.

ಆತ ಆಫೀಸಿಗಾಗಿ ಬೈಕ್ ನಲ್ಲಿ ದಿನಾಲೂ ಅಲ್ಲಿಂದ ಹಾದು ಹೋಗುತ್ತಿದ್ದ.

ಗೆಳೆಯರು ಆತನನ್ನು ಪದೇ ಪದೇ ಎಚ್ಚರಿಸುತ್ತಿದ್ದರು. “ಹುಷಾರು ಮಾರಾಯ. ಆ ಕ್ರಾಸ್ ರೋಡಿನಲ್ಲಿ ಹಾದುಹೋಗುವಾಗ ಅಕ್ಕಪಕ್ಕದ ರೋಡ್ ಗಳಿಂದ ಸ್ಪೀಡಾಗಿ ಬರುತ್ತಾರೆ. ನೋಡಿಕೊಂಡು ಓಡಿಸು”.

ಹೀಗಾಗಿ ಈತ ಪ್ರತಿನಿತ್ಯ ಕ್ರಾಸ್ ರೋಡ್ ಬಂದೊಡನೆ ಹಾರ್ನ್ ಬಾರಿಸುತ್ತ ಅಕ್ಕಪಕ್ಕ ನೋಡಿ, ಯಾವುದೇ ವಾಹನ ಬರುತ್ತಿಲ್ಲ ಎಂದು ಖಾತರಿ ಮಾಡಿಕೊಂಡು ಮುಂದೆಸಾಗುತ್ತಿದ್ದ.

ಆ ದಿನ ಮತ್ತೆ ಆಫಿಸಿಗೆಂದು ಬೈಕ್ ಏರಿದ.

ಕ್ರಾಸ್ ರೋಡ್ ಸಮೀಪ ಬಂದ.

ಅಕ್ಕ ಪಕ್ಕ ನೋಡಿದ.

ಹಾರ್ನ್ ಬಾರಿಸಿದ.

ಯಾರೂ ಇರಲಿಲ್ಲ.

ಮುಂದೆ ಸಾಗಿದ.

ಆದರೆ ಮುಂದಿನಿಂದ ಭಾರೀ ಟ್ರಕ್ ವೇಗವಾಗಿ ಬರುತ್ತಿದ್ದುದನ್ನು ನೋಡಲೇ ಇಲ್ಲ…..

‘ಕತೆಯಲ್ಲಿ ಬಾಂದಾತ ಮನೆಗೂ ಬಂದು ಕದ ತಟ್ಟಿದ’

guhe

(ಯಶವಂತ ಚಿತ್ತಾಲರ ‘ಕಥೆಯಾದಳು ಹುಡುಗಿ’ ಕಥಾಸಂಕಲನದ ‘ಕತೆಯಲ್ಲಿ ಬಾಂದಾತ ಮನೆಗೂ ಬಂದು ಕದ ತಟ್ಟಿದ’ ಕಥೆಯಿಂದ ಆಯ್ದ ಭಾಗ).

ಕತೆ ನಾನೂ ಓದಿದ ನಾಟಕದ್ದೇ. ಬಹುಶಃ ನೋಯಲ್ ಕಾವರ್ಡ್ ನದಿರಬೇಕು ಅನ್ನಿಸಿತು. ಹೆಸರು ಥಟ್ಟನೆ ನೆನಪಾಗಲಿಲ್ಲ. ಅವನೂ ಸ್ಪಷ್ಟಪಡಿಸಲಿಲ್ಲ. ಮಾನವೀಯ ಮುಖಾಮುಖಿಯ ಮೇಲೆ, ನಮ್ಮ ನಿಶ್ಚಯದ ಮೇಲೆ, ಕ್ರಿಯೆಯ ಮೇಲೆ ಪರಿಸರದಲ್ಲಿಯ ಬೆಳಕು ಎಷ್ಟೊಂದು ನಾಟಕೀಯವಾದ ಪ್ರಬಾವ ಬೀರಬಲ್ಲದೆಂಬುದನ್ನು ಅತ್ಯಂತ ಪರಿಣಾಮಕಾರಿಯಾದ ರೀತಿಯಲ್ಲಿ ತೋರಿಸಿಕೊಡುವ ನಾಟಕವದು.

ಒಬ್ಬ ಸೇಲ್ಸ್ ಮನ್ ಹಾಗೂ ಅವನ ಕಂಪನಿಯ ಎಂಡಿ ನಡುವಿನ ಮುಖಾಮುಖಿ ನಾಟಕದ ಕೇಂದ್ರ ಘಟನೆ. ಸೇಲ್ಸ್ ಮನ್ 20 ವರ್ಷಗಳ ದೀರ್ಘಕಾಲ ಈ ಕಂಪನಿಗಾಗಿ ದುಡಿದೂ, ಮ್ಯಾನೇಜಮೆಂಟಿನ ದುರ್ಲಕ್ಷ್ಯಕ್ಕೆ ಗುರಿಯಾಗಿ ನೊಂದವನು. ಆಗಷ್ಟೇ ಎಂಡಿಯ ಸ್ಥಾನಕ್ಕೆ ಬಂದವನು ಇವನ ಬಾಲ್ಯದ ಗೆಳೆಯನಾಗಿಯೂ ಅನೇಕ ವರ್ಷಗಳ ವರೆಗೆ ಇವನೊಡನೆ ಸಂಪರ್ಕ ತಪ್ಪಿದವನು. ಸಂದರ್ಶನ ಆರಂಭವಾದಾಗ ಅತ್ಯಾಧುನಿಕ ಬೆಡಗಿನ, ಸಜ್ಜಿಕೆಯಿದ್ದ ಎಂಡಿಯ ಕ್ಯಾಬಿನ್ ನಲ್ಲಿ ಕಣ್ಣುಕುಕ್ಕಿಸುವ, ಮನಸ್ಸಿಗೆ ದಿಗ್ಭ್ರಮೆ ಹಿಡಿಸುವ ವಿದ್ಯುದ್ದೀಪಗಳ ಬೆಳಕು ಇರುತ್ತದೆ. ತನ್ನ ಭಡತಿಯ ಬಗ್ಗೆ ಮಾತನಾಡುವ ಉದ್ದೇಶದಿಂದ ಹೋದ ಸೇಲ್ಸ್ ಮನ್, ಎಂಡಿಗೆ ತನ್ನ ಗುರುತೇ ಸಿಕ್ಕಿಲ್ಲವೆಂದು ತಿಳಿದಾಗ ಅಧೀರನಾಗುತ್ತಾನೆ. ತಮ್ಮ ಚಿಕ್ಕಂದಿನ ಅತ್ಯಂತ ಆತ್ಮೀಯ ಕ್ಷಣಗಳ ನೆನಪು ಮಾಡಿಕೊಟ್ಟರೂ, ತಾನು ಅವನಿಗೆ ಹೆಚ್ಚು ಪರಕೀಯನಾಗುತ್ತಿದ್ದುದನ್ನು ಕಂಡು ಹತಾಶನಾಗುತ್ತಾನೆ. ಕ್ಯಾಬಿನ್ ಬಿಟ್ಟು ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಕಟ್ಟಡದ ಇಲೆಕ್ಟ್ರಿಕ್ ಫ್ಯೂಸ್ ಹಾರಿ ಹೋಗಿ ಕ್ಯಾಬಿನ್ ಕತ್ತಲೆಯಲ್ಲಿ ಮುಳುಗತ್ತದೆ. ಎಂಡಿಯ ಸೆಕ್ರೆಟರಿ ಒಳಗೆ ಬಂದು ಇಂತಹ ತುರ್ತಿನ ಸನ್ನಿವೇಶಗಳಿಗಾಗಿಯೇ ಸಿದ್ಧಮಾಡಿ ಇಟ್ಟಂತಿದ್ದ ಎರಡು ದೊಡ್ಡ ಮೇಣದ ಬತ್ತಿಗಳನ್ನು ಮೇಜಿನ ಮೇಲಿಟ್ಟು ಹೋಗುತ್ತಾಳೆ. ಕೋಣೆಯಲ್ಲಿ ಆಗ ಹರಡಿದ ಮೇಣದ ಬತ್ತಿಯ ಮಂದ ಬೆಳಕಿನಲ್ಲಿ ಎಂಡಿ ಒಮ್ಮೆಗೇ ಚೇತರಿಸಿಕೊಂಡವರ ಹಾಗೆ, “ಅರೆ ನೀನು? ಯಾವಾಗ ಬಂದೆ? ಯಾಕೆ ಹೀಗೆ ಮಾತನಾಡದೆ ಕೂತಿದ್ದೀ?” ಎಂದು ಶುರುಮಾಡಿದವರು ಹೊತ್ತು ಹೋದ ಹಾಗೆ ಭಾವನಾವಶರಾಗುತ್ತ ಬಾಲ್ಯದ ಅನೇಕ ಸಂಗತಿಗಳನ್ನು ತಾವೇ ನೆನೆದುಕೊಳ್ಳಲು ತೊಡಗುತ್ತಾರೆ. ಈ ಬದಲಿಗೆ ಕಾರಣವಾಗಿದ್ದು ರೂಮಿನಲ್ಲಿ ಆಗ ನೆಲೆಸಿದ ಮೇಣದ ಬತ್ತಿಯ ಬೆಳಕಾಗಿತ್ತು. ಎಂಡಿ ಅವನ ನೌಕರಿಯ ಬಗ್ಗೆ, ಹೆಂಡತಿಯ ಬಗ್ಗೆ ಮಕ್ಕಳ ಬಗ್ಗೆ ತುಂಬಿದ ಅಂತಃಕರಣದಿಂದ ವಿಚಾರಿಸುತ್ತಾರೆ. ತಾನು ಬಂದ ಉದ್ದೇಶ ಪ್ರಕಟಿಸಲು ಇದೇ ಸರಿಯಾದ ಕ್ಷಣವೆಂದು ಬಗೆದು ಇವನು ಬಾಯಿತೆರೆಯಬೇಕು ಎಂದುಕೊಳ್ಳುವಷ್ಟರಲ್ಲಿ ರೂಮಿನೊಳಗೆ ಮೊದಲಿನ ಹಾಗೆ ಕಣ್ಣುಕುಕ್ಕಿಸುವ ವಿದ್ಯುದ್ದೀಪಗಳು ಝಗ್ ಎಂದು ಬೆಳಗಿಕೊಳ್ಳುತ್ತವೆ.

“ಮುಂದಿನದನ್ನು ನೀವು ಸರಿಯಾಗಿ ಊಹಿಸಿಕೊಳ್ಳಬಲ್ಲಿರಿ ಸರ್” ಎಂದು ಕತೆ ಮುಗಿಸಿದ ವೋಮ, ನನ್ನಲ್ಲಿ ವಿಸ್ಮಯದಂತೆ ಒಂದು ಬಗೆಯ ಅಸಮಧಾನಕ್ಕೂ ಕಾರಣವಾಗಹತ್ತಿದ್ದ.

ಸತ್ತವನೆದುರೂ ಗಣಪನೆದುರೂ ಒಂದೇ ಮ್ಯೂಸಿಕ್….

ganesh

ನಾ ಭಾಳ ವರ್ಷ ಬೆಳಗಾವ್ಯಾಗಿದ್ದೆ. ಅದಕ್ಕ ಅಲ್ಲಿನ ಗಣಪತಿ ಉತ್ಸವಾ ಸೂಕ್ಷ್ಮವಾಗಿ ಗಮನಿಸಕೋತ್ ಅದರಾಗ್ ಭಾಗವಹಿಸಗೋತ್ ಬಂದೇನಿ. ಈ ಕೆಲ ವರ್ಸದಾಗ ಬೆಂಗಳೂರ್ ನ್ಯಾಗ್ ಆಗೋ ಗಣೇಶ ಉತ್ಸವಾನೂ ನೋಡೇನಿ.

ಬೆಳಗಾವಿ, ಬಿಜಾಪುರ, ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗಾಗಳ ಗಣೇಶ ಉತ್ಸವiಗಳ ಮ್ಯಾಗ ಮಹಾರಾಷ್ಟ್ರದ ಪ್ರಭಾವಾ ಭಾಳ ಐತಿ. ಬೆಳಗಾವ್ಯಾಗಂತೂ ಭಾಳ ಮೊದಲ ಉತ್ಸವದ ತಯಾರಿ ಸುರುಆಕ್ಕೇತಿ. ಗಣೇಶೋತ್ಸವ ಯುವಕ ಮಂಡಳದ ಯುವಕರೆಲ್ಲ ಕೂಡಕೊಂಡು ಇಡೀ ಊರು ತಿರುಗಿ ಮೊದಲ ಪಟ್ಟಿ(ಚಂದಾ) ಎತ್ತತಾರ. ಎಲ್ಲಾ ಮನಿಗೊಳಿಗ ಹೋಗಿ ಹಿಂದಿನ ವರ್ಸ ಪಟ್ಟಿ  ನೀಡಿದವರ ಹೆಸರು, ಕೊಟ್ಟ ರೋಖ, ಗಣಪತಿ ಮೂರ್ತಿ ಸಲುವಾಗಿ ಖರ್ಚಾದ ರೊಕ್ಕ, ಭಡಜಿ (ಪುರೋಹಿತ), ಹೂವಾ, ಹಣ್ಣ, ನಾರಳ(ತೆಂಗು), ನೈವೇದ್ಯ, ಪೆಂಡಾಲ್, ಮೈಕ್, ಝಾಂಝ್ ಪಥಕ್(ಬೆಳಗಾವಿಯ ವಿಶೇಷ್ ಬ್ಯಾಂಡ್), ಮೆರವಣಿಗಿ ಬಾಬ್ತು, ಕರಂಟ್, ಒಟ್ಟ ಪಟ್ಟಿ ಮತ್ತ ಒಟ್ಟ ಖರ್ಚು, ಉಳಿದ ಶಿಲ್ಲಕ ಹಿಂಗ ಎಲ್ಲಾ ಮಾಹಿತಿ ಇರೋ ಸಣ್ಣ ಬುಕ್ ಕೊಡ್ತಾರ. ಪೆಂಡಾಲಂತೂ ಬರೋಬರ್ ಒಂದ್ ವಾರ್ ಮೊದಲ ತಯಾರ ಆಕ್ಕೇತಿ. ಗಣೇಶ ಚತುರ್ಥಿ ದಿವಸ ದೊಡ್ಡದಾದ 1210 ಅಶೋಕ್ ಲೇಲ್ಯಾಂಡ್ ಟ್ರಕ್ ನ ನೆತ್ತಿ ಮ್ಯಾಗ್ ಕಮಿತ್ ಕಮಿ ಅಂದ್ರ ಧಾ ಫೂಟ್ ಇರೊ ಗಣಪತಿನ ಕುಂಡ್ರಸ್ ಕ್ಯಾಸ್ ಗಲ್ಲಿ ತುಂಬೆಲ್ಲ ಮೆರವಣಿಗಿ ಮಾಡ್ತಾರ. ಗಲ್ಯಾಗ ಗಣೇಶನನ್ನ ನೆತ್ತಿ ಮ್ಯಾಲಿಟ್ ಕೊಂಡ ಟ್ರಕ್, ಜಬರ್ದಸ್ತ್ ಹೊಕ್ಕಿದ್ದರ ಟ್ರಕ್ ಹಿಂದ ಸಣ್ಣು ಹುಡುಗ್ರು, ಟ್ರಕ್ ಮುಂದ ಯೂವಕ್ರೂ ಡ್ಯಾನ್ಸ್ ಆಡತಿರ್ತಾರ. ಗಣಪತಿ ಬಪ್ಪಾ ಮೋರಯಾ, ಏಕ್ ದೋನ್ ತೀನ್ ಚಾರ್-ಗಣಪತೀಚಾ ಜಯ್ ಜಯ್ ಕಾರ್ ಘೋಷಣಾ ಕೇಳಿ ಬರ್ತಾವ. ಆಲ್ ಮೋಸ್ಟ್, ಪ್ರತಿಮನಿ ಮುಂದೂ ಗಣಪಗ ಪೂಜಿ ಸಲ್ಲಿಕೆ ಆಗ್ತದ. ಹಿಂತಾ ಹೊತ್ತನ್ಯಾಗ ಮೂರ್ತಿ ಬಾಜೂಕಿರೋ ಯುವಕರಿಗೂ ಮತ್ತ ಮನಿ ಮುಂದ ನಿಂತಿರೊ ಯುವತಿಯರ ಕಣ್ಣಗೊಳಿಗೂ ಮಿಲಾಕತ್ ಆಗ್ತದ. ಯುವಕ ಕಣ್ಣಗೊಳು ಹೆಮ್ಮೆಯಿಂದ ಬೀಗಿದರ, ಯುವತಿ ಕಣ್ಗೋಳು ನಾಚಿಕೊಳ್ತಾವ.

ಬರೋಬರ್ ಹನ್ನೊಂದು ದಿವಸ ಪ್ರತಿನಿತ್ಯ ಗಣಪತಿಗೆ ಸುಖಕರ್ತಾ ದುಃಖಹರ್ತಾ ವಾರ್ತಾ ವಿಘ್ನಾಚಿ ಮೂಲಕ ಆರತಿಯಾಗ್ತದ. ಹನ್ನೊಂದು ದಿನಾನೂ ರಾಂಗೋಳಿ(ರಂಗೋಲಿ) ಸ್ಪರ್ಧಾ, ಸ್ಲೋಸೈಕ್ಲಿಂಗ್ ಸ್ಪರ್ಧಾ, ದೇವಾಚೆ ಗೀತ(ದೇವರ ನಾಮ) ಸ್ಪರ್ಧಾ ಹೀಂಗ ನಾನಾರೀತಿಯ ಸ್ಪರ್ಧಾ ನಡೀತಾವು. ಹತ್ತನೆ ದಿವಸ ಗಣಪತಿ ಸಮ್ಮುಖದಾಗ, ತನ್ನ ತಲಿಗಿಂತ ಕಮ್ಮಿತ್ ಕಮ್ಮಿ ಅಂದ್ರ ಮೂರು ಪಟ್ಟು ದೊಡ್ಡದಾಗಿ ಹಳದಿ ಪಟಕಾ ಸುತ್ತಿಕೊಂಡ  ಪಂಚಾಯತಿ ಚೇರಮನ್ ರಿಂದ ಗೆದ್ದಾವರಿಗೆ ಬಹುಮಾನ ಕೊಡ್ತಾರ.

ಹನ್ನೊಂದನೆ ದಿವಸ ಮತ್ತ ಗಣಪತಿನ ಟ್ರಕ್ ನ ನೆತ್ತಿ ಮ್ಯಾಗ ಕುಂಡ್ರಿಶಿ ಊರು ಸುತ್ತು ಹಾಕಿ ಗಣಪತಿ ಬಪ್ಪಾ ಮೋರಯಾ, ಫುಡಚಾ ವರ್ಶಿ ಲೌಕರ್ ಯಾ ಅಂತ ಘೋಷಣಾ ಹಾಕಿ ಅರ್ಗಂತಳಾ ಇಲ್ಲಾಂದ್ರ ಕಿಲ್ಲಾ ಕೆರಿಯೊಳಗ ಕಳಿಸಿಕೊಡ್ತಾರು.

ಆದರೆ ಬೆಂಗಳೂರಿನಲ್ಲಿ ಮಾತ್ರ ಗಣೇಶ ಉತ್ಸವದ ರೀತಿಯ ಬೇರೆ. ಇಲ್ಲಿ ಗಣೇಶ ಚತುರ್ಥಿಯಂದೇ ಗಣೇಶ ತರಬೇಕೆಂದೆನೂ ಇಲ್ಲ. ಚತುರ್ಥಿಯ ನಂತರ ಅವರವರ ಅನುಕೂಲಕ್ಕೆ ತಕ್ಕ ಅಚ್ಚಿನ ಮೂರ್ತಿಗಳನ್ನು ತರುತ್ತಾರೆ. ಸತ್ತವರೆದುರು ಬಾರಿಸುವ ತಮಟೆಯ ಮ್ಯೂಸಿಕ್ಕನ್ನೇ ಗಣೇಶನೆದೂರು ಬಾರಿಸುತ್ತಾರೆ. ಲೀಟರ್ ಗಟ್ಟಲೆ ಕಂಟ್ರಿ ಕುಡಿದು ವಿಕಾರವಾಗಿ ಕಿರುಚುತ್ತಾರೆ. ದೆವ್ವ ಹಿಡಿದವರಂತೆ ಡ್ಯಾನ್ಸ್ ಮಾಡುತ್ತಾರೆ. ಮತ್ತೆ ಅನುಕೂಲಕ್ಕೆ ತಕ್ಕ ಹಾಗೆ ಗಣೇಶನನ್ನು ಅಲಸೂರು ಕೆರೆಯಲ್ಲಿ ಮುಳುಗಿಸುತ್ತಾರೆ.

ಗಣೇಶ ಉತ್ಸವದ ಸಂದರ್ಭದಲ್ಲಿ ಗಾಂಧಿ ಬಜಾರ್ ಸಮೀಪದ ವಿದ್ಯಾರಣ್ಯ ಸಂಘ, ಎನ್ ಆರ್ ಕಾಲೋನಿಯ ಕಾಂಗ್ರೆಸ್ ಮರಿನಾಯಕನೊಬ್ಬ ವ್ಯವಸ್ಥೆ ಮಾಡುತ್ತ ಬಂದಿರುವ ಗಣೇಶ, ವಿಜಯನಗರದ ಒಂದೆರಡು ಯುವಕ ಸಂಘಗಳು ಸೇರಿದಂತೆ ಬೆರಳೆಣಿಕೆಯಷ್ಟು ಸಂಘಗಳು ಮಾತ್ರ ಸಾಂಸ್ಕೃತಿಕವಾಗಿ ಹಾಗೂ ತುಂಬ ಚೆಂದವಾಗಿ ಗಣೇಶ ಉತ್ಸವವನ್ನು ಆಚರಿಸುತ್ತವೆ.

ಆದರೆ ಇದೀಗ ಬೆಳಗಾವಿಯಲ್ಲಿಯೂ ಸಾಕಷ್ಟು ನೀರು ಹರಿದು ಹೋಗಿದೆ. “ಅತಾ ಗಣಪತಿ ಆದಿ ಸರ್ಕ ನೈರೆ” (ಈಗ ಗಣಪತಿ ಸಂಭ್ರಮ ಮೊದಲಿನಂತೆ ಇಲ್ಲ ಮಾರಾಯಾ) ಎಂದು ಅಲ್ಲಿನ ಗೆಳೆಯನೊಬ್ಬ ಹೇಳುತ್ತಿದ್ದ. ಈ ಬಾರಿಯೂ ನನಗೆ ಗಣಪತಿ ಹಬ್ಬಕ್ಕೆ ಬೆಳಗಾವಿಗೆ ಹೋಗಲಿಕ್ಕಾಗಿಲ್ಲ. ಮುಂದಿನ ಬಾರಿಯಾದರೂ ಹೋಗಬೇಕು….ಗಣಪತಿ ಬಪ್ಪಾ ಮೋರಯಾ….

ನಿನಗ….

naanu

ಏನಾಗಬೇಕಂತ ನೀ ನನಗ ಕೇಳಿದರ

ಏನ ಹೇಳಲಿ ನಾನು ಮಂದೀಗೆ?

ಮಡದಿ, ಪ್ರೇಯಸಿ, ತಾಯಿ ಏನೂ ಆಗಿರಬಹುದು

ನಮ್ಮಿಬ್ಬರಿಗೆ ಗೊತ್ತಿದ್ದರ ಸಾಕಲ್ಲ?

ಮುಂದೊಮ್ಮೆ ಹೀಂಗನ ವ್ಯಾಳಾನ ಬರಬಹುದು

ನೀನ ಕೇಳಬಹುದು ನನ್ನ ಯಾರಂತ?

ಆಗೇನು ಹೇಳಲಿ ಉತ್ತರವ ಮಂದೀಗೆ

ಹೇಳೀತು ಉತ್ತರ ನನ್ನ ಕೈ ಕಡಗ.

ಬಂದಾಗ ಹೇಳಿದ್ದಿ ಮರಳಿ ಹೋಗುವುದಿಲ್ಲ

ಮತ್ತ ಯಾಕ ನೋಡತಿ ಹಿಂತಿರುಗಿ?

ಹೊರಟು ಹೋಗುವುದಿದ್ದರ ಒಮ್ಮೆಲೆ ಹೇಳಿಬಿಡು

ದುಃಖವ ಬಲ್ಲೆ ನಾ ಮೊದಲಿಂದ.

ಕ್ಷಣಕ್ಷಣವೂ ಸಾಯೂಕಿಂತ ಒಮ್ಮೆ ಸಾಯೋದ ಮೇಲು

ಅಂದಾರ ಯಾರೋ ಜಂಗಮರು

ಕೊಲ್ಲುವುದಿದ್ದರ ಹೇಳು ನಾ ಹೊಂಟೆ ನಿನ ಬಿಟ್ಟು

ಸುಮ್ಮಕ ಯಾಕ ನಿನಗ ತ್ರಾಸ?

ಅರಿವಿಲ್ಲದ ಖೋಡಿ ಮತಿಯಿಲ್ಲದ ಗೇಡಿ

ಜೀವನವೇನು ನಮ್ಮ ಗುಲಾಮ?

ಎಲ್ಲ ತಪ್ಪುಗಳ ಮೇಲೆ ಮತ್ತ ಕೇಳತಿನಿ

ಹೇಳು ಬರತಿಯೇನ ನನ ಸಂಗ.

ಹೇಗಿತ್ತು 2008?

123

ಪ್ರತಿ ವರ್ಷಾಂತ್ಯದಲ್ಲಿಯೂ ಹಾಗೆಯೇ ಅನ್ನಿಸುತ್ತದೆ. “ಛೇ! ಈ ವರ್ಷವೂ ಹೇಗೆ ಕಳೆಯಿತು ಗೊತ್ತೇ ಆಗಲಿಲ್ಲ” ಎಂದು. ಬದುಕಿನಲ್ಲಿ ನಡೆಯುವ ಘಟನೆಗಳು ಕಾಲದ ಇಲಾಸ್ಟಿಸಿಟಿಯನ್ನು ನಿರ್ಣಯಿಸುತ್ತಾವಾದರೂ, ಏಳು-ಬೀಳು ಏನೇ ಇರಲಿ, ವರ್ಷಾಂತ್ಯದಲ್ಲಿ ಹೀಗೆ ಅನ್ನಿಸುವುದು ಮಾತ್ರ ಸಹಜ.

2008 ರ ಆರಂಭದಲ್ಲಿಯೇ ಕೆಲ ವರ್ಷಗಳಿಂದ ಕೈಬಿಟ್ಟು ಹೋಗಿದ್ದ ನಾಟಕದ ಹವ್ಯಾಸ ಮತ್ತೆ ಆವರಿಸಿತು. ನಾನು ನಾಟಕದಿಂದ ದೂರವಿದ್ದ ಸಂದರ್ಭದಲ್ಲಿ ನನ್ನ ಗೆಳೆಯ-ಗೆಳತಿಯರು ನಾಟಕಗಳಲ್ಲಿ ಸಕ್ರೀಯರಾಗಿರುವುದನ್ನು ನೋಡಿ ಗಂಟಲು ಉಬ್ಬಿ ಬರುತ್ತಿತ್ತು. ರಿಹರ್ಸಲ್, ಸೆಟ್-ಪ್ರಾಪರ್ಟಿ, ಕಾಸ್ಟ್ಯೂಮ್, ಪತ್ರಿಕೆಗಳಲ್ಲಿ ನಾಟಕದ ವಿವರ ಎಂದೆಲ್ಲ ಅವರು ಮಾತನಾಡುತ್ತಿದ್ದಾಗ, ಅಳುವೇ ಬರುತ್ತಿತ್ತು. ಆದರೆ ‘2008’ ನನಗೆ ಮತ್ತೆ ನಾಟಕವನ್ನು ನೀಡಿತು. ಕೇವಲ ಮೊದಲ ಪ್ರದರ್ಶನದಲ್ಲಿ ಭಾಗವಹಿಸಿದೆನಾದರೂ ಇಟ್ ವಾಸ್ ಎ ಇಮೋಷನಲ್ ಸಾಟಿಸ್ ಫ್ಯಾಕ್ಷನ್.

ಕನ್ನಡದ ಖಾಸಗಿ ಚಾನೆಲ್ ಒಂದರಲ್ಲಿ ವರದಿಗಾರನಾಗಿದ್ದೆನಾದ್ದರಿಂದ ಕರ್ಣಾಟಕ ಮಹಾದೇಶದ ಉತ್ತರ ದಿಕ್ಕಿನ 11 ಜಿಲ್ಲೆಗಳಲ್ಲಿ ಸುತ್ತಾಡಿ, ಚುನಾವಣಾ ಕಾವನ್ನು ಜನರಿಗೆ ತಲುಪಿಸುವ ಸದವಕಾಶ ನನ್ನದಾಗಿತ್ತು. ಏಳೆಂಟು ಬಾರಿ ವಿಧಾನಸಭೆಗೆ ಆಯ್ಕೆಯಾದ ಶಾಸಕರ ಸ್ವಕ್ಷೇತ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ನಾಯಿಗಳು ಮಲಗಿದ್ದುದು, ಜನ ಗುಳೆ ಹೋಗಿ ಖಾಲಿ ಬಿದ್ದಿದ್ದ ಹಳ್ಳಿಗಳು – ಹೀಗೆ ಬದುಕಿನ ಹಲವು ಮುಖಗಳಿಗೆ ಸಾಕ್ಷಿಯಾಗಬೇಕಾಯಿತು.

ಕಬ್ಬಿನ ಗದ್ದೆಯೊಂದರಲ್ಲಿ ಫಕೀರವ್ವ ಎಂಬ ಕೃಷಿ ಆಳೊಬ್ಬಳನ್ನು ಮಾತನಾಡಿಸಲು ಹೊರಟಾಗ, ಎಲೆಯಡಿಕೆ ಜಗಿದು ಜಗಿದು ಹುಳುಕು ಹಿಡಿದ ಹೋಗಿದ್ದ ಹಲ್ಲುಗಳನ್ನು ಪ್ರದರ್ಶಿಸುತ್ತ, “ಯಪ್ಪಾ, ಏಸೋ ವರ್ಸ ಆದು. ಈ ಕಡೀಕ್ ಯಾರೂ ಬಂದಿಲ್ಲ. ಓಟ್ ಹಾಕೋಸ್ಕೊಂಡ್ ಹೋಗಾವ್ರು, ನಾವ್ ಸತ್ತೆವೋ ಬದಕೇವೋ ಅಂತಾನೂ ಕೇಳಾಣಿಲ್ಲ. ನೀ ಅರೆ ಬಂದಿ ನೋಡು, ಪುಣ್ಯಾ ಬರಲಿ ನಿನಗ” ಎಂದದ್ದು 2008 ರ ಅವಸ್ಮರಣೀಯ ಘಟನೆ.

ನಾಲ್ಕೂವರೆ ವರ್ಷಗಳ ಬಳಿಕ ಕೆಲಸ ಬದಲಾಯಿಸಿದ್ದು, ಮತ್ತೆ ನಾಲ್ಕೂವರೆ ತಿಂಗಳಿಗೇ ಹೊಸ ಕೆಲಸವೂ ಬೋರ್ ಅನ್ನಿಸಿ ಕೇರಳದ ಹೌಸ್ ಬೋಟ್ ತೆಕ್ಕೆಯಲ್ಲಿ ದಿನಕಳೆದು, ಇದೀಗ ಮತ್ತೊಂದು ಕೆಲಸದ ಬೆನ್ನು ಹತ್ತಿ 2009 ರ ದಾರಿ ಕಾಯುತ್ತಿದ್ದೇನೆ. ಛೆ! ಎಷ್ಟು ಬೇಗ ಹೊಸ ವರ್ಷ ಬಂದುಬಿಟ್ಟಿತಲ್ಲ!!

(ಜನವರಿ 2009 ರಲ್ಲಿ ಹಾಯ್ ಬೆಂಗಳೂರ್ ನಲ್ಲಿ ಪ್ರಕಟವಾಗಿದ್ದ ಲೇಖನ)

ಹುಡುಕುವ ಸುದ್ದಿ ಹರಿದಾಡಿ ಬಂದು ಕಾಲ ತೊಡರಿದ್ಹಾಂಗ….

010

ಪ್ರೋ. ಬಿ.ಕೆ. ಚಂದ್ರಶೇಖರ್ ವಿಧಾನ ಪರಿಷತ್ ಸಭಾಪತಿಯಾಗಿದ್ದ ಕಾಲ. ಹೌಸ್, ಕೇವಲ ಒಳಗಷ್ಟೇ ಅಲ್ಲ ಅದರ ಹೊರಗೂ ತನ್ನ ಚಟುವಟಿಕೆಯನ್ನು ವಿಸ್ತರಿಸಬೇಕು ಎಂಬ ಅಭಿಲಾಷೆ ಉಳ್ಳವರಾಗಿದ್ದರು ಬಿಕೆಸಿ. ಹೀಗಾಗಿ ಮೇಲಿಂದ ಮೇಲೆ ಎನ್ ಜಿ ಓ,  ಯಾವುದಾದರೂ ಖಾಸಗಿ ಸಂಸ್ಥೆ, ಸರ್ಕಾರಿ ಇಲಾಖೆ – ಹೀಗೆ ಯಾರೋ ಒಬ್ಬರ ಜೊತೆ ಸೇರಿ ಪರಿಷತ್ತಿನ ಸಹಯೋಗದಲ್ಲಿ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.

ಅದೊಮ್ಮೆ ಸೆಂಟ್ರಲ್ ಕಾಲೇಜ್ ಆವರಣದಲ್ಲಿ ವಿಚಾರ ಸಂಕಿರಣ. ‘ಕುಸಿಯುತ್ತಿರುವ ಅಂತರ್ಜಲ ಮಟ್ಟ ಹಾಗೂ ಕೈಗೊಳ್ಳಬೇಕಾದ ಕ್ರಮಗಳು’ ಇದು ವಿಷಯ. ರೈತ ಸಂಘಗಳು, ಪರಿಸರ ಸಂಘಟನೆಗಳು ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬಂದ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಂತೂ “ಅಂತರ್ಜಲ ಮಟ್ಟ ಅಪಾಯಕಾರಿ ಮಟ್ಟ ತಲುಪಿದೆ. ಇದನ್ನು ತಕ್ಷಣ ತಡೆಗಟ್ಟದಿದ್ದರೆ ನಮ್ಮ ಮಕ್ಕಳು ನೀರಿಲ್ಲದೆ ಸಾಯುತ್ತಾರೆ. ಪಾವಗಡದಂತಹ ಪ್ರದೇಶದಲ್ಲಿ ಫ್ಲೋರೈಡ್ ಯುಕ್ತ ನೀರು ಕುಡಿದು ಜನರು ಅಂಗವಿಕಲರಾಗುತ್ತದ್ದಾರೆ. ಬೆಂಗಳೂರಿನಲ್ಲಿ 450 ಅಡಿ ಕೊರೆದರೂ ನೀರು ಬರುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ ಬೋರ್ ವೆಲ್ ಗಳ ಸಂಖ್ಯೆ ಮಿತಿಮೀರಿದೆ. ಶ್ರೀಪಡ್ರೆಯಂತಹವರ ಸಲಹೆಯನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು. ಹೊಸದಾಗಿ ಕಟ್ಟಲಾಗುತ್ತಿರುವ ಮನೆಗಳಿಗೆ ಮಳೆಕೊಯ್ಲನ್ನು ಕಡ್ಡಾಯ ಮಾಡಬೇಕು” ಎಂದೆಲ್ಲ ಭಾರೀ ಭಾರೀ ಚರ್ಚೆ ನಡೆಸಿದರು. ಕರೆಗಳನ್ನು ನೀಡಿ ಕೊರೆದರು. ಚರ್ಚೆ ಬಿರುಸಾಗಿ ಮುಂದುವರೆಸಿದರು. ಕಾರ್ಯಕ್ರಮ ಕವರ್ ಮಾಡಲು ಹೋದ ನನಗೆ ಪ್ರೋ. ಬಿಕೆಸಿ ಪ್ರಯತ್ನ ತುಂಬ ಖುಷಿಕೊಟ್ಟಿತು. ಎಲ್ಲ ಸಂಪನ್ಮೂಲ ವ್ಯಕ್ತಿಗಳ ಮಾತೂ ಇಷ್ಟವಾಯಿತು. ಆದರೆ ಅಂದು ರಾತ್ರಿ 8 ಗಂಟೆಯ ಈ ಟಿವಿ ಪ್ರೈಮ್ ಬುಲೆಟಿನ್ ನ ಫೋಕಸ್ ನಲ್ಲಿ ಕಾರ್ಯಕ್ರಮದ ಸುದ್ದಿ ಬೇರೆ ರೀತಿಯೇ ಏರ್ ಆಯಿತು.

“ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿ ಮಿನೆರಲ್ ವಾಟರ್ ಹೆಸರಿನಲ್ಲಿ ಮಾರಾಟ ಮಾಡುವ ಕಂಪನಿಗಳ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿನ ನೀರು ಶುದ್ಧ ಹೌದು ಅಲ್ಲವೋ ಎಂಬುದನ್ನು ಕೂಡ ಪರೀಕ್ಷಿಸದೆ, ಬಾಟಲಿ ನೀರನ್ನು ಅವ್ಯಾಹತವಾಗಿ ಮಾರಾಟ ಮಾಡುವ ದಂಧೆಯೇ ನಡೆದಿದೆ. ಮಿನರಲ್ ವಾಟರ್ ಕಂಪನಿಗಳು ಬೇಕಾಬಿಟ್ಟಿಯಾಗಿ ನೀರನ್ನು ಬಳಸಿ ಮಾರಾಟ ಮಾಡುತ್ತಿರುವುದರಿಂದ ಅಂತರ್ಜಲ ಮಟ್ಟದ ಮೇಲೆ ವಿಪರೀತ ಪರಿಣಾಮವಾಗುತ್ತಿದೆ. ಮಿನರಲ್ ವಾಟರ್ ಬಳಕೆಯನ್ನು ಎಲ್ಲ ಪರಿಸರವಾದಿಗಳು ವಿರೋಧಿಸುತ್ತಾರೆ. ಆದರೆ ಬೆಂಗಳೂರಿನಲ್ಲಿ ‘ಅಂತರ್ಜಲ ಮಟ್ಟ ಕುಸಿತ ತಡೆಗಟ್ಟುವ’ ಕುರಿತು ವಿಚಾರ ಸಂಕಿರಣ ಏರ್ಪಡಿಸಿದ್ದ ಸಂಘಟಕರಿಗೆ ಮಾತ್ರ ಈ ವಿಷಯ ಗೊತ್ತಿದ್ದಂತೆ ಕಾಣಲಿಲ್ಲ. ಇದಕ್ಕೆ ಸಾಕ್ಷಿ, ವಿಚಾರ ಸಂಕಿರಣದ ಸಂದರ್ಭದಲ್ಲಿ ಟೇಬಲ್ ಮೇಲೆ ರಾರಾಜಿಸಿದ ಮಿನಿರಲ್ ವಾಟರ್ ಬಾಟಲಿಗಳು. ಅಂತರ್ಜಲ ಕುಸಿತ ತಡೆಗಟ್ಟಲು ಬಂದವರು ಮಿನಿರಲ್ ವಾಟರ್ ಕುಡಿದುದು ಆಶ್ಚರ್ಯ ಮೂಡಿಸಿತು”.

ಈ ಲೈನ್ಸ್ ಮೇಲೆ ಪ್ಯಾಕೇಜ್ ಏರ್ ಆಯಿತು. ಇದಕ್ಕೆ ಕುರಬೂರು ಶಾಂತಕುಮಾರ್ ಬೈಟ್ ಇತ್ತು. ಅವರು ಬೈಟ್ ನಲ್ಲಿ ಮಿನರಲ್ ವಾಟರ್ ಕಂಪನಿಗಳನ್ನು ಎಗಾದಿಗಾ ಝಾಡಿಸಿದ್ದರು. ಮತ್ತೊಂದು ಬೈಟ್ ಪ್ರೋ. ಬಿಕೆಸಿ ಅವರದು. ಸುದ್ದಿಯ ಲೈನ್ ಗೊತ್ತಿಲ್ಲದ ಬಿಕೆಸಿ, “ಇಲ್ಲಿ ನೀರಿನ ಕೊರತೆ ಆಗಬಾರದಲ್ಲ….ಅದಕ್ಕೆ ಬಳಸಿದ್ದೇವೆ” ಎಂಬ ಹಾರಿಕೆಯ ಉತ್ತರ ನೀಡಿ ಜಾರಿಕೊಂಡಿದ್ದರು.

ಮರುದಿನದ ಪ್ರಿಂಟ್ ನಲ್ಲಿ ಎಂದಿನಂತೆ ‘ನುಡಿದರು, ಹೇಳಿದರು, ತಿಳಿಸಿದರು, ವಿವರಿಸಿದರು, ಕರೆ ನೀಡಿದರು’ ಎಂಬಂತಹ ವರದಿಗಳು ಪ್ರಕಟವಾಗಿದ್ದವು. ಆದರೆ ನನ್ನ ಸ್ಟೋರಿಗೆ ಉಳಿದ ಜರ್ನಲಿಸ್ಟ್ ಗಳು ಹಾಗೂ ನನ್ನ ಚೀಫ್ ರಿಂದ ಉತ್ತಮ ಪ್ರತಿಕ್ರಿಯೆ ಬಂತು. ಕೊಂಚವೇ ಕೊಂಚ ಕಿವಿ, ಕಣ್ಣು ಓಪನ್ ಮಾಡಿ ಕುಳಿತರೆ ಇಂತಹ ಸುದ್ಧಿ ಸುಲಭವಾಗಿ ಸಿಗುತ್ತದೆ.

ಆದರೆ ಸುದ್ದಿಯೇ ಬಂದು ಕಾಲ ಬುಡಕ್ಕೆ ಬಿದ್ದಾಗ, ಕಣ್ಣೆತ್ತಿಯೂ ನೋಡದೆ, ಮತ್ತೆನನ್ನೋ ಲೀಡ್ ಮಾಡುವ ಜರ್ನಲಿಸ್ಟ್ ಗಳೂ ಇದ್ದಾರೆ. ಏನು ಮಾಡುವುದು ಮಾರಾಯ್ರೇ?